'ಜನ ನಾಯಗನ್' ಸಿನಿಮಾ ಲೀಕ್ ಪ್ರಕರಣ; ತಲೆ ಮರೆಸಿಕೊಂಡಿದ್ದ ಮಾಸ್ಟರ್ ಮೈಂಡ್ ಪೊಲೀಸರ ಬಲೆಗೆ
ತಮಿಳಿನ 'ಜನನಾಯಗನ್' ಈ ವರ್ಷ ಅತಿಹೆಚ್ಚು ವಿವಾದಕ್ಕೀಡಾದ ಸಿನಿಮಾ. ಜನವರಿಯಲ್ಲಿ ತೆರೆಗೆ ಬರಬೇಕಿದ್ದ ಸಿನಿಮಾ ಇವತ್ತಿಗೂ ಬಂದಿಲ್ಲ. ಬಿಡುಗಡೆಗೂ ಮುನ್ನ ಸಿನಿಮಾ ಆನ್ಲೈನ್ನಲ್ಲಿ ಸಂಪೂರ್ಣವಾಗಿ ಲೀಕ್ ಆಗಿತ್ತು. ಈಗಾಗಲೇ ಪ್ರಕರಣ ದಾಖಲಾಗಿದೆ. ಸೈಬರ್ ಕ್ರೈಂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಸಂಬಂಧ ಮತ್ತಿಬ್ಬರನ್ನು ಪೊಲೀಸರು ಮೊನ್ನೆ(ಜೂನ್ 10) ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಬಿಂಬಿತವಾಗಿದ್ದ ಆರೋಪಿಯನ್ನು ಕೂಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇಷ್ಟು ದಿನ ಆತ ತಲೆಮರೆಸಿಕೊಂಡಿದ್ದ. ಸದ್ಯ ಪ್ರಕರಣದಲ್ಲಿ 19 ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ. ಏಪ್ರಿಲ್ 9ರಂದು 'ಜನನಾಯಗನ್' ಸಂಪೂರ್ಣ ಸಿನಿಮಾ ಲೀಕ್ ಆಗಿ ಚಿತ್ರತಂಡಕ್ಕೆ ಶಾಕ್ ಎದುರಾಗಿತ್ತು. ಈಗಾಗಲೇ ಸಾಕಷ್ಟು ಜನ ಸಿನಿಮಾ ಪೈರಸಿ ಕಾಪಿಯಲ್ಲಿ ಸಿನಿಮಾ ನೋಡಿಬಿಟ್ಟಿದ್ದಾರೆ. ಏಪ್ರಿಲ್ 11ರಂದು ಪ್ರಕರಣದ ದಾಖಲಾಗಿತ್ತು. ಅಂದಿನಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿನಿಮಾ ಲೀಕ್ ಆಗಿದ್ದೇಗೆ? ಅದನ್ನು ಕಿಡಿಗೇಡಿಗಳು ಹೇಗೆ ಸಂಗ್ರಹಿಸಿ, ಲೀಕ್ ಮಾಡಿದರು ಎನ್ನುವ ಬಗ್ಗೆ ಸೈಬರ್ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಸೆನ್ಸಾರ್ ಮಾಡುವ ವೇಳೆ ಅಥವಾ ಎಡಿಟಿಂಗ್ ಟೇಬಲ್ನಿಂದಲೇ 'ಜನನಾಯಗನ್' ಸಿನಿಮಾ ಲೀಕ್ ಆಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆರಂಭದಲ್ಲಿ ಚಿತ್ರದ ಎಡಿಟರ್ ಪ್ರದೀಪ್ ಇ. ರಾಘವ್ ವಿವಾದದ ಕೇಂದ್ರಬಿಂದುವಾಗಿದ್ದು ಭಾರೀ ಚರ್ಚೆ ಹುಟ್ಟು ಹಾಕಿತ್ತು. ಆದರೆ ಈ ದುಷ್ಕೃತ್ಯಕ್ಕೂ ಅವರಿಗೂ ನೇರವಾಗಿ ಯಾವುದೇ ಸಂಬಂಧ ಇಲ್ಲ ಎಂದು ಗೊತ್ತಾಗಿದೆ.
