ಮೀನಾ ತಾಯಿ ಯಡವಟ್ಟು.. ವೇದಿಕೆಯಲ್ಲಿ ಅಜಿತ್ ಜೊತೆ ಹೆಜ್ಜೆ ಹಾಕದೇ ನಟಿ ಅವಮಾನ?
ಈ ದುನಿಯಾದಲ್ಲಿ ಗೆದ್ದವರಿಗೆ ಮಾತ್ರ ಬೆಲೆ. ಎಲ್ಲರೂ ಗೆದ್ದೆತ್ತಿನ ಬಾಲ ಹಿಡಿಯುವವರೇ. ಚಿತ್ರರಂಗದಲ್ಲಂತೂ ಸ್ಟಾರ್ಗಳಿಗೆ ಮಾತ್ರ ಹೆಚ್ಚಿನ ಗೌರವ. ಸಾಕಷ್ಟು ಅವಮಾನಗಳನ್ನು ಎದುರಿಸಿ ನಟರು ಸ್ಟಾರ್ಗಳಾಗಿರುತ್ತಾರೆ. ಕಾಲಿವುಡ್ನಲ್ಲಿ ರಜನಿಕಾಂತ್, ಕಮಲ್, ವಿಜಯ್ ನಂತರ ಆ ಮಟ್ಟಿಗಿನ ಕ್ರೇಜ್ ಇರುವ ಮತ್ತೊಬ್ಬ ನಟ ಅಜಿತ್. ಆದರೆ ಆ ಸ್ಥಾನಕ್ಕೇರಲು ಅವರು ಸಾಕಷ್ಟು ನೋವು ಅನುಭವಿಸಿದ್ದಾರೆ.
ತಮಿಳು ಚಿತ್ರರಂಗದಲ್ಲಿ ಅಜಿತ್ ಮಾಸ್ ಹೀರೊ ಆಗಿ ಸಕ್ಸಸ್ ಕಂಡಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಥಲಾ ಅಂತ್ಲೇ ಕರೆಯುತ್ತಾರೆ. ಅಜಿತ್ ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್ ಮುಂದೆ ಕ್ಯೂ ಕಟ್ಟುದ್ದಾರೆ. ಇತ್ತೀಚೆಗೆ ಅಜಿತ್ ನಟನೆಯ 'ಥುನಿವು' ಸಿನಿಮಾ ಸಂಭ್ರಮಾಚರಣೆ ವೇಳೆ ಅಭಿಮಾನಿಯೊಬ್ಬರು ದುರಂತ ಸಾವನ್ನಪ್ಪಿದ್ದರು. ಒಂದು ಸುದ್ದಿಗೋಷ್ಠಿ ಮಾಡಲ್ಲ, ಯಾವುದೇ ಸಂದರ್ಶನದಲ್ಲಿ ಮಾತನಾಡಲ್ಲ. ನಮ್ಮ ಸಿನಿಮಾ ನೋಡಿ ಎಂದು ಪ್ರೇಕ್ಷಕರನ್ನು ಕೇಳಲ್ಲ. ಒಳ್ಳೆ ಸಿನಿಮಾಗಳನ್ನು ಮಾಡುವುದಷ್ಟೇ ನನ್ನ ಕಾಯಕ ಎಂದು ನಂಬಿದವರು ಅಜಿತ್.

ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಅಜಿತ್ ನಟನೆಯ 'ಥುನಿವು' ಸಿನಿಮಾ ರಿಲೀಸ್ ಆಗಿ ಹಿಟ್ ಆಗಿತ್ತು. 'ವಿದಾ ಮುಯರ್ಚಿ' ಎನ್ನುವ ಮತ್ತೊಂದು ಚಿತ್ರವನ್ನು ಅಜಿತ್ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಬೈಕ್ ಏರಿ ಅಜಿತ್ ವಿಶ್ವಪರ್ಯಟನೆಗೆ ಹೋಗಿದ್ದಾರೆ. ಅದರ ಮೊದಲ ಭಾಗವಾಗಿ ಭಾರತ, ನೇಪಾಳ, ಭೂತಾನ್ ದೇಶಗಳಲ್ಲಿ ಸುತ್ತಾಡಿ ಬಂದಿದ್ದಾರೆ. 'ವಿದಾ ಮುಯರ್ಚಿ' ನಂತರ ಅಜಿತ್ ಮತ್ತೆ ಬೈಕ್ ಏರಲಿದ್ದಾರೆ.
