ಬಾಹುಬಲಿ ಶಿವಗಾಮಿ ರೀತಿ ನೀರಿನಲ್ಲಿ ಮುಳುಗಿ ಮಕ್ಕಳನ್ನು ಎತ್ತಿ ಹಿಡಿದ ಸ್ಟಾರ್!
ಎಸ್. ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸರಣಿ ಸಿನಿಮಾಗಳು ಬರೆದ ದಾಖಲೆ ಒಂದೆರಡಲ್ಲ. ಪ್ರಭಾಸ್ ಹೀರೊ ಆಗಿ ನಟಿಸಿದ್ದ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಕಾಣಿಸಿಕೊಂಡಿದ್ದರು. ದ್ವಿಪಾತ್ರದಲ್ಲಿ ಅಮರೇಂದ್ರ ಬಾಹುಬಲಿ ಹಾಗೂ ಮಹೇಂದ್ರ ಬಾಹುಬಲಿಯಾಗಿ ಯಂಗ್ ರೆಬಲ್ ಸ್ಟಾರ್ ಅಬ್ಬರಿಸಿದ್ದರು.
ಬಾಹುಬಲಿ ಸರಣಿ ಸಿನಿಮಾಗಳ ಪ್ರತಿ ದೃಶ್ಯ, ಫ್ರೇಮ್ ಸಿನಿರಸಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಹಾಲಿವುಡ್ ಸಿನಿಮಾಗಳಿಂದ ಪ್ರೇರಣೆಗೊಂಡು ಒಂದಷ್ಟು ಸನ್ನಿವೇಶಗಳನ್ನು ಜಕ್ಕಣ್ಣ ಕಟ್ಟಿಕೊಟ್ಟಿದ್ದರು. ಬಾಹುಬಲಿ ಮಾತ್ರವಲ್ಲ ಎಲ್ಲಾ ಪಾತ್ರಗಳ ಪೋಷಣೆ ಚೆನ್ನಾಗಿದೆ. ಅದರಲ್ಲೂ ಕಟ್ಟಪ್ಪ, ಬಲ್ಲಾಳ ದೇವ, ದೇವಸೇನಾ, ಶಿವಗಾಮಿ ಪಾತ್ರಗಳನ್ನು ಮರೆಯೋಕೆ ಸಾಧ್ಯವಿಲ್ಲ. ಸಾಮ್ರಾಜ್ಯಕ್ಕಾಗಿ ಅಧಿಕಾರಕ್ಕಾಗಿ ನಡೆಯುವ ಒಳ ಜಗಳ, ಸಹೋದರರ ನಡುವಿನ ವೈರತ್ವದ ಕಥೆ ಚಿತ್ರದಲ್ಲಿತ್ತು.

ಬಲ್ಲಾಳ ದೇವ ಮಹೇಂದ್ರ ಬಾಹುಬಲಿಯನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ಚಿಕ್ಕಮ್ಮ ಶಿವಗಾಮಿ ಮಗು ಮಹೇಂದ್ರನನ್ನು ರಕ್ಷಿಸುವುದರೊಂದಿಗೆ ಕಥೆ ಶುರುವಾಗುತ್ತದೆ. ಈ ಸನ್ನಿವೇಶದಲ್ಲಿ ಹರಿಯುವ ನದಿ ನೀರಿನಲ್ಲಿ ಶಿವಗಾಮಿ ಮುಳುಗಿ ಮಹೇಂದ್ರನನ್ನು ಎತ್ತಿ ಹಿಡಿಯುವ ಸನ್ನಿವೇಶವೂ ಇದೆ. ಇದರೊಂದಿಗೆ ಸಿನಿಮಾ ಟೈಟಲ್ ರಿವೀಲ್ ಆಗುತ್ತಿದೆ. ಇಡೀ ಸಿನಿಮಾದಲ್ಲಿ ಈ ದೃಶ್ಯ ಹೈಲೆಟ್ ಆಗಿತ್ತು.
ನಟಿ ನಯನತಾರ ಪತಿ ವಿಘ್ನೇಶ್ ತಮ್ಮ ಅವಳಿ ಮಕ್ಕಳನ್ನು ಇದೇ ರೀತಿ ಎತ್ತಿ ಹಿಡಿದಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಫಾದರ್ಸ್ ಡೇ ವಿಶೇಷವಾಗಿ ವಿಕ್ಕಿ ಮಾಡಿರುವ ಪೋಸ್ಟ್ ವೈರಲ್ ಆಗುತ್ತಿದೆ. ಮದುವೆಯಾದ 4 ತಿಂಗಳಿಗೆ ವಿಘ್ನೇಶ್, ನಯನ್ ಸಾರೋಗಸಿ ಪದ್ಧತಿಯಲ್ಲಿ ಅವಳಿ ಗಂಡು ಮಕ್ಕಳ ಪೋಷಕರಾಗಿದ್ದರು. ಮಕ್ಕಳಿಗೆ ಉಯಿರ್ ಹಾಗೂ ಉಳಗ್ ಎಂದು ನಾಮಕರಣ ಮಾಡಿದ್ದಾರೆ.
