ನಟಿ ಕೀರ್ತಿ ಸುರೇಶ್ ಬಳಿ ಮದುವೆ ಪ್ರಪೋಸಲ್ ಇಟ್ಟಿದ್ದ ತಮಿಳು ನಟ ಯಾರು?
ಬಹುಭಾಷಾ ನಟಿ ಕೀರ್ತಿ ಸುರೇಶ್ ಮದುವೆಗೆ ದಿನಗಣನೆ ಶುರುವಾಗಿದೆ. ಮುಂದಿನ ವಾರವೇ ತಮ್ಮ ಪ್ರಿಯಕರನ ಜೊತೆ ಕೀರ್ತಿ ಗೋವಾದಲ್ಲಿ ಹಸೆಮಣೆ ಏರಲಿದ್ದಾರೆ. ಈ ಬಗ್ಗೆ ಆಕೆ ಅಧಿಕೃತವಾಗಿ ಹೇಳಿದ್ದಾರೆ. ಇದೆಲ್ಲದರ ನಡುವೆ ಕೀರ್ತಿಯನ್ನು ಮದುವೆ ಆಗಲು ಆ ನಟ ಇಷ್ಟ ಪಟ್ಟಿದ್ದರು ಎನ್ನುವ ಚರ್ಚೆ ಶುರುವಾಗಿದೆ.
ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಕೀರ್ತಿ ಸುರೇಶ್ ಮುಂದೆ ನಾಯಕಿಯಾಗಿ ಪರಿಚಿತರಾದ್ದರು. ತಂದೆ -ತಾಯಿ ಇಬ್ಬರಿಗೂ ಚಿತ್ರರಂಗದ ನಂಟಿತ್ತು. ಹಾಗಾಗಿ ಮಹಾನಟಿಗೆ ಬಣ್ಣದ ಲೋಕದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದು ಕಷ್ಟವಾಗಲಿಲ್ಲ. ಆದರೆ ಅಷ್ಟು ಸುಲಭವಾಗಿ ಬ್ರೇಕ್ ಸಿಗಲಿಲ್ಲ. 'ಮಹಾನಟಿ' ಸಿನಿಮಾ ದೊಡ್ಡಮಟ್ಟದಲ್ಲಿ ಆಕೆಗೆ ಕೀರ್ತಿ ತಂದುಕೊಟ್ಟಿತ್ತು.

'ಮಹಾನಟಿ' ಬಳಿಕ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸಿದರು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡರು. ಹಿಟ್ ಸಿನಿಮಾಗಳಲ್ಲಿ ಮಿಂಚಿದರು. ಮಲಯಾಳಂ, ತಮಿಳು, ತೆಲುಗು ಬಳಿಕ ಈಗ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆಕೆಯ ಚೊಚ್ಚಲ ಬಾಲಿವುಡ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುನ್ನ ಕೀರ್ತಿ ಮದುವೆ ನಡೆಯುತ್ತಿದೆ.
ಗೋವಾದಲ್ಲಿ ಕೀರ್ತಿ ಸುರೇಶ್ ಹಾಗೂ ಆಂಟನಿ ಜೋಡಿಯ ಡೆಸ್ಟಿನೇಷನ್ ಮ್ಯಾರೇಜ್ ಫಿಕ್ಸ್ ಆಗಿದೆ. ಈಗಾಗಲೇ ಮದುವೆ ಇನ್ವಿಟೇಷನ್ ಕೂಡ ಸಿದ್ಧವಾಗಿದೆ. ಕೆಲವೇ ತಾರೆಯರಿಗೆ ಮದುವೆಗೆ ಆಮಂತ್ರಣ ಸಿಕ್ಕಿದೆ. ತಮ್ಮ ಕನಸಿನಂತೆಯೇ ಕೀರ್ತಿ ಸುರೇಶ್ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.
ಅಂದಹಾಗೆ ಕೆಲ ವರ್ಷಗಳ ಹಿಂದೆ ನಟಿ ಕೀರ್ತಿ ಸುರೇಶ್ ಅವರನ್ನು ಮದುವೆ ಆಗಲು ತಮಿಳು ನಟ ವಿಶಾಲ್ ಬಯಸಿದ್ದರಂತೆ. ತಮ್ಮ ಪೋಷಕರ ಮೂಲಕ ಮದುವೆ ಪ್ರಪೋಷಲ್ ಸಹ ಇಟ್ಟಿದ್ದರು. ಆದರೆ ಆಕೆ ಒಪ್ಪಲಿಲ್ಲ ಎನ್ನುವ ಚರ್ಚೆ ಕಾಲಿವುಡ್ನಲ್ಲಿ ಶುರುವಾಗಿದೆ. 'ಸಂಡೇ ಕೋಳಿ'-2 ಚಿತ್ರದಲ್ಲಿ ವಿಶಾಲ್ ಜೋಡಿಯಾಗಿ ಕೀರ್ತಿ ನಟಿಸಿದ್ದರು. ಈ ಸಿನಿಮಾ ಸಮಯದಲ್ಲೇ ಈ ಮದುವೆ ಚರ್ಚೆ ನಡೆದಿತ್ತು ಎಂದು ಹೇಳಲಾಗುತ್ತಿದೆ.
ನಟಿ ಕೀರ್ತಿ ಸುರೇಶ್ 15 ವರ್ಷಗಳಿಂದ ಆಂಟನಿ ಜೊತೆ ಪ್ರೀತಿಲಿ ಬಿದ್ದಿದ್ದಾರೆ. ಶಾಲಾ ದಿನಗಳಲ್ಲೇ ಇಬ್ಬರೂ ಸ್ನೇಹಿತರಾಗಿದ್ದರು. ಬಳಿಕ ಅದು ಪ್ರೀತಿಗೆ ತಿರುಗಿತ್ತು. ಇದೀಗ ಇಬ್ಬರೂ ಮದುವೆ ಆಗಲು ಮನಸ್ಸು ಮಾಡಿದ್ದಾರೆ. ಉದ್ಯಮಿ ಆಂಟನಿ ಜೊತೆ ಪ್ರೀತಿಲಿ ಇದ್ದಿದ್ದರಿಂದಲೇ ಆಕೆ ಬೇರೆಯವರನ್ನು ಮದುವೆ ಆಗಲು ಒಪ್ಪಲಿಲ್ಲ. ಇದೀಗ ಪ್ರೀತಿಸಿದ ಹುಡುಗನ ಜೊತೆ ಮದುವೆ ಆಗುತ್ತಿದ್ದಾರೆ.

7 ವರ್ಷಗಳ ಹಿಂದೆ ವಿಶಾಲ್ ಪೋಷಕರು ಮಗನಿಗೆ ಮದುವೆ ಮಾಡಲು ವಧು ಅನ್ವೇಷಣೆ ಮಾಡುತ್ತಿದ್ದರು. ಅದೇ ಸಮಯದಲ್ಲಿ 'ಸಂಡೇ ಕೋಳಿ-2' ಚಿತ್ರೀಕರಣ ನಡೆಯುತ್ತಿತ್ತು. ಆಗ ಕೀರ್ತಿ ಅವರನ್ನು ಮೆಚ್ಚಿ ಮದುವೆ ಆಗಲು ವಿಶಾಲ್ ಬಯಸಿದ್ದರಂತೆ. ತಮ್ಮ ಪೋಷಕರ ಮೂಲಕ ಪ್ರಪೋಸಲ್ ಇಟ್ಟಿದ್ದರು. ಆ ಚಿತ್ರದ ನಿರ್ದೇಶಕ ಲಿಂಗುಸ್ವಾಮಿ ಬಳಿಕ ವಿಶಾಲ್ ಪೋಷಕರು ಈ ಬಗ್ಗೆ ಚರ್ಚಿಸಿದ್ದರಂತೆ. ಆಕೆಯನ್ನು ಕೇಳುವಂತೆ ಹೇಳಿದ್ದರಂತೆ.
ಲಿಂಗುಸ್ವಾಮಿ ಈ ವಿಚಾರವನ್ನು ಕೀರ್ತಿ ಸುರೇಶ್ ಬಳಿ ಹೇಳಿದಾಗ ಆಕೆ ಇಲ್ಲ ಸರ್, ನಾನು ಒಬ್ಬರನ್ನು ಪ್ರೀತಿಸುತ್ತಿದ್ದೀನಿ. ಅವರನ್ನೇ ಮದುವೆ ಆಗುವುದು ಎಂದು ಹೇಳಿ ಸುಮ್ಮನಾಗಿದ್ದರು ಎನ್ನಲಾಗ್ತಿದೆ. ಸದ್ಯ ಕೀರ್ತಿ- ಆಂಟನಿ ಮದುವೆ ಹೊಸ್ತಿಲಲ್ಲಿ ಈ ಚರ್ಚೆ ಮುನ್ನಲೆಗೆ ಬಂದಿದೆ. ಡಿಸೆಂಬರ್ 12ರಂದು ಕೀರ್ತಿ ಹಸೆಮಣೆ ಏರುತ್ತಾರೆ. ಹಿಂದೂ ಹಾಗೂ ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳಂತೆ ಮದುವೆ ನಡೆಯುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಕೀರ್ತಿ ಸುರೇಶ್ ನಟನೆಯ 'ಬೇಬಿ ಜಾನ್' ಹಿಂದಿ ಸಿನಿಮಾ ಕ್ರಿಸ್ಮಸ್ ಸಂಭ್ರಮದಲ್ಲಿ ತೆರೆಗೆ ಬರ್ತಿದೆ. 'ರಿವಾಲ್ವರ್ ರೀಟಾ' ಹಾಗೂ 'ಕನ್ನಿವೆಡಿ' ಚಿತ್ರಗಳ ಚಿತ್ರೀಕರಣ ನಡೀತಿದೆ.


Click it and Unblock the Notifications











