TVK Vijay Oath Ceremony; ದಶಕದ ಹಿಂದೆ ಅವಮಾನ ಆಗಿದ್ದ ಅದೇ ಜಾಗದಲ್ಲಿ ವಿಜಯ್ ಪಟ್ಟಾಭಿಷೇಕ!
ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ತಮಿಳುನಾಡಿ ಸರ್ಕಾರ ರಚನೆ ಮಾಡುವುದು ಖಚಿತವಾಗಿದೆ. ದಳಪತಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವುದಕ್ಕೆ ಸಮಯ, ಸ್ಥಳ ನಿಗದಿಯಾಗಿದೆ. ಇದು ಸಹಜವಾಗಿಯೇ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. 234 ಕ್ಷೇತ್ರಗಳ ಪೈಕಿ 108 ಕ್ಷೇತ್ರಗಳಲ್ಲಿ ಟಿವಿಕೆ ಪಕ್ಷ ಗೆಲುವು ಸಾಧಿಸಿತ್ತು. ಆದರೂ ಮ್ಯಾಜಿಕ್ ನಂಬರ್ 118 ಇಲ್ಲದೇ ಸರ್ಕಾರ ರಚನೆ ವಿಚಾರ ಗೊಂದಲ ಮೂಡಿಸಿತ್ತು.
ಟಿವಿಕೆ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಎಂದು ಡಿಎಂಕೆ ಹಾಗೂ ಎಡಿಎಂಕೆ ಪಕ್ಷದ ನಾಯಕರು ಬಯಸಿದ್ದರು. ವೈರತ್ವ ಮರೆತು ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುತ್ತಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಆದರೆ ಅಂತಿಮವಾಗಿ ವಿಜಯ್ ಹಾದಿ ಸುಗಮವಾಗಿದೆ. ಕಾಂಗ್ರೆಸ್ ಸೇರಿ ಇತರೆ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚನೆಗೆ ಅವಕಾಶ ಪಡೆದಿದ್ದಾರೆ. ಈಗಾಗಲೇ ರಾಜ್ಯಪಾಲರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಎರಡು ದಿನಗಳಿಂದ ವಿಜಯ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿತ್ತು. ಆದರೆ ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್ ಸರ್ಕಾರ ರಚನೆಗೆ ಟಿವಿಕೆ ಪಕ್ಷಕ್ಕೆ ಆಹ್ವಾನ ನೀಡದೇ ಇದ್ದಿದ್ದು ಚರ್ಚೆ ಹುಟ್ಟಾಕ್ಕಿತ್ತು. ಎರಡು ಬಾರಿ ವಿಜಯ್ ಹೋಗಿ ರಾಜ್ಯಪಾಲರನ್ನು ಭೇಟಿ ಮಾಡಿ ಬಂದರೂ ಪ್ರಯೋಜನವಾಗಿರಲಿಲ್ಲ. 118 ಶಾಸಕರ ಬೆಂಬಲದೊಂದಿಗೆ 3ನೇ ಬಾರಿ ಭೇಟಿ ಬಳಿಕ ಸರ್ಕಾರ ರಚನೆಗೆ ಆಹ್ವಾನ ಸಿಕ್ಕಿದೆ.
ಚೆನ್ನೈ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಇಂದು(ಮೇ 10) ಬೆಳಗ್ಗೆ 10ಗಂಟೆಗೆ ವಿಜಯ್ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. 12 ವರ್ಷಗಳ ಹಿಂದೆ ಇದೇ ಸ್ಟೇಡಿಯಂನಲ್ಲಿ ನಟ ವಿಜಯ್ ಅವರಿಗೆ ಅವಮಾನ ಆಗಿತ್ತು, ಈಗ ಅಲ್ಲೇ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ, ಇದಲ್ಲವೇ ಸಾಧನೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಅಂದು ವೇದಿಕೆ ಮುಂಭಾಗದಲ್ಲಿ ಹಿಂದಿನ ಸಾಲಿನಲ್ಲಿ ದಳಪತಿ ಕೂರುವಂತಾಗಿತ್ತು. ಈಗ ರಾಜ್ಯದ ಮುಖ್ಯಮಂತ್ರಿಯಾಗಿ ಅದೇ ವೇದಿಕೆ ಮೇಲೆ ಪಟ್ಟಾಭಿಷೇಕ ನಡೆಯುತ್ತಿದೆ ಎಂದು ಚರ್ಚೆ ಆರಂಭಿಸಿದ್ದಾರೆ.

