ಅದೇ ನನ್ನ ಕೊನೆಯ ಸಿನ್ಮಾ, ಆತ ಬಹಳ ಒತ್ತಡ ಹೇರಿದ್ದ; ನಯನತಾರ
ಬಹುಭಾಷಾ ನಟಿ ನಯನತಾರ ಬರೀ ಸಿನಿಮಾಗಳಿಂದ ಮಾತ್ರವಲ್ಲ ರಿಲೇಷನ್ಶಿಪ್ ಹಾಗೂ ವಿವಾದಗಳಿಂದಲೂ ಸುದ್ದಿ ಆಗಿದ್ದಾರೆ. ಸಿಂಬು ಹಾಗೂ ಪ್ರಭುದೇವ ಜೊತೆ ಆಕೆ ಡೇಟಿಂಗ್ ನಡೆಸುತ್ತಿದ್ದರು ಎಂದು ಭಾರೀ ಸುದ್ದಿ ಆಗಿತ್ತು. ಆದರೆ ಅಧಿಕೃತವಾಗಿ ಎಲ್ಲೂ ಈ ಬಗ್ಗೆ ಮಾತನಾಡಲಿಲ್ಲ.
ಸಿಂಬು ಹಾಗೂ ನಯನತಾರ ಖಾಸಗಿ ಫೋಟೊಗಳು ಲೀಕ್ ಆಗಿದೆ ಎನ್ನಲಾಗಿತ್ತು. ಇನ್ನು ಪ್ರಭುದೇವ ಜೊತೆ ಕೈಕೈ ಹಿಡಿದು ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದರು. ಆತನಿಗಾಗಿ ಮತಾಂತರಗೊಂಡು ಮದುವೆ ಆಗಲು ಸಿದ್ಧತೆ ನಡೆಸಿದ್ದರು ಎಂದು ಗುಲ್ಲಾಗಿತ್ತು. ಆದರೆ ಅತನಿಂದ ದೂರಾದ ಬಳಿಕ ನಿರ್ದೇಶಕ ವಿಘ್ನೇಶ್ ಶಿವನ್ಗೆ ನಯನತಾರ ಹತ್ತಿರವಾಗಿದ್ದರು.

2 ವರ್ಷಗಳ ಹಿಂದೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ಆಗಿದ್ದಾರೆ. ಸಾರೋಗಸಿ ಪದ್ಧತಿಯಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಮಕ್ಕಳ ಲಾಲನೆ ಪಾಲನೆ ಜೊತೆಗೆ ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನಯನ್ ಬದುಕಿನ ಇಂಟ್ರೆಸ್ಟಿಂಗ್ ಸಂಗತಿಗಳು ಡಾಕ್ಯುಮೆಂಟರಿ ರೂಪದಲ್ಲಿ ಹೊರ ಬಂದಿದೆ.
'ನಯನತಾರ: ಬಿಯಾಂಡ್ ದಿ ಫೇರಿ ಟೇಲ್' ಹೆಸರಿನಲ್ಲಿ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಡಾಕ್ಯುಮೆಂಟರಿ ಸಿದ್ಧಪಡಿಸಿದ್ದಾರೆ. ವಿಕ್ಕಿ-ನಯನ್ ಮದುವೆ ವೀಡಿಯೋ ಎಲ್ಲೂ ಬಹಿರಂಗವಾಗಿರಲಿಲ್ಲ. ಅದನ್ನು ಪ್ರಸಾರ ಮಾಡುವ ಹಕ್ಕು ನೆಟ್ಫ್ಲಿಕ್ಸ್ ಪಾಲಾಗಿತ್ತು. ಮದುವೆಯ ಸುಂದರಕ್ಷಣಗಳ ಜೊತೆ ಜೊತೆಗೆ ನಯನತಾರ ಜೀವನದ ಸಾಕಷ್ಟು ವಿಚಾರಗಳು ಈ ಡಾಕ್ಯುಮೆಂಟರಿಯಲ್ಲಿ ಅನಾವರಣವಾಗಿದೆ.

ಒಂದೊಮ್ಮೆ ತಾವು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದ ವಿಚಾರ, ಅದಕ್ಕೆ ಕಾರಣವನ್ನು ನಯನತಾರಾ ಬಿಚ್ಚಿಟ್ಟಿದ್ದಾರೆ. 13 ವರ್ಷಗಳ ಹಿಂದೆ 'ಶ್ರೀರಾಮರಾಜ್ಯಂ' ಎಂಬ ಪೌರಾಣಿಕ ಚಿತ್ರದಲ್ಲಿ ನಯನತಾರ ನಟಿಸಿದ್ದರು. ಶ್ರೀರಾಮನಾಗಿ ತೆಲುಗು ನಟ ಬಾಲಕೃಷ್ಣ, ಸೀತಾಮಾತೆಯಾಗಿ ನಯನ್ ಬಣ್ಣ ಹಚ್ಚಿದ್ದರು. ಅದೇ ನನ್ನ ಕೊನೆಯ ಸಿನಿಮಾ ಎಂದುಕೊಂಡಿದ್ದೆ ಎಂದು ಆಕೆ ಡಾಕ್ಯುಮೆಂಟರಿಲ್ಲಿ ನೆನಪಿಸಿಕೊಂಡಿದ್ದಾರೆ.
ನಯನತಾರ ಸೀತೆ ಪಾತ್ರದಲ್ಲಿ ನಟಿಸುವ ಬಗ್ಗೆ ಕೆಲವರು ಚಕಾರ ಎತ್ತಿದ್ದರು ಎಂದು ನಯನತಾರ ನೆನಪಿಸಿಕೊಂಡಿದ್ದಾರೆ. ಹಾಗಾಗಿ ಆಕೆಯನ್ನು ಆ ಪಾತ್ರದಿಂದ ಬದಲಿಸುವ ಪ್ರಯತ್ನವೂ ನಡೆದಿತ್ತಂತೆ. ಪಾತ್ರಕ್ಕಾಗಿ ಸಸ್ಯಹಾರಿ ಆಗಿದ್ದರ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅಂದಹಾಗೆ ಆ ಸಮಯದಲ್ಲಿ ಪ್ರಭುದೇವಾ ಜೊತೆ ಆಕೆ ಲವ್ವಲ್ಲಿ ಬಿದ್ದಿದ್ದರು ಎಂದು ಸುದ್ದಿ ಆಗಿತ್ತು.
'ಶ್ರೀರಾಮರಾಜ್ಯಂ' ಚಿತ್ರವನ್ನು ನಾನು ಮರೆಯೋಕೆ ಸಾಧ್ಯವಿಲ್ಲ, ಅದು ನನ್ನ ಮನಸ್ಸಿಗೆ ಹತ್ತಿರವಾದ ಚಿತ್ರ. ಅದೇ ನನ್ನ ಕೊನೆ ಸಿನಿಮಾ ಎಂದು ಭಾವಿಸಿದ್ದೆ. ಆಗ ನಾನು ಪ್ರೀತಿಯಲ್ಲಿ ಇದ್ದ ವ್ಯಕ್ತಿ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಲು ಹೇಳಿದ್ದ. ಆ ಸಮಯದಲ್ಲಿ ನಾನು ಕರಿಯರ್ ಬಗ್ಗೆ ನನಗೆ ಬಹಳ ಒತ್ತಡವಿತ್ತು. ಆ ಚಿತ್ರದ ಕೊನೆ ದಿನ ಚಿತ್ರೀಕರಣ ವೇಳೆ ಅತ್ತುಬಿಟ್ಟಿದ್ದೆ ಎಂದು ನಯನತಾರ ಹೇಳಿದ್ದಾರೆ.
ಆ ಸಮಯದಲ್ಲಿ ನನಗೆ ಬೇರೆ ಮಾರ್ಗ ಇರಲಿಲ್ಲ. ಆದರೆ ಆಗ ನಾನು ಅಷ್ಟು ಮೆಚ್ಯೂರ್ಡ್ ಆಗಿರಲಿಲ್ಲ. ಅದಕ್ಕೆ ಆ ನಿರ್ಧಾರಕ್ಕೆ ಬಂದಿದ್ದೆ ಎನಿಸುತ್ತದೆ. ಆ ಎರಡು ವರ್ಷ ನನ್ನ ಜೀವನದ ಬಹಳ ನೋವಿನ ಸಮಯ ಆಗಿತ್ತು. ನಾನು ಭೇಟಿ ಆದವರೆಲ್ಲರೂ ನಟನೆ ಬಿಟ್ಟು ಮದುವೆ ಆಗು ಎನ್ನುತ್ತಿದ್ದರು. ಆದರೆ ಬಳಿಕ ನಾನು ಕಂಬ್ಯಾಕ್ ಮಾಡಿದೆ. ಮತ್ತೆ ನನ್ನ ಕರಿಯರ್ ಕಟ್ಟಿಕೊಂಡೆ ಎಂದು ನಯನತಾರ ವಿವರಿಸಿದ್ದಾರೆ.
ವಿಗ್ನೇಷ್ ಹಾಗೂ ನಯನ್ ತಮ್ಮಿಬ್ಬರ ಲವ್ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ. ಉಪೇಂದ್ರ, ನಾಗಾರ್ಜುನ ಸೇರಿದಂತೆ ಹಲವು ನಟ, ನಟಿಯರು ನಯನತಾರ ಬಗ್ಗೆ ಮಾತನಾಡಿದ್ದಾರೆ. ಬಾಲ್ಯದಿಂದ ಮದುವೆವರೆಗೆ ನಯನತಾರಾಳ ಫೋಟೊಗಳು, ವೀಡಿಯೋಗಳು ಡಾಕ್ಯುಮೆಂಟರಿಯಲ್ಲಿದೆ.


Click it and Unblock the Notifications











