ವಿಜಯ್ ಸೇತುಪತಿಗೆ ವೆಟ್ರಿಮಾರನ್ ನಿರ್ದೇಶನ; ಫಸ್ಟ್ ಲುಕ್ ವೈರಲ್
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟ ವಿಜಯ್ ಸೇತುಪತಿ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ವೆಟ್ರಿ ಮಾರನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಬ್ಬರು ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಯೇ ಅಭಿಮಾನಿಗಳ ಸಖತ್ ಥ್ರಿಲ್ ಆಗಿದ್ದು, ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಚಿತ್ರಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಅದ್ಭುತ ಸಿನಿಮಾಗಳ ಮೂಲಕ ಚಿತ್ರಪ್ರೇಕ್ಷಕರನ್ನು ರಂಜಿಸುತ್ತಿರುವ ವೆಟ್ರಿಮಾರನ್ ವಿಜಯ್ ಸೇತುಪತಿಗೆ ಸಿನಿಮಾ ಮಾಡುತ್ತಿರುವುದು ಅಚ್ಚರಿಯ ವಿಷಯ. ಅಂದಹಾಗೆ ಇಬ್ಬರ ಕಾಂಬಿನೇಷನ್ ಚಿತ್ರಕ್ಕೆ 'ವಿದುತಲೈ' ಎಂದು ಶೀರ್ಷಿಕೆ ಇಡಲಾಗಿದೆ.
ಕಾಕಾ ಮುಟ್ಟೈ, ವಿಸಾರಣೈ, ವಡಾ ಚೆನ್ನೈ, ಅಸುರನ್ ಅಂತಹ ಉತ್ತಮ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವೆಟ್ರಿ ಮಾರನ್ ಮೊದಲ ಬಾರಿಗೆ ವಿಜಯ್ ಸೇತುಪತಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಳಿಯರಾಜ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮೊದಲ ಬಾರಿಗೆ ವೆಟ್ರಿಮಾರನ್ ಚಿತ್ರಕ್ಕೆ ಇಳಿಯರಾಜ ಸಂಗೀತ ನೀಡುತ್ತಿದ್ದಾರೆ.

ಅಂದಹಾಗೆ ವಿಜಯ್ ಸೇತುಪತಿ ಮತ್ತು ವೆಟ್ರಿಮಾರನ್ ಈ ಹಿಂದೆಯೇ ಒಟ್ಟಿಗೆ ಸಿನಿಮಾ ಮಾಡಬೇಕಿತ್ತು. ವಡಾ ಚೆನ್ನೈ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ನಟಿಸಬೇಕಿತ್ತು. ಆದರೆ ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿದ್ದ ಸೇತುಪತಿ, ವೆಟ್ರಿ ಮಾರನ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಅವಕಾಶ ಮಿಸ್ ಮಾಡಿಕೊಂಡಿದ್ದರು. ಆದರೀಗ ಮತ್ತೆ ಒಂದಾಗಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
ಥ್ರಿಲ್ಲರ್ ಸಿನಿಮಾ ಇದಾಗಿದ್ದು, ದಕ್ಷಿಣ ಭಾರತದ ಎಲ್ಲಾ ಭಾಷೆಯ ಜೊತೆಗೆ ಹಿಂದಿಯಲ್ಲೂ ರಿಲೀಸ್ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಸೇತುಪತಿ ಕೈಗೆ ಬೇಡಿ ಹಾಕಿದ್ದು, ಟೀ ಕುಡಿಯುತ್ತಾ ಕುಳಿತಿರುವ ಸೇತುಪತಿ ಸುತ್ತ ಪೊಲೀಸರು ನಿಂತಿದ್ದಾರೆ. ಗಂಭೀರ ನೋಟ ಬೀರುತ್ತಿರುವ ವಿಜಯ್ ಸೇತುಪತಿ ಲುಕ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ದಟ್ಟವಾದ ಕಾಡಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರದ ಸಂಪೂರ್ಣ ಶೂಟಿಂಗ್ ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ನಡೆಯಲಿದೆ. ಆಧುನಿಕ ವ್ಯವಸ್ಥೆಯ ಸಂಪರ್ಕ ಇಲ್ಲದೆ ಇರುವ ಪ್ರದೇಶದಲ್ಲಿ ಚಿತ್ರೀಕರಣ ಮಾಡುತ್ತಿದ್ದು, ಬುಡಕಟ್ಟು ಜನರ ಜೊತೆ ವಾಸಿಸುತ್ತಿದ್ದಾರಂತೆ.
ಈಗಾಗಲೇ ಅಸುರನ್ ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿಕೊಂಡಿರುವ ವೆಟ್ರಿ ಮಾರನ್, ಇದೀಗ ವಿದುತಲೈ ಚಿತ್ರದಲ್ಲಿಯೂ ಅಷ್ಟೇ ವಿಶೇಷವಾದ ಕಥೆ ಹೇಳಲಿದ್ದಾರೆ. ವಿಜಯ್ ಸೇತುಪತಿ ಅಭಿನಯ, ವೆಟ್ರಿಮಾನ್ ನಿರ್ದೇಶನ ಹೇಗಿರಲಿದೆ ಎಂದು ನೊಡಲು ಅಭಿಮಾನಿಗಳು ಉಸಿರು ಬಿಡಿಹಿಡಿದು ಕಾಯುತ್ತಿದ್ದಾರೆ.


Click it and Unblock the Notifications











