ದಳಪತಿಗೆ ಕರೆ ಮಾಡಿ ಮಾತನಾಡಿದ ತಲೈವಾ; ಫ್ಯಾನ್ಸ್ ವಾರ್ಗೆ ಫುಲ್ಸ್ಟಾಪ್!
ಕಾಲಿವುಡ್ನಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ತಿಕ್ಕಾಟ ಇಂದು ನಿನ್ನೆಯದಲ್ಲ. ಥಲಾ ಅಜಿತ್ ಹಾಗೂ ದಳಪತಿ ವಿಜಯ್ ಅದೇ ರೀತಿ ಇತ್ತೀಚಿನ ದಿನಗಳಲ್ಲಿ ರಜನಿಕಾಂತ್ ಹಾಗೂ ದಳಪತಿ ವಿಜಯ್ ಫ್ಯಾನ್ಸ್ ವಾರ್ ತಾರಕ್ಕೇರಿರುವುದು ಸುಳ್ಳಲ್ಲ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ನಡೆಯುವ ಫ್ಯಾನ್ಸ್ ಕೆಲವೊಮ್ಮೆ ನೇರನೇರ ಕಿರಿಕ್ ಮಟ್ಟಕ್ಕೆ ಹೋಗಿದೆ.
ಸ್ಟಾರ್ ನಟರು ತಮ್ಮ ಫ್ಯಾನ್ಸ್ಗೆ ಈ ಬಗ್ಗೆ ತಿಳಿಹೇಳದ ಹೊರತು ಇದು ನಿಲ್ಲಲ್ಲ. ಆದರೆ ಯಾಕೋ ಸ್ಟಾರ್ಗಳು ಇಂತಹ ಪ್ರಯತ್ನ ಮಾಡುವುದೇ ಇಲ್ಲ. ಆಗೊಮ್ಮೆ ಈಗೊಮ್ಮೆ ಈ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದರೂ ನೇರವಾಗಿ ಅಭಿಮಾನಿಗಳಿಗೆ ಸೂಚನೆ ಕೊಡಲ್ಲ. ನಟರು ತಮ್ಮ ಅಭಿಮಾನಿಗಳನ್ನು ನಿಯಂತ್ರಿಸಲು ಅವಕಾಶ ಇದೆ. ಆದರೆ ಯಾಕೋ ಯಾರೂ ಮನಸ್ಸು ಮಾಡುವುದಿಲ್ಲ. ಕಾಲಿವುಡ್ ಸೂಪರ್ ಸ್ಟಾರ್ ಯಾರು ಎನ್ನುವ ಬಗ್ಗೆ ಇತ್ತೀಚೆಗೆ ಭಾರೀ ಚರ್ಚೆ ಆಗಿದ್ದು ಸುಳ್ಳಲ್ಲ.

ರಜನಿಕಾಂತ್ ಸೂಪರ್ ಸ್ಟಾರ್ ಬಿರುದು ಪಡೆದು ಬಹಳ ವರ್ಷಗಳಾಯಿತು. ಇವತ್ತಿಗೂ ಸೂಪರ್ ಸ್ಟಾರ್ ರೀತಿಯೇ ತಲೈವಾ ಕ್ರೇಜ್ ಉಳಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಕಾಲಿವುಡ್ ಅಂಗಳದಲ್ಲಿ ದಳಪತಿ ವಿಜಯ್ ಸಕ್ಸಸ್ ರೇಟ್ ಏರಿದೆ. ಒಂದೇ ಭಾಷೆಯಲ್ಲಿ ವಿಜಯ್ ಸಿನಿಮಾಗಳು 200, 300 ಕೋಟಿ ಕಲೆಕ್ಷನ್ ಮಾಡುತ್ತಿವೆ. ಇದೇ ಕಾರಣಕ್ಕೆ ಮುಂದಿನ ಸೂಪರ್ ಸ್ಟಾರ್ ವಿಜಯ್ ಎಂದು ಕೆಲ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟಾಕ್ಕಿದ್ದರು.
ಕಾಲಿವುಡ್ ಸೂಪರ್ ಸ್ಟಾರ್ ಯಾರು? ಎಂದು ದೊಡ್ಡಮಟ್ಟದಲ್ಲಿ ಚರ್ಚೆ ಆಗಿತ್ತು. ಕೆಲ ಕಲಾವಿದರನ್ನು ಈ ಬಗ್ಗೆ ಪ್ರಶ್ನಿಸಲಾಗಿತ್ತು. ಇನ್ನು 'ಜೈಲರ್' ಆಡಿಯೋ ಲಾಂಚ್ ವೇದಿಕೆಯಲ್ಲಿ ರಜನಿಕಾಂತ್ ಹೇಳಿದ ಕಾಗೆ, ಹದ್ದು ಕಥೆ ಕೂಡ ಕೆಲವರ ಬೇಸರಕ್ಕೆ ಕಾರಣವಾಗಿತ್ತು. ಬೇಕಂತಲೇ ಪರೋಕ್ಷವಾಗಿ ವಿಜಯ್ನ ತಲೈವಾ ಟಾರ್ಗೆಟ್ ಮಾಡಿದ್ದಾರೆ ಎನ್ನುವ ಚರ್ಚೆ ನಡೆದಿತ್ತು. ಇತ್ತೀಚೆಗೆ ಈ ಬಗ್ಗೆ ರಜನಿ ಸ್ಪಷ್ಟನೆ ನೀಡಿದ್ದರು.

'ಲಾಲ್ ಸಲಾಂ' ಆಡಿಯೋ ಲಾಂಚ್ ವೇದಿಕೆಯಲ್ಲಿ ಮಾತನಾಡಿದ್ದ ರಜನಿಕಾಂತ್, "ಹದ್ದು-ಕಾಗೆ ಕಥೆಯನ್ನು ವಿಭಿನ್ನವಾಗಿಯೇ ಅರ್ಥೈಸಿಕೊಳ್ಳಲಾಗಿದೆ. ವಿಜಯ್ ವಿರುದ್ಧವೇ ಈ ಕಥೆ ಹೇಳಿದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹಬ್ಬಿಸಿದ್ದರು. ಇದು ನಿಜಕ್ಕೂ ಬೇಸರ ತರಿಸಿತ್ತು. ವಿಜಯ್ ನನ್ನ ಕಣ್ಣ ಮುಂದೆ ಬೆಳೆದ ಹುಡುಗ." ಎಂದು ರಜನಿಕಾಂತ್ ಪ್ರತಿಕ್ರಿಯಿಸಿದ್ದರು.
ಇದೀಗ ದಳಪತಿ ವಿಜಯ್ ರಾಜಕೀಯರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಧಿಕೃತವಾಗಿ ಇತ್ತೀಚೆಗೆ ವಿಜಯ್ ಈ ವಿಚಾರವನ್ನು ಘೋಷಣೆ ಮಾಡಿದ್ದಾರೆ. 'ತಮಿಳಗ ವೆಟ್ರಿ ಕಳಗಂ' ಎಂದಿ ಪಕ್ಷಕ್ಕೆ ಹೆಸರಿಟ್ಟಿದ್ದಾರೆ. ಪಕ್ಷ ನೋಂದಣಿ ಕೆಲಸಗಳು ನಡೀತಿದೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯನ್ನು ಪಕ್ಷ ಎದುರಿಸುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ದಳಪತಿಗೆ ರಜನಿಕಾಂತ್ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗ್ತಿದೆ.
ಜ್ಞಾನವೇಲ್ ನಿರ್ದೇಶನದ 'ವೆಟ್ಟೈಯಾನ್' ಸಿನಿಮಾ ಚಿತ್ರೀಕರಣದಲ್ಲಿ ರಜನಿಕಾಂತ್ ಭಾಗಿ ಆಗಿದ್ದಾರೆ. ಆಂಧ್ರದಲ್ಲಿ ಶೂಟಿಂಗ್ ನಡೀತಿದೆ. ಅಲ್ಲಿಂದಲೇ ಹೊಸ ಪಕ್ಷ ಘೋಷಿಸಿರುವ ವಿಜಯ್ಗೆ ತಲೈವಾ ಕರೆ ಮಾಡಿ ಅಭಿನಂದನೆ ಸಲ್ಲಿಸಿ ಶುಭ ಕೋರಿದ್ದಾರಂತೆ. ರಜನಿಕಾಂತ್ ಕರೆ ಮಾಡಿ ವಿಶ್ ಮಾಡಿದ್ದಕ್ಕೆ ವಿಜಯ್ ಸಹ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ವಿಜಯ್ ಪೊಲಿಟಿಕಲ್ ಎಂಟ್ರಿಗೆ ತಲೈವಾ ಶುಭ ಕೋರಿರುವುದು ಇಬ್ಬರ ಅಭಿಮಾನಿಗಳ ನಡುವಿನ ವಾರ್ಗೆ ಫುಲ್ಸ್ಟಾಪ್ ಇಟ್ಟಂತಾಗಿದೆ. ನಟ ರಜನಿಕಾಂತ್ ಕೂಡ 3 ವರ್ಷಗಳ ಹಿಂದೆ ರಾಜಕೀಯರಂಗ ಪ್ರವೇಶಿಸುವ ಸಾಹಸ ಮಾಡಿದ್ದರು. ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದರು. ಆದರೆ ಕೊನೆ ಗಳಿಗೆಯಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಆರೋಗ್ಯದ ನೆಪವೊಡ್ಡಿ ನಿರ್ಣಯ ಬದಲಿಸಿಕೊಂಡಿರುವುದಾಗಿ ಹೇಳಿದ್ದರು.


Click it and Unblock the Notifications