ಬಹುಭಾಷಾ ನಟಿ ಮೀನಾ ಒಂದ್ಕಾಲದಲ್ಲಿ ಸೌತ್ ಸಿನಿದುನಿಯಾದಲ್ಲಿ ಸ್ಟಾರ್ ನಟಿಯಾಗಿ ಮರೆದವರು. ರಜನಿಕಾಂತ್, ವಿಷ್ಣುವರ್ಧನ್, ಕಮಲ್ ಹಾಸನ್ರಂತಹ ಸೂಪರ್ ಸ್ಟಾರ್ಗಳ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಇವತ್ತಿಗೂ ಮೀನಾ ಸ್ಟಾರ್ ನಟಿಯಾಗಿ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಕಳೆದ ವರ್ಷ ಪತಿಯನ್ನು ಕಳೆದುಕೊಂಡ ಮೀನಾ ಕೆಲ ದಿನಗಳ ಕಾಲ ನಟನೆಯಿಂದ ದೂರ ಉಳಿದಿದ್ದರು. ಇದೀಗ ಮತ್ತೆ ನಟಿಸಲು ಆರಂಭಿಸಿದ್ದಾರೆ. ಆದರೆ ದಶಕಗಳ ಹಿಂದೆ ಮೀನಾ ಅವರಿಂದ ಅಜಿತ್ ಅವಮಾನ ಎದುರಿಸುವಂತಹ ಸಂದರ್ಭ ಎದುರಾಗಿತ್ತು.

ವೇದಿಕೆಯಲ್ಲಿ ಅಜಿತ್ಗೆ ಅವಮಾನ?
ಅಜಿತ್, ಮೀನಾ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅದೊಂದು ದಿನ ಪ್ರಶಸ್ತಿ ಪ್ರದಾನ ಸಮಾರಂಭ ವೇದಿಕೆಯಲ್ಲಿ ಅಜಿತ್ ಜೊತೆ ಹೆಜ್ಜೆ ಹಾಕಲು ಮೀನಾ ಹಿಂದೇಟು ಹಾಕಿದ್ದರಂತೆ. ಅದಕ್ಕೆ ಕಾರಣ ಆಕೆಯ ತಾಯಿ ರಾಜ್ ಮಲ್ಲಿಕಾ. 1999ರಲ್ಲಿ 'ಅನಂತ ಪೂಂಗಾತ್ರೆ' ಚಿತ್ರದಲ್ಲಿ ಮೊದಲ ಬಾರಿಗೆ ಇಬ್ಬರು ಒಟ್ಟಿಗೆ ನಟಿಸಿದ್ದರು. ಸಿನಿಮಾ ಹಿಟ್ ಆಗಿ ಉತ್ತಮ ಅಭಿನಯಕ್ಕಾಗಿ ಅಜಿತ್ಗೆ ಬೆಸ್ಟ್ ಆಕ್ಟರ್ ಪ್ರಶಸ್ತಿ ಸಿಕ್ಕಿತ್ತು.
ಅಜಿತ್ ಜೊತೆ ಹೆಜ್ಜೆ ಹಾಕಿಲಿಲ್ಲ ಮೀನಾ
ಅಜಿತ್ ಅವರಿಗೆ ಪ್ರಶಸ್ತಿಯನ್ನು ಕೊಡುವುದಕ್ಕೆ ಮೀನಾ ವೇದಿಕೆಗೆ ಹೋಗಿದ್ದರು. ಪ್ರಶಸ್ತಿ ನೀಡಿದ ಬಳಿಕ ನಿರೂಪಕರು ಇಬ್ಬರು ಸೇರಿ ಹೆಜ್ಜೆ ಹಾಕುವಂತೆ ಮನವಿ ಮಾಡಿದ್ದರು. ಆದರೆ ಕೂಡಲೇ ವೇದಿಕೆ ಏರಿದ್ದ ಮೀನಾ ಅವರ ತಾಯಿ "ರಜನಿಕಾಂತ್, ಕಮಲ್ ಹಾಸನ್ ಜತೆ ನಟಿಸುವ ನನ್ನ ಮಗಳು ಈತನ ಜೊತೆ ಡ್ಯಾನ್ಸ್ ಮಾಡಬೇಕೇ ಎಂದು ಹೇಳಿ" ಮಗಳನ್ನು ಅಲ್ಲಿಂದ ಕರೆದುಕೊಂಡು ಬಂದುಬಿಟ್ಟಿದ್ದರಂತೆ. ಮೀನಾ ಒತ್ತಾಯ ಮಾಡಿದರೂ ರಾಜ್ ಮಲ್ಲಿಕಾ ಬಿಡಲಿಲ್ಲವಂತೆ. ಇದನ್ನು ನೋಡಿ ಒಂದು ಕ್ಷಣ ಎಲ್ಲರೂ ಶಾಕ್ ಆಗಿದ್ದರು. ಅಜಿತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.
