ತಮಿಳು ನಟಿ ತ್ರಿಷಾಗೆ ಬೆದರಿಕೆ; ಅಖಾಡಕ್ಕಿಳಿದ ಚೆನ್ನೈ ಪೊಲೀಸರು
ರಾಜಕೀಯ ಮುಖಂಡರು, ಸರ್ಕಾರಿ ಕಚೇರಿಗಳು ಹಾಗೂ ಸೆಲೆಬ್ರೆಟಿಗಳ ಮನೆಗೆ ಹುಸಿಬಾಂಬ್ ಕರೆಗಳು ಆಗಾಗ್ಗೆ ಬರುತ್ತದೆ. ಸದ್ಯ ತಮಿಳು ನಟಿ ತ್ರಿಷಾ ಮನೆಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದಿದೆ. ಚೆನ್ನೈನ ಅಲ್ವಾರ್ಪೇಟ್ನಲ್ಲಿರುವ ತ್ರಿಷಾ ಅವರ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಪೊಲೀಸ್ ಕಂಟ್ರೋಲ್ ರೂಮ್ಗೆ ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿತ್ತು. ಇದೇ ಇಮೇಲ್ ಐಡಿಯಿಂದ ಈ ಹಿಂದೆ ನಟ ರಜನಿಕಾಂತ್ ಹಾಗೂ ಧನುಷ್ ನಿವಾಸಕ್ಕೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದಾರೆ ವರದಿಯಾಗಿದೆ.
ತ್ರಿಷಾ ಮನೆಯಲ್ಲಿ ಕೆಲವೇ ಕ್ಷಣಗಳಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ವ್ಯಕ್ತಿ ಎಚ್ಚರಿಸಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಕೂಡಲೇ ಎಚ್ಚೆತ್ತ ತೇನಂಪೇಟೆ ಪೊಲೀಸರು, ಬಾಂಬ್ ನಿಷ್ಕ್ರಿಯ ತಂಡದ ಜೊತೆಗೆ ನಟಿಯ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಹಿಂದೆ ಕೂಡ ನಟ ದಳಪತಿ ವಿಜಯ್ ಸೇರಿದಂತೆ ಕೆಲ ತಮಿಳು ಕಲಾವಿದರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆಗಳು ಬಂದಿತ್ತು. ಕಳೆದ ಅಕ್ಟೋಬರ್ನಲ್ಲಿ ಸಿಎಂ ಸ್ಟಾಲಿನ್, ನಟ ವಿಜಯ್ ಹಾಗೂ ನಟಿ ತ್ರಿಷಾ ಮನೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಬಂದಿತ್ತು. ತಪಾಸಣೆ ಬಳಿಕ ಅದು ಹುಸಿ ಬಾಂಬ್ ಕರೆ ಎನ್ನುವುದು ಗೊತ್ತಾಗಿತ್ತು.
ಇತ್ತೀಚೆಗೆ ನಟಿ ತ್ರಿಷಾ ತಮ್ಮ ವೈಯಕ್ತಿಕ ವಿಚಾರಗಳಿಂದ ಬಹಳ ಸುದ್ದಿಯಲ್ಲಿದ್ದಾರೆ. ನಟ ವಿಜಯ್ ಹಾಗೂ ತ್ರಿಷಾ ಸಂಬಂಧದ ಬಗ್ಗೆ ಭಾರೀ ಚರ್ಚೆ ನಡೀತಿದೆ. ವಿಜಯ್ ಪತ್ನಿ ಸಂಗೀತ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿಜಯ್- ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಲು ನಟಿ ತ್ರಿಷಾ ಕಾರಣ ಎನ್ನುವ ಆರೋಪ ಕೇಳಿಬಂದಿದೆ. ಅದರ ಬೆನ್ನಲ್ಲೇ ತ್ರಿಷಾ ಜೊತೆ ಒಂದೇ ಕಾರಿನಲ್ಲಿ ವಿಜಯ್ ಮದುವೆ ಸಮಾರಂಭಕ್ಕೆ ತೆರಳಿ ಭಾಗಿ ಆಗಿದ್ದರು. ಇದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು.
