ರಜನಿಕಾಂತ್ ಜೊತೆ ನನ್ನ ವಯಸ್ಸಿನ ನಟಿಯರು ಅಭಿನಯಿಸಿದರೆ ನನಗೆ ಹೊಟ್ಟೆಕಿಚ್ಚು ಎಂದ ನಟಿ ಯಾರು?
ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸೋಕೆ ಸ್ಟಾರ್ ನಟಿಯರು ಕಾಯುತ್ತಿದ್ದಾರೆ. ತಲೈವಾ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕರೆ ಸಾಕು ಎಂದು ಬೆರಗುಗಣ್ಣಿನಿಂದ ನೋಡುತ್ತಿರುತ್ತಾರೆ. ಆದರೆ ಅಷ್ಟು ಸುಲಭವಾಗಿ ಎಲ್ಲರಿಗೂ ಅವಕಾಶ ಸಿಗಲ್ಲ. ವರ್ಷಕ್ಕೊಂದು ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಾರೆ. ಪಾತ್ರ ಸೂಕ್ತ ಎನಿಸುವವರನ್ನು ನಿರ್ದೇಶಕರು ಆಯ್ಕೆ ಮಾಡಿಕೊಳ್ಳುತ್ತಾರೆ.
ಸಾಕಷ್ಟು ನಟಿಯರು ಬಹಿರಂಗವಾಗಿಯೇ ರಜನಿಕಾಂತ್ ಜೊತೆ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕೆಲವರಿಗೆ ಎರಡ್ಮೂರು ಬಾರಿ ತಲೈವಾ ಜೊತೆ ನಟಿಸುವ ಅವಕಾಶ ಸಿಕ್ಕಿರುವುದು ಇದೆ. ತಮಿಳಿನ ನಟಿಯೊಬ್ಬರು ಬಹಳ ವರ್ಷಗಳಿಂದ ನೆಚ್ಚಿನ ನಟನ ಜೊತೆ ನಟಿಸೋ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಒಂದ್ಕಾಲದಲ್ಲಿ ನಾಯಕಿಯಾಗಿ ಮಿಂಚಿದ ಆಕೆ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ರಜನಿಕಾಂತ್ ಜೊತೆ ನನ್ನ ವಯಸ್ಸಿನ ಯಾವುದೇ ನಟಿ ನಟಿಸಿದರೆ ನನಗೆ ಹೊಟ್ಟೆಕಿಚ್ಚು, ಕೋಪ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ತಮಿಳು ಸಂದರ್ಶನದಲ್ಲಿ ನಟಿ ಶರಣ್ಯ ಈ ರೀತಿ ಮಾತನಾಡಿದ್ದಾರೆ. ಆ ಮೂಲಕ ತಲೈವಾ ಮೇಲಿನ ತಮ್ಮ ಅಭಿಮಾನವನ್ನು ಬಹಿರಂಗಪಡಿಸಿದ್ದಾರೆ. ನಟಿ ಶರಣ್ಯ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.
'ದಿ ವಿಲನ್' ಚಿತ್ರದಲ್ಲಿ ಸುದೀಪ್ ತಾಯಿ ಪಾತ್ರದಲ್ಲಿ ನಟಿ ಶರಣ್ಯ ಪೊನ್ವಣ್ಣನ್ ನಟಿಸಿದ್ದರು. ತಮಿಳು, ತೆಲುಗು ಸಿನಿಮಾಗಳಲ್ಲಿ ಕೂಡ ಮಿಂಚಿದ್ದಾರೆ. 1987ರಲ್ಲಿ 'ನಾಯಕನ್' ಚಿತ್ರದಲ್ಲಿ ಮೊದಲಿಗೆ ಶರಣ್ಯ ನಟಿಸಿದ್ದರು. ವಿಷ್ಣುವರ್ಧನ್ ನಟನೆಯ 'ಅಪ್ಪಾಜಿ' ಚಿತ್ರದಲ್ಲಿ ಮೊದಲಿಗೆ ಕನ್ನಡದಲ್ಲಿ ಬಣ್ಣ ಹಚ್ಚಿದ್ದರು.

'ಸಮಯಕ್ಕೊಂದು ಸುಳ್ಳು', 'ಪೊಲೀಸ್ ಕ್ವಾಟರ್ಸ್', 'ಯಕ್ಷ', 'ಚಾರುಲತಾ' ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಶರಣ್ಯ ನಟಿಸಿದ್ದಾರೆ. ಬಹಳ ಹಿಂದೆಯೇ ಪೋಷಕ ಪಾತ್ರಗಳಲ್ಲಿ ನಟಿಸೋಕೆ ಆಕೆ ಆರಂಭಿಸಿದರು. ತಮಿಳಿನ ಬಹುಬೇಡಿಕೆ ಕ್ಯಾರೆಕ್ಟರ್ ಆರ್ಟಿಸ್ ಎನಿಸಿಕೊಂಡಿದ್ದಾರೆ.
