ಸಂಕಷ್ಟದಲ್ಲಿ ನಿರ್ಮಾಪಕ ರವೀಂದ್ರ ಚಂದ್ರಶೇಖರನ್: ಮಹಾಲಕ್ಷ್ಮಿ ಪತಿ ವಿರುದ್ಧ ದೂರ ದಾಖಲು
ಕಿರುತೆರೆ ನಟಿ ಮಹಾಲಕ್ಷ್ಮಿ ಜೊತೆ ಮದುವೆ ಆಗಿ ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇವರ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ವಿಶೇಷವಾಗಿ ರವೀಂದ್ರನ್ ಬಾಡಿ ಶೇಮಿಂಗ್ ಮಾಡಲಾಗಿತ್ತು. ಹಣಕ್ಕಾಗಿ ನಟಿ ಮಹಾಲಕ್ಷ್ಮೀ ಅಷ್ಟು ದಪ್ಪ ಇರುವ ನಿರ್ಮಾಪಕನನ್ನು ಮದುವೆ ಆಗಿದ್ದಾರೆ ಅಂತೆಲ್ಲಾ ಮೂದಲಿಸಲಾಗಿತ್ತು.
ದಂಪತಿ ಪ್ರತಿಬಾರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಾಗಲೂ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿತ್ತು. ಆದರೆ ಅದಕ್ಕೆ ಇಬ್ಬರು ತಲೆ ಕೆಡಸಿಕೊಳ್ಳುತ್ತಿರಲಿಲ್ಲ. ಊರೂರು ಸುತ್ತಾಡುತ್ತಾ ಆರಾಮಾಗಿ ಇದ್ದರು. ಇದೀಗ ನಿರ್ಮಾಪಕ ರವೀಂದ್ರನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರವೀಂದ್ರನ್ ತಮಗೆ 15 ಲಕ್ಷ ರೂ. ಮೋಸ ಮಾಡಿರುವುದಾಗಿ ಆರೋಪಿಸಿ ವಿಜಯ್ ಎಂಬುವವರು ಈಗ ಚೆನ್ನೈ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಒಂದಷ್ಟು ತಮಿಳು ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಅಮೆರಿಕ ಮೂಲದ ವಿಜಯ್ ಎಂಬುವವರ ಜೊತೆ ರವೀಂದರ್ ಸಂಪರ್ಕದಲ್ಲಿದ್ದರು. ಇತ್ತೀಚೆಗೆ ರವೀಂದ್ರನ್ ತಾವು ಸಿನಿಮಾವೊಂದನ್ನು ನಿರ್ಮಿಸುತ್ತಿದ್ದು, ಅದಕ್ಕೆ ಹಣ ಹೂಡಿ. ಸಿನಿಮಾ ಒಳ್ಳೆ ಲಾಭ ತಂದುಕೊಡುತ್ತದೆ ಎಂದು ವಿಜಯ್ ಅವರನ್ನು ಪುಸಲಾಯಿಸಿದ್ದರಂತೆ. ಇದನ್ನು ನಂಬಿ ವಿಜಯ್ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಸಿನಿಮಾ ಬಿಡುಗಡೆಯಾಗಿ ತಿಂಗಳು ಕಳೆದರೂ ರವೀಂದರ್ ಪ್ರತಿಕ್ರಿಯಿಸುತ್ತಿಲ್ಲ ಎಂದು ವಿಜಯ್ ಈಗ ಪೊಲೀಸರ ಮೊರೆ ಹೋಗಿದ್ದಾರೆ.
ಈ ಹಿಂದೆ ಕೂಡ ನಿರ್ಮಾಪಕ ರವೀಂದ್ರನ್ ವಿರುದ್ಧ ವಿಜಯ್ ದೂರು ನೀಡಿದ್ದರು. ಆದರೆ ಕೇಸ್ ವಾಪಸ್ ಪಡೆದರೆ ಹಣ ನೀಡುವುದಾಗಿ ರವೀಂದ್ರನ್ ಹೇಳಿದ್ದಕ್ಕೆ ವಿಜಯ್ ಕೇಸ್ ವಾಪಸ್ ಪಡೆದಿದ್ದರು. ಆದರೆ ಮತ್ತೆ ಹಣ ಕೊಡಲಿಲ್ಲ. "ಇದೀಗ ನನ್ನ ಮೊಬೈಲ್ ಸಂಖ್ಯೆ ಕೂಡ ಬ್ಲಾಕ್ ಮಾಡಿದ್ದಾರೆ. ಹಣ ಕೇಳಿದರೆ ಅವಮಾನ ಮಾಡುತ್ತಿದ್ದಾರೆ." ಎಂದು ನಿರ್ಮಾಪಕನ ವಿರುದ್ಧ ವಿಜಯ್ ದೂರು ನೀಡಿದ್ದಾರೆ. ಸದ್ಯ ಕೇಂದ್ರ ಅಪರಾಧ ವಿಭಾಗದ ಪೊಲೀಸರು ರವೀಂದರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಅಂದಹಾಗೆ ನಿರ್ಮಾಪಕ ರವೀಂದ್ರನ್ ಹಾಗೂ ಕಿರುತೆರೆ ನಟಿ ಮಹಾಲಕ್ಷ್ಮಿ ಪ್ರೀತಿಸಿ ಮದುವೆ ಆಗಿದ್ದರು. ಕಳೆದ ವರ್ಷ ಆಗಸ್ಟ್ನಲ್ಲಿ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದರು. ಇನ್ನು ಮಹಾಲಕ್ಷ್ಮಿ ಹಾಗೂ ರವೀಂದರ್ ನಡುವೆ 6 ವರ್ಷಗಳ ಅಂತರ ಇದೆ. ಆಗಿದ್ದಾಂಗೆ ಮಹಾಲಕ್ಷ್ಮಿ ಪತಿ ಜೊತೆಗಿನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಬರ್ತ್ಡೇ ಪಾರ್ಟಿ ಮಾಡಿ ಫೋಟೊ ಶೇರ್ ಮಾಡುತ್ತಾರೆ. ಇತ್ತೀಚೆಗೆ ಪತಿಯ ಭಾವಚಿತ್ರದ ದೊಡ್ಡ ಪೇಟಿಂಗ್ ಅನ್ನು ಪತಿಗೆ ಗಿಫ್ಟ್ ಆಗಿ ನೀಡಿದ್ದರು.


Click it and Unblock the Notifications











