'ಕಂಗುವ' ಸಿನಿಮಾ ಸೆಟ್ನಲ್ಲಿ ಸೂರ್ಯಾಗೆ ಗಾಯ: ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ನಟ
ತಮಿಳು ಸ್ಟಾರ್ ಸೂರ್ಯ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಕಂಗುವ' ಸೆಟ್ನಲ್ಲಿ ಆಕಸ್ಮಿಕವಾಗಿ ಗಾಯಗೊಂಡಿದ್ದಾರೆ. ಚಿತ್ರೀಕರಣದ ವೇಳೆ ರೋಪ್ ಕ್ಯಾಮೆರಾ ಭುಜದ ಮೇಲೆ ಬಿದ್ದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿತ್ತು. ಇದು ಅವರ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಸದ್ಯ ನಟ ಸೂರ್ಯ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಚೆನ್ನೈನ ಹೊರಗಡೆ ಇರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ಸಿರುತೈ ಶಿವ ನಿರ್ದೇಶನದ 'ಕಂಗುವ' ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಈ ಅವಘಡದ ನಂತರ, ನಟ ಸೂರ್ಯ ಕೆಲವು ದಿನಗಳ ಕಾಲ ಶೂಟಿಂಗ್ನಿಂದ ವಿರಾಮ ತೆಗೆದುಕೊಳ್ಳಲಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನಟನ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸೂರ್ಯ ಆರೋಗ್ಯದ ಮಾಹಿತಿ ಕೇಳುತ್ತಿದ್ದರು.

ಫೀಲಿಂಗ್ ಬೆಟರ್ ಎಂದ ನಟ ಸೂರ್ಯ
ಈ ದುರ್ಘಟನೆಯಿಂದಾಗಿ ಸೂರ್ಯ ಶೂಟಿಂಗ್ ಸೆಟ್ನಲ್ಲಿ ಮೂರ್ಛೆ ಹೋಗಿದ್ದರು ಎಂಬ ಮಾಹಿತಿ ಬಂದಿತ್ತು. ಇದು ಅವರ ಫ್ಯಾನ್ಸ್ಗೆ ಭಾರಿ ಆತಂಕ ತಂದಿತ್ತು. ಇನ್ನು, ಗಾಯ ಚಿಕ್ಕದಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಯಾವುದೇ ಔಪಚಾರಿಕ ದೂರು ಬಂದಿಲ್ಲ ಎಂದು ಪೊಲೀಸರು ಕೂಡ ತಿಳಿಸಿದ್ದಾರೆ.
ಸೂರ್ಯ ಗಾಯಗೊಂಡಿರುವ ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿದಾಗಿನಿಂದ, ಸೂರ್ಯ ಅಭಿಮಾನಿಗಳು ಮತ್ತು ಹಿತೈಷಿಗಳು ನಟನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದರು. ಇದೇ ವೇಳೆ ನಟ ಸೂರ್ಯ ಸ್ವತಃ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಫ್ಯಾನ್ಸ್ ಆತಂಕ ಕೊನೆಗೊಳಿಸಿದ್ದಾರೆ.

"ಆತ್ಮೀಯ ಸ್ನೇಹಿತರೇ, ಹಿತೈಷಿಗಳು ಮತ್ತು ನನ್ನ ಅಭಿಮಾನಿಗಳೇ 'ಶೀಘ್ರವಾಗಿ ಗುಣಮುಖರಾಗಿ' ಎಂಬ ಸಂದೇಶಕ್ಕೆ ಹೃತ್ಪೂರ್ವಕ ಧನ್ಯವಾದಗಳು.. ಈಗ ಆರಾಮಾಗಿದ್ದೇನೆ.... ನಿಮ್ಮೆಲ್ಲರ ಪ್ರೀತಿಗೆ ಯಾವಾಗಲೂ ಕೃತಜ್ಞರಾಗಿರುತ್ತೇನೆ" ಎಂದು ರಾತ್ರಿ ಟ್ವೀಟ್ ಮಾಡಿ ತಮ್ಮ ಅಭಿಮಾನಿಗಳನ್ನು ಸಮಾಧಾನಪಡಿಸಿದ್ದಾರೆ.
ಘಟನೆ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿಯೊಬ್ಬರನ್ನು ಎನ್ಡಿಟಿವಿ ಉಲ್ಲೇಖಿಸಿದೆ. "ನಮಗೆ ಯಾವುದೇ ದೂರು ಬಂದಿಲ್ಲ. ಮಾಧ್ಯಮ ವರದಿಗಳ ನಂತರ ನಾವು ನಿನ್ನೆ ಸೆಟ್ಗೆ ಹೋಗಿದ್ದೆವು. ಎರಡು ದಿನಗಳ ಹಿಂದೆ ಶೂಟಿಂಗ್ ಮುಗಿದಿದೆ ಎಂದು ನಮಗೆ ಅರ್ಥವಾಯಿತು" ಎಂದು ಹೇಳಿದ್ದಾರೆ.
ಕಂಗುವ
ಕಂಗುವ ಚಿತ್ರವನ್ನು ಸಿರುತೈ ಶಿವ ನಿರ್ದೇಶಿಸುತ್ತಿದ್ದಾರೆ. ಹೈ ಬಜೆಟ್ ಸಿನಿಮಾವನ್ನು ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಬ್ಯಾನರ್ಗಳಲ್ಲಿ ನಿರ್ಮಿಸುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 11 ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ಬಹುಕೋಟಿ ವೆಚ್ಚದಲ್ಲಿ 3D, ಐಮ್ಯಾಕ್ಸ್ ಫಾರ್ಮೆಟ್ಗಳಲ್ಲಿ 'ಕಂಗುವ' ಸಿನಿಮಾ ನಿರ್ಮಾಣವಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದ ಸಾಧನೆ ಮಾಡಲು ಚಿತ್ರತಂಡ ಹೊರಟಿದ್ದು, ಕಂಗುವ 38 ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಸೂರ್ಯ 6 ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದು, ದಿಶಾ ಪಟಾನಿ ನಾಯಕಿ. ಇನ್ನುಳಿದಂತೆ ಬಾಬಿ ಡಿಯೋಲ್, ಜಗಪತಿ ಬಾಬು, ಕೋವೈ ಸರಳಾ, ಆನಂದರಾಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕೆ. ಇ ಜ್ಞಾನವೇಲ್ ರಾಜಾ, ವಂಶಿಕೃಷ್ಣ ರೆಡ್ಡಿ, ಪ್ರಮೋದ್ ಉಪ್ಪಲಪಾಟಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ನಟ ಸೂರ್ಯ
ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಸೂರ್ಯ ನಂದಾ, ಕಾಕ ಕಾಖ, ಗಜಿನಿ ಮತ್ತು ಸಿಂಗಂ ಸರಣಿಗಳು ಸೇರಿ ಹಲವು ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಸೂರರೈ ಪೊಟ್ರು ಮತ್ತು ಜೈ ಭೀಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜೈ ಭೀಮ್ ಸಿನಿಮಾದಲ್ಲಿನ ಅವರ ವಕೀಲ ಚಂದ್ರು ಪಾತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ಸಿನಿಮಾಗೆ ಒಂದು ವಿಭಾಗದಲ್ಲಿಯೂ ರಾಷ್ಟ್ರ ಪ್ರಶಸ್ತಿ ಬರದ ಬಗ್ಗೆ ಭಾರಿ ಚರ್ಚೆ ಏರ್ಪಟ್ಟಿತ್ತು.


Click it and Unblock the Notifications











