'ಮಹಾರಾಜ' ಚಿತ್ರಕ್ಕೆ ವಿಜಯ್ ಸೇತುಪತಿ ಪಡೆದ 'ಸಂಭಾವನೆ' ಎಷ್ಟು..?
ಒಂದು ಕಡೆ ಕಮರ್ಷಿಯಲ್ ಹೀರೋ ಆಗಿದ್ದುಕೊಂಡೂ ಯಾವುದೇ ಇಮೇಜಿಗೆ ಅಂಟಿಕೊಳ್ಳದ ದಕ್ಷಿಣ ಭಾರತದ ಏಕೈಕ ಹೀರೋ ವಿಜಯ್ ಸೇತುಪತಿ. ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೇ ಅದರ ಗೆಲುವನ್ನು ತಲೆಗೇರಿಸಿಕೊಂಡು ಇಂಥದ್ದೇ ಪಾತ್ರ ಮಾಡುತ್ತೀನಿ ಅಂತಾ ಹಠ ಹಿಡಿಯುವವರೇ ಹೆಚ್ಚು. ಇಂಥವರ ನಡುವೆ ಅದ್ಯಾವುದೇ ರೋಲಾದರೂ ಕೊಡಿ. ಕಥೆ ಚೆನ್ನಾಗಿದ್ದರೆ ಮಾಡ್ತೀನಿ ಎನ್ನುವ ವಿಜಯ್ ಸೇತುಪತಿ ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡಿದವರು. ಪ್ರತಿ ಚಿತ್ರದಲ್ಲಿಯೂ ಪ್ರಯೋಗಾತ್ಮಕವಾಗಿಯೇ ತಮ್ಮನ್ನು ಒಡ್ಡಿಕೊಂಡವರು.
ಇಂಥಾ ವಿಜಯ್ ಸೇತುಪತಿ ಅಭಿನಯದ 'ಮಹಾರಾಜ' ಚಿತ್ರ ನಿರೀಕ್ಷೆಗೆ ಮೀರಿ ಯಶಸ್ಸನ್ನೂ ಗಳಿಸಿದೆ. ಬಾಕ್ಸಾಫೀಸ್ನಲ್ಲಿ ನೂರು ಕೋಟಿಯನ್ನೂ ಗಳಿಸುವುದಲ್ಲದೇ ಓಟಿಟಿ ವೇದಿಕೆಯಲ್ಲಿ ಕೂಡ ಈ ಚಿತ್ರ ಟ್ರೆಂಡಿಂಗ್ನಲ್ಲಿದೆ. ಭಾರತದೆಲ್ಲೆಡೆ 'ಮಹಾರಾಜ' ಚಿತ್ರದ ಕುರಿತು ಚರ್ಚೆಯಾಗುತ್ತಿದೆ. ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಕೂಡ ಮನಸೋತು ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುವ ಆಲೋಚನೆ ಮಾಡಿದ್ದಾರೆ ಅನ್ನುವ ಸುದ್ದಿ ಕೂಡ ಇದೆ.