"ನನ್ನು ಪ್ರೀತಿಯ ಬಾಹುಬಲಿ 1 ಹಾಗೂ 2, ನಿಮ್ಮಿಬ್ಬರಿಂದ ಹ್ಯಾಪಿ ಫಾದರ್ಸ್ ಡೇ. ನಿಮ್ಮಬ್ಬರ ಜೊತೆ ಜೀವನ ಬಹಳ ಸೊಗಸಾಗಿದೆ. ತೃಪ್ತಿದಾಯಕವಾಗಿದೆ. ಲವ್ ಯುವ ನನ್ನ ಉಯಿರ್ ಹಾಗೂ ಉಳಗ್" ಎಂದು ವಿಘ್ನೇಶ್ ಶಿವನ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಈ ಪೋಸ್ಟ್ಗೆ ಲೈಕ್ಸ್ ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಕೆಲವರು ವಿಘ್ನೇಶ್ ಪೋಸ್ಟ್ ಬಗ್ಗೆ ಚಕಾರ ಎತ್ತಿದ್ದಾರೆ. ಆ ಮಕ್ಕಳನ್ನು ಹಿಡಿದು ಏನೆಲ್ಲಾ ಕಾಟ ಕೊಡ್ತೀರಾ? ಎಂದು ಕಾಮೆಂಟ್ ಮಾಡಿದ್ದಾರೆ. ನೀರಿನಲ್ಲಿ ಈ ರೀತಿಯ ಸ್ಟಂಟ್ಸ್ ಬೇಕಿತ್ತಾ? ಎಂದು ಕೆಲವರು ಕೇಳಿದ್ದಾರೆ. ವಿಘ್ನೇಶ್ ಶಿವನ್ ಹಾಗೂ ನಯನತಾರಾ ಪ್ರೀತಿಸಿ ಮದುವೆ ಆಗಿದ್ದರು.
ಈ ಹಿಂದೆ ಸಿಂಬು ಹಾಗೂ ಪ್ರಭುದೇವಾ ಜೊತೆ ನಟಿ ನಯನತಾರಾ ಹೆಸರು ತಳುಕು ಹಾಕಿಕೊಂಡಿತ್ತು. ಮದುವೆ ಕೂಡ ಆಗುತ್ತಾರೆ ಎನ್ನಲಾಗಿತ್ತು. ಆದರೆ ಬಳಿಕ ಬ್ರೇಕ್ ಮಾಡಿಕೊಂಡು ದೂರಾಗಿದ್ದರು. ನಯನತಾರಾ ನಟನೆಯ 'ನಾನುಂ ರೌಡಿತಾನ್' ಚಿತ್ರಕ್ಕೆ ವಿಘ್ನೇಶ್ ಆಕ್ಷನ್ ಕಟ್ ಹೇಳಿದ್ದರು. ಇದೇ ಸಮಯದಲ್ಲಿ ಇಬ್ಬರ ನಡುವಿನ ಪರಿಚಯ, ಸ್ನೇಹದಿಂದ ಪ್ರೀತಿಯಾಗಿ ಬದಲಾಗಿತ್ತು. ಕೆಲ ವರ್ಷಗಳ ಬಳಿಕ ಜೋಡಿ ಮದುವೆಗೆ ಮುಂದಾಗಿದ್ದರು.
ಎರಡು ವರ್ಷಗಳ ಹಿಂದೆ ನಯನತಾರ- ವಿಘ್ನೇಶ್ ಮಹಾಬಲೀಪುರಂನಲ್ಲಿ ಹಸೆಮಣೆ ಏರಿದ್ದರು. ಕೆಲವೇ ಆಪ್ತರು ಈ ಕಲ್ಯಾಣೋತ್ಸವದಲ್ಲಿ ಭಾಗಿ ಆಗಿ ಜೋಡಿಗೆ ಶುಭ ಹಾರೈಸಿದ್ದರು. ಶಾರುಖ್ ಖಾನ್, ರಜನಿಕಾಂತ್ ಕೂಡ ಮದುವೆಗೆ ಹಾಜರಾಗಿದ್ದರು. ಇನ್ನು ಮದುವೆ ಆಗಿ 4 ತಿಂಗಳಿಗೆ ಅವಳಿ ಮಕ್ಕಳ ಪೋಷಕರಾಗಿರುವ ಬಗ್ಗೆ ದಂಪತಿ ಮಾಹಿತಿ ನೀಡಿದ್ದರು. ಈ ವಿಚಾರ ವಿದಾದಕ್ಕೆ ತಿರುಗಿತ್ತು. ಬಳಿಕ ಎಲ್ಲವೂ ತಣ್ಣಗಾಯಿತು.


Click it and Unblock the Notifications











