ತಮಿಳು ಸಿನಿಮಾ ಕತೆ ಕದ್ದು, ಶಾರುಖ್ಗೆ ಸಿನಿಮಾ ಮಾಡುತ್ತಿರುವ ನಿರ್ದೇಶಕ! ದೂರು ದಾಖಲು
ತಮಿಳು ಸಿನಿಮಾ ನಿರ್ದೇಶಕ ಅಟ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ಗಾಗಿ ಹೊಸ ಸಿನಿಮಾ ನಿರ್ದೇಶಿಸುತ್ತಿದ್ದು, ಸಿನಿಮಾಕ್ಕೆ 'ಜವಾನ್' ಎಂದು ಹೆಸರಿಡಲಾಗಿದೆ. ಆದರೆ ಅಟ್ಟಿಲಿಯ ಈ ಹಿಂದಿನ ಸಿನಿಮಾಗಳ ಮೇಲೆ ಬಂದಿದ್ದ ನಕಲು, ಕೃತಿಚೌರ್ಯದ ಆರೋಪ ಈ ಸಿನಿಮಾದ ಮೇಲೂ ಬಂದಿದೆ.
ಅಟ್ಲಿ ಈ ವರೆಗೂ ನಾಲ್ಕು ತಮಿಳು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರ ನಾಲ್ಕೂ ಸಿನಿಮಾಗಳ ಮೇಲೆ ಬೇರೆಡೆಯಿಂದ ಕತೆ ಹಾಗೂ ದೃಶ್ಯಗಳನ್ನು ಯಥಾವತ್ತು ಕದ್ದು ಆರೋಪ ಇದೆ.
'ಜವಾನ್' ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ಈ ಸಿನಿಮಾದ ಕತೆಯನ್ನು ತಮಿಳಿನ ಬೇರೊಂದು ಸಿನಿಮಾದಿಂದ ಕದಿಯಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ತಮಿಳು ಸಿನಿಮಾ ನಿರ್ಮಾಪಕ ಮಣಿಕಮ್ ನಾರಾಯಣನ್ ಎಂಬುವರು ಅಟ್ಲಿ ವಿರುದ್ಧ ದೂರು ದಾಖಲಿಸಿದ್ದಾರೆ.
2006 ರಲ್ಲಿ ಬಿಡುಗಡೆ ಆಗಿದ್ದ ನಟ ವಿಜಯ್ಕಾಂತ್ ನಟನೆಯ 'ಪೆರರಾಸು' ಸಿನಿಮಾದ ಕತೆಯನ್ನು ಕದ್ದು 'ಜವಾನ್' ಸಿನಿಮಾ ಮಾಡಲಾಗುತ್ತಿದೆ ಎಂದು ಆರೋಪಿಸಿ ನಿರ್ಮಾಪಕ ಮಣಿಕಮ್ ನಾರಾಯಣನ್ ದೂರು ದಾಖಲಿಸಿದ್ದು, ಅಟ್ಟಿಲಿಗೆ ಈ ಬಗ್ಗೆ ಚೆನ್ನೈ ಪೊಲೀಸರು ಪ್ರಶ್ನೆ ಮಾಡಲಿದ್ದಾರೆ.

2006 ರಲ್ಲಿ ಬಿಡುಗಡೆ ಆಗಿದ್ದ 'ಪೆರರಾಸು'
2006 ರಲ್ಲಿ ಬಿಡುಗಡೆ ಆಗಿದ್ದ 'ಪೆರರಾಸು' ಸಿನಿಮಾವು ದಕ್ಷ ಸಿಬಿಐ ಅಧಿಕಾರಿ ಒಬ್ಬನ ಕತೆಯನ್ನು ಒಳಗೊಂಡಿತ್ತು. ಜಡ್ಜ್ ಒಬ್ಬಾತ ಕಾಣೆಯಾದಾಗ ಆತನನ್ನು ಹುಡುಕುವ ಕಾರ್ಯದಲ್ಲಿ ತೊಡಗುತ್ತಾನೆ ನಾಯಕ ಕಾಶಿ ವಿಶ್ವನಾಥನ್. ಆತ ಅಪರಾಧಿಗಳಿಗೆ ಹತ್ತಿರವಾದಾಗ ಅವರ ಕೊಲೆಗಳಾಗುತ್ತಿರುತ್ತದೆ. ಕೊನೆಗೆ ಗೊತ್ತಾಗುತ್ತದೆ ಕಾಶಿ ವಿಶ್ವನಾಥನ ಅವಳಿ ಸಹೋದರನೇ ಆ ಕೊಲೆಗಳನ್ನು ಮಾಡುತ್ತಿರುತ್ತಾನೆ ಎಂದು. 'ಜವಾನ್' ಸಿನಿಮಾದ ಕತೆ ಬಹಿರಂಗವಾಗಿಲ್ಲವಾದರು ಇದೇ ಕತೆಯನ್ನು ಸಿನಿಮಾ ಮಾಡಲಾಗಿದೆ ಎಂಬುದು ನಿರ್ಮಾಪಕ ಮಣಿಕಮ್ ನಾರಾಯಣನ್ ಆರೋಪ.

