"ಅಪ್ಪನ ಹೆಸ್ರು ಉಳಿಸೋದು ಹೇಗೆ ಅಂತ ನಿಮ್ಮನ್ನು ನೋಡಿ ಕಲಿಬೇಕು": ಶಿವಣ್ಣನ ಬಗ್ಗೆ ಧನುಷ್ ಗುಣಗಾನ
ಕಾಲಿವುಡ್ನಲ್ಲಿ ಸೆಂಚುರಿ ಸ್ಟಾರ್ ಶಿವಣ್ಣನ ಆರ್ಭಟ ಶುರುವಾಗಿದೆ. ಶಿವಣ್ಣ ಈಗಾಗಲೇ 'ಜೈಲರ್' ಚಿತ್ರದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದಾರೆ. ಚೆನ್ನೈನಲ್ಲೇ ಹುಟ್ಟಿ ಬೆಳೆದ ಹ್ಯಾಟ್ರಿಕ್ ಹೀರೋಗೆ ತಮಿಳು ಕಲಾವಿದರು, ಚಿತ್ರರಂಗದ ಬಗ್ಗೆ ಅಪಾರ ಅಭಿಮಾನವಿದೆ. ಆಕ್ಷನ್ ಥ್ರಿಲ್ಲರ್ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಮತ್ತೊಮ್ಮೆ ಅಬ್ಬರಿಸಲು ಸಜ್ಜಾಗಿದ್ದಾರೆ.
ಅರುಣ್ ಮಥೇಶ್ವರನ್ ನಿರ್ದೇಶನದ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗಪ್ಪಳಿಸುತ್ತಿದೆ. ಚಿತ್ರದಲ್ಲಿ ಧನುಷ್ ಹೀರೊ ಆಗಿ ನಟಿಸಿದ್ದು ಪ್ರಮುಖ ಪಾತ್ರದಲ್ಲಿ ಶಿವಣ್ಣ ಮಿಂಚಿದ್ದಾರೆ. ಸೆಂದಿಲ್ ತ್ಯಾಗರಾಜನ್, ಅರ್ಜುನ್ ತ್ಯಾಗರಾಜನ್ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮುಂದಿನ ವಾರವೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಕನ್ನಡ, ತೆಲುಗು, ಮಲಯಾಳಂಗೂ ಡಬ್ ಆಗಿ ರಿಲೀಸ್ ಆಗಲಿದೆ.

ಚಿತ್ರದಲ್ಲಿ ಧನುಷ್ ಸಹೋದರನ ಪಾತ್ರದಲ್ಲಿ ಶಿವರಾಜ್ಕುಮಾರ್ ನಟಿಸಿದ್ದಾರೆ. ಈಗಾಗಲೇ ಟೀಸರ್ ಹಾಗೂ 'ಈರಪ್ಪನು' ಸಾಂಗ್ನಲ್ಲಿ ಶಿವಣ್ಣನನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಚೆನ್ನೈನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ನಡೆದಿದೆ. ನೆಹರೂ ಸ್ಟೇಡಿಯಂನಲ್ಲಿ ಬಹಳ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಶಿವಣ್ಣ ಪತ್ನಿ ಸಮೇತ ಹಾಜರಾಗಿದ್ದರು.
ವೇದಿಕೆ ಏರಿ ಮಾತನಾಡಿದ ಶಿವಣ್ಣ ಬಳಿಕ ಬಿಂದಾಸ್ ಹೆಜ್ಜೆ ಹಾಕಿ ರಂಗೇರಿಸಿದ್ದರು. ವೇದಿಕೆಯಿಂದ ಕೆಳಗಿಳಿದು ಧನುಷ್ ಜೊತೆ ಸೇರಿ ಕುಣಿದಿದ್ದರು. ಆ ವಿಡಿಯೋ ಈಗ ವೈರಲ್ ಆಗ್ತಿದೆ. ಇನ್ನು ಧನುಷ್ ವೇದಿಕೆ ಏರಿ ಶಿವಣ್ಣನ ಬಗ್ಗೆ ಗುಣಗಾನ ಮಾಡಿದ್ದಾರೆ. ಸೆಂಚುರಿ ಸ್ಟಾರ್ ಸರಳತೆ ಬಗ್ಗೆ ಮೆಚ್ಚಿಕೊಂಡಾಡಿದ್ದಾರೆ.
ಶಿವಣ್ಣನ ಕುರಿತು "ನಿಮ್ಮ ಮನಸ್ಸಿಗೆ ನಿಮ್ಮ ಪ್ರೀತಿಗೆ ನಿಮ್ಮ ಬೆಂಬಲಕ್ಕೆ ನಿಮ್ಮ ಶ್ರಮಕ್ಕೆ ನಿಮ್ಮ ಅಕ್ಕರೆಗೆ ನಾನು ಬಹಳ ದೊಡ್ಡ ಅಭಿಮಾನಿ. ನೀವು ವೇದಿಕೆ ಏರಿ ನಗುತ್ತಾ ಮಾಡುತ್ತಿದ್ದಿರಿ. ನಿಮ್ಮನ್ನು ನೋಡಿ ಖುಷಿಪಡುತ್ತಿದ್ದೆ. ಸುಮ್ನೆ ವೇದಿಕೆಯಲ್ಲಿ ಮಾತನಾಡಬೇಕು ಎಂದು ಮಾತನಾಡುತ್ತಿಲ್ಲ. ನೀವು ನಕ್ಕಾಗ ನಿಮ್ಮ ಮುಖದಲ್ಲಿ ನಿಮ್ಮ ಅಪ್ಪ ಕಾಣಿಸ್ತಾರೆ, ನಿಮ್ಮ ತಮ್ಮ ಕೂಡ ಕಾಣಿಸ್ತಾರೆ, ಮೂವರು ಸೇರಿ ನಗುವಂತೆ ನನಗೆ ಕಾಣಿಸಿತು" ಎಂದಿದ್ದಾರೆ. ಈ ಮಾತಿಗೆ ಇಡೀ ಆಡಿಟೋರಿಯಂ ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದೆ.

"ಅಪ್ಪನ ಹೆಸ್ರು ಉಳಿಸುವುದು ಅಂದ್ರೆ ಏನು ಅಂತ ನಿಮ್ಮನ್ನು ನೋಡಿ ಕಲಿಯಬೇಕು ಸರ್. ಮಕ್ಕಳಿದ್ದಾರೆ ನೋಡಿ ಕಲಿಯುತ್ತಾರೆ ಎಂದುಕೊಂಡಿದ್ದೇನೆ. ನನ್ನ ಮಕ್ಕಳೊಟ್ಟಿಗೆ ನೀವು ಕ್ರಿಕೆಟ್ ಆಡಿದ್ದು, ನಾವು ಹೋಗಿ ಒಟ್ಟಿಗೆ ಊಟ ಮಾಡಿದ್ದು ಮರೆಯೋಕ್ಕಾಗಲ್ಲ. ನನಗೆ ಮನೆ ಊಟ ಸಿಗುತ್ತಿಲ್ಲ ಎಂದಾಗ ನಾವೇನು ಅಷ್ಟು ಸೌಕರ್ಯ ಇರುವ ರೂಮ್ನಲ್ಲಿ ಇರಲಿಲ್ಲ. ಆ ರೂಮ್ನಲ್ಲಿ ಸಡನ್ ಆಗಿ ಒಂದು ಕಿಚನ್ ರೆಡಿ ಮಾಡಿಬಿಟ್ಟು ಮೇಡಂ(ಗೀತಾ ಶೀವರಾಜ್ಕುಮಾರ್). ನನಗೆ ಒಳ್ಳೆ ಊಟ ಹಾಕಿದ್ರೆ, ನಾನು ಅದನ್ನು ಮರೆಯುವುದಿಲ್ಲ, ನಿಮಗೆ ಧನ್ಯವಾದ" ಎಂದು ಧನುಷ್ ಹೇಳಿದ್ದಾರೆ.
'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಸ್ವತಂತ್ರಪೂರ್ವದ ಕಥೆಯನ್ನು ಹೇಳಲಾಗುತ್ತಿದೆ. ಹಳ್ಳಿ ಸೊಗಡಿನ ಕತೆಯನ್ನು ಬಹಳ ರೋಷಕವಾಗಿ ಹೇಳಲಾಗಿದೆ. ಶಿವಣ್ಣ ಕೂಡ ತಮ್ಮ ಪಾತ್ರದ ಬಗ್ಗೆ ಬಹಳ ಭರವಸೆಯಿಂದ ಇದ್ದಾರೆ. 'ಜೈಲರ್' ಚಿತ್ರದ ನರಸಿಂಹ ಪಾತ್ರಕ್ಕಿಂತ ಇದು ಬಹಳ ಪವರ್ಫುಲ್ ಎನ್ನಲಾಗ್ತಿದೆ.
ಧನುಷ್, ಶಿವರಾಜ್ಕುಮಾರ್ ಜೊತೆಗೆ ಸಂದೀಪ್ ಕೃಷ್ಣನ್, ಪ್ರಿಯಾಂಕಾ ಅರುಳ್ ಮೋಹನ್, ಜಾನ್ ಕೊಕೆನ್, ನಾಸರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಜಿ. ವಿ ಪ್ರಕಾಶ್ ಕುಮಾರ್ ಸಂಗೀತ, ಸಿದ್ದಾರ್ಥ್ ನುನಿ ಛಾಯಾಗ್ರಹಣ ಚಿತ್ರಕ್ಕಿದೆ. ಸಂಕ್ರಾಂತಿ ತೆಲುಗು, ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರ್ತಿದೆ. 'ಕ್ಯಾಪ್ಟನ್ ಮಿಲ್ಲರ್' ಕನ್ನಡಕ್ಕೂ ಡಬ್ ಆಗಿ ಬರುತ್ತಿರುವುದಿಂದ ದೊಡ್ಡಮಟ್ಟದಲ್ಲಿ ಕರ್ನಾಟಕದಲ್ಲಿ ಸದ್ದು ಮಾಡುವ ನಿರೀಕ್ಷೆಯಿದೆ.


Click it and Unblock the Notifications











