ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಂತೆಯೇ ಜೊತೆಯಲ್ಲಿ ಬಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸ್ಟಾರ್ ಜೋಡಿ..!
ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಅನೇಕ ತಾರೆಯರು ವಿಚ್ಛೇದನ ಪಡೆದಿದ್ದಾರೆ. ಈ ಸಾಲಿಗೆ ಈಗ ಈ ಸಾಲಿಗೆ ಈಗ ಜಿ.ವಿ. ಪ್ರಕಾಶ್ ಮತ್ತು ಸೈಂಧವಿ ಕೂಡ ಸೇರಿಕೊಂಡಿದ್ದಾರೆ.

ಹೌದು. ಜಿ.ವಿ.ಪ್ರಕಾಶ್ ಪಕ್ಕದ ತಮಿಳುನಾಡಿನ ಖ್ಯಾತ ಸಂಗೀತ ನಿರ್ದೇಶಕ. ಇಷ್ಟೇ ಅಲ್ಲ ನಟ ಕೂಡ ಹೌದು. ಪೊಲ್ಲಾಧವನ್, ರಾಜಾ ರಾಣಿ, ತೇರಿ, ತಲೈವಿ ಕ್ಯಾಪ್ಟನ್ ಮಿಲ್ಲರ್ ಸೇರಿ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಹೆಗ್ಗಳಿಕೆ ಇವರದ್ದು. ಇನ್ನು ಇವರ ಪತ್ನಿ ಸೈಂಧವಿ ಕೂಡ ತಮಿಳು ಚಿತ್ರರಂಗದ ಖ್ಯಾತ ಗಾಯಕಿ. ಅನಿಯನ್ ಚಿತ್ರದ ಮೂಲಕ 2005ರಲ್ಲಿ ವೃತ್ತಿ ಜೀವನ ಶುರು ಮಾಡಿದ ಸೈಂಧವಿ ಇಲ್ಲಿಯವರೆಗೆ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಕೇವಲ ತಮಿಳು ಮಾತ್ರವಲ್ಲ ತೆಲುಗಿನಲ್ಲಿ ಕೂಡ ಹಾಡು ಹಾಡಿರುವ ಸೈಂಧವಿ ಕನ್ನಡದಲ್ಲಿ ಸೈಕೋ, ಉಲ್ಲಾಸ ಉತ್ಸಾಹ ಚಿತ್ರಗಳ ಹಾಡನ್ನು ಹಾಡಿದ್ದಾರೆ. ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿನ 'ಮತ್ತೆ ನೋಡಬೇಡ' ಹಾಡಿಗೆ ಕೂಡ ಧ್ವನಿಯಾಗಿದ್ದಾರೆ.
ಇಂಥಾ ಹಿನ್ನೆಲೆಯ ಜಿವಿ ಪ್ರಕಾಶ್ ಮತ್ತು ಸೈಂಧವಿ ಕಳೆದ ವರ್ಷ ಮೇ 13ರಂದು ಪರಸ್ಪರ ದೂರವಾಗುತ್ತಿರುವ ವಿಚಾರವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೆ ಶಾಕ್ ನೀಡಿದ್ದರು.ಆದರೆ, ಆಗ ಇವರಿಬ್ಬರ ಅಭಿಮಾನಿಗಳು ಮುನಿಸು ಮರೆತು ಮತ್ತೆ ಒಂದಾಗುತ್ತಾರೆ ಎಂದು ಭಾವಿಸಿದ್ದರು. ಆದರೆ ಈಗ ನಿರೀಕ್ಷೆ ಹುಸಿಯಾಗಿದೆ. ಯಾಕೆಂದರೆ ವರ್ಷದ ನಂತರ ಜಿವಿ ಪ್ರಕಾಶ್ ಈಗ ತಮ್ಮ ಪತ್ನಿ ಸೈಂಧವಿ ಜೊತೆ ಫ್ಯಾಮಿಲಿ ಕೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯಾಯಾಧೀಶರ ಮುಂದೆ ಹಾಜರಾಗಿ ಗಂಡ ಮತ್ತು ಹೆಂಡತಿ ಇಬ್ಬರು ಡಿವೋರ್ಸ್ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ.
