ನಾನು ಸಿಂಗಲ್ ಅಂತ ಹೇಳಿಲ್ಲ ಅಲ್ವಾ? ಕೀರ್ತಿ ಸುರೇಶ್ ಕಾಮೆಂಟ್ಸ್ ವೈರಲ್
ಮಲಯಾಳಂ ನಟಿ ಕೀರ್ತಿ ಸುರೇಶ್ ಇದೀಗ ಬಾಲಿವುಡ್ಗೂ ಎಂಟ್ರಿ ಕೊಟ್ಟಿದ್ದಾರೆ. ತೆಲುಗಿನ 'ಮಹಾನಟಿ' ಸಿನಿಮಾ ಆಕೆಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಮಹಿಳಾ ಪ್ರಧಾನ ಚಿತ್ರಗಳು ಹುಡುಕಿ ಬರುತ್ತಿವೆ. ಆಗಸ್ಟ್ 15ಕ್ಕೆ 'ರಘುತಾತ' ಸಿನಿಮಾ ತೆರೆಗೆ ಬರಲಿದೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ 'ರಘುತಾತ' ಸಿನಿಮಾ ನಿರ್ಮಾಣವಾಗಿದೆ. ಚಿತ್ರದ ಲೀಡ್ ರೋಲ್ನಲ್ಲಿ ಕೀರ್ತಿ ಮಿಂಚಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಹಿಟ್ ಆಗಿದೆ. ಚಿತ್ರದ ಪ್ರಮೋಷನ್ ಜೋರಾಗಿ ನಡೀತಿದೆ. 60, 70ರ ದಶಕಗಳಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಯ ವಿಚಾರವನ್ನು ಪ್ರಸ್ತಾಪಿಸುತ್ತಲೇ ವಿಭಿನ್ನ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ.

'ರಘುತಾತ' ಚಿತ್ರಕ್ಕೆ ಸುಮನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಕಯಕ್ವಿಳೈ ಎನ್ನುವ ಯುವತಿಯ ಹೋರಾಟದ ಕಥೆ ಚಿತ್ರದಲ್ಲಿದೆ. ಆದರೆ ಅದನ್ನು ಕೊಂಚ ಹಾಸ್ಯಲೇಪನದೊಂದಿಗೆ ಹೇಳಲಾಗಿದೆ. ಎಂ.ಎಸ್ ಭಾಸ್ಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ರವೀಂದ್ರ ವಿಜಯ್, ಜಯಕುಮಾರ್, ರಾಜೇಶ್ ಬಾಲಚಂದನ್ ತಾರಾಗಣದಲ್ಲಿದ್ದಾರೆ.
ಸಿನಿಮಾ ಪ್ರಚಾರಕ್ಕಾಗಿ ಕೀರ್ತಿ ಸಾಕಷ್ಟು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. 'ರಘುತಾತ' ಸಿನಿಮಾ ಹಾಗೂ ತಮ್ಮ ಪಾತ್ರದ ಜೊತೆಗೆ ವೈಯಕ್ತಿಕ ಜೀವನದ ಬಗ್ಗೆಯೂ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇನ್ನು ತಾನು ಸಿಂಗಲ್ ಎಂದು ಹೇಳಿಲ್ಲ ಅಲ್ವಾ? ಎಂದು ಹೇಳಿ ಅಭಿಮಾನಿಗಳಿಗೆ ಸ್ವೀಟ್ ಶಾಕ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾ ಟ್ರೋಲ್ಸ್ ಬಗ್ಗೆ ಕೀರ್ತಿ ಸುರೇಶ್ ಪಾಡ್ಕಾಸ್ಟ್ವೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ನನ್ನ ಕೆಲ ಸಿನಿಮಾಗಳು ಸೋತವು. ಹಾಗಾಗಿ ಬಹಳ ಟ್ರೋಲ್ ಎದುರಿಸಬೇಕಾಯಿತು. ಆ ಮಾತುಗಳಿಂದ ಕೆಲವೊಮ್ಮೆ ಬಹಳ ನೋವು ಅನುಭವಿಸಿದ್ದೇನೆ ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ. ವರ್ಕ್ ಲೈಫ್ ವಿಚಾರದಲ್ಲಿ ಬಹಳ ಖುಷಿಯಾಗಿದ್ದೀನಿ. ಮನಸ್ಸಿಗೆ ಹಿಡಿಸಿದ ಸಿನಿಮಾಗಳಲ್ಲಿ ನಟಿಸುತ್ತಿದ್ದೀನಿ. ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಒಂದಷ್ಟು ಸಿನಿಮಾಗಳು ಸೋತಿದ್ದವು.