ತ್ರಿಷಾ ಚಿತ್ರರಂಗಕ್ಕೆ ಗುಡ್ಬೈ ಹೇಳಿ ವಿಜಯ್ ಜೊತೆ ರಾಜಕೀಯರಂಗ ಪ್ರವೇಶಿಸುತ್ತಾರೆ ಎಂದು ಗುಲ್ಲಾಗಿತ್ತು. ಯಾವುದೇ ಕಾರಣಕ್ಕೂ ಸಿನಿಮಾಗಳಲ್ಲಿ ನಟಿಸುವುದು ನಿಲ್ಲಿಸುವುದಿಲ್ಲ. ಅದೆಲ್ಲಾ ಬರೀ ವದಂತಿ ಎಂದು ನಟಿ ತ್ರಿಷಾ ಪರೋಕ್ಷವಾಗಿ ತಿಳಿಸಿದ್ದಾರೆ. ಇದೆಲ್ಲದರ ನಡುವೆ ಹುಸಿಬಾಂಬ್ ಕರೆ ವಿಚಾರ ಭಾರೀ ಸದ್ದು ಮಾಡ್ತಿದೆ.
ತಮಿಳುನಾಡು ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಟಿವಿಕೆ ಪಕ್ಷ ಸ್ಥಾಪಿಸಿ ನಟ ವಿಜಯ್ ಅಖಾಡಕ್ಕೆ ಇಳಿದಿದ್ದಾರೆ. ರಾಜ್ಯಾದ್ಯಂತ ಭರ್ಜರಿ ಪ್ರಚಾರ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಮುಂದಾಗಿದ್ದಾರೆ. ಸೈಕಲ್ ಏರಿ ವಿಜಯ್ ಪ್ರಚಾರ ನಡೆಸುತ್ತಿದ್ದಾರೆ. ರ್ಯಾಲಿ ವೇಳೆ ಅಭಿಮಾನಿಗಳು ಜ್ಯೂಸ್ ಬಾಟಲ್, ಹೂವಿನ ಹಾರಗಳನ್ನು ವಿಜಯ್ ಕಡೆ ಎಸೆಯುತ್ತಿದ್ದಾರೆ. ಇತ್ತೀಚೆಗೆ ವಿಜಯ್ ಸೈಕಲ್ ಸವಾರಿ ಮಾಡುವಾಗ ಮುಖಾಮುಖಿಯಾದ ಅಭಿಮಾನಿಯೊಬ್ಬ ಹೂವಿನ ಹಾರವನ್ನು ಗಂಟು ಸುತ್ತಿ ವಿಜಯ್ ಕಡೆ ಎಸೆದಿದ್ದಾರೆ. ಕೂಡಲೇ ಶಾಕ್ ಆಗಿದ್ದ ವಿಜಯ್ ಬಾಂಬ್ ಎಂದು ಭಾವಿಸಿ, ಸೈಕಲ್ ಬಿಟ್ಟು ಎದ್ದು ಬಿದ್ದು ಓಡಿರುವ ಘಟನೆ ನಡೆದಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗ್ತಿದೆ.
ಕಳೆದ ವರ್ಷ ತ್ರಿಷಾ ನಟಿಸಿದ 4 ಸಿನಿಮಾಗಳು ತೆರೆಗೆ ಬಂದಿತ್ತು. 'ಐಡೆಂಟಿಟಿ', 'ವಿಡಾಮುಯರ್ಚಿ', 'ಗುಡ್ ಬ್ಯಾಡ್ ಅಗ್ಲಿ' ಹಾಗೂ 'ಥಗ್ಲೈಫ್' ಚಿತ್ರಗಳಲ್ಲಿ ಆಕೆ ನಟಿಸಿದ್ದರು. ಅಜಿತ್ ಜೊತೆ ನಟಿಸಿದ್ದ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಮಾತ್ರ ಗೆದ್ದಿತ್ತು. ಈ ವರ್ಷ ಆಕೆ ನಟಿಸುತ್ತಿರುವ 3 ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿದೆ. ಸೂರ್ಯ ಜೊತೆ 'ಕರುಪ್ಪು' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಚಿರಂಜೀವಿ ನಟನೆಯ 'ವಿಶ್ವಂಭರ' ಹಾಗೂ ಮೋಹನ್ ಲಾಲ್ ಜೋಡಿಯಾಗಿ 'ರಾಮ್' ಚಿತ್ರದಲ್ಲಿ ತ್ರಿಷಾ ಬಣ್ಣ ಹಚ್ಚಿದ್ದಾರೆ.


Click it and Unblock the Notifications