ವಿಶೇಷ ಅಂದರೆ ಜಿವಿ ಪ್ರಕಾಶ್ ಮತ್ತು ಸೈಂಧವಿ ನಮ್ಮ ಕನ್ನಡದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಂತೆಯೇ ಜೊತೆಯಲ್ಲಿ ನ್ಯಾಯಾಲಯಕ್ಕೆ ಒಂದೇ ಕಾರಿನಲ್ಲಿ ಬಂದಿದ್ದಾರೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಕೂಡ ಒಂದೇ ಕಾರಿನಲ್ಲಿ ಮರಳಿದ್ದಾರೆ. ಇದು ಈಗ ಅನೇಕರ ಹುಬ್ಬೇರಿಸಿದೆ. ದೂರವಾಗುತ್ತಿದ್ದರೂ ಪರಸ್ಪರ ಇರುವ ಗೌರವ,ಕಾಳಜಿ, ಅಭಿಮಾನಿಗಳ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಜೊತೆಯಲ್ಲಿ ನ್ಯಾಯಾಯಲಕ್ಕೆ ಬಂದ ವಿಡಿಯೋ ವೈರಲ್ ಆಗಿದೆ.
ಸದ್ಯ ತಮ್ಮ ಹನ್ನೊಂದು ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲು ನಿರ್ಧಾರ ಮಾಡಿರುವ ಇಬ್ಬರಿಗೆ ಅನ್ವಿ ಎಂಬ ಮಗಳಿದ್ದು ಡಿವೋರ್ಸ್ ನಂತರ ಪುತ್ರಿಯನ್ನು ನೋಡಿಕೊಳ್ಳುವ ಜವಾಬ್ಧಾರಿಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎನ್ನುವುದಕ್ಕೆ ಉತ್ತರ ಇನ್ನು ಸಿಕ್ಕಿಲ್ಲ. ಇನ್ನು ಇದರ ನಡುವೆ ಜಿವಿ ಪ್ರಕಾಶ್ ಅವರಿಂದ ಸೈಂಧವಿ ಎಷ್ಟು ಹಣವನ್ನು ಜೀವನಾಂಶದ ರೂಪದಲ್ಲಿ ಪಡೆಯಬಹುದು ಎನ್ನುವ ಚಿಂತೆ ಕೂಡ ಅನೇಕರನ್ನು ಕಾಡುತ್ತಿದೆ. ವಿಚ್ಚೇದನಕ್ಕೆ ಜೊತೆಯಾಗಿ ಬಂದು ಅರ್ಜಿ ಸಲ್ಲಿಸಿರುವ ಇಬ್ಬರು ಕಳೆದ ಕೆಲ ವರ್ಷಗಳಿಂದ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಇನ್ನು ಗಂಡ ಹೆಂಡತಿಯ ಸಂಬಂಧ ಕಡಿದುಕೊಳ್ಳಲು ಮುಂದಾಗಿರುವ ಜಿವಿ ಪ್ರಕಾಶ್ ಮತ್ತು ಸೈಂಧವಿ ಮುಂಬರುವ ದಿನಗಳಲ್ಲಿ ವೃತ್ತಿ ಜೀವನದಲ್ಲಿ ಜೊತೆಯಾಗಿ ಕೆಲಸ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ಧಾರೆ, ಇಬ್ಬರು ಜೊತೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎನ್ನುವ ಸುದ್ದಿ ಕೂಡ ಸದ್ಯ ಚಾಲ್ತಿಯಲ್ಲಿದೆ.
