150 ಕೋಟಿ ರೂ. ಮೌಲ್ಯದ ತಮ್ಮ ಪೊಯೆಸ್ ಗಾರ್ಡನ್ ಬಂಗಲೆ ಸೀಕ್ರೆಟ್ ಬಿಚ್ಚಿಟ್ರು ಧನುಷ್!
ತಮಿಳು ನಟ ಧನುಷ್ ಸದ್ಯ ಕಾಲಿವುಡ್ ಸ್ಟಾರ್ ನಟರಲ್ಲಿ ಒಬ್ಬರು. ಖ್ಯಾತ ನಿರ್ದೇಶಕ ಕಸ್ತೂರಿ ರಾಜ ಮಗನಾದರೂ ಬಳಿಕ ರಜನಿಕಾಂತ್ ಅಳಿಯನಾದರೂ ತಮ್ಮದೇ ಪರಿಶ್ರಮದಿಂದ ಧನುಷ್ ಬೆಳೆದು ಬಂದವರು. ವಿಭಿನ್ನ ಮ್ಯಾನರಿಸಂ ಹಾಗೂ ನಟನೆಯಿಂದ ಪ್ರೇಕ್ಷಕರನ್ನು ರಂಜಿಸಿ ಸ್ಟಾರ್ ಪಟ್ಟಕ್ಕೇರಿದರು. ಬಾಲಿವುಡ್, ಹಾಲಿವುಡ್ ಚಿತ್ರಗಳಲ್ಲಿ ನಟಿಸಿದರು.
ಬರೀ ನಟರಾಗಿ ಮಾತ್ರವಲ್ಲದೇ ಧನುಷ್ ನಿರ್ದೇಶಕಾಗಿಯೂ ಗುರ್ತಿಸಿಕೊಂಡಿದ್ದಾರೆ. ತಮ್ಮ 50ನೇ ಚಿತ್ರಕ್ಕೆ ತಾವೇ ಆಕ್ಷನ್ ಕಟ್ ಹೇಳಿ ನಟಿಸಿದ್ದಾರೆ. 'ರಾಯನ್' ಆಗಿ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಜುಲೈ 26ಕ್ಕೆ ಈ ಆಕ್ಷನ್ ಎಂಟರ್ಟ್ರೈನರ್ ಸಿನಿಮಾ ತೆರೆಗೆ ಬರಲಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ವೇದಿಕೆಯಲ್ಲಿ ಧನುಷ್ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗೆ ನಟ ಧನುಷ್ ಕುರಿತು ಸಾಕಷ್ಟು ವದಂತಿಗಳು ಹರಿದಾಡಿದವು. ಡಿವೋರ್ಸ್ ವಿಚಾರದಲ್ಲಿ ಕೂಡ ಬಹಳ ಆರೋಪ ಕೇಳಿಬಂದಿತ್ತು. ಗಾಯಕಿ ಸುಚಿತ್ರಾ ಸಾಕಷ್ಟು ಟೀಕೆ ಮಾಡಿದ್ದರು. ಈ ಬಗ್ಗೆ ಸ್ಪಂದಿಸಿರುವ ಧನುಷ್ "ನಾನು ಏನು ಎನ್ನುವುದು ನನಗೆ ಗೊತ್ತು, ನನ್ನ ಪೋಷಕರು ಹಾಗೂ ಸ್ನೇಹಿತರಿಗೆ ಗೊತ್ತು ಎಂದಿದ್ದಾರೆ. ಇನ್ನು ಆರಂಭದ ದಿನಗಳಿಂದಲೂ ನಾನು ಬಾಡಿ ಶೇಮಿಂಗ್ ಎದುರಿಸಿದೆ ಎಂದಿದ್ದಾರೆ.
ಸಾಕಷ್ಟು ಅನವಶ್ಯಕ ವದಂತಿಗಳು, ಕೆಟ್ಟ ಹೆಸರು, ಬೆನ್ನಿಗೆ ಚೂರಿ ಹಾಕಿದ ಘಟನೆಗಳು ಇವೆ. ಅದಕ್ಕೆಲ್ಲಾ ಕಾಲವೇ ಉತ್ತರ ಕೊಡುತ್ತದೆ. ಅಷ್ಟೆಲ್ಲಾ ಆದರೂ ನಾನು ಈ ರೀತಿ ಇಂದು ನಿಲ್ಲಲು ಕಾರಣ ನೀವು ಎಂದು ಧನುಷ್ ಹೇಳಿದ್ದಾರೆ. ಅಷ್ಟೇ ಅಲ್ಲ, ತಾವು ಪೋಯೆಸ್ ಗಾರ್ಡನ್ನಲ್ಲಿ ಕಟ್ಟಿಸಿದ ಭವ್ಯ ಬಂಗಲೆಯ ಬಗ್ಗೆಯೂ ಧನುಷ್ ಮಾತನಾಡಿದ್ದಾರೆ. ಕೆಲ ದಿನಗಳ ಹಿಂದೆ ಅವರು ಕಟ್ಟಿಸಿದ ಮನೆ ಭಾರೀ ಚರ್ಚೆ ಹುಟ್ಟು ಹಾಕಿತ್ತು. ರಜನಿಕಾಂತ್ ನಿವಾಸದ ಸಮೀಪದಲ್ಲೇ ಆ ಬಂಗಲೆ ಎದ್ದು ನಿಂತಿತ್ತು.
