ಅಂದು ಎಂಜಿಆರ್.. ಬಳಿಕ ಎನ್ಟಿಆರ್; ಈಗ ದಳಪತಿ ವಿಜಯ್
ತಮಿಳುನಾಡಿನಲ್ಲಿ ತಮಿಳಗ ವೆಟ್ರಿ ಕಳಗಂ ಪರ್ವ ಶುರುವಾಗುತ್ತಿದೆ. ಚಿತ್ರನಟ ವಿಜಯ್ ಹೊಸ ಪಕ್ಷ ಕಟ್ಟಿ ಮೊದಲ ಚುನಾವಣೆಯಲ್ಲೇ ಕ್ರಾಂತಿ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಪಕ್ಷ ಭಾರೀ ಮುನ್ನಡೆ ಸಾಧಿಸಿದ್ದು ಬಹುಮತ ಪಡೆದು ಸರ್ಕಾರ ರಚಿಸುವ ಸುಳಿವು ಸಿಕ್ಕಿತ್ತು. ಆದರೆ ಅಂತಿಮವಾಗಿ 108 ಕ್ಷೇತ್ರಗಳಲ್ಲಿ ಮಾತ್ರ ಹೊಸ ಪಕ್ಷ ಗೆದ್ದಿದೆ. ಮುಂದೆ ಹೇಗೆ ಸರ್ಕಾರ ರಚಿಸುತ್ತಾರೆ ಕಾದು ನೋಡಬೇಕಿದೆ. ಆಡಳಿತರೂಢ ಡಿಎಂಕೆ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆ.
ಸಿನಿಮಾಗಳಲ್ಲಿ ನಟಿಸುವವರು ರಾಜಕೀಯಕ್ಕೆ ಬಂದು ಏನು ಮಾಡ್ತಾರೆ ಎಂದು ಎನ್ನುವ ಅಪವಾದವನ್ನು ಅಳಿಸಿ ಹಾಕಲು ವಿಜಯ್ ಮುಂದಾಗಿದ್ದಾರೆ. ಅವನೊಬ್ಬ ನಟ ಎಂದು ಎದುರಾಳಿ ಪಕ್ಷಗಳು ವ್ಯಂಗ್ಯವಾಡುತ್ತಿದ್ದವು. ಹೌದು ಕಣ್ರೀ ನಾನು ನಟ.. ಸಿನಿಮಾಗಳಲ್ಲಿ ನಟಿಸುತ್ತೇನೆ.. ನಿಮ್ಮ ರೀತಿ ನಿಜ ಜೀವನದಲ್ಲಿ ನಟಿಸುವುದಿಲ್ಲ ಎಂದು ವಿಜಯ್ ತಿರುಗೇಟು ನೀಡಿದ್ದರು. ಒಟ್ಟಾರೆ ಪಕ್ಷ ಸ್ಥಾಪಿಸಿ ಮೊದಲ ಪ್ರಯತ್ನದಲ್ಲೇ ದಳಪತಿ ಗೆಲುವಿನ ನಗೆ ಬೀರಿದ್ದಾರೆ. ಇದು ವಿಜಯ್ ಗೆಲುವು ಎನ್ನುವುದಕ್ಕಿಂತ ಆಡಳಿತ ವಿರೋಧಿ ಅಲೆ ಎಂದರೆ ತಪ್ಪಾಗಲ್ಲ.

ಹೊಸ ಪಕ್ಷ ಸ್ಥಾಪಿಸಿ ಗೆದ್ದು ಸರ್ಕಾರ ರಚಿಸುವುದು ತಮಾಷೆಯ ಮಾತಲ್ಲ. ಬಹುತೇಕ ಕಡೆಗಳಲ್ಲಿ ಹೊಸಬರಿಗೆ ವಿಜಯ್ ಟಿಕೆಟ್ ನೀಡಿ ಕಣಕ್ಕಿಳಿಸಿದ್ದರು. ನೀವು ಟಿವಿಕೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ರೆ ನನಗೆ ಮತ ಹಾಕಿದಂತೆ ಎಂದು ವಿಜಯ್ ಪ್ರಚಾರ ಮಾಡಿದ್ದರು. ರ್ಯಾಲಿ, ಸಮಾವೇಶಗಳನ್ನು ನಡೆಸಿ ಗಮನ ಸೆಳೆದಿದ್ದರು. ಡಿಎಂಕೆ ಪಕ್ಷದ ವಿರುದ್ಧ ಕೆಂಡ ಕಾರಿದ್ದರು. ಅಭಿಮಾನವನ್ನು ಮತಗಳಾಗಿ ಪರಿವರ್ತನೆ ಮಾಡುವುದು ಕಷ್ಟ ಎಂದು ಕೆಲವರು ಭಾವಿಸಿದ್ದರು. ಆದರೆ ಆ ಮಾತನ್ನು ವಿಜಯ್ ಸುಳ್ಳಾಗಿದ್ದಾರೆ. ಈ ಹಿಂದೆ ತಮಿಳುನಾಡಿನಲ್ಲೇ ನಟ ಎಂಜಿಆರ್ ಹಾಗೂ ಆಂಧ್ರದಲ್ಲಿ ಎನ್ಟಿಆರ್ ಸ್ವಂತ ಪಕ್ಷ ಕಟ್ಟಿ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದ್ದರು. ಅದೇ ಹಾದಿಯಲ್ಲಿ ದಳಪತಿ ದಾಪುಗಾಲು ಇಟ್ಟಿದ್ದಾರೆ.
1972ರಲ್ಲಿ ಡಿಎಂಕೆಯಿಂದ ಹೊರಬಂದಿದ್ದ ಎಂಜಿಆರ್ ಎಐಎಡಿಎಂಕೆ ಪಕ್ಷ ಸ್ಥಾಪಿಸಿದ್ದರು. 1977ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 130 ಕ್ಷೇತ್ರಗಳನ್ನು ಗೆದ್ದು ಅಧಿಕಾರಕ್ಕೇರಿದ್ದರು. ಹೊಸ ಇತಿಹಾಸ ನಿರ್ಮಿಸಿದ್ದರು. ಬಳಿಕ 10 ವರ್ಷಗಳ ಕಾಲ ಅಂದ್ರೆ ತಮ್ಮ ನಿಧನದವರೆಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಎಂಜಿಆರ್ ಸೇವೆ ಸಲ್ಲಿಸಿದ್ದರು. ಎನ್ಟಿಆರ್ ಹಾಗೂ ಎಂಜಿಆರ್ ಸ್ಪಷ್ಟ ಬಹುಮತ ಸಾಧಿಸಿ ಸರ್ಕಾರ ರಚಿಸಿದ್ದರು. ಆದರೆ ಟಿವಿಕೆ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಕ್ಕಿಲ್ಲ. ಆದರೂ ಮೊದಲ ಪ್ರಯತ್ನದಲ್ಲಿ ಈ ಸಾಧನೆ ಮರೆಯುವಂತಿಲ್ಲ.

