Dhanush Paternity Case; ನಟ ಧನುಷ್ ನಮ್ಮ ಮಗ ಎಂದು ಕೋರ್ಟ್ ಮೆಟ್ಟಿಲೇರಿದ್ದ ದಂಪತಿ; ಕೋರ್ಟ್ ತೀರ್ಪು ಹೊರಬಿತ್ತು
9 ವರ್ಷಗಳಿಂದ ಕಾಲಿವುಡ್ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದ್ದ ಪ್ರಕರಣದ ತೀರ್ಪು ಹೊರ ಬಿದ್ದಿದೆ. ತಮಿಳು ನಟ ಧನುಷ್ ನಮ್ಮ ಮಗ ಎಂದು ತಮಿಳುನಾಡು ಮೇಲೂರಿನ ದಂಪತಿ ಕೋರ್ಟ್ ಮೆಟ್ಟಿಲೇರಿದ್ದರು. 2015ರಲ್ಲಿ ಕದಿರೇಶನ್, ಮೀನಾಕ್ಷಿ ದಂಪತಿ ನಟ ಧನುಷ್ ನಮ್ಮ ಮಗ, ಅದನ್ನು ನಾವು ಸಾಬೀತು ಮಾಡುತ್ತೇವೆ ಎಂದಿದ್ದರು.
ನಟ ಧನುಷ್ ನಮ್ಮ ಮಗ ಎಂದು ನಿರೂಪಿಸಲು ದಂಪತಿ ಬರ್ತ್ ಸರ್ಟಿಫಿಕೇಟ್, 10ನೇ ತರಗತಿ ಟಿಸಿ ಹಾಗೂ 2002ರಲ್ಲಿ ಉದ್ಯೋಗಕ್ಕಾಗಿ ಉದ್ಯೋಗಭವನದಲ್ಲಿ ಧನುಷ್ ತಮ್ಮ ಹೆಸರು ನೋಂದಾಯಿಸಿರುವುದರ ಸರ್ಟಿಫಿಕೇಟ್ ಅನ್ನು ನ್ಯಾಯಾಲಯದ ಮುಂದಿಟ್ಟಿದ್ದರು. ಆದರೆ ಧನುಷ್ ಮಾತ್ರ ಇದೆಲ್ಲಾ ಸುಳ್ಳು, ನಮ್ಮ ತಂದೆ ನಿರ್ದೇಶಕ ಕಸ್ತೂರಿ ರಾಜಾ ತಾಯಿ, ವಿಜಯಲಕ್ಷ್ಮಿ ಎಂದಿದ್ದರು. ಈ ಬಗ್ಗೆ ಯಾವುದೇ ಪರೀಕ್ಷೆಗೂ ಸಿದ್ಧ ಎಂದು ಸ್ಪಷ್ಟನೆ ನೀಡಿದ್ದರು. ಯಾವುದೇ ಸಿನಿಮಾ ಕಥೆಗೂ ಕಮ್ಮಿಯಿಲ್ಲ ಎನ್ನುವಂತೆ ನಟ ಧನುಷ್ ಪಿತೃತ್ವ ಪ್ರಕರಣ ಸಂಚಲನ ಸೃಷ್ಟಿಸಿತ್ತು.

ಸಾಮಾನ್ಯವಾಗಿ ಇಂತಹ ಕಥೆಗಳನ್ನು ನಾವು ಸಿನಿಮಾಗಳಲ್ಲಿ ಮಾತ್ರ ನೋಡಲು ಸಾಧ್ಯ. ಇದ್ದಕ್ಕಿಂದ್ದಂತೆ ಸ್ಟಾರ್ ನಟನೊಬ್ಬ ನಮ್ಮ ಮಗ, ಆತ ಚಿಕ್ಕಂದಿನಲ್ಲಿ ಮನೆಬಿಟ್ಟು ಹೋಗಿದ್ದ. ಆತನ ಈಗ ಮತ್ತೊಬ್ಬರ ಮನೆಯಲ್ಲಿದ್ದಾನೆ. ಆತನನ್ನು ನಮ್ಮವನು. ನಮಗೆ ಬೇಕು ಎಂದು ದಂಪತಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದು ಅಂದ್ರೆ ತಮಾಷೆಯ ವಿಷಯವಲ್ಲ. ಇದೇ ಕಾರಣಕ್ಕೆ ಈ ಪ್ರಕರಣ ಭಾರೀ ಚರ್ಚೆಗೆ ಹುಟ್ಟುಹಾಕಿತ್ತು.
ತಮಿಳು ನಿರ್ದೇಶಕ ಕಸ್ತೂರಿ ರಾಜಾ ಪುತ್ರ ಧನುಷ್ ಸದ್ಯ ಕಾಲಿವುಡ್ ಸೂಪರ್ ಸ್ಟಾರ್ ಪಟ್ಟಕ್ಕೇರಿದ್ದಾರೆ. ಬಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿಸಿ ಬಂದಿದ್ದಾರೆ. ಮಧುರೆ ಮೇಲೂರಿನ ದಂಪತಿ ಕದಿರೇಶನ್, ಮೀನಾಕ್ಷಿ ದಂಪತಿ ಪಿಯುಸಿ ಓದುತ್ತಿದ್ದ ಸಮಯದಲ್ಲಿ ಧನುಷ್ ಮನೆಬಿಟ್ಟು ಹೋಗಿದ್ದ. ಸಿನಿಮಾಗಳಲ್ಲಿ ನಟಿಸೋಕೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದ. ಮತ್ತೆ ತಿರುಗಿ ಮನೆಗೆ ಬಂದಿರಲಿಲ್ಲ.
