ವಿಚ್ಛೇದನದಿಂದ ಹಿಂದೆ ಸರಿದ ಧನುಶ್-ಐಶ್ವರ್ಯಾ!
ಸೂಪರ್ ಸ್ಟಾರ್ ರಜನೀಕಾಂತ್ ಅಳಿಯ ನಟ ಧನುಶ್ ಹಾಗೂ ಐಶ್ವರ್ಯಾ ದಂಪತಿ ಬೇರಾಗುತ್ತಿರುವ ಸುದ್ದಿ ಈ ವರ್ಷಾರಂಭದಲ್ಲಿ ಬಂದಿತ್ತು. ಇದು ಧನುಶ್ ಹಾಗೂ ರಜನೀಕಾಂತ್ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿತ್ತು.
ಆದರೆ ಇದೀಗ ಬಂದಿರುವ ಸುದ್ದಿಯಂತೆ ಧನುಶ್ ಹಾಗೂ ಐಶ್ವರ್ಯಾ ಅವರುಗಳು ತಮ್ಮ ವಿಚ್ಛೇದನದ ನಿರ್ಧಾರದಿಂದ ಹಿಂದೆ ಸರಿದಿದ್ದಾರಂತೆ. ಸ್ನೇಹಿತರು, ಆಪ್ತರ ಸಲಹೆ ಹಾಗೂ ಮಕ್ಕಳ ಕಾರಣಕ್ಕೆ ಈ ಜೋಡಿ ವಿಚ್ಛೇದನದ ನಿರ್ಧಾರದಿಂದ ಹಿಂದೆ ಸರಿದಿದ್ದಾರಂತೆ.
ಈ ಬಗ್ಗೆ ಧನುಶ್ ಹಾಗೂ ಐಶ್ವರ್ಯಾ ಅಧಿಕೃತ ಹೇಳಿಕೆ ಪ್ರಕಟಿಸಿಲ್ಲವಾದರೂ ಈ ಜೋಡಿ ಮತ್ತೆ ಒಂದಾಗುತ್ತಿರುವುದು ಪಕ್ಕಾ ಎಂದು ಪಿಂಕ್ವಿಲ್ಲಾ ಸೇರಿದಂತೆ ಕೆಲವು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಈ ಜೋಡಿ ಮತ್ತೆ ಒಂದಾಗಲು ರಜನೀಕಾಂತ್ರ ಮಧ್ಯಸ್ಥಿಕೆಯೇ ಪ್ರಮುಖ ಕಾರಣ ಎಂಬ ಮಾತುಗಳು ಸಹ ಕೇಳಿ ಬಂದಿವೆ.

ಧನುಶ್ ಹಾಗೂ ಐಶ್ವರ್ಯಾ ಪರಸ್ಪರ ಬೇರಾಗುತ್ತಿರುವ ಸುದ್ದಿ ಈ ವರ್ಷಾರಂಭದಲ್ಲಿ ಕೇಳಿ ಬಂದಿತ್ತು. ದೂರಾಗುವ ನಿಶ್ಚಯ ಮಾಡಿದ ಬಳಿಕವೂ ತಮ್ಮ ಮಕ್ಕಳ ಕಾರ್ಯಕ್ರಮಗಳಲ್ಲಿ ಈ ಇಬ್ಬರು ಪರಸ್ಪರ ಜೊತೆಯಾಗಿ ಕಾಣಿಸಿಕೊಂಡಿದ್ದರು. ಧನುಶ್-ಐಶ್ವರ್ಯಾ ಬೇರಾದ ಬಗ್ಗೆ ರಜನೀಕಾಂತ್ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಜಂಟಲ್ಮೆನ್ ಜೋಡಿ ಎಂದೇ ಹೆಸರಾದ ಜೋಡಿ ದೂರಾದ ಬಗ್ಗೆ ಕಾಲಿವುಡ್ನಲ್ಲಿಯೂ ಜೋರಾಗಿ ಚರ್ಚೆಗಳು ನಡೆದಿದ್ದವು. ಈಗ ಈ ಜೋಡಿ ಮತ್ತೆ ಒಂದಾಗುತ್ತಿರುವುದು ಅಭಿಮಾನಿಗಳಿಗೆ ಸಹಜವಾಗಿಯೇ ಖುಷಿ ತಂದಿದೆ.
ಧನುಶ್ ಹಾಗೂ ಐಶ್ವರ್ಯಾ 2004 ರಲ್ಲಿ ವಿವಾಹವಾಗಿದ್ದರು. ಇಬ್ಬರಿಗೂ ಯತ್ರ ರಾಜ ಹಾಗೂ ಲಿಂಗ ರಾಜ ಹೆಸರಿನ ಇಬ್ಬರು ಗಂಡುಮಕ್ಕಳಿದ್ದಾರೆ. ಸಿನಿಮಾದ ವಿಷಯಕ್ಕೆ ಬರುವುದಾದರೆ ಧನುಶ್ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ, ಹಾಲಿವುಡ್ನಲ್ಲೂ ಗುರುತು ಪಡೆದಿರುವ ನಟ. ಕಳೆದ ವರ್ಷ ರಾಷ್ಟ್ರಪ್ರಶಸ್ತಿಯನ್ನು ಸಹ 'ಅಸುರನ್' ಸಿನಿಮಾದ ಅತ್ಯುತ್ತಮ ನಟನೆಗಾಗಿ ಪಡೆದಿದ್ದಾರೆ.
ಅವರ ನಟನೆಯ 'ವಾತಿ', 'ಸರ್', 'ಆಯರತ್ತಿಲ್ ಒರುವನ್ 2', 'ಕ್ಯಾಪ್ಟನ್ ಮಿಲ್ಲರ್', ಸೇರಿದಂತೆ ಹೆಸರಿಡದ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲಿ ಒಂದು ಸಿನಿಮಾವನ್ನು ತೆಲುಗಿನ ಜನಪ್ರಿಯ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