ಹೀಗೆ ಹತ್ತು ಹಲವು ಕಾರಣಗಳಿಂದ ಸದ್ದು ಮಾಡುತ್ತಾ, ಸುದ್ದಿಯಾಗ್ತಿರುವ 'ಮಹಾರಾಜ' ಚಿತ್ರಕ್ಕೆ ವಿಜಯ್ ಸೇತುಪತಿ ಒಂದು ಪೈಸೆಯನ್ನೂ ತೆಗೆದುಕೊಳ್ಳಲಿಲ್ಲ ಅನ್ನುವುದೇ ಸದ್ಯದ ಬ್ರೇಕಿಂಗ್ ನ್ಯೂಸು.
ಹೌದು, 'ಮಹಾರಾಜ' ಚಿತ್ರವನ್ನು ವಿಜಯ್ ಸೇತುಪತಿ ಉಚಿತವಾಗಿ ಮಾಡಿದ್ದಾರೆ. ಅದಕ್ಕೆ ಕಾರಣ ಚಿತ್ರದ ಬಜೆಟ್ ಒಂದಾದರೆ, ಇನ್ನೊಂದು ಚಿತ್ರದ ಕಥೆ. ತಾವು ಸಂಭಾವನೆ ಪಡೆದರೆ ಚಿತ್ರದ 20 ಕೋಟಿ ಬಜೆಟ್ ಇನ್ನೂ ಹೆಚ್ಚಾಗುತ್ತೆ ಎಂಬುದನ್ನು ಅರಿತು ವಿಜಯ್ ಸೇತುಪತಿ ನಿರ್ದೇಶಕ ನಿಥಿಲನ್ ಸ್ವಾಮಿನಾಥನ್ ಅವರಿಗೆ ಫ್ರೀ ಕಾಲ್ಶೀಟ್ ನೀಡಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ 'ಮಹಾರಾಜ' ವಿಜಯ್ ಸೇತುಪತಿ ಅಭಿನಯದ ಐವತ್ತನೇ ಸಿನಿಮಾ. ತಮ್ಮ ವೃತ್ತಿ ಬದುಕಿನ ಮೈಲಿಗಲ್ಲಿನ ಹೊಸ್ತಿಲಿನಲ್ಲಿದ್ದಾಗ ಈ ತರ ಅಭಿನಯಕ್ಕೆ ಒತ್ತು ಇರುವ, ಕಥೆ ಪ್ರಮುಖವಾಗಿರುವ ಚಿತ್ರದಲ್ಲಿ ಆಕ್ಟ್ ಮಾಡಬೇಕೆಂಬ ಆಸೆ ವಿಜಯ್ ಸೇತುಪತಿ ಅವರಲ್ಲಿ ಇತ್ತು. ಹೀಗಾಗಿ ಹಣದ ಮುಖ ನೋಡಿದರೆ, ಚಿತ್ರ ಕೈ ತಪ್ಪಿ ಹೋಗಬಹುದು ಅನ್ನುವ ಉದ್ದೇಶದಿಂದ ವಿಜಯ್ ಸೇತುಪತಿ 'ಮಹಾರಾಜ ' ಚಿತ್ರದಲ್ಲಿ ಫ್ರೀ ಆಗಿ ನಟಿಸಿದ್ದಾರೆ ಎಂಬ ಸುದ್ದಿ ಸದ್ಯಕ್ಕೆ ಎಲ್ಲೆಡೆ ಗುಲ್ಲಾಗಿದೆ.

ಹಾಗಂಥ.. 'ಮಹಾರಾಜ'ದಿಂದ ವಿಜಯ್ ಸೇತುಪತಿಗೆ ಹಣ ಸಂದಾಯವಾಗಿಯೇ ಇಲ್ಲ ಅಂತಲ್ಲ. ಯಾಕೆಂದರೆ.. ವಿಜಯ್ ಸೇತುಪತಿ ಉಚಿತವಾಗಿಯೇ ಅಭಿನಯಿಸಿದರೂ, ಚಿತ್ರದಿಂದ ಬಂದ
ಬಂದ ಲಾಭದಲ್ಲಿ ಅವರಿಗೆ ಒಂದು ಪಾಲು ನೀಡಲಾಗಿದೆ.
ಇನ್ನೂ 'ಮಹಾರಾಜ' ವಿಜಯ್ ಸೇತುಪತಿ ಹೃದಯಕ್ಕೆ ಎಷ್ಟರ ಮಟ್ಟಿಗೆ ಹತ್ತಿರವಾದ ಸಿನಿಮಾ ಅಂದರೆ, ಚಿತ್ರದ ಸನ್ನಿವೇಶವೊಂದರಲ್ಲಿ ನಿಜವಾಗಿಯೂ ಸೇತುಪತಿ ಕಣ್ಣೀರು ಹಾಕಿದ್ದರು.ಹೌದು, ಹಿಂದೊಮ್ಮೆ ಚಿತ್ರದ ಕುರಿತು ಮಾತನಾಡುವಾಗ ಈ ಸಿನಿಮಾದ ಕಥೆ ನನಗೆ ತುಂಬಾ ಕನೆಕ್ಟ್ ಆಗಿತ್ತು. ಚಿತ್ರದಲ್ಲಿ ನಾನು ಪೊಲೀಸರಿಗೆ ಮೂರನೇ ಬಾರಿಗೆ ಕಥೆ ಹೇಳುವ ಒಂದು ದೃಶ್ಯವಿದೆ. ಮೊದಲೆರಡು ಬಾರಿ ಕಥೆ ಹೇಳುವ ಸೀನ್ಗಳಲ್ಲಿ ನಾನು ಕಂಟ್ರೋಲ್ ತಪ್ಪಲಿಲ್ಲ. ಆದರೆ ಮೂರನೇ ಬಾರಿಗೆ ಕಥೆ ಹೇಳುವ ಸೀನ್ನಲ್ಲಿ ನನ್ನ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಿಜವಾಗಿಯೇ ನಾನು ಅತ್ತುಬಿಟ್ಟೆ ಎಂದು ಹೇಳಿದ್ದರು ವಿಜಯ್ ಸೇತುಪತಿ.


Click it and Unblock the Notifications