ಧನುಷ್ ಈಗ ದೊಡ್ಡ ನಟನಾಗಿದ್ದಾನೆ. ಆತನೇ ನಮ್ಮ ಮಗ ಎಂದು ಗೊತ್ತಾಯಿತು. ಸದ್ಯ ನಾವು ಬಹಳ ಬಡತನದಲ್ಲಿದ್ದೇವೆ. ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ. ಹಾಗಾಗಿ ನಮ್ಮ ಮಗ ಧನುಷ್ನ ನಮ್ಮೊಟ್ಟಿಗೆ ಕಳುಹಿಸಿ. ಅಥವಾ ತಿಂಗಳಿಗೆ 65 ಸಾವಿರ ಹಣವನ್ನು ಕುಟುಂಬ ನಿರ್ವಹಣೆಗೆ ಕೊಡುವಂತೆ ಹೇಳಿ ಎಂದು ಕೋರ್ಟ್ನಲ್ಲಿ ಮನವಿ ಮಾಡಿದ್ದರು. ಪ್ರಕರಣ ಸಂಬಂಧ ನಟ ಧನುಷ್ ಕೂಡ ವಿಚಾರಣೆಗೆ ಹಾಜರಾಗಿದ್ದರು.

ಮಧುರಿ ಮೂಲದ ದಂಪತಿಯ ಅರ್ಜಿಯನ್ನು ಚೆನ್ನೈ ಹೈಕೋರ್ಟ್ ಈಗ ವಜಾ ಮಾಡಿದೆ. ಅರ್ಜಿದಾರರು ತಮ್ಮ ಆರೋಪ ಋಜು ಮಾಡಲು ಬೇಕಾದ ಸೂಕ್ತ ದಾಖಲೆಗಳು ಇಲ್ಲ. ಹಾಗಾಗಿ ಈ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದಿದೆ. ಹಾಗಾಗಿ ಕದಿರೇಶನ್, ಮೀನಾಕ್ಷಿ ದಂಪತಿಗೆ ಪ್ರಕರಣದಲ್ಲಿ ಹಿನ್ನಡೆ ಉಂಟಾಗಿದೆ.
ಕದಿರೇಶನ್ ದಂಪತಿಗಳು ಮಧುರೈ ಕೋರ್ಟ್ನಲ್ಲಿ ಧನುಷ್ಗೆ ಸಂಬಂಧಿಸಿರುವ ಹುಟ್ಟು ಮಚ್ಚೆ ಪುರಾವೆಗಳಿರುವ ಟಿಸಿಯನ್ನು ಹಾಜರುಪಡಿಸಿದ್ದರು. ಧನುಷ್ ಪರವಾಗಿ ವಕೀಲರು ಹಾಜರುಪಡಿಸಿದ ಟಿಸಿಯಲ್ಲಿ ಅಂತಹ ಮಚ್ಚೆ ಗುರುತುಗಳಿಲ್ಲ. ಈ ಬಗ್ಗೆ ನ್ಯಾಯಾಧೀಶರು ಪ್ರಶ್ನಿಸಿದಾ ನ್ಯಾಯಾಲಯದ ರಿಜಿಸ್ಟ್ರಾರ್ ಸಮ್ಮುಖದಲ್ಲಿ ಧನುಷ್ ಅವರ ಜನ್ಮ ಮಚ್ಚೆಗಳನ್ನು ಪರಿಶೀಲಿಸಲಾಯಿತು. ಕದಿರೇಶನ್ ಹೇಳಿದಂತೆ ಧನುಷ್ಗೆ ಅಂತಹ ಮಚ್ಚೆಗಳಿಲ್ಲ ಎಂದು ಗೊತ್ತಾಗಿತ್ತು. ಹಾಗಾಗಿ ನ್ಯಾಯಾಧೀಶರು ಧನುಷ್ ಕದಿರೇಶನ್ ದಂಪತಿಯ ಪುತ್ರ ಎಂಬುದಕ್ಕೆ ಸರಿಯಾದ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿ ಪ್ರಕರಣವನ್ನು ವಜಾಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಸದ್ಯ ನಟ ಧನುಷ್ಗೆ ಈ ಪ್ರಕರಣದಲ್ಲಿ ರಿಲೀಫ್ ಸಿಕ್ಕಂತಾಗಿದೆ. ಕದಿರೇಶನ್ ದಂಪತಿಗಳು ಉದ್ದೇಶಪೂರ್ವಕವಾಗಿ ಅನುಕಂಪಕ್ಕಾಗಿ ತಮ್ಮ ಪುತ್ರ ಧನುಷ್ ಎನ್ನುವ ವಾದವನ್ನು ಮುಂದಿಟ್ಟಿದ್ದಾರೆ ಎನ್ನುವ ಟೀಕೆಗಳು ವ್ಯಕ್ತವಾಗುತ್ತಿದೆ. ಇನ್ನು ಧನುಷ್ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ 'ರಾಯನ್' ಹಾಗೂ 'ಕುಬೇರ' ಎನ್ನುವ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