ಮತ್ತೆ ಅಜಿತ್- ಮೀನಾ ನಟನೆ
ದೊಡ್ಡ ವೇದಿಕೆಯಲ್ಲಿ ಈ ಘಟನೆ ನಡೆದ ಮೇಲೆ ಕೂಡ ಅಜಿತ್ ತಮ್ಮ ಸಿನಿಮಾಗಳಲ್ಲಿ ಮೀನಾ ಅವರಿಗೆ ಅವಕಾಶ ನೀಡಿದ್ದರು. 'ಸಿಟಿಜನ್' ಹಾಗೂ 'ವಿಲನ್' ಸಿನಿಮಾಗಳಲ್ಲಿ ಇಬ್ಬರು ಮತ್ತೆ ತೆರೆ ಹಂಚಿಕೊಂಡಿದ್ದರು. ಅಂದು ಸೋಶಿಯಲ್ ಮೀಡಿಯಾ ಇರಲಿಲ್ಲ. ಇದ್ದಿದ್ದರೆ ಇಂತಹ ಘಟನೆಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿತ್ತು ಎನಿಸುತ್ತದೆ. ಅಂದು ಆ ಕಾರ್ಯಕ್ರಮದಲ್ಲಿ ನಡೆಯ ಈ ಘಟನೆ ಬಗ್ಗೆ ಹಿರಿಯ ಪತ್ರಕರ್ತರೊಬ್ಬರು ಇತ್ತೀಚೆಗೆ ಯೂಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದರು.
ಮಾಡೆಲೆಂಗ್ನಿಂದ ಚಿತ್ರರಂಗಕ್ಕೆ ಎಂಟ್ರಿ
10ನೇ ತರಗತಿಗೆ ಓದು ನಿಲ್ಲಿಸಿದ ಅಜಿತ್ ಆರಂಭದಲ್ಲಿ ಮೆಕಾನಿಕ್ ಆಗಿ ಕೆಲಸ ಆರಂಭಿಸಿದರು. ಮುಂದೆ ಗಾರ್ಮೆಂಟ್ಸ್ನಲ್ಲೂ ಕೆಲಸ ಮಾಡಿ ನಂತರ ಸಣ್ಣ ಬ್ಯುಸಿನೆಸ್ ಸಹ ಆರಂಭಿಸಿದ್ದರು. ಕೆಲಸದ ಜೊತೆ ಜೊತೆಗೆ ಮಾಡೆಲಿಂಗ್ ಆರಂಭಿಸಿದ ಅಜಿತ್ಗೆ ಚಿತ್ರರಂಗಕ್ಕೆ ಬರುವ ಮಾರ್ಗ ಸುಗಮನವಾಗಿತ್ತು. ಆದರೆ ಆರಂಭದಲ್ಲಿ ಅವಕಾಶಗಳು ಅಷ್ಟು ಸುಲಭವಾಗಿ ಸಿಗಲಿಲ್ಲ. 'ವಾನ್ಮತಿ' ಸಿನಿಮಾ ಸಕ್ಸಸ್ ನಂತರ ಹೀರೊ ಆಗಿ ದೊಡ್ಡ ಬ್ರೇಕ್ ಸಿಕ್ಕಿತ್ತು.


Click it and Unblock the Notifications











