ಧನುಷ್ ಹೇಳಿದ 'ಇಡ್ಲಿ' ಕಥೆ ಕೇಳಿ ಕಾಲಿವುಡ್ ಕಕ್ಕಾಬಿಕ್ಕಿ,ಸಿನಿಮಾ ಪ್ರಚಾರಕ್ಕೆ ಇಷ್ಟು ಕೀಳು ಮಟ್ಟಕ್ಕೆ ಇಳಿಬೇಕಿತ್ತಾ?
ಚಿತ್ರರಂಗದಲ್ಲಿ ಅಪ್ಪ- ಅಮ್ಮ ಯಾರಾದರೂ ಇದ್ದರೆ ಮುಗಿಯಿತು. ಅವರ ಮಕ್ಕಳು.. ಸಂಬಂಧಿಕರೆಲ್ಲ .. ಅನಾಯಾಸವಾಗಿ ಚಿತ್ರರಂಗಕ್ಕೆ ಬಂದು ಬಿಡ್ತಾರೆ. ಅನೇಕರ ವಿಚಾರದಲ್ಲಿ ಈ ಮಾತು ರುಜುವಾತಾಗಿದೆ ಕೂಡ. ನಿಜಾ.. ಅವರು ಅದೇ ಕ್ಷೇತ್ರದಲ್ಲಿ ಮುಂದುವರೆಯುವುದು.. ಉಳಿಯುವುದು.. ಬೆಳೆಯುವುದು.. ಅವರ ಅವರ ಟ್ಯಾಲೆಂಟ್ ಮೇಲೆ ನಿರ್ಧಾರವಾಗುತ್ತೆ ಆದರೂ.. ಇವರ ಹಾದಿ ಸರಾಗವಾಗಲು ಅವರ ಹೆತ್ತವರು ಕಾರಣವೆನ್ನುವುದನ್ನು ಅಲ್ಲಗೆಳೆಯಲು ಸಾಧ್ಯ ಇಲ್ಲ.
ಆದರೆ.. ಹೀಗೆ ಚಿತ್ರರಂಗದ ಹಿನ್ನೆಲೆಯಿಂದ ಬಂದರೂ ಕೂಡ ಕೆಲವರು ತಾವು ತುಂಬಾ ಕಷ್ಟ ಪಟ್ಟು, ಬೆವರು ಸುರಿಸಿ, ಹಲವು ಅವಮಾನಗಳನ್ನು ಎದುರಿಸಿ.. ಚಿತ್ರರಂಗಕ್ಕೆ ಬಂದೇ ಎಂಬ ವಾದ ಮಾಡುತ್ತಾರೆ. ಕಲ್ಲು -ಮುಳ್ಳಿನ ಹಾದಿಯ ಕಥೆಯನ್ನು ಹೆಣೆದು ಅದನ್ನು ಎಲ್ಲರೆದುರು ಹೇಳಿ ನಗೆಪಾಟಲಿಗೀಡಾಗುತ್ತಾರೆ. ಟ್ರೋಲ್ ಆಗುತ್ತಾರೆ. ಉದಾಹರಣೆಗೆ ಧನುಷ್.

ಹೌದು, ಧನುಷ್..ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಮಾಜಿ ಅಳಿಯ. ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ಹೀರೋ. ಕಮರ್ಷಿಯಲ್ ಹೀರೋ ಆಗಿ ತನ್ನದೇ ಆದ ಸ್ಥಾನವನ್ನ ಹೊಂದಿರುವ ಧನುಷ್, ಬೇರೆ ಸೂಪರ್ ಸ್ಟಾರ್ ಗಳು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಸಲೀಸಾಗಿ ನಟಿಸುತ್ತಾ ಬಂದಿದ್ದಾರೆ. ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ.
ಇಂಥಾ ಧನುಷ್ ಸದ್ಯ ಚಿತ್ರವೊಂದನ್ನು ಮಾಡಿದ್ದಾರೆ. ಆ ಚಿತ್ರದ ಹೆಸರು ''ಇಡ್ಲಿ ಕಡೆ''. ವಿಶೇಷ ಅಂದರೆ ಈ ಚಿತ್ರಕ್ಕೆ ಇವರೇ ನಿರ್ದೇಶಕರು. ಇನ್ನೇನು ಈ ಅಕ್ಟೋಬರ್ 1ರಂದು ''ಕಾಂತಾರ'' ಎದುರು ಈ ಚಿತ್ರ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನು ಮಾಡುತ್ತಿರುವ ಧನುಷ್ ಕಾರ್ಯಕ್ರಮವೊಂದರಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಈ ಮೂಲಕ ಹಲವರನ್ನು ಕೆರಳಿಸಿದ್ದಾರೆ.
