ತಮಿಳು ನಟ ಧನುಶ್-ವಿಜಯಕಾಂತ್ ಮನೆ ಮೇಲೆ ಬಾಂಬ್ ದಾಳಿ ಬೆದರಿಕೆ
ತಮಿಳು ನಟ ಧನುಶ್ ಮನೆ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಕರೆ ಬಂದಿದೆ. ಬಾಂಬ್ ದಾಳಿ ಕರೆ ಬರುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಬಾಂಬ್ ಸ್ಕ್ವಾಡ್ ಆಗಮಿಸಿ ಚೆನ್ನೈನ ಅಭಿರಾಮಪುರಂನಲ್ಲಿರುವ ಧನುಶ್ ನಿವಾಸದಲ್ಲಿ ಸಂಪೂರ್ಣ ಶೋಧ ಕಾರ್ಯಾಚರಣೆ ನಡೆಸಿದೆ.
ಪ್ರಕರಣವನ್ನು ಸೂಕ್ಷ್ಮವಾಗಿ ತೆಗೆದುಕೊಂಡು ಚೆನ್ನೈ ಪೊಲೀಸರು ಕರೆ ಮಾಡಿದವರನ್ನು ಪತ್ತೆಹಚ್ಚಲು ಪ್ರಯತ್ನಿಸಿದ್ದರು. ಬಳಿಕ, ಇದೊಂದು ನಕಲಿ ಕರೆ ಎಂದು ತಿಳಿದು ಬಂದಿದೆ. ಕೆಲವು ತಿಂಗಳ ಹಿಂದೆ ನಟ ಸೂರ್ಯ ಅವರಿಗೆ ನಕಲಿ ಬಾಂಬ್ ಬೆದರಿಕೆ ಕರೆ ಮಾಡಿದ ಅದೇ ಮಾನಸಿಕ ಅಸ್ವಸ್ಥ ವ್ಯಕ್ತಿಯಿಂದ ಈ ಬೆದರಿಕೆ ಕರೆ ಬಂದಿದೆ ಎಂದು ವರದಿಯಾಗಿದೆ.
ಅಂದ್ಹಾಗೆ, ಧನುಶ್ ಅವರಿಗೆ ಕರೆ ಮಾಡುವ ಮೊದಲು ಹಿರಿಯ ನಟ-ರಾಜಕಾರಣಿ ವಿಜಯಕಾಂತ್ ಅವರ ಮನೆ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಬಂದಿತ್ತು. ಅದು ಸಹ ನಕಲಿ ಕರೆಯಾಗಿದೆ.

ಕೆಲವು ವಾರಗಳ ಹಿಂದೆ, ಚೆನ್ನೈನಲ್ಲಿರುವ ನಟ ಸೂರ್ಯ ಅವರ ಕಚೇರಿಗೆ ಬಾಂಬ್ ಬೆದರಿಕೆ ಬಂದಿತ್ತು. ಕೆಲವು ತಿಂಗಳ ಹಿಂದೆ ಅಪ್ರಾಪ್ತ ಹುಡುಗನೊಬ್ಬ ರಜನಿಕಾಂತ್ ಅವರ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಿದ್ದ. ಆದ್ರೆ, ಆ ಅಪ್ರಾಪ್ತ ಬಾಲಕನ ಮನಸ್ಥಿತಿಯ ಬಗ್ಗೆ ತಿಳಿದ ನಂತರ, ರಜನಿಕಾಂತ್ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಮುಂದಾದರು. ಹುಡುಗನ ಶೈಕ್ಷಣಿಕ ವೆಚ್ಚಗಳಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಇನ್ನು ನಿರಂತರವಾಗಿ ಸ್ಟಾರ್ ನಟರಿಗೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಅಭಿಮಾನಿಗಳು ಆತಂಕಗೊಂಡಿದ್ದು, ಅಂತಹ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸುತ್ತಿದ್ದಾರೆ.


Click it and Unblock the Notifications











