ಸೌತ್ ಸಿನಿದುನಿಯಾದಲ್ಲೂ ನೆಪೋಟಿಸಂ: ಬಿರುಗಾಳಿ ಎಬ್ಬಿಸಿದ ನಟಿ ಟ್ವೀಟ್!
ನೆಪೋಟಿಸಂ(ಸ್ವಜನ ಪಕ್ಷಪಾತ) ಅಂದಾಕ್ಷಣ ನೆನಪಾಗೋದು ಹಿಂದಿ ಚಿತ್ರರಂಗ. ಇದೇ ವಿಚಾರಕ್ಕೆ ಕೆಲವರು ಇವತ್ತಿಗೂ ಬಾಯ್ಕಾಟ್ ಬಾಲಿವುಡ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಇದೀಗ ದಕ್ಷಿಣ ಭಾರತ ಚಿತ್ರರಂಗದಲ್ಲೂ ನೆಪೋಟಿಸಂ ವಿಚಾರ ಸದ್ದು ಮಾಡುತ್ತಿರುವಂತೆ ಕಾಣುತ್ತಿದೆ.
ತಮಿಳು ನಟಿ ಆತ್ಮಿಕಾ ಮಾಡಿರುವ ಅದೊಂದು ಟ್ವೀಟ್ ಕಾಲಿವುಡ್ನಲ್ಲಿ ಸಂಚಲನ ಸೃಷ್ಟಿಸಿದೆ. ಖ್ಯಾತ ನಿರ್ದೇಶಕ ಶಂಕರ್ ಪುತ್ರಿ ಅದಿತಿ ಶಂಕರ್ನ ಟಾರ್ಗೆಟ್ ಮಾಡಿ ಯುವ ನಟಿ ಈ ಟ್ವೀಟ್ ಮಾಡಿದ್ದಾರೆ ಅನ್ನಲಾಗ್ತಿದೆ. 'ಮೀಸೈ ಮುರುಕ್ಕು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆತ್ಮಿಕಾ ನಂತರ ಒಂದೆರಡು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ತಮಗೆ ಅವಕಾಶಗಳು ಸಿಗದೇ ಇರುವುದಕ್ಕೆ ಚಿತ್ರರಂಗದಲ್ಲಿರೋ ನೆಪೋಟಿಸಂ ಕಾರಣ ಅನ್ನುವ ದಾಟಿಯಲ್ಲಿ ಆಕೆ ಟ್ವೀಟ್ ಮಾಡಿದ್ದಾರೆ ಅನ್ನುವುದು ಕೆಲವರ ವಾದ.
ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಬಾಲಿವುಡ್ನಲ್ಲಿ ನೆಪೋಟಿಸಂ ಬಗ್ಗೆ ವಾದ ವಿವಾದ ತಾರಕಕ್ಕೇರಿತ್ತು. ದಕ್ಷಿಣ ಭಾರತ ಚಿತ್ರರಂಗದಲ್ಲಿ ದಶಕಗಳಿಂದ ನೆಪೋಟಿಸಂ ಇದೆ. ಆದರೆ ಈವರೆಗೆ ನೆಪೋಟಿಸಂ ವಿರುದ್ಧ ಯಾರು ಮಾತನಾಡುವ ಗೋಜಿಗೆ ಹೋಗಿರಲಿಲ್ಲ. ಸ್ಟಾರ್ಗಳ ಕುಟುಂಬದಿಂದ ಬಂದರೂ ಎಲ್ಲರೂ ತಮ್ಮ ಪರಿಶ್ರಮದಿಂದ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಹಾಗಾಗಿ ಯಾವುದೇ ರಗಳೆ ಇರಲಿಲ್ಲ. ಆದರೆ ಕೆಲವರು ಮಾತ್ರ ಸೋಲು ಗೆಲುವಿನ ವ್ಯತ್ಯಾಸ ಇಲ್ಲದೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೇ ಈಗ ಯುವ ನಟಿ ಆತ್ಮಿಕಾ ಅಸಮಾಧಾನಕ್ಕೆ ಕಾರಣವಾದಂತೆ ಕಾಣುತ್ತಿದೆ.