ಭಾರತೀಯ ಚಿತ್ರರಂಗ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮಿಳುನಾಡಿನ ಅಂದಿನ ಸಿಎಂ ಜಯಲಲಿತಾ ನೇತೃತ್ವದಲ್ಲಿ 4 ದಿನಗಳ ಕಾಲ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಚೆನ್ನೈನ ಇದೇ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ತಮಿಳು ಚಿತ್ರರಂಗದ ದಿಗ್ಗಜರಿಗೆ ಸನ್ಮಾನ ಮಾಡಿ ಗೌರವಿಸಲಾಗಿತ್ತು. ಕಲಾವಿದರೆಲ್ಲಾ ಡ್ಯಾನ್ಸ್, ಕಾಮಿಡಿ ಸ್ಕಿಟ್ ಮಾಡಿ ಕಾರ್ಯಕ್ರಮ ರಂಗೇರಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಒಂದು ದಿನ ವಿಜಯ್ ಬಂದು ಹಿಂದಿನ ಸಾಲಿನಲ್ಲಿ ಕೂತಿದ್ದರು.
ಕೊನೆ ಕ್ಷಣದಲ್ಲಿ ನಟ ವಿಜಯ್ಗೆ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿತ್ತು. ಆದರೂ ಅವರು ಹಾಜರಾಗಿದ್ದರು. ಆದರೆ ವೇದಿಕೆಯ ಮುಂಭಾಗದ ಸಾಲಿನಲ್ಲಿ ಅವರಿಗೆ ಸೀಟ್ ಕಾಯ್ದಿರಿಸಿರಲಿಲ್ಲ. ಹಾಗಾಗಿ ಹಿಂದಿನ ಸಾಲಿನಲ್ಲಿ ಹೋಗಿ ಕೂತಿದ್ದರು. ನಟ ಚಿಯಾನ್ ವಿಕ್ರಂ ಹಾಗೂ ರಜನಿಕಾಂತ್ ಮಗಳು ಸೌಂದರ್ಯ ಕೆಲವೊತ್ತು ವಿಜಯ್ ಪಕ್ಕ ಹೋಗಿ ಕೂತು ಮಾತನಾಡಿಸಿದ್ದರು. ವಿಕ್ರಂ ಮುಂದೆ ಬಂದು ಕೂರಲು ಹೇಳಿದ್ರು, ವಿಜಯ್ ಬರಲಿಲ್ಲ ಎಂದು ಕೆಲವರು ಹೇಳ್ತಾರೆ. ಅಂದು ವಿಜಯ್ ಅವರಿಗೆ ಬೇಕೆಂದೆ ಅವಮಾನ ಮಾಡಿದ್ದರು ಎನ್ನುವುದು ಕೆಲ ಅಭಿಮಾನಿಗಳ ವಾದ. ಆದರೆ ವಾಸ್ತವಕ್ಕೆ ಅಂದು ಅಲ್ಲಿ ಏನು ನಡೆದಿತ್ತು ಎನ್ನುವುದು ಗೊತ್ತಿಲ್ಲ.
ಸದ್ಯ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ಪ್ರಮಾಣವಚನ ಸ್ವೀಕರಿಸುತ್ತಾರೆ ಎನ್ನುತ್ತಿದ್ದಂತೆ ಕೆಲವರು ಆ ಘಟನೆ ನೆನಪಿಸಿಕೊಳ್ಳುತ್ತಿದ್ದಾರೆ. ಆ ವೀಡಿಯೋವನ್ನು ಹುಡುಕಿ ನೋಡುತ್ತಿದ್ದಾರೆ. ಅಂದು ಆಗಿದ್ದ ಅವಮಾನಕ್ಕೆ ಪ್ರತಿಯಾಗಿ ವಿಜಯ್ ಸ್ವಂತ ಪಕ್ಷ ಕಟ್ಟಿ ರಾಜಕೀಯಕ್ಕೆ ಬಂದು ಗೆದ್ದು ತೋರಿಸಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications