ಜಗ್ಗೇಶ್ ಸಿನಿಮಾ ಟೈಟಲ್ನಲ್ಲಿ ಧನುಷ್- ರಶ್ಮಿಕಾ ಮಂದಣ್ಣ ಹೊಸ ಸಿನಿಮಾ
ಇತ್ತೀಚೆಗೆ ತಮಿಳು ನಟ ಧನುಷ್ ನಟನೆಯ 50ನೇ ಸಿನಿಮಾ ಟೈಟಲ್ ರಿವೀಲ್ ಆಗಿತ್ತು. ಖುದ್ದು ಧನುಷ್ ಆಕ್ಷನ್ ಕಟ್ ಹೇಳುತ್ತಿರುವ ಆ ಚಿತ್ರಕ್ಕೆ 'ರಾಯನ್' ಎನ್ನುವ ಟೈಟಲ್ ಫಿಕ್ಸ್ ಮಾಡಲಾಗಿತ್ತು. ತಲೆ ಬೋಳಿಸಿಕೊಂಡು ಅಭಿಮಾನಿಗಳ ನೆಚ್ಚಿನ ಇಳಯ ಸೂಪರ್ ಸ್ಟಾರ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಆ ಪೋಸ್ಟರ್ ವೈರಲ್ ಆಗಿತ್ತು.
ಸದ್ಯ ಧನುಷ್ ನಟನೆಯ ಮತ್ತೊಂದು ಸಿನಿಮಾ ಟೈಟಲ್ ರಿವೀಲ್ ಆಗಿದೆ. ಶಿವರಾತ್ರಿ ಸಂಭ್ರಮದಲ್ಲಿ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಗಿದೆ. ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರ್ತಿದೆ. ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗಲಿದೆ.

ಧನುಷ್ ಜೊತೆಗೆ ಚಿತ್ರದಲ್ಲಿ ತೆಲುಗು ನಟ ನಾಗಾರ್ಜುನ ಸಹ ಬಣ್ಣ ಹಚ್ಚಿದ್ದಾರೆ. ನಾಯಕಿಯಾಗಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದಾರೆ. ತಮಿಳಿನಲ್ಲಿ ಇದು ಆಕೆಯ 3ನೇ ಸಿನಿಮಾ. ಇತ್ತೀಚೆಗಷ್ಟೆ ಈ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು. ಬಹಳ ದಿನಗಳಿಂದ ಧನುಷ್ ಹಾಗೂ ಶೇಖರ್ ಕಮ್ಮುಲ ಕಾಂಬಿನೇಷನ್ ಸಿನಿಮಾ ಬಗ್ಗೆ ಚರ್ಚೆ ಆಗುತ್ತಿತ್ತು. ಕೊನೆಗೂ ಸಿನಿಮಾ ಸೆಟ್ಟೇರಿದೆ.
ಸದ್ಯ ಈ ಚಿತ್ರಕ್ಕೆ 'ಕುಬೇರ' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ನಟ ಧನುಷ್ ಗಡ್ಡ ಬಿಟ್ಟು ನಗುತ್ತಾ ನೋಡುತ್ತಿರುವ ಪೋಸ್ಟರ್ ರಿಲೀಸ್ ಮಾಡಲಾಗಿದೆ. ದೊಗಲೇ ಶರ್ಟು, ಪ್ಯಾಂಟ್ ತೊಟ್ಟು ತಮಿಳು ನಟ ಕಾಣಿಸಿಕೊಂಡಿದ್ದಾರೆ. ಮೊದಲ ನೋಟದಲ್ಲೇ 'ಕುಬೇರ' ಸಿನಿಮಾ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆದಿದೆ.