ನಟಿ ಆತ್ಮಿಕಾ ಟ್ವೀಟ್ನಲ್ಲಿ ಏನಿದೆ?
"ಅನುಕೂಲ ಇರುವವರು ಸುಲಭವಾಗಿ ಮೇಲೇರುವುದನ್ನು ನೋಡುವುದಕ್ಕೆ ಚೆನ್ನಾಗಿರುತ್ತದೆ ಅಲ್ಲವೇ, ಹಾಗಾದರೇ ಉಳಿದವರ ಕಥೆಯೇನು" ಎಂದು ಆತ್ಮಿಕಾ ಟ್ವೀಟ್ ಮಾಡಿದ್ದಾರೆ. ಪರೋಕ್ಷವಾಗಿ ನಿರ್ದೇಶಕ ಶಂಕರ್ ಪುತ್ರಿ ಅದಿತಿ ಶಂಕರ್ನ ಉದ್ದೇಶಿಸಿ ಆತ್ಮಿಕಾ ಈ ಟ್ವೀಟ್ ಮಾಡಿದ್ದಾರೆ ಅಂತ ನೆಟ್ಟಿಗರು ಅರೋಪಿಸಿದ್ದಾರೆ. ಕಾಮೆಂಟ್ ಬಾಕ್ಸ್ನಲ್ಲಿ ಇದೇ ವಿಚಾರ ಭಾರೀ ಚರ್ಚೆ ಆಗುತ್ತಿದೆ.

ನೆಪೋಟಿಸಂ ವಿರುದ್ಧ ಆತ್ಮಿಕಾ ಬೇಸರ?
ಕಾರ್ತಿ ನಟನೆಯ 'ವಿರುಮನ್' ಚಿತ್ರದಲ್ಲಿ ಅದಿತಿ ಶಂಕರ್ ನಾಯಕಿಯಾಗಿ ನಟಿಸಿದ್ದಾರೆ. ಈ ವಾರ ಸಿನಿಮಾ ತೆರೆಗೆ ಬರ್ತಿದ್ದು, ವಿಶೇಷ ಅಂದರೆ ಚಿತ್ರದ ಹಾಡೊಂದಕ್ಕೂ ಅದಿತಿ ದನಿಯಾಗಿದ್ದಾರೆ. ಮೊದಲ ಸಿನಿಮಾ ರಿಲೀಸ್ಗೂ ಮೊದಲೇ ಶಿವಕಾರ್ತಿಕೇಯನ್ ನಟನೆಯ 'ಮಾವೀರನ್' ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇದನ್ನು ನೋಡಿ ರೋಸಿ ಹೋಗಿರುವ ಆತ್ಮಿಕಾ ಈ ರೀತಿ ಟ್ವೀಟ್ ಮಾಡುವ ಧೈರ್ಯ ಮಾಡಿದಂತೆ ಕಾಣುತ್ತಿದೆ.

ಆತ್ಮಿಕಾ ಸಿನಿಮಾಗಳು ತಡವಾಗ್ತಿದೆ
2017ರಲ್ಲಿ 'ಮೀಸೆ ಮುರುಕ್ಕು' ಸಿನಿಮಾ ಮೂಲಕ ಆತ್ಮಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ 'ಕೊಡಿಯಿಲ್ ಒರುವನ್' ಹಾಗೂ 'ಕಾಟೇರಿ' ಅನ್ನುವ ಮತ್ತೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ 'ಕಣ್ಣಾ ನಂಬಾತೆ' ಮತ್ತು 'ನರಗಸೂರನ್' ಸಿನಿಮಾಗಳಲ್ಲಿ ನಟಿಸ್ತಿದ್ದು, ಕಾರಣಾಂತರಗಳಿಂದ 2 ಸಿನಿಮಾಗಳು ತಡವಾಗುತ್ತಿದೆ.

ಕಾಲಿವುಡ್ನಲ್ಲಿ ಟ್ವೀಟ್ ಬಿರುಗಾಳಿ!
ಪರೋಕ್ಷವಾಗಿ ಆತ್ಮಿಕಾ ನೆಪೋಟಿಸಂ ಬಗ್ಗೆ ಮಾತನಾಡಿರುವುದು ಕಾಲಿವುಡ್ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ. ಆತ್ಮಿಕಾ ಯಾರ ಹೆಸರನ್ನು ಹೇಳದೇ ಟ್ವೀಟ್ ಮಾಡಿದ್ದರೂ, ಪರೋಕ್ಷವಾಗಿ ಅದಿತಿ ಶಂಕರ್ನ ಅಟ್ಯಾಕ್ ಮಾಡಿದ್ದಾರೆ ಅಂತಲೇ ಕೆಲವರು ವಾದಿಸುತ್ತಿದ್ದಾರೆ. ಈ ಟ್ವೀಟ್ ರಗಳೆ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತೋ ಗೊತ್ತಿಲ್ಲ.


Click it and Unblock the Notifications











