"ಹೃದಯ ಛಿದ್ರವಾಯಿತು"; ವಿಚ್ಛೇದನದ ಬಗ್ಗೆ ಎ. ಆರ್ ರಹಮಾನ್ ಪ್ರತಿಕ್ರಿಯೆ
ಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರಹಮಾನ್ ಹಾಗೂ ಪತ್ನಿ ಸೈರಾ ಬಾನು ದಾಂಪತ್ಯ ಜೀವನ ಅಂತ್ಯವಾಗಿದೆ. ಅಧಿಕೃತವಾಗಿ ಈ ಬಗ್ಗೆ ಸಂಗೀತ ಮಾಂತ್ರಿಕ ಪ್ರತಿಕ್ರಿಯಿಸಿದ್ದಾರೆ. ಟ್ವೀಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಮ್ಮ ವೈವಾಹಿಕ ಜೀವನ ಯಶಸ್ವಿಯಾಗಿ 30 ವರ್ಷಕ್ಕೆ ತಲುಪುತ್ತದೆ ಎಂದುಕೊಂಡಿದ್ದೆ. ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಎ. ಆರ್ ರಹಮಾನ್ ತಮ್ಮ ವಿಚ್ಛೇದನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ನಾವು 30 ವರ್ಷಗಳ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತೇವೆ ಎಂದು ಭಾವಿಸಿದ್ದೇವೆ. ಆದರೆ ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಒಡೆದ ಹೃದಯಗಳನ್ನು ನೋಡಿ ದೇವರೂ ಕೂಡ ನಡುಗಿಬಿಟ್ಟಿರುತ್ತಾನೆ. ಆದರೆ ಇದರ ಅರ್ಥವನ್ನು ನಾವು ಕಂಡುಕೊಳ್ಳುತ್ತೇವೆ. ಒಡೆದ ತುಣುಕುಗಳನ್ನು ಮತ್ತೆ ಜೋಡಿಸಲು ಸಾಧ್ಯವಿಲ್ಲ. ಈ ಕಷ್ಟದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸುವ ಎಲ್ಲರಿಗೂ ಧನ್ಯವಾದ" ಎಂದು ರೆಹಮಾನ್ ಟ್ವೀಟ್ ಮಾಡಿದ್ದಾರೆ.

ಎ, ಆರ್ ರಹಮಾನ್ ಹಾಗೂ ಸೈರಾ ಬಾನು ಅವರದ್ದು ಹಿರಿಯರು ನಿಶ್ಚಯಿಸಿದ ಮದುವೆ. ಈ ವಿಚಾರವನ್ನು ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ರಹಮಾನ್ ಹೇಳಿಕೊಂಡಿದ್ದರು. ತಾಯಿ ಬಹಳ ಇಷ್ಟಪಟ್ಟು ಮದುವೆ ನಿಶ್ಚಯಿಸಿದ್ದರು. ನಾನು ಆಹ ಬಹಳ ಬ್ಯುಸಿ ಇದ್ದಿದ್ದರಿಂದ ಹುಡುಗಿ ಹುಡುಕುವ ಜವಾಬ್ದಾರಿಯನ್ನು ಆಕೆಗೆ ವಹಿಸಿದ್ದೆ ಎಂದು ಅವರು ಹೇಳಿದ್ದರು.
ಭಾರತ ಮಾತ್ರವಲ್ಲ ಪ್ರಪಂಚದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಎ. ಆರ್ ರಹಮಾನ್ ಸಹ ಒಬ್ಬರು. ಆಸ್ಕರ್ ಪ್ರಶಸ್ತಿಯ ಗರಿ ಕೂಡ ಸಿಕ್ಕಿದೆ. 'ರೋಜಾ', 'ಬಾಂಬೆ' ರೀತಿಯ ಸೆನ್ಸೇಷನ್ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ಅವರು ಗೆದ್ದಿದ್ದರು. ಆ ಬಳಿಕ ಸೈರಾ ಬಾನು ಕೈ ಹಿಡಿದಿದ್ದರು.