'ಕುಬೇರ' ಸಂಪತ್ತಿನ ದೇವರು. ಆದರೆ ಪೋಸ್ಟರ್ನಲ್ಲಿ ಧನುಷ್ ಬಡವನಂತೆ ಕಾಣಿಸಿಕೊಂಡಿರುವುದನ್ನು ನೋಡಬಹುದು. ಆತನ ಬಟ್ಟೆ ಕೂಡ ಬಡತನವನ್ನು ಎತ್ತಿ ತೋರಿಸುವಂತಿದೆ. ಇನ್ನು ಹಿನ್ನೆಲೆಯಲ್ಲಿ ಶಿವ, ಅನ್ನಪೂರ್ಣೆಯಿಂದ ಭಿಕ್ಷೆ ಪಡೆಯುವಂತಹ ಚಿತ್ರವನ್ನು ನೋಡಬಹುದಾಗಿದೆ. ಒಟ್ಟಾರೆ ಪೋಸ್ಟರ್ ಅಭಿಮಾನಿಗಳ ಮೆಚ್ಚುಗೆ ಪಡೆದು ಹಿಟ್ ಆಗಿದೆ.
ಕನ್ನಡದಲ್ಲಿ ನವರಸ ನಾಯಕ ಜಗ್ಗೇಶ್ 'ಕುಬೇರ' ಟೈಟಲ್ ಸಿನಿಮಾದಲ್ಲಿ ನಟಿಸಿದ್ದರು. 1999ರಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ರವಳಿ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಸದ್ಯ ಧನುಷ್ ಸಿನಿಮಾ ಟೈಟಲ್ ಕೇಳಿದ ಕೆಲವರು ಜಗ್ಗೇಶ್ ಸಿನಿಮಾವನ್ನು ನೆನಪು ಮಾಡಿಕೊಂಡಿದ್ದಾರೆ. 'ಕುಬೇರ' ಚಿತ್ರದ ಸಣ್ಣ ಮೋಷನ್ ಪೋಸ್ಟರ್ ಸಹ ರಿಲೀಸ್ ಆಗಿದೆ. ದೇವಿ ಶ್ರೀಪ್ರಸಾದ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.
ಮುಂಬೈ ಮಾಫಿಯಾ ಹಿನ್ನೆಲೆಯಲ್ಲಿ 'ಕುಬೇರ' ಸಿನಿಮಾ ಕಥೆ ನಿರ್ಮಾಣವಾಗುತ್ತಿದೆ ಎನ್ನುವ ಗುಸು ಗುಸು ಕೇಳಿಬರ್ತಿದೆ. ತಿರುಪತಿ, ಗೋವಾ ಹಾಗೂ ಹೈದರಾಬಾದ್ನಲ್ಲಿ ಸಣ್ಣ ಶೆಡ್ಯೂಲ್ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ತಿರುಪತಿಯಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಧನುಷ್ ಭಿಕ್ಷುಕನ ರೀತಿ ಕಾಣಿಸಿಕೊಂಡಿದ್ದ ಫೋಟೊಗಳು ವೈರಲ್ ಆಗಿತ್ತು. ಆ ಲುಕ್ಗೂ ಪೋಸ್ಟರ್ನಲ್ಲಿರು ಲುಕ್ಗೂ ಬಹಳ ಸಾಮ್ಯತೆಯಿದೆ.
ತಿರುಪತಿಯಲ್ಲಿ 'ಕುಬೇರ' ಸಿನಿಮಾ ಚಿತ್ರೀಕರಣ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸಿದ್ದ ಘಟನೆ ನಡೆದಿತ್ತು. ದಿಢೀರನೆ ಅಲ್ಲಿ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದು ಯಾಕೆ ಎಂದು ತಿರುಮಲ ದರ್ಶನಕ್ಕೆ ಬಂದಿದ್ದ ಕೆಲ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಸಿನಿಮಾ ಚಿತ್ರೀಕರಣ ನಿಲ್ಲಿಸಲಾಗಿತ್ತು. ಈ ಚಿತ್ರವನ್ನು ಶ್ರೀ ವೆಂಕಟೇಶ್ವರ ಸಿನಿಮಾಸ್ ಮತ್ತು ಅಮಿಗೋಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುನೀಲ್ ನಾರಂಗ್ ಹಾಗೂ ರಾಮಮೋಹನ್ ರಾವ್ ನಿರ್ಮಿಸುತ್ತಿದ್ದಾರೆ. ಮುಂದಿನ ಸಂಕ್ರಾಂತಿಗೆ 'ಕುಬೇರ' ತೆರೆಗೆ ಬರುವ ಸಾಧ್ಯತೆಯಿದೆ.


Click it and Unblock the Notifications











