ಕರೂರು ಕಾಲ್ತುಳಿತ ; ನನಗೆ ಏನು ಬೇಕಾದರೂ ಮಾಡಿ- ಸ್ಟಾಲಿನ್ಗೆ ವಿಜಯ್ ಸವಾಲು
ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಮೇಲೆ ಅಭಿಮಾನ ಇರಬೇಕು. ಆದರೆ ಅತಿಯಾಗಿರಬಾರದು. ಯಾಕೆಂದರೆ ಅತಿಯಾದರೆ ಅಮೃತ ಕೂಡ ವಿಷವಾಗುತ್ತೆ. ಅಭಿಮಾನ ಮೀತಿ ಮೀರಿದರೆ ವಿನಾಶಕಾರಿ ಬೆಳವಣಿಗೆಗೆ ಕಾರಣವಾಗುತ್ತೆ. ಆದರೂ ಕೂಡ ಈ ವಿಚಾರವನ್ನು ಅರಿಯದ ಅನೇಕರು ತಾರೆಯರನ್ನು ಹುಚ್ಚರಂತೆ ಇಷ್ಟಪಡುತ್ತಾರೆ. ಅವರ ನಡೆ ನುಡಿಯನ್ನೆಲ್ಲ ಅನುಸರಿಸುತ್ತಾರೆ. ಇಷ್ಟೇ ಅಲ್ಲ ತಮ್ಮ ನೆಚ್ಚಿನ ತಾರೆಯ ಮೇಲೀನ ಅತಿಯಾದ ಅಭಿಮಾನದನಿಂದ...
ತಮ್ಮ ಪ್ರಾಣವನ್ನೇ ಪಣಕ್ಕೀಡುತ್ತಾರೆ. ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಇದಕ್ಕೆ ಮೊನ್ನೆ ಕರೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸದ್ಯದ ಉದಾಹರಣೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ವಿಜಯ್ ಮೇಲಿನ ಅಭಿಮಾನ 41 ಜನರ ಪ್ರಾಣವನ್ನು ಬಲಿ ಪಡೆದಿದೆ.ಮನೆ ಮಕ್ಕಳನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ. ಕರೂರಿನಲ್ಲಿ ನಡೆದ ಈ ಮರಣ ಮೃದಂಗ ರಾಜಕೀಯ ಸ್ವರೂಪವನ್ನು ಕೂಡ ಪಡೆದಿದೆ.

ಈ ಕಾಲ್ತುಳಿತಕ್ಕೆ ವಿಜಯ್ ನೇರ ಹೊಣೆ ಎಂದು ಪ್ರತಿ ಪಕ್ಷಗಳು ಕಿಡಿ ಕಾರುತ್ತಿದ್ದು ವಿಜಯ್ ಅವರನ್ನು ಈ ಕೂಡಲೇ ಬಂಧಿಸಬೇಕೆಂದು ಪಟ್ಟು ಹಿಡಿದಿವೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 20 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 2 ಲಕ್ಷ ರೂ. ಪರಿಹಾರವನ್ನು ವಿಜಯ್ ಘೋಷಿಸಿದ್ದರೂ ಕೂಡ ವಿಜಯ್ ವಿರುದ್ಧ ಸದ್ಯ ಆಕ್ರೋಶದ ಅಲೆ ಇದ್ದೇ ಇದೆ. ಇನ್ನೂ ಕಾಲ್ತುಳಿತ ನಡೆದ ನಂತರ ಅಲ್ಲಿ ನಿಲ್ಲದ ವಿಜಯ್ ಕಾಲ್ಕಿತ್ತಿದ್ದರು. ಇದರಿಂದ ವಿಜಯ್ ವಿರುದ್ಧ ಸಾರ್ವಜನಿಕರಲ್ಲಿಯೇ ಅಸಹನೆ, ಅಸಮಾಧಾನ ಇದೆ.
ಹೀಗಿರುವಾಗ ಈ ಘನಘೋರ ದುರಂತ ನಡೆದ ಮೂರು ದಿನದ ನಂತರ ವಿಜಯ್ ಪ್ರತ್ಯಕ್ಷರಾಗಿದ್ಧಾರೆ. ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ.ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ನೇರವಾಗಿ ಸವಾಲನ್ನು ಕೂಡ ಹಾಕಿದ್ಧಾರೆ.
ಈ ಕುರಿತು ವಿಡಿಯೋ ಮೂಲಕ ಮಾತನಾಡಿರುವ ವಿಜಯ್, ನನ್ನ ಜೀವನದಲ್ಲೇ ಇಂತಹ ನೋವಿನ ದಿನಗಳನ್ನು ನಾನು ಅನುಭವಿಸಿಲ್ಲ. ನಿಜಕ್ಕೂ ಈ ಸಂಗತಿಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ, ಬರೀ ನೋವೇ ತುಂಬಿಕೊಂಡಂತಾಗಿದೆ ಎಂದು ಹೇಳಿದ್ದಾರೆ. ಜನರು ನನ್ನ ಮೇಲಿನ ಪ್ರೀತಿಯಿಂದಾಗಿ ನನ್ನನ್ನು ನೋಡಲು ಬರುತ್ತಾರೆ. ಅವರ ಪ್ರೀತಿ, ವಿಶ್ವಾಸಕ್ಕೆ ನಾನು ಯಾವಾಗಲೂ ಚಿರಋಣಿ ಎಂದು ಹೇಳಿರುವ ವಿಜಯ್ ಇದೆಲ್ಲದರ ಹೊರತಾಗಿ ನಾನು ಮೊದಲಿಂದ ಜನರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಾ ಬಂದಿದ್ದೇನೆ ಎಂದು ಹೇಳಿದ್ದಾರೆ. ಸತ್ಯ ಶೀಘ್ರದಲ್ಲಿಯೇ ಹೊರ ಬರುತ್ತೆ ಎಂದು ಕೂಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ದುರಂತ ನಡೆಯುವ ಮುನ್ನ ಜನರ ಸುರಕ್ಷತೆಗಾಗಿ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪೊಲೀಸ್ರ ಜೊತೆ ನಾವು ಚರ್ಚೆ ಕೂಡ ಮಾಡಿದ್ದೇವು ಎಂದು ಹೇಳಿರುವ ವಿಜಯ್, ನನಗೆ ಯಾವ ಭಯ ಇತ್ತು ಅದುವೇ ನಿಜವಾಗಿದೆ, ನಡೆಯಬಾರದ್ದು ನಡೆದು ಹೋಗಿದೆ ಎಂದು ಹೇಳಿದ್ದಾರೆ. ಕರೂರಿನಲ್ಲಿ ರ್ಯಾಲಿ ಮಾಡುವ ಮುನ್ನ ನಾವು ಐದು ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದೇವೆ. ಆದರೆ.. ಅಲ್ಲೆಲ್ಲೂ ನಡೆಯದ ಅನಾಹುತ ಕರೂರಿನಲ್ಲಿಯೇ ಯಾಕಾಯ್ತು..? ಹೇಗಾಯ್ತು..? ಎಂದು ಪ್ರಶ್ನೆ ಮಾಡಿದ್ದಾರೆ.

ದುರಂತ ನಡೆದ ನಂತರ ಅಲ್ಲಿಂದ ನಾನು ಯಾಕೆ ಹೋದೆ ಎಂದು ಎಲ್ಲರು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ನೆನಪಿಡಿ ಅಲ್ಲಿ ಅಷ್ಟೊಂದು ಜನರಿಗೆ ತೊಂದರೆಯಾದಾಗ ನಾನು ಅಲ್ಲಿಯೇ ಇದ್ದಿದ್ದರೆ ಇನ್ನೂ ಸಮಸ್ಯೆ ಹೆಚ್ಚಾಗುತ್ತಿತ್ತು ಹೀಗಾಗಿ ನಾನು ಅಲ್ಲಿಂದ ಬಂದೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಮತ್ತೆ ಕರೂರಿಗೆ ಬಂದರೆ ಸಮಸ್ಯೆಯಾಗುತ್ತೆ, ಆದರೆ ಸಂತ್ರಸ್ತ ಕುಟುಂಬಗಳಿಗೆ ನಾನು ಭೇಟಿಯಾಗಿಯೇ ಆಗುತ್ತೇನೆ ಎಂದು ಕೂಡ ವಿಜಯ್ ಹೇಳಿದ್ದಾರೆ.
ಮುಂದುವರೆದು ಏನೇನು ನಡೆಯುತ್ತಿದೆ, ಏನು ನಡೆದಿದೆ.. ಎಲ್ಲವನ್ನೂ ಜನ ನೋಡಿದ್ದಾರೆ, ನೋಡುತ್ತಿದ್ದಾರೆ ಎಂದು ಹೇಳಿರುವ ವಿಜಯ್ ನನ್ನ ರಾಜಕೀಯ ಪಯಣಕ್ಕೆ ಇನ್ನೂ ಬಲ ಬಂದಿದೆ ಎಂದು ಹೇಳಿದ್ಧಾರೆ. ನನ್ನ ವಿರುದ್ಧ ಬೇಕಾದ್ರೆ ಸೇಡು ತೀರಿಸಿಕೊಳ್ಳಿ. ಆದರೆ ನನ್ನ ಬೆಂಬಲಿಗರಿಗೆ ಏನು ಮಾಡಬೇಡಿ. ನಾನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇರುತ್ತೇನೆ. ನೀವು ನನ್ನ ಮೇಲೆ ಯಾವ ರೀತಿ ಬೇಕಾದರೂ ಕ್ರಮ ಕೈಗೊಳ್ಳಬಹುದು ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ವಿಜಯ್ ಹೇಳಿದ್ದಾರೆ. ಸದ್ಯ ವಿಜಯ್ ಅವರ ಈ ವಿಡಿಯೋಗೆ ಕೂಡ ಪರ ವಿರೋಧದ ಚರ್ಚೆ ನಡೆಯುತ್ತಿದೆ.


Click it and Unblock the Notifications











