ಮೋಸ ಹೋದರೂ ಸಹಾಯ ಮಾಡಿದ ಜಿ.ವಿ.ಪ್ರಕಾಶ್ ; ದುಡ್ಡು ಕೇಳಿದ ಅಪರಿಚಿತ ವ್ಯಕ್ತಿಗೆ ₹50,000 ನೀಡಿದ ಸಂಗೀತ ನಿರ್ದೇಶಕ
ಸಾಮಾನ್ಯವಾಗಿ ಜನ ಸಾಮಾನ್ಯರ ಕಷ್ಟಕ್ಕೆ ಚಿತ್ರರಂಗದವರು ಸ್ಪಂದಿಸುವುದಿಲ್ಲ ಎನ್ನುವ ಅಭಿಪ್ರಾಯ ಅನೇಕರಲ್ಲಿದೆ. ಸದಾ ಕಾಲ ಬಾಡಿಗಾರ್ಡ್ಗಳಿಂದ ಸುತ್ತುವರೆಯುವ ಇವರಿಗೆ ಬಡವರ ಕಷ್ಟ-ನಷ್ಟ ಕಣ್ಣಿಗೆ ಕಾಣಿಸುವುದೇ ಇಲ್ಲ. ಈ ಕಾರಣದಿಂದ ಬಣ್ಣದ ಪ್ರಪಂಚದಲ್ಲಿ ಮಾನವೀಯತೆ ಸತ್ತು ಹೋಗಿದೆ ಎಂದೇ ಹಲವರು ಅಂದುಕೊಂಡಿದ್ದಾರೆ. ತೆರೆಯ ಮೇಲಷ್ಟೇ ಅವರು ಹೀರೋ ತೆರೆಯ ಹಿಂದೆ ಅಲ್ಲ ಎಂಬ ಮಾತುಗಳನ್ನು ಆಡುತ್ತಾರೆ.
ಆದರೆ ಇದಕ್ಕೆ ಅಪವಾದ ಎನ್ನುವಂತೆ ಈ ಗ್ಲ್ಯಾಮರ್ ವರ್ಲ್ಡ್ನಲ್ಲಿ ಕೆಲವರಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ. ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ಸಹಾಯದ ಹಸ್ತವನ್ನು ಕೆಲವರು ಇಲ್ಲಿ ಇನ್ನೂ ಚಾಚುತ್ತಾರೆ. ಬಡವರ ಕಣ್ಣೀರು ಒರೆಸುತ್ತಾರೆ. ಉದಾಹರಣೆಗೆ ಜಿವಿ ಪ್ರಕಾಶ್.

ಯೆಸ್. ಜಿ.ವಿ.ಪ್ರಕಾಶ್ ಪಕ್ಕದ ತಮಿಳುನಾಡಿನ ಖ್ಯಾತ ಸಂಗೀತ ನಿರ್ದೇಶಕ. ಇಷ್ಟೇ ಅಲ್ಲ ನಟ ಕೂಡ ಹೌದು. ''ಪೊಲ್ಲಾಧವನ್''.. ''ರಾಜಾ ರಾಣಿ''.. ''ತೇರಿ''.. ''ತಲೈವಿ''.. ''ಕ್ಯಾಪ್ಟನ್ ಮಿಲ್ಲರ್'' .. ಸೇರಿ ಅನೇಕ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಹೆಗ್ಗಳಿಕೆ ಇವರದ್ದು.
ಇಂಥಾ ಜಿ.ವಿ. ಪ್ರಕಾಶ್ ಮೊದಲಿಂದ ಬಡವರ ಬಂಧು. ದೇಹಿ ಎಂದು ಬಂದವರಿಗೆ ಇವರು ಸಹಾಯದ ಹಸ್ತವನ್ನು ಚಾಚಿದ್ದಾರೆ. ಆದರೆ, ಇವರ ಈ ಒಳ್ಳೆಯತನವನ್ನೇ ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ದುರುಪಯೋಗ ಮಾಡಿಕೊಂಡಿದ್ದ.
