ಕೇವಲ ಒಂದೇ ವರ್ಷದಲ್ಲಿ ಪತನವಾಗುತ್ತೆ ವಿಜಯ್ ಸಾಮ್ರಾಜ್ಯ ; ವೇಣುಸ್ವಾಮಿ ಸ್ಫೋಟಕ ಭವಿಷ್ಯ
ವೈಜ್ಞಾನಿಕ ಯುಗದಲ್ಲಿದ್ದರೂ ಕೂಡ ಜ್ಯೋತಿಷ್ಯದ ಮೇಲೆ ಹಲವರಿಗೆ ನಂಬಿಕೆ ಇದೆ. ಜ್ಯೋತಿಷ್ಯ ಹೇಳುವುದೆಲ್ಲಾ ಸತ್ಯನಾ? ಎಲ್ಲವನ್ನೂ ಕುಂಡಲಿಯಲ್ಲಿರುವ ಗ್ರಹಗಳೇ ನಿರ್ಧರಿಸುವುದಾದರೆ ವಿಜ್ಞಾನಿಗಳೇಕೆ ? ವಿಜ್ಞಾನವೇಕೆ ? ಎನ್ನುವ ಪ್ರಶ್ನೆ ಎದ್ದರೂ ಕೂಡ ಜ್ಯೋತಿಷ್ಯದ ಸುತ್ತ ಕುತೂಹಲ ಹೆಚ್ಚಾಗಿದೆ.
ಜ್ಯೋತಿಷ್ಯಶಾಸ್ತ್ರವು ವಿಜ್ಞಾನವೇ. ಅದರಲ್ಲಿರುವ ವೈಜ್ಞಾನಿಕ ಅಂಶಗಳನ್ನು ಸಾಕಷ್ಟು ಗ್ರಂಥಗಳಲ್ಲಿ ನೋಡಬಹುದು ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತದೆ. ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ ಸದ್ಯ ವಿಜಯ್ ಸರ್ಕಾರದ ಕುರಿತು ವೇಣು ಸ್ವಾಮಿ ಆಘಾತಕಾರಿ ಭವಿಷ್ಯವನ್ನು ನುಡಿದಿದ್ಧಾರೆ.

ಹೌದು, ವೇಣು ಸ್ವಾಮಿ ಗೊತ್ತಲ್ಲವಾ..? ಪಕ್ಕದ ಮನೆ ಆಂಧ್ರದ ಸ್ಟಾರ್ ಜ್ಯೋತಿಷಿ. ಕಲಾವಿದರಿಂದ ಹಿಡಿದು ರಾಜಕಾರಣಿಗಳವರೆಗೆ ಮುಂದಿನ ಜೀವನ ಹೀಗೀಗೇ ಅಂತ ನಿಖರವಾಗಿ ನಾನು ಹೇಳಬಲ್ಲೆ ಎಂದು ಹೇಳಿಕೊಳ್ಳುವ ವ್ಯಕ್ತಿ. ರಕ್ಷಿತ್ ಶೆಟ್ಟಿ ಅವರಿಂದ ದೂರವಾಗುವಂತೆ ರಶ್ಮಿಕಾಗೆ ಸಲಹೆಯನ್ನೂ ನೀಡಿ ರಶ್ಮಿಕಾ ಅವರ ಗಜಕೇಸರಿ ಯೋಗಕ್ಕೆ ಕಾರಣವಾದವರು ಕೂಡ ಇವರೇ.
ಇಂಥಾ ವೇಣು ಸ್ವಾಮಿ ಸದ್ಯ ತಮಿಳುನಾಡಿನ ರಾಜಕಾರಣದ ಕುರಿತು ಭವಿಷ್ಯ ಹೇಳಿದ್ಧಾರೆ. ವಿಜಯ್ ಪಕ್ಕದಲ್ಲಿ ತ್ರಿಶಾ ಇಲ್ಲದಿದ್ದರೆ ಕಥೆ ಬೇರೆಯೇ ಇರುತ್ತಿತ್ತು ಎಂದಿದ್ಧಾರೆ.
ಈ ಕುರಿತು ವಿಡಿಯೋ ಮೂಲಕ ಮಾಹಿತಿಯನ್ನು ಹಂಚಿಕೊಂಡಿರುವ ವೇಣುಸ್ವಾಮಿ, ವಿಜಯ್ ಪಕ್ಕದಲ್ಲಿ ತ್ರಿಶಾ ಇಲ್ಲದಿದ್ದರೆ ಅವರ ಜಾತಕದ ಫಲವೇ ಬೇರೆಯಾಗಿರುತ್ತಿತ್ತು. ಅವರು ಈ ಮಟ್ಟದ ರಾಜಕೀಯ ಯಶಸ್ಸು ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ವಿಜಯ್ ಮತ್ತು ತ್ರಿಶಾ ಇಬ್ಬರ ಜಾತಕ ಚಕ್ರಗಳ ಗ್ರಹಗತಿಗಳ ಮಿಲನವು ವಿಜಯ್ ಅವರ ರಾಜಕೀಯ ಏಳಿಗೆಗೆ ಪೂರಕವಾಗಿದೆ ಎಂದು ಹೇಳಿರುವ ವೇಣು ಸ್ವಾಮಿ, ತ್ರಿಶಾ ಅವರ ಜಾತಕದ ಪ್ರಭಾವ ವಿಜಯ್ ಅವರ ಅದೃಷ್ಟವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ದಳಪತಿ ವಿಜಯ್ ಈಗ ತಮಿಳುನಾಡಿನ ಅಧಿಪತಿಯಾಗಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ.. ಈ ಸಂಭ್ರಮ.. ಸಡಗರ.. ಕೇವಲ ಒಂದು ವರ್ಷಕ್ಕಷ್ಟೇ ಸೀಮಿತ ಎನ್ನುತ್ತೆ ವೇಣುಸ್ವಾಮಿಯ ಜ್ಯೋತಿಷ್ಯ ಶಾಸ್ತ್ರ.

