ಕೆನಿಶಾ ನನ್ನ ಲೈಫ್ಲೈನ್.. ಸ್ನೇಹಿತೆಗಿಂತ ಹೆಚ್ಚು ಎಂದು ಪತ್ನಿಗೆ ಜಯಂ ರವಿ ತಿರುಗೇಟು
ತಮಿಳು ನಟ ಜಯಂ ರವಿ ಹಾಗೂ ಪತ್ನಿ ಆರತಿ ಡಿವೋರ್ಸ್ ವಿವಾದ ಪದೇ ಪದೆ ಸದ್ದು ಮಾಡ್ತಿದೆ. ರವಿ ಈಗಾಗಲೇ ಡಿವೋರ್ಸ್ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಪತ್ನಿ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದಾರೆ. ಅದಕ್ಕೆ ಪತ್ನಿ ಆರತಿ ಕೂಡ ತಿರುಗೇಟು ಕೊಡುತ್ತಿದ್ದಾರೆ. ನನಗೆ ಡಿವೋರ್ಸ್ ಬೇಡ ಎನ್ನುತ್ತಿದ್ದಾರೆ.
ಮತ್ತೊಂದು ಕಡೆ ಗಾಯಕಿ ಕೆನಿಶಾ ಫ್ರಾನ್ಸಿಸ್ ಜೊತೆ ನಟ ಜಯಂ ರವಿ ಸುತ್ತಾಡುತ್ತಿದ್ದಾರೆ. ಇತ್ತೀಚೆಗೆ ನಿರ್ಮಾಪಕರೊಬ್ಬರ ಮಗಳ ಮದುವೆಗೆ ಗಂಡ, ಹೆಂಡತಿ ರೀತಿ ಕೈಕೈ ಹಿಡಿದು ಬಂದಿದ್ದರು. ಒಟ್ಟಿಗೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಇದನ್ನು ನೋಡಿ ಇಬ್ಬರೂ ರಿಲೇಷನ್ಶಿಪ್ನಲ್ಲಿರುವುದು ಖಚಿತ ಎಂದೇ ಎಲ್ಲರೂ ಚರ್ಚಿಸಿದ್ದರು. ಇದಕ್ಕೆ ಚಕಾರ ಎತ್ತಿ ಆರತಿ ಪೋಸ್ಟ್ ಮಾಡಿದ್ದರು. ಇದೀಗ ಮತ್ತೊಮ್ಮೆ ರವಿ ಮೌನ ಮುರಿದಿದ್ದಾರೆ.

ಮತ್ತೊಮ್ಮೆ ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಕೆನಿಶಾ ಫ್ರಾನ್ಸಿಸ್ ನನ್ನ ಲೈಫ್ಲೈಮ್, ಒಳ್ಳೆ ಸಂಗಾತಿ ಎಂದು ಹೇಳಿ ತಮ್ಮಿಬ್ಬರ ರಿಲೇಷನ್ಶಿಪ್ ಅನ್ನು ಅಧಿಕೃತವಾಗಿ ಪ್ರಕಟಿಸಿದಂತೆ ಕಾಣುತ್ತಿದೆ. ಇದೇ ಈಗ ಕಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಆರತಿ ಅವರಿಗೆ ಡಿವೋರ್ಸ್ ಕೊಟ್ಟು ಕೆನಿಶಾ ಜೊತೆ ನಟ ರವಿ ಮದುವೆ ಆಗುತ್ತಾರೆ ಎಂದು ಗುಸುಗುಸು ಶುರುವಾಗಿದೆ.
ಜಯಂ ರವಿ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪತ್ರ ಬರೆದಿದ್ದಾರೆ. ಪತ್ನಿಯಿಂದ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
"ದೇಶ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ನನ್ನ ಜೀವನದ ಬಗ್ಗೆ ಜನರ ಅಭಿಪ್ರಾಯಗಳು, ವದಂತಿಗಳು ಮತ್ತು ಸತ್ಯವನ್ನು ವಿರೂಪಗೊಳಿಸುವುದನ್ನು ನೋಡುವುದು ತುಂಬಾ ನೋವಿನ ಸಂಗತಿ. ಮೌನವಾಗಿದ್ದೇನೆ ಅಂದರೆ ನನ್ನ ಕೈಯಲ್ಲಿ ಏನು ಆಗುವುದಿಲ್ಲ ಎಂದು ಅರ್ಥವಲ್ಲ. ನನ್ನ ಶಾಂತಿಯುತ ಜೀವನಕ್ಕಾಗಿ ನಾನು ಮೌನವಾಗಿರುತ್ತೇನೆ. ನನ್ನ ಬಗ್ಗೆ ಏನೂ ತಿಳಿದಿಲ್ಲದ ಜನರು ನನ್ನ ಶಾಂತಿಯನ್ನು ಕದಡಿದಾಗ ನಾನು ಮಾತನಾಡಲೇಬೇಕಾಗುತ್ತದೆ" ಎಂದು ನಟ ರವಿ ಬರೆಯಲು ಆರಂಭಿಸಿದ್ದಾರೆ.