ಹೌದು, ಕಾರ್ಯಕ್ರಮದಲ್ಲಿ ಮಾತನಾಡಿರುವ ಧನುಷ್ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ಮಾತನಾಡುತ್ತಾ..ಮಾತನಾಡುತ್ತಾ.. ನಾನು ಬಾಲ್ಯದಲ್ಲಿ ಪ್ರತಿದಿನ ಇಡ್ಲಿ ತಿನ್ನಲು ಹಂಬಲಿಸುತ್ತಿದ್ದೆ. ಆದರೆ ನನ್ನ ಬಳಿ ಇಡ್ಲಿ ತಿನ್ನಲು ಕೂಡ ಹಣ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ. ಹಣ ಇರದ ಹಿನ್ನೆಲೆ ನಾನು ನನ್ನ ಸಹೋದರಿ ಮತ್ತು ನನ್ನ ಸೋದರ ಸಂಬಂಧಿಕರು ಬೆಳಿಗ್ಗೆ 4ಕ್ಕೆ ಎದ್ದು ನೆರೆಹೊರೆಯಿಂದ ಹೂವುಗಳನ್ನು ಸಂಗ್ರಹ ಮಾಡುತ್ತಿದ್ದೆವು ಎಂದು ಹೇಳಿರುವ ಧನುಷ್ ನಾವು ಎಷ್ಟು ಹೂವುಗಳನ್ನು ಸಂಗ್ರಹಿಸುತ್ತೇವೆ ಎನ್ನುವುದರ ಆಧಾರದ ಮೇಲೆ ನಮಗೆ ಹಣ ಸಿಗುತ್ತಿತ್ತು. ಎರಡು ರೂಪಾಯಿ ಹಣ ಸಿಗುತ್ತಿತ್ತು ಎಂದು ಹೇಳಿದ್ದಾರೆ.
ಮುಂದುವರೆದು ₹2 ರೂಪಾಯಿ ಸಂಪಾದನೆ ಮಾಡಿ ನಾವು ಅಲ್ಲಿಯೇ ಇದ್ದ ಪಂಪ್ ಸೆಟ್ಗೆ ಹೋಗಿ ಸ್ನಾನ ಮಾಡುತ್ತಿದ್ದೆವು. ಮುಖ್ಯ ರಸ್ತೆಯಲ್ಲಿ ಕೇವಲ ಒಂದು ಟವಲ್ ಹಾಕಿಕೊಂಡು ನಡೆಯುತ್ತಿದ್ದೆವು ಎಂದಿರುವ ಧನುಷ್ ₹2 ರೂಪಾಯಿಗೆ ನಮಗೆ ನಾಲ್ಕರಿಂದ ಐದು ಇಡ್ಲಿಗಳು ಸಿಗುತ್ತಿದ್ದವು ಎಂದು ಹೇಳಿದ್ದಾರೆ. ಕಷ್ಟಪಟ್ಟು ದುಡಿದ ಹಣದಿಂದ ಊಟ ಮಾಡುವ ತೃಪ್ತಿಯೇ ಬೇರೆ ಎಂದು ಕೂಡ ಹೇಳಿರುವ ಧನುಷ್ ಬಾಲ್ಯದಲ್ಲಿ ನಾನು ಅನುಭವಿಸಿದ ಊಟದ ರುಚಿ ಈಗ ನನಗೆ ರೆಸ್ಟೋರೆಂಟ್ಗಳಲ್ಲಿ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಧನುಷ್ ಅವರ ಈ ಇಡ್ಲಿ ಮತ್ತು ಹೂವಿನ ಕಥೆ ಕೇಳಿ ಕಾಲಿವುಡ್ ಸದ್ಯ ಕಕ್ಕಾಬಿಕ್ಕಿಯಾಗಿದೆ. ಸ್ವತಃ ಧನುಷ್ ಅವರ ಅಭಿಮಾನಿಗಳೇ ಹಣೆ ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಹಲವರು ಧನುಷ್ ಅವರ ಕಾಲೆಳೆಯುತ್ತಿದ್ದಾರೆ. ಕಿಡಿ ಕಾರುತ್ತಿದ್ದಾರೆ. ಯಾಕೆಂದರೆ..ಧನುಷ್ ತಂದೆ 'ಕಸ್ತೂರಿ ರಾಜ' ತಮಿಳು ಚಿತ್ರರಂಗದ ದೊಡ್ಡ ಹೆಸರು. ನಿರ್ದೇಶಕರಾಗಿ-ನಿರ್ಮಾಪಕರಾಗಿ ಹೆಸರು ಮಾಡಿದವರು. ಧನುಷ್ ಅಭಿನಯದ ಮೊದಲ ಚಿತ್ರವನ್ನು ನಿರ್ದೇಶಿಸಿದ್ದು ಕೂಡ ಇವರೇ. ಆದರೆ.. ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದು ಚಿತ್ರರಂಗಕ್ಕೆ ಬಂದ ಧನುಷ್ ನಾನು ಬೀದಿಯಿಂದ ಎದ್ದು ಬಂದು ಬೆಳೆದು ನಿಂತಿರುವ ವ್ಯಕ್ತಿ ಎನ್ನುವುದನ್ನು ಸಾಬೀತು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಈ ಪ್ರಯತ್ನ ಕಂಡು ಹಲವರಿಗೆ ನಗು ಬರುತ್ತಿದೆ. ಸಿನಿಮಾ ಪ್ರಚಾರಕ್ಕೆ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುವ ಅವಶ್ಯಕತೆ ಇತ್ತಾ ಎನ್ನುವ ಪ್ರಶ್ನೆ ಕೂಡ ಕೇಳಿ ಬರುತ್ತಿದೆ.


Click it and Unblock the Notifications











