ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ದೋಣಿಗಳ ಜೊತೆ ಇಳಿದ ತಮಿಳು ನಿರ್ದೇಶಕ ಮಾರಿ ಸೆಲ್ವರಾಜ್
ಚೆನ್ನೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚು ತೊಂದರೆಗೆ ಒಳಗಾಗಿದ್ದು ತಿರುನಲ್ವೇಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು. ಕಳೆದ 50 ವರ್ಷಗಳಲ್ಲಿ ಇಂತಹ ಮಳೆಯನ್ನು ಇಲ್ಲಿನ ಜನರು ಕಂಡಿರಲಿಲ್ಲ. ಮಳೆಯಿಂದಾಗಿ ಬಾರಿ ಪ್ರವಾಹ ಉಂಟಾಗಿದ್ದು, ಹಲವು ಮಂದಿ ಜನರ ರಕ್ಷಣೆಗೆ ಇಳಿದಿದ್ದಾರೆ.
ತಮಿಳಿನ ಖ್ಯಾತ ನಿರ್ದೇಶಕ ಮಾರಿ ಸೆಲ್ವರಾಜ್ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರೊಂದಿಗೆ ಪ್ರವಾಹ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಲು ತಿರುನಲ್ವೇಲಿಗೆ ತೆರಳಿದ್ದರು. ಮಾರಿ ಸೆಲ್ವರಾಜ್ ಅವರ ಹುಟ್ಟೂರು ಪುಲಿಯಾಂಗುಲಂ ತಿರುನೆಲ್ವೇಲಿ ಜಿಲ್ಲೆಯಲ್ಲಿದೆ. ತಮ್ಮವರ ರಕ್ಷಣೆಗಾಗಿ ಸಚಿವರ ಜೊತೆಗೆ ಕೈ ಜೋಡಿಸಿದ ನಿರ್ದೇಶಕರ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರವಾಹ ರಕ್ಷಣ ಕೆಲಸದಲ್ಲಿ ಮಾರಿ ಸೆಲ್ವರಾಜ್
ತಮಿಳಿನ ಖ್ಯಾತ ಸಿನಿಮಾಗಳಾದ ಪರಿಯೆರುಂ ಪೆರುಮಾಳ್ ಮತ್ತು ಮಾಮನ್ನನ್ ಚಿತ್ರದ ನಿರ್ದೇಶಕ ಮಾರಿ ಸೆಲ್ವರಾಜ್ ದೋಣಿಗಳ ಮೂಲಕ ತಿರುನಲ್ವೇಲಿ ಜಿಲ್ಲೆಯಲ್ಲಿ ಹೆದ್ದಾರಿಗಳಿಂದ ದೂರವಿರುವ ಗ್ರಾಮಗಳಲ್ಲಿ ಭಾರೀ ಪ್ರಮಾಣದಲ್ಲಿ ಜಲಾವೃತವಾಗಿರುವ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸುತ್ತಿದ್ದಾರೆ.
ಪ್ರವಾಹ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಿದ ಮೊದಲ ಕೆಲವು ಸೆಲೆಬ್ರಿಟಿಗಳಲ್ಲಿ ಚಲನಚಿತ್ರ ನಿರ್ಮಾಪಕ ಮಾರಿ ಸೆಲ್ವರಾಜ್ ಕೂಡ ಸೇರಿದ್ದಾರೆ. ತಿರುನಲ್ವೇಲಿ ಅವರ ತವರೂರು ಮತ್ತು ಅವರು ತಮ್ಮ ತಂಡದೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ನಿರ್ದೇಶಕ ಮಾರಿ ಸೆಲ್ವರಾಜ್ ಜೊತೆಯಲ್ಲಿ ಉದಯನಿಧಿ ಸ್ಟಾಲಿನ್ ಮಾಮನ್ನನ್ ಸಿನಿಮಾದಲ್ಲಿ ನಟಿಸಿದ್ದರು. ಇದು ಅವರ ಕೊನೆಯ ಚಿತ್ರ ಎಂದು ಘೋಷಿಸಲಾಗಿದೆ.
ತಿರುನೆಲ್ವೇಲಿಯಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಿದ ಮಾರಿ ಸೆಲ್ವರಾಜ್
ಎರಡು ದಿನಗಳಿಂದ ದಕ್ಷಿಣ ತಮಿಳುನಾಡಿನಲ್ಲಿ ಭಾರೀ ಮಳೆಯಾಗಿದ್ದು, ತಿರುನಲ್ವೇಲಿ, ತುತಿಕೋರಿನ್, ತೆಂಕಶಿ ಮತ್ತು ಕನ್ಯಾಕುಮಾರಿ ಜಲಾವೃತವಾಗಿದೆ. ಪರಿಸ್ಥಿತಿಯ ತೀವ್ರತೆಯನ್ನು ಅರ್ಥಮಾಡಿಕೊಂಡ ನಿರ್ದೇಶಕ ಮಾರಿ ಸೆಲ್ವರಾಜ್, ಉದಯನಿಧಿ ಸ್ಟಾಲಿನ್ ಅವರೊಂದಿಗೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ರಕ್ಷಣಾ ಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾರಿ ಸೆಲ್ವರಾಜ್, "ಇನ್ನೂ ಹಲವಾರು ಒಳ ಗ್ರಾಮಗಳು ಪ್ರವಾಹಕ್ಕೆ ಸಿಲುಕಿಕೊಂಡಿವೆ. ಆದರೆ ದೋಣಿಗಳ ಮೂಲಕ ಅಲ್ಲಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಹೆಲಿಕಾಪ್ಟರ್ಗಳನ್ನು ನಿಯೋಜಿಸಲು ಸರ್ಕಾರಕ್ಕೆ ಮನವಿ ಮಾಡಿದ್ದು, ಅವರ ಜೊತೆಗ ಸಂಪರ್ಕದಲ್ಲಿದ್ದೇನೆ" ಎಂದು ಸೇರಿಸಿದ್ದಾರೆ.
ಮಾರಿ ಸೆಲ್ವರಾಜ್ ಮುಂದಿನ ಸಿನಿಮಾಗಳು
ಮಾರಿ ಸೆಲ್ವರಾಜ್ ಅವರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ 'ಪರಿಯೆರುಂ ಪೆರುಮಾಳ್' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಸಿನಿಮಾ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಇದಾದ ನಂತರ ಅವರು 'ಕರ್ಣನ್' ಮತ್ತು 'ಮಾಮನ್ನನ್' ಮುಂತಾದ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು 'ವಾಝೈ' ಸಿನಿಮಾ ಮುಗಿಸಿದ್ದು, ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಹಿಂದೆ ಮಾರಿ ಸೆಲ್ವರಾಜ್ ಮತ್ತು ಧನುಷ್ ಎರಡನೇ ಬಾರಿಗೆ ಕೈಜೋಡಿಸಲಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ, ಆ ಸಿನಿಮಾ ಇನ್ನೂ ಘೋಷಿಸಲಾಗಿಲ್ಲ.


Click it and Unblock the Notifications











