ಶಿವಣ್ಣನ ಹಾಗೆ ನಟಿಸಲು ನನ್ನಿಂದ ಚೂರೂ ಆಗಲ್ಲ, ಅವರು ಕನ್ನಡದ ರಜನಿಕಾಂತ್ ಎಂದ ತಮಿಳು ನಟ ಸಿಂಬು!

2017ರಲ್ಲಿ ತೆರೆಕಂಡಿದ್ದ ಸ್ಯಾಂಡಲ್ವುಡ್ ಕಿಂಗ್ ಶಿವ ರಾಜ್ಕುಮಾರ್ ಹಾಗೂ ಶ್ರೀಮುರಳಿ ನಟನೆಯ ಮತ್ತು ನರ್ತನ್ ನಿರ್ದೇಶನದ ಸಿನಿಮಾ ಮಫ್ತಿ ಬಿಗ್ಗೆಸ್ಟ್ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಮುರಳಿ ಗಣ ಪಾತ್ರದಲ್ಲಿ ಅಂಡರ್ಕವರ್ ಪೊಲೀಸ್ ಆಗಿ ನಟಿಸಿದರೆ, ಶಿವ ರಾಜ್ಕುಮಾರ್ ಭೈರತಿ ರಣಗಲ್ ಎಂಬ ಡಾನ್ ಪಾತ್ರದಲ್ಲಿ ಅಬ್ಬರಿಸಿದ್ದರು. ಚಿತ್ರದ ಮಧ್ಯಂತರದ ವೇಳೆಗೆ ಶಿವ ರಾಜ್ಕುಮಾರ್ ಹೆಲಿಕಾಪ್ಟರ್ನಿಂದ ಕಿಲ್ಲಿಂಗ್ ಲುಕ್ ಕೊಡುತ್ತಾ, ಕಪ್ಪು ಬಣ್ಣದ ಶರ್ಟ್ ಹಾಗೂ ಲುಂಗಿ ತೊಟ್ಟು ಎಂಟ್ರಿ ಕೊಟ್ಟು ತನ್ನನ್ನು ರಾವಣನೊಂದಿಗೆ ಹೋಲಿಕೆ ಮಾಡಿಕೊಂಡು ಡೈಲಾಗ್ ಹೇಳುತ್ತಾ ಎಂಟ್ರಿ ಕೊಟ್ಟಿದ್ದರು.
ಆ ಮಾಸ್ ಎಂಟ್ರಿ ಹಾಗೂ ಕಿಕ್ಕೇರಿಸೋ ಬ್ಯಾಕ್ಗ್ರೌಂಡ್ ಮ್ಯೂಸಿಕ್ನಿಂದ ಆ ದೃಶ್ಯ ಸಿನಿ ರಸಿಕರನ್ನು ಥಿಯೇಟರ್ನಲ್ಲಿ ಹುಚ್ಚೆದ್ದು ಚೀರಿ ಶಿಳ್ಳೆ ಹಾಕುವ ಹಾಗೆ ಮಾಡಿತ್ತು. ಶಿವ ರಾಜ್ಕುಮಾರ್ ಅವರನ್ನು ಬಿಟ್ಟರೆ ಈ ಪಾತ್ರಕ್ಕೆ ಬೇರೆ ಯಾವ ನಟನೂ ಸಹ ಸೆಟ್ ಆಗುವುದಿಲ್ಲ ಬಿಡಿ ಎಂದು ಜನರು ಹೇಳುವ ಮಟ್ಟಕ್ಕೆ ಶಿವಣ್ಣ ನಟಿಸಿದ್ದರು. ಹೀಗೆ ಸಿನಿ ರಸಿಕರು ಹಲವಾರು ವರ್ಷಗಳ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಖಡಕ್ ಪಾತ್ರವನ್ನು ನಿರ್ದೇಶಕ ನರ್ತನ್ ಶಿವ ರಾಜ್ಕುಮಾರ್ ಅವರಿಗೆ ನೀಡಿ ಗೆದ್ದಿದ್ದರು.
ಹೀಗೆ ಮಫ್ತಿ ಚಿತ್ರ ದೊಡ್ಡ ಮಟ್ಟದ ಸಕ್ಸಸ್ ಸಾಧಿಸಿದ ನಂತರ ನಿರ್ದೇಶಕ ನರ್ತನ್ಗೆ ಬೃಹತ್ ಬೇಡಿಕೆ ಉಂಟಾಯಿತು ಹಾಗೂ ತಮಿಳು ಚಿತ್ರರಂಗದಿಂದ ಇದೇ ಮಫ್ತಿ ಚಿತ್ರವನ್ನು ರಿಮೇಕ್ ಮಾಡಿಕೊಡುವಂತೆ ಕರೆಯೂ ಸಹ ಬಂದಿತು. ಆದರೆ ಕೆಲ ಕಾರಣಗಳಿಂದ ಈ ಚಿತ್ರವನ್ನು ನರ್ತನ್ ನಿರ್ದೇಶನ ಮಾಡಲಾಗಲಿಲ್ಲ. ಸದ್ಯ ಈ ಚಿತ್ರದ ರಿಮೇಕ್ ತಮಿಳಿನಲ್ಲಿ 'ಪತ್ತು ತಲ' ಎಂಬ ಹೆಸರಿನಲ್ಲಿ ಚಿತ್ರೀಕರಣಗೊಂಡು ಬಿಡುಗಡೆಗೆ ಸಿದ್ಧವಿದ್ದು ನರ್ತನ್ ಬರೆದ ಕಥೆಗೆ ಕೃಷ್ಣನ್ ಕೆ ಟಿ ನಾಗರಾಜನ್ ಆಕ್ಷನ್ ಕಟ್ ಹೇಳಿದ್ದಾರೆ.