ಬಳಿಕ ರವಿ ತಾವು ಪತ್ನಿಯಿಂದ ಎದುರಿಸಿದ ಕಿರುಕುಳದ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ. ಸಾಕಷ್ಟು ಆರೋಪ ಮಾಡಿದ್ದಾರೆ. "ನಾನು ಇವತ್ತು ಈ ಹಂತಕ್ಕೆ ಏರಿರುವುದು ನನ್ನ ಸ್ವಂತ ಪರಿಶ್ರಮದಿಂದ ಮಾತ್ರ. ನನ್ನ ಖ್ಯಾತಿಯನ್ನು ಅವರ ಮಾನದಂಡಗಳಿಗೆ ತಗ್ಗಿಸಲು ಪ್ರಯತ್ನಿಸುವ ನಾನು ಯಾರಿಗೂ ಅವಕಾಶ ಕೊಡಲ್ಲ. ಇದು ನನಗೆ ಆಟವಲ್ಲ. ನನ್ನ ಜೀವನ. ನನ್ನ ಜೀವನಕ್ಕೆ ಸರಿಯಾದ ನ್ಯಾಯ ಬೇಕು ಎಂದು ನಾನು ಕಾಯುತ್ತಿದ್ದೇನೆ. ಸಿಗುತ್ತದೆ ಎಂದು ನಾನು ಭಾವಿಸಿದ್ದೇನೆ" ಎಂದಿದ್ದಾರೆ.
ತಮ್ಮ ಡಿವೋರ್ಸ್ ನಿರ್ಧಾರಕ್ಕೆ ಕಾರಣ ಏನು ಎಂದು ಪೋಷಕರು, ಆಪ್ತರು ಹಾಗೂ ಅಭಿಮಾನಿಗಳಿಗೆ ತಿಳಿಸಿರುವುದಾಗಿಯೂ ರವಿ ಹೇಳಿಕೊಂಡಿದ್ದಾರೆ. "ವರ್ಷಗಳಿಂದ ನಾನು ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಆರ್ಥಿಕವಾಗಿ ಕಿರುಕುಳಕ್ಕೆ ಒಳಗಾಗಿದ್ದೇನೆ. ನನ್ನ ಹೆತ್ತವರನ್ನು ಭೇಟಿಯಾಗಲು ಸಹ ನನಗೆ ಅವಕಾಶವಿರಲಿಲ್ಲ. ಪಂಜರದಲ್ಲಿ ಬಂಧಿಯಾದಂತೆ ಆಗಿತ್ತು. ನನ್ನ ಮದುವೆ ಬಂಧವನ್ನು ಉಳಿಸಿಕೊಳ್ಳಲು ಇಷ್ಟು ದಿನ ಎಲ್ಲವನ್ನು ಸಹಿಸಿಕೊಂಡಿದ್ದೆ. ಅಂತಿಮವಾಗಿ, ನನ್ನ ಸಂಬಂಧದಿಂದ ಹೊರ ಬರಬೇಕಾಯಿತು, ಅದರು ಕಷ್ಟಕರವಾಗಿತ್ತು. ಇದನ್ನೆಲ್ಲಾ ಹೇಳಲು ನೋವಾಗುತ್ತದೆ.. ನನ್ನ ಜೀವನದಲ್ಲಿ ಏನಾಯಿತು ಎಂಬುದರ ಕುರಿತು ನಾನು ನನ್ನ ಪೋಷಕರು, ಅಭಿಮಾನಿಗಳು ಮತ್ತು ನನ್ನ ಆಪ್ತರೊಂದಿಗೆ ಬಹಿರಂಗವಾಗಿ ಮಾತನಾಡಿದ್ದೇನೆ. ನಾನು ಈ ವೈವಾಹಿಕ ಜೀವನದಿಂದ ದೂರಾಗಲು ಬಯಸಲಿಲ್ಲ. ಆದರೆ ನಾನು ಆ ನಿರ್ಧಾರ ತೆಗೆದುಕೊಳ್ಳುವಂತಾಯಿತು" ಎಂದು ರವಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಹೆಸರು ಹೇಳಿ ಪತ್ನಿ ಆರತಿ ಸಿಂಪತಿ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರವಿ ಆರೋಪಿಸಿದ್ದಾರೆ. "ನನ್ನ ಮಕ್ಕಳನ್ನು ಆರ್ಥಿಕ ಲಾಭ ಮತ್ತು ಸಾರ್ವಜನಿಕ ಸಹಾನುಭೂತಿಯನ್ನು ಸೆಳೆಯುವ ಸಾಧನಗಳಾಗಿ ಬಳಸುವುದನ್ನು ನೋಡುವುದು ನನಗೆ ಅತ್ಯಂತ ಬೇಸರವನ್ನುಂಟು ಮಾಡುತ್ತಿದೆ. ಆದರೆ ನಾವಿಬ್ಬರು ದೂರಾದ ಬಳಿಕ ನನ್ನನ್ನು ಮಕ್ಕಳಿಂದ ಉದ್ದೇಶಪೂರ್ವಕವಾಗಿ ದೂರವಿಡಲಾಗಿದೆ. ಕಳೆದ ಕ್ರಿಸ್ಮಸ್ ವೇಳೆ ನ್ಯಾಯಾಲಯದಲ್ಲಿ ಭೇಟಿ ಬಿಟ್ಟರೆ ಬಳಿಕ ನಮ್ಮಿಬ್ಬರ ನಡುವೆ ಯಾವುದೇ ಸಂವಹನ ಇಲ್ಲ. ನನ್ನ ಸ್ವಂತ ಮಕ್ಕಳನ್ನು ನಾನು ನೋಡದಂತೆ ಅಥವಾ ಸಮೀಪಿಸದಂತೆ ತಡೆಯಲು ಬೌನ್ಸರ್ಗಳನ್ನು ನಿಯಮಿಸಿದ್ದಾರೆ. ನೀವು ತಂದೆಯಾಗಿ ನನ್ನ ಪಾತ್ರವನ್ನು ಪ್ರಶ್ನಿಸುತ್ತೀರಿ?" ಎಂದು ರವಿ ಪ್ರಶ್ನೆ ಕೇಳಿದ್ದಾರೆ.
ನಾನು ಆರತಿಯಿಂದ ದೂರಾಗುತ್ತೇನೆ, ಮಕ್ಕಳಿಂದ ಅಲ್ಲ ಎಂದು ರವಿ ಪುನರುಚ್ಚರಿಸಿದ್ದಾರೆ. ಇನ್ನು ಕೆನಿಶಾ ಫ್ರಾನ್ಸಿಸ್ ಜೊತೆಗಿನ ರಿಲೇಷನ್ಶಿಪ್ ಬಗ್ಗೆಯೂ ಬರೆದುಕೊಂಡಿದ್ದಾರೆ. ಆಕೆ ಸ್ನೇಹಿತೆಗಿಂತ ಹೆಚ್ಚು ಎಂದಿದ್ದಾರೆ. "ಕೆನೀಶಾ ಫ್ರಾನ್ಸಿಸ್ ಬಗ್ಗೆ ಹೇಳುವುದಾದರೆ, ಆರಂಭದಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಉಳಿಸುವ ಸ್ನೇಹಿತೆಯಾಗಿದ್ದಳು. ಕಣ್ಣೀರು, ರಕ್ತ ಮತ್ತು ಧೈರ್ಯ ಕುಂದಿದ್ದಾಗ ನನಗೆ ಬೇಗನೆ ಲೈಫ್ಲೈನ್ ಆಗಿಬಿಟ್ಟಳು. ಅವತ್ತು ನಾನು ಬರಿಗಾಲಿನಲ್ಲಿ, ನೈಟ್ ಸೂಟ್ನಲ್ಲಿ, ಪರ್ಸ್ ಮತ್ತು ಘನತೆಯನ್ನು ಕಳೆದುಕೊಂಡು ಹೊರಟಾಗ ಅವಳು ತನ್ನ ಪಕ್ಕದಲ್ಲಿದ್ದಳು" ಎಂದು ಕೆನೀಶಾ ಬಗ್ಗೆ ರವಿ ಹೇಳಿಕೊಂಡಿದ್ದಾರೆ.