Mom Little King ಎಂಬ ಎಕ್ಸ್ ( ಟ್ವಿಟರ್ ) ಖಾತೆಯನ್ನು ಹೊಂದಿರುವ ಪ್ರಸನ್ನ ಸಾದೀಶ್ ಎಂಬ ವ್ಯಕ್ತಿ ಜಿ.ವಿ.ಪ್ರಕಾಶ್ ಅವರ ಬಳಿ ಸಹಾಯಕ್ಕೆ ಅಂಗಲಾಚಿದ್ದ. ತನ್ನ ತಾಯಿಯ ಚಿತ್ರವನ್ನು ಹಂಚಿಕೊಂಡು ನನ್ನ ತಾಯಿ ಬದುಕಿರುವ ತನಕ ನನ್ನನ್ನೂ ಮತ್ತು ನನ್ನ ತಂಗಿಯನ್ನು ಕಷ್ಟ ಪಟ್ಟು ಸಾಕಿ ಸಲುಹಿದರು. ಆದರೆ ಇಂದು ಅವರಿಲ್ಲ. ದುರಂತ ಅಂದರೆ ಅವರ ಅಂತಿಮ ಸಂಸ್ಕಾರಕ್ಕೆ ಕೂಡ ನನ್ನ ಬಳಿ ಹಣ ಇಲ್ಲ. ನಿಮ್ಮ ಸಹಾಯ ಬೇಕಿದೆ ಎಂದು ಜಿ.ವಿ. ಪ್ರಕಾಶ್ ಅವರಿಗೆ ಟ್ಯಾಗ್ ಮಾಡಿದ್ದ. ಅಭಿಮಾನಿಯಂತೆ ಆಕ್ಟ್ ಮಾಡಿದ್ದ.
ಪ್ರಸನ್ನ ಸಾದೀಶ್ ಹೆಣೆದ ಈ ಕಥೆಯನ್ನು ನಿಜಾ ಎಂದುಕೊಂಡಿದ್ದ ಜಿ.ವಿ.ಪ್ರಕಾಶ್ ಕೂಡಲೇ 20,000 ಹಣ ಕಳಿಸಿದ್ದರು. ಆದರೆ, ಆ ನಂತರ ತಾವು ಮೋಸ ಹೋದ ವಿಚಾರ ಜಿ.ವಿ.ಪ್ರಕಾಶ್ ಅವರಿಗೆ ಗೊತ್ತಾಗಿತ್ತು. ಈ ಹಿನ್ನೆಲೆ ಆ ನಂತರ ತಾವೇ ಅದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.

ಇನ್ನು ಸಾಮಾನ್ಯವಾಗಿ ಒಮ್ಮೆ ಇಂತಹ ಕಹಿ ಅನುಭವ ಆದರೆ, ಬೇರೆಯವರನ್ನು ಜನಸಾಮಾನ್ಯರಲ್ಲಿಯೇ ಹಲವರು ಸುಲಭಕ್ಕೆ ನಂಬಲ್ಲ. ಹೀಗಿರುವಾಗ ಜಿ.ವಿ.ಪ್ರಕಾಶ್ ಮತ್ತೊಮ್ಮೆ ಮತ್ತೊಬ್ಬ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದ್ಧಾರೆ. ನೆರವಿನ ಹಸ್ತವನ್ನು ಚಾಚಿದ್ದಾರೆ.
ಹೌದು, ಅಸಲಿಗೆ ಕೊಯಮತ್ತೂರಿನ ಪಿಎಸ್ಜಿ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ ದಾಖಲಾಗಿದ್ಧಾರೆ. ಆದರೆ.. ಚಿಕಿತ್ಸೆ ವೆಚ್ಚ ಭರಿಸಲು ಮನೆಯವರ ಹತ್ತಿರ ದುಡ್ಡಿರಲಿಲ್ಲ. ಅಲ್ಲಿಯವರೆಗಿನ ಚಿಕಿತ್ಸೆಗೆ ಎಲ್ಲ ಹಣವೂ ಖಾಲಿಯಾಗಿತ್ತು. ಈ ವೇಳೆ ''ಫೀನಿಕ್ಸ್'' ಎಂಬ ಹೆಸರಿನ ಎಕ್ಸ್ ಬಳಕೆದಾರರೊಬ್ಬರು ಸುಮಾರು 12 ಗಂಟೆಗಳ ಕಾಲ ಸುದೀರ್ಘ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದ ವ್ಯಕ್ತಿಯ ಮಾಹಿತಿಯನ್ನು ಹಂಚಿಕೊಂಡಿದ್ದರು. ಆರ್ಥಿಕ ಸಹಾಯ ಮಾಡುವಂತೆ ಜಾಲತಾಣದಲ್ಲಿ ಮನವಿ ಮಾಡಿದ್ದರು.