ಇನ್ನು ಈ ಚಿತ್ರ್ ಇದೇ ತಿಂಗಳ 30ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದ್ದು ಇತ್ತೀಚೆಗಷ್ಟೆ ಈ ಚಿತ್ರದ ಪ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ನಡೆಸಲಾಯಿತು. ಮಫ್ತಿ ಚಿತ್ರದಲ್ಲಿ ಶಿವ ರಾಜ್ಕುಮಾರ್ ನಿರ್ವಹಿಸಿದ್ದ ಪಾತ್ರವನ್ನು ಪತ್ತು ತಲ ಚಿತ್ರದಲ್ಲಿ ಸಿಳಂಬರಸನ್ ನಿರ್ವಹಿಸಿದ್ದು, ಶ್ರೀ ಮುರಳಿ ಮಾಡಿದ್ದ ಪಾತ್ರದಲ್ಲಿ ಗೌತಮ್ ಕಾರ್ತಿಕ್ ನಟಿಸಿದ್ದಾರೆ. ಇನ್ನು ಕಾರ್ಯಕ್ರಮದ ವೇದಿಕೆ ಏರಿ ಪತ್ತು ತಲ ಚಿತ್ರದ ಕುರಿತು ಮಾತನಾಡಿದ ನಟ ಸಿಳಂಬರಸನ್ ಮಫ್ತಿ ಚಿತ್ರದಲ್ಲಿ ಶಿವ ರಾಜ್ಕುಮಾರ್ ಮಾಡಿದ್ದ ಪಾತ್ರದಲ್ಲಿ ತಾನು ನಟಿಸಿದ್ದೇನೆ ಎಂದು ಹೇಳಿ ಶಿವ ರಾಜ್ಕುಮಾರ್ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದರು.
ಸಿಳಂಬರಸನ್ ಆಡಿದ ಈ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಶಿವಣ್ಣ ಅವರನ್ನು ಬೇರೆ ಭಾಷೆಯ ನಟರು ಎಷ್ಟು ಎತ್ತರದ ಸ್ಥಾನದಲ್ಲಿ ಇಟ್ಟಿದ್ದಾರೆ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಮೊದಲಿಗೆ ಪತ್ತುತಲ ಚಿತ್ರ ಕನ್ನಡದ ಮಫ್ತಿ ಚಿತ್ರದ ರಿಮೇಕ್ ಎಂದಾಗ ಚಿತ್ರದಲ್ಲಿ ನಟಿಸಲು ಹಿಂದೇಟು ಹಾಕಿದ್ದನ್ನು ತಿಳಿಸಿದ ಸಿಂಬು ಶಿವ ರಾಜ್ಕುಮಾರ್ ಅವರನ್ನು ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಜತೆ ಹೋಲಿಸಿ ಮಾತನಾಡಿದ್ದಾರೆ.
"ಮೊದಲಿಗೆ ನನಗೆ ಪತ್ತುತಲ ಮಫ್ತಿ ಚಿತ್ರದ ರಿಮೇಕ್ ಎಂದು ತಿಳಿದಾಗ ನಟಿಸಲು ಹಿಂದೇಟು ಹಾಕಿದ್ದೆ ಅದಕ್ಕೆ ಕಾರಣ ಶಿವ ರಾಜ್ಕುಮಾರ್. ಶಿವ ರಾಜ್ಕುಮಾರ್ ಮಾಡಿರುವ ಪಾತ್ರವನ್ನು ನಾನು ಮಾಡಬೇಕಾಗುತ್ತೆ ಎಂದು ನಟಿಸಲು ಒಪ್ಪಿಕೊಂಡಿರಲಿಲ್ಲ. ಶಿವಣ್ಣ ಕನ್ನಡ ಚಿತ್ರರಂಗದ ಲೆಜೆಂಡ್. ಅವರ ರೀತಿ ಆ ಪಾತ್ರವನ್ನು ನಿರ್ವಹಿಸಲು ನನಗೆ ಸ್ವಲ್ಪವೂ ಸಾಧ್ಯವಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ( ರಜನಿಕಾಂತ್ ) ಹೇಗೋ ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಶಿವ ರಾಜ್ಕುಮಾರ್" ಎಂದು ಸಿಂಬು ಹೇಳಿಕೆ ನೀಡಿದರು.
ಇನ್ನು ಈ ಚಿತ್ರದಲ್ಲಿ ಮುರಳಿ ನಿರ್ವಹಿಸಿದ್ದ ಪಾತ್ರವನ್ನು ಗೌತಮ್ ಕಾರ್ತಿಕ್ ನಿರ್ವಹಿಸುತ್ತಿದ್ದು ಆತ ಒಳ್ಳೆ ಕಲಾವಿದ, ಹೀಗಾಗಿ ಆತನಿಗೋಸ್ಕರ ತಾನು ಈ ಪಾತ್ರವನ್ನು ನಿರ್ವಹಿಸಲು ಒಪ್ಪಿಕೊಂಡೆ ಎಂದು ಸಿಳಂಬರಸನ್ ನಂತರದಲ್ಲಿ ತಿಳಿಸಿದರು.


Click it and Unblock the Notifications