1995ರಲ್ಲಿ ರಹಮಾನ್- ಸೈರಾ ಬಾನು ಮದುವೆ ನಡೆದಿತ್ತು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ ಇದ್ದಾನೆ. ಸೈರಾ ಬಾನು ಪರ ವಕೀಲರು ಇಬ್ಬರ ವಿಚ್ಛೇಧನದ ಬಗ್ಗೆ ಮಾಹಿತಿ ನೀಡಿದ್ದರು. ಸೈರಾ ಬಾನು ತಮ್ಮ ಪತಿ ಎ. ಆರ್ ರಹಮಾನ್ ಅವರಿಂದ ದೂರಾಗಲು ನಿರ್ಧರಿಸಿದ್ದಾರೆ. ಸಂಬಂಧದಲ್ಲಿ ಉಂಟಾದ ಭಾವನಾತ್ಮಕ ಒತ್ತಡದಿಂದ ಈ ನಿರ್ಣಯಕ್ಕೆ ಬಂದಿದ್ದಾರೆ" ಎಂದು ತಿಳಿಸಿದ್ದರು.
ಇಬ್ಬರ ನಡುವೆ ಆಳವಾದ ಪ್ರೀತಿ ಇದೆ. ಆದರೂ ಸಾಕಷ್ಟ ಟೆನ್ಷನ್ ಹಾಗೂ ಸಂಕಷ್ಟವೂ ಇದೆ. ಇದೇ ಇಬ್ಬರ ನಡುವೆ ಭಾರೀ ಕಂದಕಕ್ಕೆ ಕಾರಣವಾಗಿದೆ. ಇದನ್ನು ಸರಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಂಡುಕೊಂಡಿದ್ದಾರೆ. ಬಹಳ ನೋವಿನಿಂದಲೇ ವಿಚ್ಛೇದನದ ನಿರ್ಧಾರಕ್ಕೆ ಬಂದಿದ್ದಾರೆ. ಈ ಸವಾಲಿನ ಸಮಯ ಎದುರಿಸಲು, ಖಾಸಗಿತನ ಬಯಸುತ್ತಿದ್ದಾರೆ ಎಂದು ಸೈರಾ ಬಾನು ಪರ ವಕೀಲರು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದರು.
ಎ. ಆರ್ ರಹಮಾನ್ ವಿಚ್ಛೇದನ ವಿಚಾರ ಅಭಿಮಾನಿಗಳಿಗೆ ಶಾಕ್ ತಂದಿದೆ. ಬಹಳ ಅನ್ಯೋನ್ಯವಾಗಿದ್ದ ಜೋಡಿ ದಿಢೀರ್ ಈ ನಿರ್ಧಾರಕ್ಕೆ ಬಂದಿದ್ದು ಯಾಕೆ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೋಷಕರ ವಿಚ್ಛೇದನ ನಿರ್ಧಾರದ ಬಗ್ಗೆ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಭಾರತೀಯ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ಎ. ಆರ್ ರಹಮಾನ್. ತಮ್ಮ ಸಂಗೀತದಿಂದ ಕೇಳುಗರನ್ನು ಮಂತ್ರಮುಗ್ದರನ್ನಾಗಿಸುವ ಜಾದೂಗಾರ. ವಿವಿಧ ಭಾಷೆಗಳಲ್ಲಿ ನೂರಾರು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿ ರಹಮಾನ್ ಗೆದ್ದಿದ್ದಾರೆ. ತಮ್ಮ ಸಂಗೀತದಿಂದಲೇ ಸಿನಿಮಾಗಳನ್ನು ಗೆಲ್ಲಿಸಿದ್ದಾರೆ.
ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ಗಾಯಕನಾಗಿ, ಗೀತ ಸಾಹಿತಿಯಾಗಿಯೂ ರಹಮಾನ್ ಗಮನ ಸೆಳೆದಿದ್ದಾರೆ. ದೇಶ ವಿದೇಶಗಳಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಗೀತ ಪ್ರಿಯರನ್ನು ರಂಜಿಸಿದ್ದಾರೆ.


Click it and Unblock the Notifications











