ಪೊಲೀಸ್ ಸಮನ್ಸ್; ತಮಿಳು ನಟಿ ಕಸ್ತೂರಿ ಶಂಕರ್ ನಾಪತ್ತೆ?
ತಮಿಳು ನಟಿ ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಕೆಯ ಹೇಳಿಕೆ ವಿರೋಧಿಸಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಈಗಾಗಲೇ ಪೊಲೀಸರು ಸಮನ್ಸ್ ನೀಡಲು ಮುಂದಾಗಿದ್ದು ಆಕೆ ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತೆಲುಗು ಜನರ ಬಗ್ಗೆ ಮಾತನಾಡುತ್ತ ನಟಿ ಕಸ್ತೂರಿ ನೀಡಿದ ಒಂದು ಹೇಳಿಕೆ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ. ಇಂಡಿಯಾ ತೆಲುಗು ಅಸೋಸಿಯೇಷನ್ ವತಿಯಿಂದ ನಟಿ ಕಸ್ತೂರಿ ವಿರುದ್ಧ ಸೆಕ್ಷನ್ 192, 196(1ಎ)3 53,353(2) ಅಡಿಯಲ್ಲಿ ಪ್ರಕರಣ ದಾಖಲಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಸಮನ್ಸ್ ನೀಡಿ ಆಕೆಯನ್ನು ಠಾಣೆಗೆ ಕರೆಸಲು ಪ್ರಯತ್ನಿಸುತ್ತಿದ್ದಾರೆ.

ಪೊಲೀಸರು ಸಮನ್ಸ್ ನೀಡಲು ನಟಿ ಕಸ್ತೂರಿ ಮನೆಗೆ ತೆರಳಿದ್ದು ಆಕೆಯ ಮನೆಗೆ ಬೀಗ ಹಾಕಲಾಗಿದೆ. ಫೋನ್ ಕೂಡ ಸ್ವಿಚ್ಡ್ ಆಫ್ ಆಗಿದೆ. ಸದ್ಯ ಅಜ್ಞಾತದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಹೇಳಿಕೆಗೆ ಈಗಾಗಲೇ ಕಸ್ತೂರಿ ಕ್ಷಮೆ ಕೇಳಿದ್ದಾರೆ. ಟ್ವೀಟ್ ಮಾಡಿ ತಮ್ಮ ಹೇಳಿಕೆ ಹಿಂಪಡೆದುಕೊಂಡಿದ್ದಾರೆ. ಆದರೂ ಕೂಡ ಸಂಕಷ್ಟ ತಪ್ಪುತ್ತಿಲ್ಲ.
ಕಳೆದ ಭಾನುವಾರ ತಮಿಳುನಾಡಿನಲ್ಲಿ ನಡೆದ ಸ್ಥಳೀಯ ಬ್ರಾಹ್ಮಣರ ಸಮಾವೇಶದಲ್ಲಿ ನಟಿ ಕಸ್ತೂರಿ ಭಾಗವಹಿಸಿದ್ದರು. ತೆಲುಗು ಜನರನ್ನು ಉದ್ದೇಶಿಸಿ ಆಕೆ ಮಾತನಾಡಿದರು. "ರಾಜರ ಕಾಲದಲ್ಲಿ ಅರಮನೆಯ ಸ್ತ್ರೀಯರ ಸೇವೆಗೆ ಬಂದವರು ಈಗ ತೆಲುಗು ಜನರನ್ನು ಕೀಳಾಗಿ ಮಾತನಾಡುತ್ತಿದ್ದರು. ಆ ರೀತಿ ಬಂದವರೆಲ್ಲ ಈಗ ನಮ್ಮದು ತಮಿಳು ಜನಾಂಗ ಎಂದು ದೊಡ್ಡದಾಗಿ ಮಾತನಾಡುತ್ತಿದ್ದಾರೆ ಎಂದು ಕಸ್ತೂರಿ ಆರೋಪಿಸಿದ್ದರು. ಇದೇ ಹೇಳಿಕೆ ಆಕೆಗೆ ಕಂಟಕವಾಗಿ ಪರಿಣಮಿಸಿದೆ.