ವಿನೋದ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಜನನಾಯಗನ್'. ರಾಜಕೀಯರಂಗ ಪ್ರವೇಶಕ್ಕೂ ಮುನ್ನ ಇದು ವಿಜಯ್ ಕೊನೆ ಸಿನಿಮಾ ಎನ್ನಲಾಗಿತ್ತು. ಹಾಗಾಗಿ ಈ ಚಿತ್ರವನ್ನು ತಮ್ಮ ಪೊಲಿಟಿಕಲ್ ಎಂಟ್ರಿಗೆ ವೇದಿಕೆ ಮಾಡಿಕೊಳ್ಳಲು ವಿಜಯ್ ಬಯಸಿದ್ದರು. ಆದರೆ ಸೆನ್ಸಾರ್ ಸಮಸ್ಯೆಯಿಂದ ಚುನಾವಣೆಗೂ ಮುನ್ನ ಸಿನಿಮಾ ಬಿಡುಗಡೆಗೆ ಅವಕಾಶ ಸಿಗಲಿಲ್ಲ. ಎದುರಾಳಿ ಪಕ್ಷದವರು ವಿಜಯ್ ಸಿನಿಮಾ ಬಿಡುಗಡೆಗೆ ಅಡ್ಡಗಾಲು ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಸೆನ್ಸಾರ್ ಸಮಸ್ಯೆಯಿಂದ ಪದೇ ಪದೆ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಬಂತು. ಬಳಿಕ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ 'ಜನನಾಯಗನ್' ಬಿಡುಗಡೆ ಮತ್ತಷ್ಟು ತಡವಾಗಿತ್ತು. ಅಷ್ಟರಲ್ಲೇ ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಗಿ ವೈರಲ್ ಆಗಿಬಿಡ್ತು. ಚುನಾವಣೆ ಪ್ರಚಾರಕ್ಕಾಗಿ ವಿಜಯ್ ನೇತೃತ್ವದ ಟಿವಿಕೆ ಪಕ್ಷದವರೇ ಸಿನಿಮಾ ಲೀಕ್ ಮಾಡಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬಂದಿತ್ತು.
ಚುನಾವಣೆಗೂ ಮುನ್ನ ಬರಬೇಕಿದ್ದ ಸಿನಿಮಾ ಚುನಾವಣೆ ಬಳಿಕ ಬಂದರೆ ಪ್ರಯೋಜನವಿಲ್ಲ ಎನ್ನುವ ಕಾರಣಕ್ಕೆ ವಿಜಯ್ ಅಭಿಮಾನಿಗಳೇ ಹೀಗೆ ಮಾಡಿರಬಹುದು ಎನ್ನುವ ಚರ್ಚೆ ಕೂಡ ನಡೀತು. ಬಿಡುಗಡೆಗೂ ಮುನ್ನ ಸಿನಿಮಾ ಲೀಕ್ ಆಗಿ ನಿರ್ಮಾಪಕರಿಗೆ ಭಾರೀ ನಷ್ಟವಾಗಿದೆ ಎನ್ನಲಾಗಿತ್ತು. ಮುಂದೆ ಸಿನಿಮಾ ತೆರೆಗೆ ಬಂದರೂ ಯಾರೂ ನೋಡಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಚುನಾವಣೆಯಲ್ಲಿ ಗೆದ್ದು ವಿಜಯ್ ತಮಿಳುನಾಡು ಮುಖ್ಯಮಂತ್ರಿ ಆಗಿದ್ದಾರೆ. ಈಗ 'ಜನನಾಯಗನ್' ಸಿನಿಮಾ ನೋಡಲು ಜನ ಕಾಯ್ತಿದ್ದಾರೆ.
ಸೆನ್ಸಾರ್ ಸಮಸ್ಯೆ ಇನ್ನು ಬಗೆಹರಿದಿಲ್ಲ. ಹಾಗಾಗಿ 6 ತಿಂಗಳಿನಿಂದ ಸಿನಿಮಾ ತೆರೆಗೆ ಬರದೇ ಡಬ್ಬಾದಲ್ಲೇ ಉಳಿದಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದೆ. 250 ಕೋಟಿ ರೂ. ಸಂಭಾವನೆ ಪಡೆದು ವಿಜಯ್ ನಟಿಸಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications