17 ವರ್ಷಗಳ ಹಿಂದಿನ ಸ್ನೇಹ ಮರೆಯದ ರಿಷಬ್; ಕರೆದು 'ಕಾಂತಾರ- 1' ಚಿತ್ರದಲ್ಲಿ ಅವಕಾಶ
ರಿಷಬ್ ಶೆಟ್ಟಿ ಸಾರಥ್ಯದ 'ಕಾಂತಾರ- 1' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಎರಡು ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಬಹುತೇಕ ಕನ್ನಡ ಕಲಾವಿದರು, ತಂತ್ರಜ್ಞರನ್ನು ಬಳಸಿಕೊಂಡು ಒಂದು ಅದ್ಭುತ ಚಿತ್ರವನ್ನು ರಿಷಬ್ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ. 17 ವರ್ಷಗಳ ಹಿಂದಿನ ಸ್ನೇಹ ಮರೆಯದೇ ನಟ ಸಂಪತ್ ರಾಮ್ ಅವರಿಗೆ ಅವಕಾಶ ಕೊಟ್ಟಿದ್ದಾರೆ.
ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರನ್ನು ಬಳಸಿಕೊಳ್ಳುತ್ತಾರೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಕಲಾವಿದರನ್ನು ಬಳಸಿಕೊಂಡರೆ ಆಯಾ ರಾಜ್ಯದಲ್ಲಿ ಪ್ರಚಾರಕ್ಕೆ ಸುಲಭವಾಗುತ್ತದೆ ಎನ್ನುವ ಲೆಕ್ಕಾಚಾರ ಇರುತ್ತದೆ. 'ಕೂಲಿ' ಚಿತ್ರದಲ್ಲಿ ಆಮೀರ್ ಖಾನ್, ನಾಗಾರ್ಜುನ, ಉಪೇಂದ್ರ, ರಚಿತಾ ರಾಮ್, ಸೌಬಿನ್ ಸಾಹಿರ್ ಆಯ್ಕೆ ಇದೇ ರೀತಿ ಮಾಡಿದಂತೆ ಕಾಣುತ್ತಿತ್ತು.

'ಕಾಂತಾರ' ಚಿತ್ರದಲ್ಲಿ ನಟಿಸಿದ ಕೆಲ ಕಲಾವಿದರು ಪ್ರೀಕ್ವೆಲ್ನಲ್ಲಿ ಕೂಡ ನಟಿಸಿದ್ದಾರೆ. ಇನ್ನುಳಿದಂತೆ ಗುಲ್ಶನ್ ದೇವಯ್ಯ ಹಾಗೂ ಮಲಯಾಳಂ ನಟ ಜಯರಾಂ ಬಿಟ್ಟರೆ ಇನ್ನುಳಿದವರೆಲ್ಲಾ ಕನ್ನಡ ಕಲಾವಿದರೇ ಚಿತ್ರದಲ್ಲಿ ನಟಿಸಿದ್ದಾರೆ. ಗುಲ್ಶನ್ ದೇವಯ್ಯ ಬೆಂಗಳೂರಿನವರೇ. ಇನ್ನು ಕರಾವಳಿ ಹಾಗೂ ಕೇರಳ ಮೂಲದ ಸಾವಿರಾರು ಸಹ ಕಲಾವಿದರನ್ನು ರಿಷಬ್ ಶೆಟ್ಟಿ ಚಿತ್ರಕ್ಕಾಗಿ ಬಳಸಿಕೊಂಡಿದ್ದಾರೆ. ಚಿತ್ರದಲ್ಲಿ ಕಡಪ ದಿಕ್ಕಿನ ಗಿರಿಜನರ ಆರ್ಭಟ ಜೋರಾಗಿದೆ. ಮುಖಕ್ಕೆ ಮಸಿ ಮೆಚ್ಚಿಕೊಂಡು ಬಹಳ ಕ್ರೂರವಾಗಿ ಕಾಣುವ ಈ ಪಾತ್ರಗಳು ಕಥೆಗೆ ಟ್ವಿಸ್ಟ್ ಕೊಡುತ್ತದೆ.