"ನಾನು ಪೋಯೆಸ್ ಗಾರ್ಡನ್ನಲ್ಲೇ ಬಂಗಲೆ ಕಟ್ಟಿಕೊಳ್ಳು ಒಂದು ಕಾರಣವಿದೆ. ಆದರೆ ಆ ಮನೆ ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. 16ನೇ ವಯಸ್ಸಿನಲ್ಲಿದ್ದಾಗ ಒಮ್ಮೆ ಪೋಯೆಸ್ ಗಾರ್ಡ್ನಲ್ಲಿರುವ ನನ್ನ ನೆಚ್ಚಿನ ನಟ ರಜನಿಕಾಂತ್ ಮನೆ ನೋಡಲು ಹೋಗಿದ್ದೆ. ಅಲ್ಲಿದ್ದ ಪೊಲೀಸರ ಬಳಿ ಮನವಿ ಮಾಡಿ ಹತ್ತಿರದಿಂದ ತಲೈವಾ ಮನೆ ನೋಡಿ ಬಂದೆ. ನಂತರ ಅಲ್ಲೇ ಪಕ್ಕದಲ್ಲಿ ಇದ್ದ ಸಿಎಂ ಜಯಲಲಿತಾ ಅವರ ನಿವಾಸ ನೋಡಿದೆ. ಅಂದೇ ತೀರ್ಮಾನಿಸಿದೆ, ಇದೇ ಭಾಗದಲ್ಲಿ ನಾನು ಬಂಗಲೆ ಕಟ್ಟಿಸಬೇಕು ಎಂದು. ಇತ್ತೀಚೆಗೆ ಆ ಆಸೆ ಈಡೇರಿತು" ಎಂದಿದ್ದಾರೆ.

ಧನುಷ್ ನಿಜವಾದ ಹೆಸರು ವೆಂಕಟೇಶ್ ಪ್ರಭು. ಬಳಿಕ ಧನುಷ್ ಎಂದು ಹೆಸರು ಬದಲಿಸಿಕೊಂಡು ಚಿತ್ರರಂಗಕ್ಕೆ ಬಂದಿದ್ದರು. "ಅಂದು 16 ವರ್ಷದ ವೆಂಕಟೇಶ್ ಪ್ರಭು ಆಗಿ ನಾನು ರಜನಿಕಾಂತ್ ಮನೆ ನೋಡಿದ್ದೆ. ಈಗ ನಾನು ಕಟ್ಟಿಸಿರುವ ಬಂಗಲೆ ಆ ವೆಂಕಟೇಶ್ ಪ್ರಭುಗೆ ಧನುಷ್ ಕೊಟ್ಟ ಉಡುಗೊರೆ" ಎಂದು ಹೇಳಿಕೊಂಡಿದ್ದಾರೆ. ಈ ಮಾತು ಕೇಳಿ ನೆರೆದಿದ್ದ ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ.
"ನಾನು ಮೊದಲ ಚಿತ್ರದಲ್ಲಿ ನಟಿಸುವಾಗ ಇಷ್ಟು ದೂರ ಸಾಗಿ ಬರ್ತೀನಿ ಎಂದುಕೊಂಡಿರಲಿಲ್ಲ. ಸಾಕಷ್ಟು ಟೀಕೆ, ಅವಮಾನ ಎದುರಿಸಿದೆ. ಎಲ್ಲಾ ಮೀರಿ ಇಂದು ಇಲ್ಲಿದ್ದೀನಿ. ಕಪ್ಪಗೆ, ತೆಳ್ಳಗೆ ಇರುವ ನನ್ನನ್ನು ನೀವು ಹೇಗೆ ಹೀರೊ ಆಗಿ ಸ್ವೀಕರಿಸಿದಿ ಎನ್ನುವುದು ನನಗೆ ಇನ್ನು ಗೊತ್ತಾಗುತ್ತಿಲ್ಲ. ಇಂಗ್ಲೀಷ್ ಮಾತನಾಡಲು ಬರದ ನಾನು ಇಂಗ್ಲೀಷ್ ಸಿನಿಮಾದಲ್ಲಿ ನಟಿಸುವಂತಾಯಿತು. ಇದರ ಸಂಪೂರ್ಣ ಕ್ರೆಡಿಟ್ ನಿಮ್ಮದು" ಎಂದಿದ್ದಾರೆ.


Click it and Unblock the Notifications