ಅಂದ್ಹಾಗೇ ಜಿವಿ ಪ್ರಕಾಶ್ ಮತ್ತು ಸೈಂಧವಿ ಬಾಲ್ಯದ ಸ್ನೇಹಿತರು. ಜೊತೆ ಜೊತೆಯಾಗಿಯೇ ಬೆಳೆದವರು. ಜೊತೆ ಜೊತೆಯಾಗಿ ಕನಸು ಕಂಡವರು. ಚಿತ್ರರಂಗಕ್ಕೆ ಕೂಡ ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಎಂಟ್ರಿಯನ್ನು ನೀಡಿದವರು. ಹೀಗಾಗಿ ಇಬ್ಬರು ಮದುವೆಯಾದಾಗ ಅನೇಕರು ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ತನ್ನ ಬೆಸ್ಟ್ ಫ್ರೆಂಡ್ನ ಮದುವೆಯಾಗುತ್ತಿರುವ ಹಿನ್ನೆಲೆ ಇಬ್ಬರ ದಾಂಪತ್ಯ ಜೀವನ ಚೆನ್ನಾಗಿರುತ್ತೆ ಎಂದು ಅಂದುಕೊಂಡಿದ್ದರು.
ಎಲ್ಲರ ಆಶಯದಂತೆ ಇಬ್ಬರ ದಾಂಪತ್ಯ ಜೀವನ ಚೆನ್ನಾಗಿತ್ತು ಕೂಡ. ಆದರೆ, ಜಿವಿ ಪ್ರಕಾಶ್ 'ಬ್ಯಾಚುಲರ್' ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ ನಂತರ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಲು ಶುರುವಾಯ್ತು. ಜಿವಿ ಪ್ರಕಾಶ್ ಹೆಸರು ಬ್ಯಾಚುಲರ್ ಚಿತ್ರದ ನಾಯಕಿ ದಿವ್ಯಾ ಭಾರತಿ ಜೊತೆ ತಳುಕು ಹಾಕಿಕೊಂಡಿತ್ತು.
ಗಂಡ ಹೆಂಡತಿಯ ಸಂಬಂಧದಲ್ಲಿ ಬಿರುಕು ಮೂಡಲು ತಾವು ಕಾರಣ ಎನ್ನುವ ವಿಚಾರ ಚೆನ್ನೈನಲ್ಲಿ ಚರ್ಚೆಗೀಡಾದ ನಂತರ ಈ ವಿಚಾರದ ಕುರಿತು ಮಾತನಾಡಿದ್ದ ದಿವ್ಯಾ ಭಾರತಿ, ಜಿವಿ ಪ್ರಕಾಶ್ ಮತ್ತು ಸೈಂಧವಿ ಅವರನ್ನು ಜೊತೆಯಲ್ಲಿ ನೋಡಲು ನನಗೆ ತುಂಬಾ ಇಷ್ಟ ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಅನೇಕರು ಅವರಿಬ್ಬರ ದಾಂಪತ್ಯ ನನ್ನಿಂದ ಮುರಿದು ಬಿತ್ತು ಎಂದು ಮಾತನಾಡುತ್ತಿದ್ದಾರೆ ಎಂದು ಬೇಸರವನ್ನು ಹೊರ ಹಾಕಿದ್ದರು. ವಿಶೇಷವಾಗಿ ಹೆಣ್ಣು ಮಕ್ಕಳು ನನ್ನನ್ನೇ ಈ ವಿಚಾರದಲ್ಲಿ ವಿಲನ್ ಮಾಡುತ್ತಿದ್ದಾರೆ, ಬೇಕಾ ಬಿಟ್ಟಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಬ್ಯಾಚುಲರ್ ಚಿತ್ರದಲ್ಲಿ ನಮ್ಮ ಇಬ್ಬರ ಕೆಮೆಸ್ಟ್ರೀಯನ್ನು ಜನ ತುಂಬಾ ಮೆಚ್ಚಿಕೊಂಡಿದ್ದರು ಅದಕ್ಕೆ ಇಬ್ಬರ ವಿಚ್ಚೇದನಕ್ಕೆ ನನ್ನನ್ನು ಹೊಣೆಯಾಗಿಸುವುದು ಸರಿ ಅಲ್ಲ ಎಂದು ಹೇಳಿದ್ದರು.
ವಿಶೇಷ ಅಂದರೆ ನನ್ನ ಮತ್ತು ಜಿವಿ ಪ್ರಕಾಶ್ ಮತ್ತು ನನ್ನ ನಡುವೆ ಇರುವುದು ಸ್ನೇಹವಲ್ಲ ಎಂದು ಹೇಳಿದ್ದ ದಿವ್ಯಾ ಭಾರತಿ ಆ ನಂತರ ಇದೇ ಜಿವಿ ಪ್ರಕಾಶ್ ಜೊತೆ ಕಿಂಗ್ಸ್ಟನ್ ಚಿತ್ರದಲ್ಲಿ ಕೂಡ ಮತ್ತೆ ಕಾಣಿಸಿಕೊಂಡರು. ನಾಯಕಿಯ ಪಾತ್ರವನ್ನು ನಿರ್ವಹಿಸಿದರು. ಮಾರ್ಚ್ 7ರಂದು ಬಿಡುಗಡೆಯಾದ ಈ ಚಿತ್ರ ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎನ್ನುವ ಚರ್ಚೆಗೆ ಮರುಜೀವವನ್ನು ಕೂಡ ನೀಡಿತ್ತು.
ಇನ್ನುಳಿದಂತೆ ಕಳೆದ ವರ್ಷ ತಮ್ಮ ದಾಂಪತ್ಯ ಜೀವನದ ಕುರಿತು ತಮಿಳುನಾಡಿನಲ್ಲೆಡೆ ಚರ್ಚೆ ನಡೆಯುತ್ತಿರುವುದನ್ನು ಗಮನಿಸಿದ ಸೈಂಧವಿ ಈ ವಿಚ್ಛೇದನದ ನಿರ್ಧಾರವನ್ನು ನಾನು ಮತ್ತು ಜಿ.ವಿ.ಪ್ರಕಾಶ್ ಸೇರಿಯೇ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದರು. ಜಿವಿ ಪ್ರಕಾಶ್ ಕುಮಾರ್ ಮತ್ತು ನಾನು ಬಾಲ್ಯದ ಸ್ನೇಹಿತರು, ನಮ್ಮ ಇಬ್ಬರದ್ದು 24 ವರ್ಷಗಳ ಸ್ನೇಹ, ಮುಂಬರುವ ದಿನಗಳಲ್ಲಿ ಕೂಡ ನಾವು ಉತ್ತಮ ಸ್ನೇಹಿತರಾಗಿ ಇರಲಿದ್ದೇವೆ ಎಂದು ಹೇಳಿದ್ದರು. ಸೈಂಧವಿ ಬರೆದ ಬಹಿರಂಗ ಪತ್ರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಜಿವಿ ಪ್ರಕಾಶ್ ಸುಖಾ ಸುಮ್ಮನೆ ಬಾಯಿಗೆ ಬಂದಂತೆ ಯಾರು ಮಾತನಾಡಬೇಡಿ, ಫೇಕ್ ಐಡಿಗಳಿಂದ ಚಾರಿತ್ರ್ಯವಧೆಯನ್ನು ಮಾಡಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದರು. ಕಷ್ಟದ ಸಮಯದಲ್ಲಿ ಜೊತೆ ನಿಂತ ಎಲ್ಲರಿಗೆ ಜಿವಿ ಪ್ರಕಾಶ್ ಧನ್ಯವಾದಗಳನ್ನು ಕೂಡ ಹೇಳಿದ್ದರು.


Click it and Unblock the Notifications