1983ರಲ್ಲಿ ಟಿಡಿಪಿ ಪಕ್ಷ ಸ್ಥಾಪಿಸಿ ತೆಲುಗು ನಟ ಎನ್ಟಿಆರ್ ಆಂಧ್ರದಲ್ಲಿ ಸಂಚಲನ ಸೃಷ್ಟಿಸಿದ್ದರು. ಕೇವಲ 9 ತಿಂಗಳಲ್ಲಿ ಪಕ್ಷ ಸಂಘಟನೆ ಮಾಡಿ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. 294 ಸ್ಥಾನಗಳ ಪೈಕಿ ಮೊದಲ ಚುನಾವಣೆಯಲ್ಲೇ 201 ಸ್ಥಾನಗಳನ್ನು ಟಿಡಿಪಿ ಪಕ್ಷ ಗೆದ್ದಿತ್ತು. ಆಂಧ್ರದ 10ನೇ ಮುಖ್ಯಮಂತ್ರಿಯಾಗಿ ಎನ್ಟಿಆರ್ ಪ್ರಮಾಣವಚನ ಸ್ವೀಕರಿಸಿದ್ದರು. ತಮ್ಮ ಜನಪರ ಯೋಜನೆಗಳ ಮೂಲಕ ಆಂಧ್ರದ ಜನತೆ ಮನಗೆದ್ದಿದ್ದರು.
ದಕ್ಷಿಣ ಭಾರತದಲ್ಲಿ ಸಿನಿಮಾ ಕಲಾವಿದರು ರಾಜಕೀಯರಂಗದಲ್ಲಿ ಗುರ್ತಿಸಿಕೊಳ್ಳುವುದು, ಚುನಾವಣೆಗೆ ಸ್ಪರ್ಧಿಸುವುದು, ಹೊಸ ಪಕ್ಷ ಕಟ್ಟುವುದು ಹೊಸದೇನು ಅಲ್ಲ. ಆಂಧ್ರದಲ್ಲಿ ನಟ ಚಿರಂಜೀವಿ ಕೂಡ ಹೊಸ ಪಕ್ಷ ಕಟ್ಟಿ ಮುಖ್ಯಮಂತ್ರಿ ಆಗುವ ಕನಸು ಕಂಡಿದ್ದರು. 2008ರಲ್ಲಿ ಪ್ರಜಾರಾಜ್ಯಂ ಎಂಬ ಪಕ್ಷ ಸ್ಥಾಪಿಸಿ ಚಿರು ಚುನಾವಣೆ ಅಖಾಡಕ್ಕೆ ಧುಮುಕಿದ್ದರು. ಆದರೆ 294 ಕ್ಷೇತ್ರಗಳ ಪೈಕಿ ಕೇವಲ 18 ಕ್ಷೇತ್ರಗಳಲ್ಲಿ ಮಾತ್ರ ಚಿರಂಜೀವಿ ನೇತೃತ್ವದ ಪಕ್ಷ ಗೆದ್ದಿತ್ತು. ಪಾಲಕೊಲ್ಲು ಹಾಗೂ ತಿರುಪತಿ ಕ್ಷೇತ್ರಗಳಲ್ಲಿ ಸ್ವತಃ ಮೆಗಾಸ್ಟಾರ್ ಸ್ಪರ್ಧಿಸಿದ್ದರು. ತಿರುಪತಿ ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದರು. 2011ರಲ್ಲಿ ತಮ್ಮ ಪಕ್ಷವನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಿದ್ದರು.
ಚಿರಂಜೀವಿ ಸೋತ ಬಳಿಕ ಸಹೋದರ ಪವನ್ ಕಲ್ಯಾಣ್ ಜನಸೇನಾ ಪಕ್ಷ ಸ್ಥಾಪಿಸಿದ್ದರು. 2013ರಲ್ಲಿ ಪಕ್ಷ ಚುನಾವಣೆಗೆ ಸ್ಪರ್ಧಿಸಲಿಲ್ಲ. 2019ರ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತಿತ್ತು. ಸ್ವತಃ ಪವನ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಮುಖಭಂಗ ಅನುಭವಿಸಿದ್ದರು. 175 ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರವನ್ನು ಜನಸೇನಾ ಪಕ್ಷ ಗೆದ್ದುಕೊಂಡಿತ್ತು. 2024ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಪವರ್ ಸ್ಟಾರ್ ಗೆದ್ದರು. ಆಂಧ್ರದ ಡಿಸಿಎಂ ಕೂಡ ಆಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ.


Click it and Unblock the Notifications