ಇವರ ಈ ಪೋಸ್ಟ್ ಜಿ.ವಿ.ಪ್ರಕಾಶ್ ಅವರ ಕಣ್ಣಿಗೆ ಬಿದ್ದಿದೆ. ಕೂಡಲೇ ತಡ ಮಾಡದ ಜಿ.ವಿ.ಪ್ರಕಾಶ್ ₹50,000 ಹಣವನ್ನು ರೋಗಿಯ ಖಾತೆಗೆ ನೇರವಾಗಿ ವರ್ಗಾಯಿಸಿದ್ಧಾರೆ. ತಾವು ಹಣ ವರ್ಗಾವಣೆ ಮಾಡಿದ ಸ್ಕ್ರೀನ್ಶಾಟ್ ಅನ್ನು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡ ಜಿ.ವಿ. ಪ್ರಕಾಶ್, "ನನ್ನ ಕಡೆಯಿಂದ ಸಣ್ಣ ಸಹಾಯ, ಇದು ನಿಜವಾದ ಮನವಿ ಎಂದು ಭಾವಿಸುತ್ತೇನೆ. ಆಲ್ ದಿ ಬೆಸ್ಟ್" ಎಂದು ಬರೆದುಕೊಂಡಿದ್ದಾರೆ.
ಜಿ.ವಿ.ಪ್ರಕಾಶ್ ಅವರ ಈ ತ್ವರಿತ ಸಹಾಯಕ್ಕೆ ಸದ್ಯ ಹಲವರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಮಯದಲ್ಲಿ ಸಾಮಾಜಿಕ ಕಳಕಳಿ ಹೊಂದಿರುವ ಅನೇಕರು ಅಣ್ಣಾ, ನೀವು ಆಪತ್ಕಾಲದಲ್ಲಿ ಸಹಾಯ ಮಾಡಿದ್ದು ಅದ್ಭುತ ಕಾರ್ಯ. ಆದರೆ, ಹಣ ಕಳುಹಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದೀರಾ? ಎಂದು ಪ್ರಶ್ನೆ ಮಾಡಿದ್ಧಾರೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಇಂತಹ ಹತ್ತಾರು ನಕಲಿ ಮನವಿಗಳು ಕಾಣಿಸುತ್ತಿವೆ, ಸಹಾಯ ಅಗತ್ಯ ಇರುವವರಿಗೆ ಮಾತ್ರ ತಲುಪಬೇಕು, ದಯಮಾಡಿ ಪರಿಶೀಲಿಸಿ ಸಹಾಯ ಮಾಡಿ ಎಂಬ ಸಲಹೆ ನೀಡಿದ್ಧಾರೆ.
ಸಮಾಧಾನದ ಸಂಗತಿ ಅಂದರೆ ಈ ಎಲ್ಲಾ ಪರ-ವಿರೋಧದ ಚರ್ಚೆಯ ನಡುವೆ, ಮೊದಲಿಗೆ ಆರ್ಥಿಕ ನೆರವಿನ ಮನವಿ ಮಾಡಿದ್ದ ''ಫೀನಿಕ್ಸ್'' ಎಂಬ ಬಳಕೆದಾರರು ಜಿ.ವಿ. ಪ್ರಕಾಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಸರಿಯಾದ ಸಮಯಕ್ಕೆ ಜಿ.ವಿ.ಪ್ರಕಾಶ್ ನೆರವಾಗದಿದ್ದರೆ ಆಸ್ಪತ್ರೆಯಲ್ಲಿ ಮುಂದುವರಿಯಬೇಕಿದ್ದ ವೈದ್ಯಕೀಯ ಚಿಕಿತ್ಸೆ ನಿಜಕ್ಕೂ ಅರ್ಧಕ್ಕೆ ನಿಲ್ಲುವ ಆತಂಕವಿತ್ತು ಎಂದು ಕೃತಜ್ಞತೆಯ ಸಂದೇಶ ಹಂಚಿಕೊಂಡಿದ್ದಾರೆ. ಆಸ್ಪತ್ರೆಯ ಬಿಲ್, ಆರೋಗ್ಯದ ಕುರಿತು ಮಾಹಿತಿ ಮತ್ತು ಇನ್ನುಳಿದ ವಿವರಗಳನ್ನು ಕೂಡ ಶೇರ್ ಮಾಡಿದ್ದಾರೆ. ಇವರ ಈ ಟ್ವೀಟ್ನಿಂದ ಈ ಬಾರಿ ಜಿ.ವಿ.ಪ್ರಕಾಶ್ ಮೋಸ ಹೋಗಿಲ್ಲ ಬದಲಿಗೆ ಸರಿಯಾದ ಅಗತ್ಯ ಇರುವ ವ್ಯಕ್ತಿಗೆ ಸಹಾಯ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.


Click it and Unblock the Notifications