ಈ ಹಿಂದೆಯೂ ಪ್ರಕರಣ ದಾಖಲಾಗಿತ್ತು
ಈ ರೀತಿಯ ಆರೋಪಗಳು ಅಟ್ಲಿ ಮೇಲೆ ಬರುತ್ತಿರುವುದು ಇದು ಮೊದಲೇನಲ್ಲ. 2019 ರಲ್ಲಿ ಅಟ್ಲಿ ನಿರ್ದೇಶಿಸಿದ್ದ 'ಬಿಗಿಲ್' ಸಿನಿಮಾದ ಕತೆ ತಮ್ಮದೆಂದು ನಿರ್ದೇಶಕ ಕೆಪಿ ಸೆಲ್ವ ದಾವೆ ಹೂಡಿದ್ದರು. ತಾವು ಆ ಕತೆಯನ್ನು ನೊಂದಣಿ ಸಹ ಮಾಡಿಸಿರುವುದಾಗಿ ಹೇಳಿದ್ದರು. ಪ್ರಕರಣವು ನ್ಯಾಯಾಲಯದ ವರೆಗೆ ಹೋಗಿ, ಚೆನ್ನೈ ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿಯನ್ನು ವಜಾ ಮಾಡಲಾಯ್ತು. ಅದೇ ಸಿನಿಮಾದ ಕತೆಯನ್ನು ತಾವು ನಿರ್ಮಾಪಕರೊಬ್ಬರಿಗೆ ಹೇಳಿದ್ದಾಗಿ ಆ ನಿರ್ಮಾಪಕ ಅಟ್ಟಿಲಿಗೆ ಕತೆ ಹೇಳಿರುವುದಾಗಿ ಶಿವ ಎಂಬ ನಿರ್ದೇಶಕ ಆರೋಪಿಸಿದ್ದರು.

ಕನ್ನಡದ 'ಮಿಲನ' ಸಿನಿಮಾದಿಂದ ಸ್ಪೂರ್ತಿ?
ಇವು ಮಾತ್ರವೇ ಅಲ್ಲದೆ, ಅಟ್ಲಿ ಮೊದಲು ನಿರ್ದೇಶಿಸಿದ್ದ 'ರಾಜಾ-ರಾಣಿ' ಸಿನಿಮಾ ಕನ್ನಡದ ಮಿಲನ ಹಾಗೂ ತಮಿಳಿನ 'ಮೌನ ರಾಗಂ' ಸಿನಿಮಾಗಳಿಂದ ಕದ್ದಿದ್ದೆಂದು. ಅಟ್ಲಿ ನಿರ್ದೇಶಿಸಿದ್ದ 'ಮರ್ಸೆಲ್' ಸಿನಿಮಾವನ್ನು ಕಮಲ್ ಹಾಸನ್ರ 'ಅಪೂರ್ವ ಸೋದರಂಗಳ್' ರಜನೀಕಾಂತ್ರ 'ಮೂಂಡ್ರು ಮುಗಮ್' ಸಿನಿಮಾಗಳಿಂದ ಕದ್ದಿರುವುದಾಗಿ ಆರೋಪ ಮಾಡಲಾಗಿತ್ತು. ಕೆಲವು ದೃಶ್ಯಗಳನ್ನು ಹಾಲಿವುಡ್ ಹಾಗೂ ಕೊರಿಯನ್ ಸಿನಿಮಾಗಳಿಂದ ನೇರವಾಗಿ ಅಟ್ಲಿ ಎತ್ತಿದ್ದಾರೆ ಎಂದು ಕೆಲವರು ವಿಡಿಯೋ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.

ಸೈನ್ಯದ ಕತೆ ಹೊಂದಿರುವ ಸಿನಿಮಾ?
ಅದೇನೇ ಇರಲಿ, ಈಗ ಅಟ್ಲಿ, ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಪೋಸ್ಟರ್ ಮಾತ್ರವೇ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಜವಾನ್ ಎಂದು ಹೆಸರಿಟ್ಟಿರುವ ಕಾರಣ ಈ ಸಿನಿಮಾವು ಸೈನ್ಯಕ್ಕೆ ಸಂಬಂಧಿಸಿದ ಸಿನಿಮಾ ಆಗಿರಬಹುದು ಎನ್ನಲಾಗುತ್ತಿದೆ. ಸಿನಿಮಾದಲ್ಲಿ ನಯನತಾರಾ ನಾಯಕಿ. ತಮಿಳಿನ ಸ್ಟಾರ್ ನಟ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಟೀಸರ್, ಟ್ರೈಲರ್ಗಳು ಬಿಡುಗಡೆ ಆದ ಬಳಿಕ ಕತೆಯ ಬಗ್ಗೆ ಸುಳಿವು ಸಿಗುವ ಸಾಧ್ಯತೆ ಇದೆ.


Click it and Unblock the Notifications