ಈ ಕುರಿತು ಮಾತನಾಡಿರುವ ವೇಣು ಸ್ವಾಮಿ ವಿಜಯ್ ಸಿಎಂ ಆದರೂ ಸರ್ಕಾರ ಉಳಿಯುವುದು ಕಷ್ಟ ಎಂದು ಹೇಳಿದ್ಧಾರೆ. ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೂ, ಆ ಅಧಿಕಾರ ಅವರಿಗೆ ದೀರ್ಘಕಾಲ ಉಳಿಯುವುದಿಲ್ಲ ಎಂದು ಹೇಳಿರುವ ವೇಣುಸ್ವಾಮಿ, ವಿಜಯ್ ಸಿಎಂ ಆದ ಒಂದು ತಿಂಗಳು, ಆರು ತಿಂಗಳು ಅಥವಾ ಅಬ್ಬಬ್ಬಾ ಅಂದರೆ ಒಂದು ವರ್ಷದೊಳಗೆ ತಮಿಳುನಾಡಿನಲ್ಲಿ ಮತ್ತೆ ಚುನಾವಣೆ ಎದುರಾಗುವ ಸಾಧ್ಯತೆ ಶೇಕಡ 100 ರಷ್ಟಿದೆ ಎಂದು ಹೇಳಿದ್ದಾರೆ.
ಗುರು ಗ್ರಹದ ಬದಲಾವಣೆಯಿಂದಾಗಿ ತಮಿಳುನಾಡಿನಲ್ಲಿ ಸ್ಥಿರ ಸರ್ಕಾರ ರಚನೆಯಾಗುವುದು ಕಷ್ಟ. ರಾಜಕೀಯವಾಗಿ ದೊಡ್ಡ ಮಟ್ಟದ ಏರುಪೇರುಗಳು ಸಂಭವಿಸಲಿವೆ ಎಂದು ಹೇಳಿರುವ ವೇಣುಸ್ವಾಮಿ ಕೇವಲ ತಮಿಳುನಾಡು ಮಾತ್ರವಲ್ಲ ದೇಶದ ಇತರ ರಾಜ್ಯಗಳ ಮೇಲೂ ಗ್ರಹಗತಿಗಳ ಪ್ರಭಾವ ಬೀರಲಿದೆ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲ ಪಶ್ಚಿಮ ಬಂಗಾಳದ ಕುರಿತು ಕೂಡ ಭವಿಷ್ಯ ಹೇಳಿರುವ ವೇಣುಸ್ವಾಮಿ ಅಲ್ಲಿ ಪರಿಸ್ಥಿತಿ ಕೈಮೀರಿ ಹೋಗಲಿದ್ದು, ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆಗಳಿವೆ ಎಂದಿದ್ದಾರೆ. ಗ್ರಹಗಳ ಬದಲಾವಣೆಯಿಂದಾಗಿ ದೇಶದ ಹಲವು ರಾಜ್ಯಗಳಲ್ಲಿ ಊಹಿಸಲೂ ಸಾಧ್ಯವಾಗದಂತಹ ರಾಜಕೀಯ ಬಿಕ್ಕಟ್ಟುಗಳು ತಲೆದೂರಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಸದ್ಯ ವೇಣು ಸ್ವಾಮಿಯ ಈ ಭವಿಷ್ಯ ವಿಜಯ್ ಅಭಿಮಾನಿಗಳನ್ನು ಕೆರಳಿಸಿದೆ. ರಾಜಕೀಯ ವಲಯದಲ್ಲಿ ತೀವೃ ಚರ್ಚೆಗೆ ಗ್ರಾಸವಾಗಿದೆ.
ಅಂದ್ಹಾಗೇ ಈ ವ್ಯಕ್ತಿ ಹೇಳಿದ್ದೆಲ್ಲವೂ ನಡೆದಿದೆ ಅಂತಲ್ಲ. ಯಾಕೆಂದರೆ ತಮ್ಮ ಭವಿಷ್ಯ ಯಾವತ್ತು ಸುಳ್ಳಾಗಲ್ಲ ಎಂದು ವೇಣು ಸ್ವಾಮಿ ಹೇಳಿಕೊಂಡರು, ಜಗನ್ ವಿಚಾರದಲ್ಲಿ ಈ ವ್ಯಕ್ತಿ ನುಡಿದಿದ್ದ ಭವಿಷ್ಯ ಸುಳ್ಳಾಗಿತ್ತು.
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ಸಿಪಿ ಪಕ್ಷದ ಜಗನ್ ಮೋಹನ್ ರೆಡ್ಡಿ ಗೆದ್ದೇ ಗೆಲ್ಲುತ್ತಾರೆ, ಮತ್ತೆ ಸಿಎಂ ಆಗುತ್ತಾರೆ ಎಂದು ಭಾರಿ ಭರವಸೆಯ ಮಾತುಗಳನ್ನಾಡಿದ್ದರು ವೇಣು. ಆದರೆ ಅದು ನಿಜವಾಗಲಿಲ್ಲ. ಹೀಗಾಗಿ ವಿಜಯ್ ವಿಷಯದಲ್ಲಿ ನುಡಿದ ಈ ಭವಿಷ್ಯ ನಿಜವಾಗುತ್ತಾ,..? ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications