Vadivelu Birthday: ಹಾಸ್ಯ, ಗಂಭೀರ ಎರಡು ಪಾತ್ರಗಳಲ್ಲೂ ಸೈ ಎನಿಸಿಕೊಂಡ ತಮಿಳು ಹಾಸ್ಯ ಚಕ್ರವರ್ತಿ ವಡಿವೇಲು ಜನ್ಮದಿನ
ತಮಿಳುನಾಡಿನ ಸಿನಿಪ್ರೇಮಿಗಳಲ್ಲಿ ಒಂದು ಅಭ್ಯಾಸವಿದೆ. ಮನಸ್ಸಿಗೆ ಬೇಸರವಾದರೇ.. ನೋವಾದರೇ....ಒಂಟಿತನ ಕಾಡುತ್ತಿದ್ದರೇ ಸಿನಿಮಾ ದೃಶ್ಯಗಳನ್ನು ನೋಡುವುದು. ಹೌದು....ಇದು ಆಶ್ಚರ್ಯವಾದರೂ ಸತ್ಯವೆ. ಇವರು ತಮ್ಮ ನೆಚ್ಚಿನ ನಟನ ಸಿನಿಮಾ ನೋಡುವುದಿಲ್ಲ. ಬದಲಿಗೆ ಎಲ್ಲಾ ನಟರ ಫ್ಯಾನ್ಸ್ಗಳಿಗೂ ಒಬ್ಬರೇ ಫೇವರಿಟ್.. ನಗುವಿನ ವೈದ್ಯ ವಡಿವೇಲು.
ವೈಗೈ ಪುಯಲ್ (ವೈಗೈ ಚಂಡಮಾರುತ) ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುವ ವಡಿವೇಲು ಅವರ ಹುಟ್ಟುಹಬ್ಬದಂದು (ಸೆಪ್ಟೆಂಬರ್ 12), ಅವರ ಜೀವನ ಮತ್ತು ಸಿನಿ ಪ್ರಯಾಣದ ಸುತ್ತ ಒಂದು ಸುತ್ತಿ ಬರೋಣ. ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ತಮಿಳು ಸಿನಿರಂಗದಲ್ಲಿ ತನ್ನದೇ ಛಾಪು ಮೂಡಿಸಿ ಕೋಟ್ಯಾಂತರ ಅಭಿಮಾನಿಗಳನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಪ್ರಸಿದ್ಧ ಹಾಸ್ಯ ನಟ 1988ರಲ್ಲಿ ಬಿಡುಗಡೆಯಾದ ಎನ್ ತಂಗೈ ಕಲ್ಯಾಣಿ ಚಿತ್ರದಲ್ಲಿ ಮೊದಲು ಕಾಣಿಸಿಕೊಂಡಿದ್ದರು. ಅದು ಬಿಡುಗಡೆಯಾಗಿ 35 ವರ್ಷಗಳಾಗಿವೆ.

ವಡಿವೇಲು ಬಾಲ್ಯ, ಸಿನಿಮಾ ಪ್ರವೇಶ
ವಡಿವೇಲ್ ಮೂಲತಃ ಮಧುರೈ ಮೂಲದವರು. ಸೆಪ್ಟೆಂಬರ್ 12, 1960 ರಂದು ನಟರಾಜನ್ ಪಿಳ್ಳೈ ಮತ್ತು ಸರೋಜಿನಿ ದಂಪತಿಯ ಮಗುವಾಗಿ ಜನಿಸಿದರು. ವಡಿವೇಲು ಅವರ ಕುಟುಂಬ ತೀರಾ ಬಡತನದಲ್ಲಿತ್ತು. ವಡಿವೇಲು ಸಿನಿಮಾ ರಂಗಕ್ಕೆ ಬರುವವರೆಗೂ ಬಡತನ ಕಾಡುತ್ತಿತ್ತು.
ತಮಿಳು ಚಿತ್ರರಂಗದಲ್ಲಿ ಕಾಮಿಡಿಯನ್ನು ಕೌಂಟ ಮಣಿ ಸೆಂಥಿಲ್ ಎಂದು ಕರೆಯುತ್ತಿದ್ದ ಕಾಲವೊಂದಿತ್ತು. ಈ ಹಾಸ್ಯ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದ ಅವರು ಬಳಿಕ ತಮ್ಮದೇ ವಿಶೇಷ ಶೈಲಿಯಿಂದ ತಮಿಳು ಸಿನಿಮಾ ಕಾಮಿಡಿ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ವಡಿವೇಲು. ಅದ್ಭುತ ಕಾಮಿಡಿ ನಟ ತನ್ನ ನಟನೆಯಿಂದ ವೈಗೈಪುಯಲ್ ಎಂಬ ಹೆಸರಿನಿಂದ ಖ್ಯಾತಿ ಪಡೆದಿದ್ದಾರೆ. ಇದು ಮಧುರೈ ಮೂಲಕ ಹರಿಯುವ ಪ್ರಸಿದ್ಧ ವೈಗೈ ನದಿಯನ್ನು ಉಲ್ಲೇಖಿಸಿದೆ.
ಆರಂಭದಲ್ಲಿ ತೆಳ್ಳಗಿನ ದೇಹವನ್ನು ಬಳುಕಿಸುತ್ತಾ, ತೆರೆಯ ಮೇಲೆ ಅಣಕಿಸುತ್ತಾ, ವೀರಾವೇಶದಿಂದ ಮಾತನಾಡಿ ಗಲಾಟೆ ಮಾಡುತ್ತಾ ತಮ್ಮದೇ ಆದ ಸ್ಟೈಲ್ ಕಂಡುಕೊಂಡರು ವಡಿವೇಲು. 1988 ರಲ್ಲಿ, ಡಿ. ರಾಜೇಂದ್ರನ್ ನಿರ್ದೇಶನದ ಎನ್ ತಂಗೈ ಕಲ್ಯಾಣಿ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡರು.

ಬಳಿಕ ಕೌಂಡಮಣಿ, ಸೆಂಥಿಲ್, ವಿವೇಕ್ ರಂತಹ ಹಾಸ್ಯ ನಟರು ತೆರೆ ಮೇಲೆ ಬರುತ್ತಿದ್ದ ವಡಿವೇಲು ವಿಶಿಷ್ಟ ಶೈಲಿಯಲ್ಲಿ ಆತ್ಮಾವಲೋಕನ ಮಾಡಿಕೊಂಡು ಮುಂದಕ್ಕೆ ಹೆಜ್ಜೆ ಹಾಕಿದರು. ಒಂದು ಹಂತದಲ್ಲಿ ವಡಿವೇಲು ಅವರು ತೆರೆಯ ಮೇಲೆ ಬಂದರೇ ಸಾಕು ತಕ್ಷಣ ಜನ ನಗಲಾರಂಭಿಸಿದರು. ಅದಕ್ಕೆ ಅವರ ಬಾಡಿ ಲಾಂಗ್ವೇಜ್ ಕೂಡ ಕಾರಣ. ಸಂಭಾಷಣೆ ಮಾತ್ರವಲ್ಲ ನಟನೆ, ಸ್ಟೈಲ್ ಮತ್ತು ಸ್ಮೈಲ್ ಅಭಿಮಾನಿಗಳಿಗೆ ಇಷ್ಟವಾಗಿದೆ.
ಒಂದು ಹಂತದಲ್ಲಿ ವಡಿವೇಲು ಅವರ ಕಾಲ್ ಶೀಟ್ ಸಿಕ್ಕರೆ ಮಾತ್ರ ಸಿನಿಮಾ ಶುರು ಮಾಡುವುದಾಗಿ ನಿರ್ಮಾಪಕರು, ನಿರ್ದೇಶಕರು ಹೇಳುವಷ್ಟರ ಮಟ್ಟಿಗೆ ತಮಿಳು ಸಿನಿಮಾ ಜಗತ್ತನ್ನು ವಡಿವೇಲು ಹಿಡಿದಿದ್ದರು. 1988 ರಿಂದ 2017 ರವರೆಗೆ ಅವರು ಸುಮಾರು 300 ಚಿತ್ರಗಳಲ್ಲಿ ನಟಿಸಿದ್ದಾರೆ.
ವಡಿವೇಲು ಮತ್ತು ರಾಜಕೀಯ
2011ರಲ್ಲಿ ವಡಿವೇಲು ಅವರು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಪರವಾಗಿ ಪ್ರಚಾರ ಮಾಡಿದ್ದರು. ವಿಜಯಕಾಂತ್ ಅವರನ್ನು ಪ್ರಚಾರದಲ್ಲಿ ಟೀಕಿಸಿದರು. ಹೆಚ್ಚಿನ ಜನರು ಇದನ್ನು ಇಷ್ಟಪಡಲಿಲ್ಲ. ಚುನಾವಣೆಯ ಅಂತ್ಯಕ್ಕೆ ಎಐಎಡಿಎಂಕೆ 203 ಸ್ಥಾನಗಳನ್ನು ಗೆದ್ದಿತ್ತು. ವಿಜಯಕಾಂತ್ ವಿರೋಧ ಪಕ್ಷದ ನಾಯಕರಾದರು. ಚುನಾವಣಾ ಪ್ರಚಾರದ ವೇಳೆ ನಡೆದ ಬಿರುಸಿನ ಪ್ರಚಾರಗಳಿಂದಾಗಿ ನಿರ್ಮಾಪಕರು ವಡಿವೇಲು ಅವರ ಜೊತೆ ಸಿನಿಮಾ ಮಾಡಿದರೆ ಚಿತ್ರ ಬಿಡುಗಡೆಗೆ ತೊಂದರೆಯಾಗುತ್ತದೆ ಎಂಬ ಭಯದಿಂದ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರು.
ಒಂದು ದಿನ ಎರಡು ದಿನವಲ್ಲ. ಸುಮಾರು 10 ವರ್ಷಗಳಿಂದ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. 2005ರಲ್ಲಿ ಬರೋಬ್ಬರಿ 24 ಸಿನಿಮಾಗಳಲ್ಲಿ ನಟಿಸಿದ್ದ ವಡಿವೇಲು 2011ರಿಂದ 2017ರವರೆಗೆ ಕೇವಲ 7 ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ವಡಿವೇಲು ಸಿನಿಮಾದಲ್ಲಿ ನಟಿಸದ ದಿನಗಳಲ್ಲೂ ಅಭಿಮಾನಿಗಳು ಅವರನ್ನು ಕಡೆಗಣಿಸಿರಲಿಲ್ಲ. ಮೀಮ್ಸ್ ಕ್ರಿಯೇಟರ್ ಗಳು ಸಾಮೂಹಿಕವಾಗಿ ವಡಿವೇಲು ಅವರನ್ನು ಗುತ್ತಿಗೆ ಪಡೆದು ಸಂಭ್ರಮಿಸಿದ್ದರು. ಈಗಲೂ ಕೂಡ ಅದು ನಡೆಯುತ್ತಿದೆ. ಇದನ್ನು ವಡಿವೇಲು ಕೂಡ ಸಂದರ್ಶನವೊಂದರಲ್ಲಿ ಉಲ್ಲೇಖಿಸಿ, ಮೀಮ್ಸ್ ಕ್ರಿಯೆಟರ್ಸ್ಗೆ ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಇನ್ನು, ಇತ್ತೀಚೆಗೆ ಬಿಡುಗಡೆಯಾದ ಮಾಮಣ್ಣನ್ ಮೂಲಕ ಗಂಭೀರ ಪಾತ್ರದಲ್ಲಿ ವಡಿವೇಲು ಕಾಣಿಸಿಕೊಂಡು ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ವಡಿವೇಲು ಅವರು ಇಂತಹ ಪಾತ್ರಗಳಲ್ಲಿ ನಟಿಸಬಹುದಿದ್ದರೂ ಕೂಡ ಅವರನ್ನು ಹಾಸ್ಯನಟನಾಗಿ ಇಷ್ಟು ವರ್ಷಗಳು ಕಡಿಮೆ ಬಳಸಿಕೊಂಡು, ಪ್ರತಿಭೆಯನ್ನು ವ್ಯರ್ಥ ಮಾಡಿದರು ಎಂದು ಹಲವರು ಆರೋಪಿಸಿದ್ದಾರೆ.


Click it and Unblock the Notifications