ಸಿನಿಮಾಗಳು ಸೋತಾಗ ಬಹಳ ಟ್ರೋಲ್ಸ್ ಎದುರಾಯಿತು. ನನಗೆ ಗೊತ್ತಿರುವಂತೆ ದಕ್ಷಿಣ ಭಾರತದಲ್ಲಿ ಹೆಚ್ಚು ಟ್ರೋಲ್ಸ್ ಎದುರಿಸಿದ ನಟಿ ನಾನೇ ಅನ್ನಿಸುತ್ತದೆ. ವಿಮರ್ಶೆಗಳನ್ನು ನಾನು ಸ್ವಾಗತಿಸುತ್ತೇನೆ. ಕೆಲವೊಮ್ಮೆ ಅದರಿಂದ ನಾನು ಕಲಿಯುವುದು ಇರುತ್ತದೆ. ಆದರೆ ಕೆಲವರು ಬೇಕೆಂದೇ ನೆಗೆಟಿವ್ ಕಾಮೆಂಟ್ಸ್ ಮಾಡುತ್ತಾರೆ. ಅದರ ಬಗ್ಗೆ ಹೆಚ್ಚು ತಲೆ ಕಡೆಸಿಕೊಳ್ಳಲ್ಲ. ರಿಯಾಕ್ಟ್ ಆಗಲ್ಲ. ಕಾಲವೇ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ ಎಂದು ಭಾವಿಸುತ್ತೇನೆ ಎಂದು ಕೀರ್ತಿ ಹೇಳಿದ್ದಾರೆ.
ಮದುವೆ ಬಗ್ಗೆಯೂ ಕೀರ್ತಿ ಮಾತನಾಡಿದ್ದಾರೆ. "ಇಬ್ಬರೂ ವ್ಯಕ್ತಿಗಳು ಒಬ್ಬರಿಗೊಬ್ಬರು ಗೌರವ ಕೊಟ್ಟು ಬಾಳುವುದೇ ಮದುವೆ ಎಂದು ನನ್ನ ಅಭಿಪ್ರಾಯ" ಎಂದಿದ್ದಾರೆ. ಕೂಡಲೇ ನಿರೂಪಕಿ "ಸಿಂಗಲ್ ಆಗಿ ಇದ್ದೀರಾ, ಬೋರಿಂಗ್ ಎನಿಸುತ್ತಿಲ್ಲವೇ ಎಂದು ಕೇಳಿದ್ದಾರೆ. ಅದಕ್ಕೆ "ಸಿಂಗಲ್ ಅಂತ ನಾನು ಹೇಳಿಲ್ಲಾ ಅಲ್ವಾ?" ಎಂದು ನಕ್ಕಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೀರ್ತಿ ಸುರೇಶ್ ರಿಲೇಷನ್ಶಿಪ್ನಲ್ಲಿದ್ದಾರಾ? ಯಾರಪ್ಪಾ ಆ ಅದೃಷ್ಟವಂತ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
ಹಿಂದೆ ತಮಿಳು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಜೊತೆ ಕೀರ್ತಿ ಸುರೇಶ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗುಲ್ಲಾಗಿತ್ತು. ಬಳಿಕ ಈ ಬಗ್ಗೆ ಅವರ ತಂದೆ ಸ್ಪಷ್ಟನೆ ನೀಡಿದ್ದಾರೆ. ಕೆಲ ತಿಂಗಳ ಹಿಂದೆ ಕೀರ್ತಿ ಆತ್ಮೀಯ ಸ್ನೇಹಿತನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿ ಆತನೊಟ್ಟಿಗೆ ಕೀರ್ತಿ ಮದುವೆ ಎಂದು ಗುಲ್ಲಾಗಿತ್ತು. ಬಳಿಕ ಅದೆಲ್ಲಾ ಸುಳ್ಳು ಎಂದು ತಂದೆ ಪ್ರತಿಕ್ರಿಯಿಸಿದ್ದರು.


Click it and Unblock the Notifications