ರಜನಿಕಾಂತ್ ಬಗ್ಗೆ ಶರಣ್ಯ ಮಾತುಗಳು ಈಗ ವೈರಲ್ ಆಗುತ್ತಿದೆ. "ರಜನಿಕಾಂತ್ ಜೊತೆ ಯಾರೇ ನಟಿಸಿದರೂ ನನಗೆ ಹೊಟ್ಟೆಕಿಚ್ಚು, ಶಾಪ ಹಾಕುತ್ತಿರುತ್ತೇನೆ, ನೀನು ನಟಿಸ್ತಿದ್ದೀಯಾ, ನಾನು ಯಾವಾಗ ನಟಸೋದು ಎಂದುಕೊಳ್ಳತ್ತೇನೆ. 'ಕಾಲಾ' ಚಿತ್ರದಲ್ಲಿ ಈಶ್ವರಿ ರಾವ್ ನಟಿಸಿದಾಗಲೂ ಅದೇ ರೀತಿ ಅನ್ನಿಸಿತ್ತು. ಅವರೊಟ್ಟಿಗೆ ಯಾರೇ ನಟಿಸಿದರೂ ನನಗೆ ಬೇಸರವಾಗುತ್ತದೆ. ಇವತ್ತಿನ ನಾಯಕಿಯರು ನಟಿಸಿದರೆ ಪರವಾಗಿಲ್ಲ, ಆದರೆ ನನ್ನ ವಯಸ್ಸಿನವರು ನಟಿಸಿದರೆ ಬೇಸರ, ಕೋಪ" ಎಂದಿದ್ದಾರೆ.
ನಟಿ ಶರಣ್ಯ ಒಂದೆರಡು ಹಾಡುಗಳನ್ನು ಕೂಡ ಹಾಡಿದ್ದಾರೆ. ತಮಿಳು ಕಿರುತೆರೆಯಲ್ಲಿ ನಿರೂಪಕಿಯಾಗಿ, ತೀರ್ಪುಗಾರ್ತಿಯಾಗಿಯೂ ಮಿಂಚಿದ್ದಾರೆ. 2010ರಲ್ಲಿ ಬಂದ ತಮಿಳಿನ 'ತೆನ್ಮೆರ್ಕು ಪರುವಕಾಟ್ರು' ಚಿತ್ರದ ನಟನೆಯಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಶರಣ್ಯ ಪಡೆದಿದ್ದರು.
ತಮಿಳುನಾಡು ರಾಜ್ಯಪ್ರಶಸ್ತಿ, ಫಿಲ್ಮ್ಫೇರ್, ಸೈಮಾ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ಶರಣ್ಯ ನಟನೆಗೆ ಸಂದಿದೆ. ಆದರೂ ರಜನಿಕಾಂತ್ ಜೊತೆ ನಟಿಸಬೇಕು ಎನ್ನುವ ಕನಸು ನನಸಾಗಲಿಲ್ಲ. ಸದ್ಯ ರಜನಿಕಾಂತ್ 'ಕೂಲಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ, ರಚಿತಾ ರಾಮ್ ಸಹ ಬಣ್ಣ ಹಚ್ಚಿದ್ದಾರೆ. ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
'ಕೂಲಿ' ಬಳಿಕ ರಜನಿಕಾಂತ್ 'ಜೈಲರ್' ಸೀಕ್ವೆಲ್ ಚಿತ್ರದಲ್ಲಿ ನಟಿಸೋ ಸಾಧ್ಯತೆಯಿದೆ. ನೆಲ್ಸನ್ ಈಗಾಗಲೇ ಕಥೆ, ಚಿತ್ರಕಥೆ ಬರೆಯಲು ಆರಂಭಿಸಿದ್ದಾರೆ. ಶಿವರಾಜ್ಕುಮಾರ್ ಕೂಡ ಚಿತ್ರದಲ್ಲಿ ನರಸಿಂಹ ಆಗಿ ಮುಂದುವರೆಯುವ ನಿರೀಕ್ಷೆಯಿದೆ. ಮತ್ತಷ್ಟು ಕಥೆಗಳನ್ನು ತಲೈವಾ ಕೇಳುತ್ತಿದ್ದಾರೆ. ಶೀಘ್ರದಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಹೊಸ ಸಿನಿಮಾ ಘೋಷಣೆ ಆಗಲಿದೆ.


Click it and Unblock the Notifications