ತಮಿಳು ಚಿತ್ರ ಸಂಕಲನಕಾರ ಮೋಹನ್ ಪುತ್ರ ರವಿ ಮೋಹನ್. ತಂದೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರಿಂದ ರವಿ ಅವರಿಗೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಿರಲಿಲ್ಲ. ಬಾಲನಟನಾಗಿಯೇ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದರು. 'ಜಯಂ' ಚಿತ್ರದಲ್ಲಿ ಹೀರೊ ಆಗಿ ಮಿಂಚಿದ್ದರು. ಆ ಬಳಿಕ ಅವರ ಹೆಸರಿನ ಜೊತೆ 'ಜಯಂ' ಎನ್ನುವುದು ಸೇರಿಕೊಂಡಿತ್ತು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು.
'ಮಳೈ', 'ಇದಯ ತಿರುಡನ್', 'ಧೂಮ್ ಧೂಮ್', 'ಪೆರಣ್ಮೈ', 'ತನಿ ಒರುವನ್', 'ಟಿಕ್ ಟಿಕ್ ಟಿಕ್', 'ಕೋಮಲಿ', 'ಪೊನ್ನಿಯಿನ್ ಸೆಲ್ವನ್' ಸರಣಿ, 'ಬ್ರದರ್' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ರವಿ ನಟಿಸಿ ಗೆದ್ದಿದ್ದಾರೆ. ತಮಿಳುನಾಡು ರಾಜ್ಯ ಪ್ರಶಸ್ತಿ, ಸೈಮಾ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ತಮಿಳು ಚಿತ್ರ ನಿರ್ಮಾಪಕ ಸುಜಾತ ವಿಜಯ್ ಕುಮಾರ್ ಮಗಳು ಆರತಿ ಅವರನ್ನು ಜಯಂ ರವಿ 2009ರಲ್ಲಿ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಕಳೆದ ಸೆಪ್ಟೆಂಬರ್ನಲ್ಲಿ ರವಿ ಪತ್ನಿಯಿಂದ ಡಿವೋರ್ಸ್ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ನನ್ನ ಗಮನಕ್ಕೆ ತರದೇ ರವಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಆರತಿ ಹೇಳಿದ್ದರು. ನನಗೆ ಒಪ್ಪಿಗೆ ಇಲ್ಲ ಎಂದು ಹೇಳುತ್ತಾ ಬರ್ತಿದ್ದಾರೆ. ಖುಷ್ಬೂ ಸೇರಿದಂತೆ ಕೆಲ ತಾರೆಯರು ಆರತಿ ಬೆಂಬಲಕ್ಕೆ ನಿಂತಿದ್ದಾರೆ.
ಡಿವೋರ್ಸ್ ಬಗ್ಗೆ ಮಾತನಾಡಿ ಜಯಂ ರವಿ ಮೊದಲ ಬಾರಿ ಪತ್ನಿ ವಿರುದ್ಧ ಆರೋಪ ಮಾಡಿದಾಲೇ ಖುಷ್ಬೂ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. "ನಿಜವಾದ ಪುರುಷ ತನ್ನ ಮಕ್ಕಳನ್ನು ಹೆರುವ ಮಹಿಳೆಯನ್ನು ಗೌರವಿಸುತ್ತಾನೆ" ಎಂದು ಪರೋಕ್ಷವಾಗಿ ತಿವಿದಿದ್ದರು.
ಇತ್ತೀಚೆಗೆ ಕೆನಿಶಾ ಜೊತೆ ಜಯಂ ರವಿ ಮದುವೆ ಮನೆಯಲ್ಲಿ ಕಾಣಿಸಿಕೊಂಡಿದ್ದು ಗೊತ್ತೇಯಿದೆ. ಇದರ ಬೆನ್ನಲ್ಲೇ ಇನ್ಸ್ಟಾಗ್ರಾಮ್ನಲ್ಲಿ ಖುಷ್ಬೂ ಮಾಡಿದ್ದ ಪೋಸ್ಟ್ ಸಹ ವೈರಲ್ ಆಗಿತ್ತು. ಎರಡು ಮರಿಗಳ ಜೊತೆ ಸಿಂಹಿಣಿ ಇರುವ ಫೋಟೊವನ್ನು ಹಂಚಿಕೊಂಡು ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು. ಜಯಂ ರವಿ ನಡೆಯನ್ನು ಟೀಕಿಸಿದ್ದರು. ಒಟ್ಟಾರೆ ಕಾಲಿವುಡ್ ಅಂಗಳದಲ್ಲಿ ನಟ ಜಯಂ ರವಿ ಹಾಗೂ ಆರತಿ ಡಿವೋರ್ಸ್ ವಿಚಾರ ಬಹಳ ಸದ್ದು ಮಾಡ್ತಿದೆ.


Click it and Unblock the Notifications











