"ಭಾರತ ಯುದ್ಧ ನಿಯಮ ಮೀರುತ್ತಿದೆ"; 'ವೆಟ್ಟೆಯಾನ್' ನಿರ್ದೇಶಕ ವಿವಾದಾತ್ಮಕ ಹೇಳಿಕೆ
ಪಹಲ್ಗಾಮ್ನಲ್ಲಿ ಏಪ್ರಿಲ್ 22ರಂದು ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಅಮಾನವೀಯ ಘಟನೆ ಖಂಡಿಸಿ ಪಾಕ್ ವಿರುದ್ಧ ಕೆಲವರು ಕೆಂಡಕಾರುತ್ತಿದ್ದಾರೆ. ಯಾವುದೇ ಸಮಯದಲ್ಲಿ ಭಾರತ ಹಾಗೂ ಪಾಕ್ ಯುದ್ಧ ನಡೆಯಬಹುದು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ 48 ಗಂಟೆಗಳಲ್ಲಿ ದೇಶ ಬಿಟ್ಟು ಹೋಗುವಂತೆ ಗಡುವು ನೀಡಲಾಗಿತ್ತು. ಈಗಾಗಲೇ ಕೇಂದ್ರ ಸರ್ಕಾರ ಪಾಕಿಸ್ತಾನಿಗಳಿಗೆ ನೀಡಿದ್ದ ವೀಸಾ ರದ್ದುಪಡಿಸಿದೆ. ಈಗಾಗಲೇ ಪಾಕ್ ಸೇನೆ ಅಪ್ರಚೋದಿನ ಗುಂಡಿನ ದಾಳಿ ನಡೆಸಿದ್ದು ಅದಕ್ಕೆ ಭಾರತೀಯ ಸೇನೆ ತಿರುಗೇಟು ನೀಡಿದೆ. ಬೆದರಿದ ಪಾಕ್ ಸೈನಿಕರು ಕಾಲ್ಕಿತ್ತಿರುವುದಾಗಿ ವರದಿಯಾಗಿದೆ. ಭಾರತ-ಪಾಕ್ ಗಡಿಯಲ್ಲಿ ಯುದ್ಧದ ಛಾಯೆ ಕಂಡುಬರುತ್ತಿದೆ.

ಈಗಾಗಲೇ ಸಾಕಷ್ಟು ಜನ ಪಂಜಾಬ್ನ ಅಟ್ಟಾರಿ ವಾಘಾ ಗಡಿ ಮೂಲಕ ಭಾರತ ತೊರೆದಿದ್ದಾರೆ. ಇದೆಲ್ಲದರ ನಡುವೆ ತಮಿಳು ಚಿತ್ರ ನಿರ್ದೇಶಕ ಜ್ಞಾನವೇಲ್ ಹೇಳಿಕೆ ಭಾರೀ ಚರ್ಚೆ ಹುಟ್ಟು ಹಾಕಿದೆ. ಭಾರತ ಯುದ್ಧದ ನಿಯಮ ಮೀರುತ್ತಿದೆ ಎನ್ನುವ ಅರ್ಥದಲ್ಲಿ 'ವೆಟ್ಟೆಯಾನ್' ಚಿತ್ರದ ನಿರ್ದೇಶಕ ಮಾತನಾಡಿದ್ದಾರೆ. ಕೆಲವರು ಈ ಬಗ್ಗೆ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದ ನಿರ್ದೇಶಕ ಟಿ. ಜೆ ಜ್ಞಾನವೇಲ್ "ಯುದ್ಧ ಎನ್ನುವುದು ಅಮಾನವೀಯ. ಈಗಲೂ ನಮ್ಮ ಮುಂದೆ ನಡೀತಿದೆ. ನಾನು ಕೇಳಿದಂತೆ, ಓದಿಕೊಂಡಂತೆ ಯುದ್ಧದ ಸಮಯದಲ್ಲಿ ಮಕ್ಕಳು, ಮಹಿಳೆಯರು, ರೋಗಿಗಳು ಹಾಗೂ ರಾಸುಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಬೇಕು. ಆ ಬಳಿಕ ಯುದ್ಧ ಘೋಷಿಸಬಹುದು. ದುರಾದೃಷ್ಟ ಅಂದರೆ ಈಗ ಪ್ರವಾಸಿ ಸ್ಥಳದಲ್ಲಿಯೇ ಭದ್ರತೆ ಇಲ್ಲ. ಅದಕ್ಕಿಂತ ವಿಪರ್ಯಾಸ ಅಂದ್ರೆ ಚಿಕಿತ್ಸೆಗೆ ಬಂದ ಪಾಕಿಸ್ತಾನದ ಮಗುವನ್ನು 48 ಗಂಟೆಗಳಲ್ಲಿ ವಾಪಸ್ ಹೋಗು ಎನ್ನುವಂತಾಗಿದೆ" ಎಂದಿದ್ದಾರೆ.
ಜ್ಞಾನವೇಲ್ ಪರೋಕ್ಷವಾಗಿ ಭಾರತ ಯುದ್ಧದ ನಿಯಮ ಮೀರುತ್ತಿದೆ ಎಂದು 'ವೆಟ್ಟೆಯಾನ್' ನಿರ್ದೇಶಕ ಜ್ಞಾನವೇಲ್ ಹೇಳಿದ್ದಾರೆ ಎಂದು ಚರ್ಚೆ ಶುರುವಾಗಿದೆ. ಸಾಕಷ್ಟು ಜನ ಅವರನ್ನು ಟೀಕಿಸಿ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಮೊದಲು ಆ ಸಾಹಿತ್ಯ ಓದುವುದು ಬಿಟ್ಟುಬಿಡು ಎಂದು ಕೆಲವರು, ನಿನಗೆ ಯುದ್ಧದ ಎಲ್ಲಾ ನಿಮಯ ಗೊತ್ತಾ? ಎಂದು ಕೆಲವರು ಕೇಳುತ್ತಿದ್ದಾರೆ.
"ಯುದ್ಧದ ಅನಿವಾರ್ಯತೆ ಎದುರಾಗಿಲ್ಲ" ಎಂದು ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಬಗ್ಗೆಯೂ ಪರ ವಿರೋಧ ಚರ್ಚೆ ಶುರುವಾಗಿದೆ. ಪಾಕಿಸ್ತಾನದ ಮಾಧ್ಯಮಗಳಲ್ಲಿ ಕೂಡ ಆ ಸುದ್ದಿ ಪ್ರಕಟವಾಗಿ ಭಾರೀ ವೈರಲ್ ಆಗುತ್ತಿದೆ. ಇದೀಗ ಸಿದ್ಧರಾಮಯ್ಯ ತಮ್ಮ ಹೇಳಿಕೆಗೆ ಸಮರ್ಥನೆ ಕೊಟ್ಟಿದ್ದಾರೆ. ಯುದ್ಧ ಬೇಡವೇ ಬೇಡ ಎಂದು ನಾನು ಹೇಳಿಲ್ಲ, ನನ್ನ ಹೇಳಿಕೆ ತಿರುಚಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಯನ್ನು ವಿರೋಧ ಪಕ್ಷಗಳು ಅಸ್ತ್ರವಾಗಿ ಬಳಸಿಕೊಂಡಿದ್ದರು. ಸುದ್ದಿಗಾರರ ಜೊತೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ "ಅನಿವಾರ್ಯ ಇದ್ದಾಗ ಮಾತ್ರ ಯುದ್ಧ ಮಾಡಬೇಕು. ಅದೇ ಮೊದಲ ಆಯ್ಕೆ ಆಗಬಾರದು. ಪಹಲ್ಗಾಮ್ ಘಟನೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಭದ್ರತಾ ವ್ಯವಸ್ಥೆಯ ವೈಫಲ್ಯದ ಬಗ್ಗೆ ನಾನು ಮಾತನಾಡಿದ್ದೀನಿ" ಎಂದಿದ್ದಾರೆ.
ಸಂಭಾಷಣೆಕಾರರಾಗಿ ತಮಿಳು ಚಿತ್ರರಂಗ ಪ್ರವೇಶಿಸಿದ ಜ್ಞಾನವೇಲ್ ಬಳಿಕ ಚಿತ್ರ ನಿರ್ದೇಶಕರಾಗಿದ್ದರು. 'ಕೂಟತಿಲ್ ಒರುಥನ್' ಚಿತ್ರಕ್ಕೆ ಮೊದಲ ಬಾರಿ ಆಕ್ಷನ್ ಕಟ್ ಹೇಳಿದ್ದರು. ಬಳಿಕ 'ಜೈಭೀಮ್' ರೀತಿಯ ಸೆನ್ಸೇಷನಲ್ ಸಿನಿಮಾ ಕಟ್ಟಿಕೊಟ್ಟಿದ್ದರು. ಬಳಿಕ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಅಮಿತಾಬ್ ಬಚ್ಚನ್ ಅವರಿಗೂ ಆಕ್ಷನ್ ಕಟ್ ಹೇಳುವ ಅವಕಾಶ ಸಿಕ್ಕಿತ್ತು. ಆದರೆ ಈ ಕ್ರೈಂ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡಲಿಲ್ಲ.


Click it and Unblock the Notifications











