ನಟ ಚಿಯಾನ್ ವಿಕ್ರಂ ಮನೆಗೆ ಬಾಂಬ್ ಬೆದರಿಕೆ ಕರೆ
ತಮಿಳು ನಟ ಚಿಯಾನ್ ವಿಕ್ರಂ ಮನೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಮನೆ ತಪಾಸಣೆ ನಡೆಸಿದ ಪೊಲೀಸರು, ಇದೊಂದು ಹುಸಿ ಕರೆ ಆಗಿತ್ತು ಎಂದು ಹೇಳಿದ್ದಾರೆ.
ವಿಕ್ರಂ ರವರಿಗೆ ಸೇರಿದ್ದ ಚೆನ್ನೈನ ಬೆಸೆಂಟ್ ನಗರದ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ನವೆಂಬರ್ 30 ರ ಮಧ್ಯಾಹ್ನದ ವೇಳೆಗೆ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಬಂದಿತ್ತು.
ಕರೆ ಬಂದ ಕೂಡಲೇ ಪೊಲೀಸರು, ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದ ಸಮೇತ ವಿಕ್ರಂ ನಿವಾಸಕ್ಕೆ ತೆರಳಿ, ಪೂರ್ಣವಾಗಿ ತಪಾಸಣೆ ನಡೆಸಿದರು. ಯಾವುದೇ ಸ್ಫೋಟಕ ವಸ್ತುಗಳು ವಿಕ್ರಂ ಮನೆಯಲ್ಲಿ ಪೊಲೀಸರಿಗೆ ದೊರಕಲಿಲ್ಲ.

ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ತೊಡಗಿದ್ದು, ತಮಿಳುನಾಡಿನ ವೆಲ್ಲಪುರಂ ಜಿಲ್ಲೆಯಿಂದ ಕರೆ ಬಂದಿದೆ ಎನ್ನಲಾಗಿದೆ. ಈ ಹಿಂದೆ ಅಜಿತ್ ಹಾಗೂ ರಜನಿಕಾಂತ್ ಮನೆಗೆ ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿಯೇ ಈಗಲೂ ಕರೆ ಮಾಡಿರುವ ಸಂಭವ ಇದೆಯೆಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೆ ನಟ ಸೂರ್ಯಾಗೆ ಸೇರಿದ ಅಳ್ವಾರ್ ಪೇಟೆಯ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಬಂದಿತ್ತು. ಅದಕ್ಕೂ ಮುನ್ನಾ ನಟ ರಜನೀಕಾಂತ್, ವಿಜಯ್, ಅಜಿತ್ ಮನೆಗೂ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆಗಳು ಬಂದಿದ್ದವು.


Click it and Unblock the Notifications