ತೆಲುಗು ಜನರ ವಿಚಾರದಲ್ಲಿ ತಮ್ಮ ಹೇಳಿಕೆ ತಪ್ಪು ಎಂದು ಗೊತ್ತಾಗುತ್ತಿದ್ದಂತೆ ತೆಲುಗು ಜನ ನನ್ನ ಕುಟುಂಬ. ಡಿಎಂಕೆ ಪಕ್ಷದವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ಆದರೂ ನಾನು ಕ್ಷಮೆ ಕೇಳುತ್ತೇನೆ ಎಂದು ಕಸ್ತೂರಿ ಸ್ಪಷ್ಟನೆ ನೀಡಿದ್ದರು.
ತಮಿಳುನಾಡಿನಲ್ಲಿರುವ ತೆಲುಗು ಜನರ ಬಗ್ಗೆ ಮಾತ್ರವಲ್ಲ ಸರ್ಕಾರಿ ನೌಕರರಲ್ಲಿ ಬ್ರಾಹ್ಮಣೇತರರು ಲಂಚ ಪಡೆಯುತ್ತಿದ್ದಾರೆ ಎಂದು ನಟಿ ಕಸ್ತೂರಿ ಹೇಳಿರುವುದು ಕೂಡ ವಿವಾದದ ಕಿಡಿ ಹೊತ್ತಿಸಿದೆ. ಆಕೆಯ ಕಾರ್ಮಿಕ ಸಂಘಗಳು ಖಂಡಿಸುತ್ತಿವೆ. ಸರ್ಕಾರಿ ನೌಕರರ ಕೆಲವು ವರ್ಗಗಳ ವಿರುದ್ಧ ನಟಿ ಕಸ್ತೂರಿ ಹೇಳಿಕೆ ಜನರಿಗೆ ತಪ್ಪು ಸಂದೇಶ ಕೊಡುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಕಂದಾಯ ಅಧಿಕಾರಿಗಳ ಸಂಘ ಕ್ರಮಕ್ಕೆ ಆಗ್ರಹಿಸಿದೆ.
ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ಕೂಡ ನಟಿ ಕಸ್ತೂರಿ ಶಂಕರ್ ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ತಮ್ಮ ನೇರಾನೇರ ಮಾತುಗಳಿಂದ ಗಮನ ಸೆಳೆಯುತ್ತಿದ್ದಾರೆ. ದೇಶದ ಆಗುಹೋಗುಗಳ ಬಗ್ಗೆ ತಮ್ಮದೇ ಶೈಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗಿದ್ದಾರೆ.
ಕರ್ನಾಟಕದಲ್ಲಿ ನಡೆಯುವ ಕಾವೇರಿ ಹೋರಾಟದ ಬಗ್ಗೆ ನಟಿ ಕಸ್ತೂರಿ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮಾಡಿದ್ದರಲ್ಲಿ ತಪ್ಪಿಲ್ಲ, ಎನ್ನುವ ಅರ್ಥದಲ್ಲಿ ಕಸ್ತೂರಿ ಮಾತನಾಡಿದ್ದರು.
'ಜಾಣ' ಕನ್ನಡದಲ್ಲಿ ಕಸ್ತೂರಿ ನಟಿಸಿದ ಚೊಚ್ಚಲ ಸಿನಿಮಾ. ಬಳಿಕ 'ಹಬ್ಬ', 'ತುತ್ತಾಮುತ್ತಾ' ಹಾಗೂ 'ಪ್ರೇಮಕ್ಕೆ ಸೈ' ಚಿತ್ರಗಳಲ್ಲಿ ಕಸ್ತೂರಿ ನಟಿಸಿದ್ದರು. ತಮಿಳಿನ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ಕಸ್ತೂರಿ ಅಭಿನಯಿಸಿದ್ದಾರೆ.


Click it and Unblock the Notifications