ಕಡಪ ಬುಡಕಟ್ಟಿನ ನಾಯಕನ ಪಾತ್ರದಲ್ಲಿ ತಮಿಳು ನಟ ಸಂಪತ್ ರಾಜ್ ನಟಿಸಿದ್ದಾರೆ. ಭಯಂಕರ ಲುಕ್ನಲ್ಲಿ ಹುಬ್ಬೇರಿಸಿದ್ದಾರೆ. ಈ ಹಿಂದೆ ಕೂಡ ಕೆಲ ಕನ್ನಡ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಎ ಎಂ ಆರ್ ರಮೇಶ್ ನಿರ್ದೇಶನದ 'ಸೈನೆಡ್' ಚಿತ್ರದಲ್ಲಿ ಒಂದು ಮುಖ್ಯವಾದ ಪಾತ್ರದಲ್ಲಿ ಸಂಪತ್ ಬಣ್ಣ ಹಚ್ಚಿದ್ದರು. ಅದೇ ಚಿತ್ರದಲ್ಲಿ ಮೊದಲ ಬಾರಿಗೆ ರಿಷಬ್ ಶೆಟ್ಟಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅಂದಿನಿಂದ ರಿಷಬ್ ಹಾಗೂ ಸಂಪತ್ ನಡುವೆ ಆತ್ಮೀಯ ಒಡನಾಟವಿದೆ.

ಬಳಿಕ ಎ ಎಂ ಆರ್ ರಮೇಶ್ ನಿರ್ದೇಶನದ 'ಅಟ್ಟಹಾಸ' ಚಿತ್ರದಲ್ಲಿ ಕೂಡ ರಿಷಬ್ ಶೆಟ್ಟಿ ಸಸ ನಿರ್ದೇಶಕನಾಗಿದ್ದರು. ಆ ಚಿತ್ರದಲ್ಲಿ ಸೇತುಗುಳಿ ಗೋವಿಂದನಾಗಿ ಪ್ರಮುಖ ಪಾತ್ರದಲ್ಲಿ ಸಂಪತ್ ರಾಮ್ ನಟಿಸಿದ್ದರು. ರಿಷಬ್, ಸಂಪತ್ ಒಡನಾಟ ಮುಂದುವರೆದಿತ್ತು. 'ಬೆಲ್ಬಾಟಂ' ಚಿತ್ರ ತಮಿಳಿಗೆ ರಿಮೇಕ್ ಆಗಿದ್ದಾಗ ಸಂಪತ್ ಒಂದು ಪಾತ್ರ ಮಾಡಿದ್ದರು. 'ಕಾಂತಾರ- 1' ಚಿತ್ರದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ ಎಂದು TAKE 1 ತಮಿಳು ಯೂಟ್ಯೂಬ್ ಸಂದರ್ಶನದಲ್ಲಿ ಸಂಪತ್ ರಾಮ್ ನೆನಪಿಸಿಕೊಂಡಿದ್ದಾರೆ.
ಸೈನೆಡ್ ಹಾಗೂ ಅಟ್ಟಹಾಸ ಚಿತ್ರಗಳಲ್ಲಿ ರಿಷಬ್ ಶೆಟ್ಟಿ ಅವರನ್ನು ಸಹ ನಿರ್ದೇಶಕನಾಗಿ ನೋಡಿದ್ದೆ. ಸೈನೆಡ್ ಚಿತ್ರದಲ್ಲಿ ಸುರೇಶ್ ಮಾಸ್ಟರ್ ಎಂಬ ಪಾತ್ರ ಮಾಡಿದ್ದೆ. ಹಾಗಾಗಿ ಅಂದಿನಿಂದ ರಿಷಬ್ ನನ್ನನ್ನು ಮಾಸ್ಟರ್..ಮಾಸ್ಟರ್ ಎಂದೇ ಕರೆಯುತ್ತಾರೆ. ಇವತ್ತಿಗೂ ಅದೇ ವಿನಮ್ರತೆಯಿಂದ ಮಾಸ್ಟರ್ ಎಂದೇ ಮಾತನಾಡಿಸುತ್ತಾರೆ. ರಿಷಬ್ ಶೆಟ್ಟಿ 'ಬೆಲ್ಬಾಟಂ' ಚಿತ್ರದಲ್ಲಿ ಹೀರೊ ಆದಾಗ ಖುಷಿಯಾಗಿ ಫೋನ್ ಮಾಡಿ ಅಭಿನಂದನೆ ತಿಳಿಸಿದ್ದೆ. ಬಳಿಕ ಆಗೊಮ್ಮೆ ಈಗೊಮ್ಮೆ ಫೋನ್ನಲ್ಲಿ ಮಾತನಾಡುತ್ತಿದ್ದೆವು. ಮೆಸೇಜ್ ಮಾಡುತ್ತಿದ್ದೆ. "ಕಾಂತಾರ- 1' ಫಸ್ಟ್ ಲುಕ್ ನೋಡಿ ನನಗೂ ನಿಮ್ಮ ಚಿತ್ರದಲ್ಲಿ ಅವಕಾಶ ಕೊಡಿ ಎಂದು ಮೆಸೇಜ್ ಮಾಡಿದ್ದೆ. ಎರಡೇ ವಾರದಲ್ಲಿ ಫೋನ್ ಮಾಡಿ ನಮ್ಮ ಚಿತ್ರದಲ್ಲಿ ನೀವು ಕೆಲಸ ಮಾಡುತ್ತಿದ್ದೀರಾ ಅಂದ್ರು" ಎಂದು ಸಂಪತ್ ನೆನಪಿಸಿಕೊಂಡಿದ್ದಾರೆ.
ಬಳಿಕ ಮ್ಯಾನೇಜರ್ ಫೋನ್ ಮಾಡಿ ಆಡಿಷನ್ಗೆ ಬನ್ನಿ ಅಂದ್ರು. ನಾನು ಮಂಗಳೂರಿಗೆ ಹೋಗಿ ಅಲ್ಲಿಂದ ಕುಂದಾಪುರಕ್ಕೆ ಹೋಗಿ ಆಡಿಷನ್ ಕೊಟ್ಟೆ. ಆದರೆ ಕನ್ನಡದಲ್ಲಿ ಡೈಲಾಗ್ ಹೇಳಲು ಕಷ್ಟವಾಯಿತು. ಪ್ರಾಂಪ್ಟ್ ಬೇಕು ಅಂದೆ. ಇಲ್ಲ ಮಾಸ್ಟರ್ ಇದು, ಲೈವ್ ಆಗಿ ಮಾಡೋದು, ಕಷ್ಟ ಅಂದ್ರು. ಸರಿ ಅಂತ ವಾಪಸ್ ಬಂದೆ. ಅವಕಾಶ ಸಿಗಲ್ಲ ಎಂದುಕೊಂಡಿದ್ದೆ. 3 ವಾರಗಳ ಬಳಿಕ ಬೇರೊಂದು ಪಾತ್ರಕ್ಕೆ ಲುಕ್ ಟೆಸ್ಟ್ ಕೊಡುವಂತೆ ಕರೆದರು. ಹೋಗಿದ್ದೆ, ಆಗ ಈ ಬುಡಕಟ್ಟು ನಾಯಕನ ಮೇಕಪ್ ಹಾಕಿಸಿದರು. ಒಂದೂವರೆ ಗಂಟೆ ಮೇಕಪ್, ಮುಖ ಕಾಣದಂತೆ ವಿಚಿತ್ರವಾದ ಲುಕ್ ಅದು" ಎಂದು ಸಂಪತ್ ರಾಮ್ ವಿವರಿಸಿದ್ದಾರೆ.
ಒಂದು ವರ್ಷದಲ್ಲಿ 25 ದಿನ 'ಕಾಂತಾರ- 1' ಚಿತ್ರದಲ್ಲಿ ಕೆಲಸ ಮಾಡಿದ್ದೀನಿ. ಅದಕ್ಕಾಗಿ 10 ಬಾರಿ ಕುಂದಾಪುರಕ್ಕೆ ಹೋಗಿ ಬಂದಿದ್ದೀನಿ. "ಇಷ್ಟು ದೊಡ್ಡ ಚಿತ್ರದಲ್ಲಿ ನನಗೂ ಒಂದು ಅವಕಾಶ ಸಿಕ್ಕಿದ್ದು ಅದೃಷ್ಟ. ಆ ಪಾತ್ರ ಬೇರೆ ಯಾರಿಗಾದರೂ ಕೊಡಬಹುದಿತ್ತು. ಆದರೆ ಹಳೆಯ ಸ್ನೇಹ ಮರೆಯದೇ ನನಗೆ ಕೊಟ್ರು. ಚಿತ್ರೀಕರಣದ ಸಮಯದಲ್ಲಿ ಕೂಡ ಬಹಳ ಆತ್ಮೀಯವಾಗಿ ಇರುತ್ತಿದ್ದರು. ಚೆನ್ನೈಗೆ ಬಂದಾಗ ನಮ್ಮ ಮನೆಗೂ ಬಂದಿದ್ದರು. ನಮ್ಮ ಮನೆಗೆ ಬಂದು ನಮ್ಮ ಮಡದಿ ಮಾಡಿದ್ದ ಚಪಾತಿ, ಟೊಮೊಟೊ ಗೊಜ್ಜು ತಿಂದಿದ್ದನ್ನು ಅವ್ರ ಪತ್ನಿ ಪ್ರಗತಿ ಬಳಿ ಹೇಳುತ್ತಿದ್ದರು. ಅದನ್ನೆಲ್ಲಾ ಮರೆಯೋಕೆ ಸಾಧ್ಯವಿಲ್ಲ" ಎಂದು ಸಂಪತ್ ರಾಮ್ ಮೆಲುಕು ಹಾಕಿದ್ದಾರೆ.


Click it and Unblock the Notifications











