ಡಿಎಂಕೆ ಪಕ್ಷಕ್ಕೆ ಪರೋಕ್ಷವಾಗಿ ಗುಮ್ಮಿದ್ದ ದಳಪತಿ ವಿಜಯ್; ಅಜಿತ್ರನ್ನು ಅಖಾಡಕ್ಕೆ ಇಳಿಸುತ್ತಾರಾ ಸ್ಟಾಲಿನ್?
ದಳಪತಿ ವಿಜಯ್ ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಇಳಿದು ಆಗಿದೆ. ಈಗಾಗಲೇ ತಮ್ಮ 'ತಮಿಳಗ ವೆಟ್ರಿ ಕಳಗಂ' ಪಕ್ಷವನ್ನು ಘೋಷಣೆ ಮಾಡಿದ್ದೂ ಆಗಿದೆ. ಕೆಲವು ದಿನಗಳ ಹಿಂದಷ್ಟೇ ತಮಿಳುನಾಡಿನ ವಿಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ತಮ್ಮ ಪಕ್ಷದ ಮೊದಲ ಸಾರ್ವಜನಿಕ ಸಮಾವೇಶವನ್ನು ನಡೆಸಿದ್ದಾರೆ. ಮೊದಲ ಸಮಾವೇಶವೇ ಅಲ್ಲಿನ ರಾಜಕೀಯ ಪಕ್ಷಕ್ಕೆ ನಡುಕ ಹುಟ್ಟಿಸಿದೆ.
ತಮ್ಮ ಮೊದಲ ರಾಜಕೀಯ ಸಮಾವೇಶದಲ್ಲಿ ಸುಮಾರು 45 ನಿಮಿಷಗಳ ಕಾಲ ಭಾಷಣ ಮಾಡಿದರು. ಈ ವೇಳೆ ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆಯನ್ನು ಕಟುವಾಗಿ ಟೀಕಿಸಿದ್ದರು. ಈ ಮೂಲಕ 2026ರ ಚುನಾವಣೆಯಲ್ಲಿ ಡಿಎಂಕೆ ಪಕ್ಷ ಹಾಗೂ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' ನಡುವೆ ಭರ್ಜರಿ ಪೈಪೋಟಿ ನಡೆಯುವುದ ಕನ್ಫರ್ಮ್ ಅಂತ ಅಲ್ಲಿನ ಜನರು ಮಾತಾಡಿಕೊಳ್ಳುತ್ತಿದ್ದಾರೆ.

ವಿಜಯ್ ರಾಜಕೀಯಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಮಾವೇಶದಲ್ಲಿಯೇ ಸುಮಾರು 7 ಲಕ್ಷ ಮಂದಿ ಸೇರಿದ್ದರು. ಇದು ಸಾಮಾನ್ಯವಾದ ವಿಷಯವೇನೂ ಅಲ್ಲ. ಈ ಸಮಾವೇಶಕ್ಕೆ ವಿಜಯ್ ಸುಮಾರು 80 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂಬ ಆರೋಪ ಕೂಡ ಇದೆ. ಈ ಬೆನ್ನಲ್ಲೇ ವಿಜಯ್ ಮಾಡಿದ ಭಾಷಣ ತಮಿಳುನಾಡಿನಲ್ಲಿ ಸಂಚಲನ ಮೂಡಿಸಿದೆ. ಇದನ್ನು ತಮಿಳಿನ ಮತ್ತೊಬ್ಬ ಸೂಪರ್ಸ್ಟಾರ್ ಅಜಿತ್ ವಿರೋಧಿಸಿದ್ದಾರೆ ಅಂತನೂ ಚರ್ಚೆಯಾಗುತ್ತಿದೆ. ಅಸಲಿಗೆ ವಿಜಯ್ ಎದುರು ಅಜಿತ್ ಅವರನ್ನು ಅಖಾಡಕ್ಕೆ ಇಳಿಸಿತೇ ಡಿಎಂಕೆ? ತಿಳಿಯಲು ಮುಂದೆ ಓದಿ.
'ತಮಿಳಗ ವೆಟ್ರಿ ಕಳಗಂ' ಮೊದಲ ರಾಜ್ಯ ಸಮಾವೇಶದಲ್ಲಿ ಆಡಳಿತ ಪಕ್ಷವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿರು. ತಮ್ಮ ಭಾಷಣದಲ್ಲಿ ಪಕ್ಷದ ಅಜೆಂಡಾ ಹಾಗೂ ಮಾರ್ಗಸೂಚಿಗಳ ಬಗ್ಗೆ ಮಾತಾಡಿದ್ದರು. ಈ ವೇಳೆ ಒಡೆದು ಆಳುವ ಶಕ್ತಿಗಳನ್ನು ಕಿತ್ತೊಗೆಯುತ್ತೇವೆ. ಅವರನ್ನು ನೀವು ಫ್ಯಾಸಿಸಂ ಎಂದು ಕರೆಯುತ್ತೀರ. ಆದರೆ, ನೀವು ಮಾಡುತ್ತಿರುವುದು ಏನು? ದ್ರಾವಿಡ ಮಾದರಿ ಎಂದು ಹೇಳುತ್ತಾ ಜನರಿಗೆ ಮೋಸ ಮಾಡುತ್ತಿದ್ದೀರ ಎಂದು ತಮಿಳುನಾಡು ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು.

ದಳಪತಿ ವಿಜಯ್ ಹೇಳಿಕೆಗೆ ಕೆಲವು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಟೀಕೆಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ವಿಜಯ್ ಅವರನ್ನು ಜೋಸೆಫ್ ಅಂತ ಬಿಜೆಪಿಯ ಮುಖಂಡ ಎಚ್.ರಾಜ ಕರೆದಾಗ ಇದೇ ದ್ರಾವಿಡ ಮಾದರಿ ಇವರ ಜೊತೆಗೆ ನಿಂತಿತ್ತು. ಆದ್ರೀಗ ವಿಜಯ್ ಭಾಷಣ ಬಿಜೆಪಿಗೆ ಬೆಂಬಲವಾಗಿ ನಿಲ್ಲುವಂತೆ ಕಾಣುತ್ತಿದೆ ಎಂದು ಟೀಕೆಗಳನ್ನು ಮಾಡುತ್ತಿದ್ದಾರೆ. ಈ ಚರ್ಚೆ ಆಗುತ್ತಿರುವಾಗಲೇ ಮತ್ತೊಬ್ಬ ತಮಿಳು ಸೂಪರ್ಸ್ಟಾರ್ ಅಜಿತ್ ಕುಮಾರ್ ಹೆಸರು ತಳುಕು ಹಾಕಿಕೊಂಡಿದೆ.
ತಮಿಳುನಾಡು ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಇಷ್ಟೊಂದು ಚರ್ಚೆಯಾಗುತ್ತಿರಬೇಕಾದರೆ, ಅಜಿತ್ ಬೇರೆಯದ್ದೇ ಲೋಕದಲ್ಲಿ ಇದ್ದಾರೆಂದು ಭಾವಿಸಿದ್ದರು. ದುಬೈನಲ್ಲಿ ನಡೆಯಲಿರುವ ಕಾರ್ ರೇಸ್ನಲ್ಲಿ ಭಾಗವಹಿಸುವುದಕ್ಕೆ ತಯಾರಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಆ ರೇಸ್ನಲ್ಲಿ ಅಜಿತ್ ಧರಿಸುವ ಹೆಲ್ಮೇಟ್ ಮೇಲೆ ತಮಿಳುನಾಡು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ ಲಾಂಛನವನ್ನು ಅಳವಡಿಸಲಾಗಿದೆ. ಈ ಸಂದರ್ಭದಲ್ಲಿ ತಮಿಳುನಾಡು ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರಾಗಿರುವ ಉದಯನಿಧಿಯವರು ತಮ್ಮ ಎಕ್ಸ್ ಖಾತೆಯಲ್ಲಿ "ವಿಶ್ವ ಪ್ರಸಿದ್ಧ ದುಬೈ ಕಾರ್ ರೇಸ್ನಲ್ಲಿ ಭಾಗವಹಿಸಲಿರುವ ನಟ ಅಜಿತ್ ಅವರಿಗೆ ನಮ್ಮ ಅಭಿನಂದನೆಗಳು." ಎಂದು ಬರೆದುಕೊಂಡಿದ್ದರು.
ತಮಿಳುನಾಡಿನ ಹೆಸರನ್ನುವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದ ಅಜಿತ್ ಅವರಿಗೆ ಧನ್ಯವಾದ ಎಂದು ಉಪಮುಖ್ಯ ಮಂತ್ರಿ ಉದಯನಿಧಿ ಸ್ಟಾಲಿನ್ ಟ್ವೀಟ್ನಲ್ಲಿ ಹೇಳಿದ್ದರು. ಈ ಟ್ವೀಟ್ ಅನ್ನು ನೋಡಿದ ಬಳಿಕ ವಿಜಯ್ ವಿರುದ್ಧ ಅಜಿತ್ ಅವರನ್ನು ಉದಯನಿಧಿ ಸ್ಟಾಲಿನ್ ಕಣಕ್ಕೆ ಇಳಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ವಿಜಯ್ ಮಾಡಿದ ದ್ರಾವಿಡ ಮಾದರಿ ವಿರೋಧಿ ಭಾಷಣಕ್ಕೆ ಪರೋಕ್ಷವಾಗಿ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನೊಂದು ಕಡೆ ವಿಜಯ್ ಅವರ ಮೊದಲ ರಾಜಕೀಯ ಪಕ್ಷದ ಸಮಾವೇಶಕ್ಕೆ ಅಜಿತ್ ಅಭಿಮಾನಿಗಳು ಕೂಡ ಭಾಗವಹಿಸಿದ್ದರು ಎನ್ನಲಾಗಿದೆ. ಹೀಗಾಗಿ ಅಜಿತ್ ಅಭಿಮಾನಿಗಳು ಕೂಡ ವಿಜಯ್ ಕಡೆಗೆ ಹೋಗಬಹುದು ಎಂಬ ಕಾರಣಕ್ಕೆ ಉದಯನಿಧಿ ಸ್ಟಾಲಿನ್ ಅಜಿತ್ ಅವರನ್ನು ಮುನ್ನಲೆಗೆ ತೆಗೆದುಕೊಂಡು ಬಂದಿದ್ದಾರೆ. ಈ ಮೂಲಕ ವಿಜಯ್ ವಿರುದ್ಧ ಅಜಿತ್ ಅವರನ್ನು ಮುಂದಿನ ದಿನಗಳಲ್ಲಿ ಕಣಕ್ಕೆ ಇಳಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.


Click it and Unblock the Notifications











