26 ವರ್ಷ ಬಾಲಿವುಡ್ನವರಿಗೆ ನಾನು ನೆನಪಾಗಲೇ ಇಲ್ಲ ಎಂದ ಜ್ಯೋತಿಕಾ...!
ಅನಾದಿಕಾಲದಿಂದ ಬಾಲಿವುಡ್ ದಕ್ಷಿಣ ಭಾರತ ಚಿತ್ರರಂಗವನ್ನ ಕಡೆಗಣಿಸುತ್ತಾನೇ ಬಂದಿದೆ. ಇದಕ್ಕೆ ಬಣ್ಣದ ಪ್ರಪಂಚದಲ್ಲಿ ನೂರಾರು ಉದಾಹರಣೆಗಳಿವೆ. ಮೆಗಾ ಸ್ಟಾರ್ ಚಿರಂಜೀವಿ ಅವರಿಂದ ಹಿಡಿದು ಅನೇಕರು ತಮಗಾದ ಅನುಭವ ಮತ್ತು ಅಪಮಾನದ ಕಥೆ ಹಂಚಿಕೊಂಡಿದ್ದಾರೆ.
ಬಾಲಿವುಡ್ ನವರು ನೋಡುವ ದೃಷ್ಟಿಕೋನದ ಬಗ್ಗೆ ಪ್ರಶ್ನೆಯನ್ನು ಕೂಡ ಮಾಡಿದ್ದಾರೆ. ಈ ಸಾಲಿಗೆ ಈಗ ಜ್ಯೋತಿಕಾ ಕೂಡ ಸೇರಿಕೊಂಡಿದ್ದಾರೆ. ಬಾಲಿವುಡ್ ನ ಚಿತ್ರಕ್ಕೆ ತಾವ್ಯಾಕೇ ಬಣ್ಣ ಹಚ್ಚಲಿಲ್ಲ ಅನ್ನುವುದನ್ನ ಬಹಿರಂಗಗೊಳಿಸಿದ್ದಾರೆ.

ಹೌದು, ಅಸಲಿಗೆ ಅನೇಕರು.. ಜ್ಯೋತಿಕಾ ಅವರ ಮೂಲ ಸ್ಥಾನ ಚೆನ್ನೈ ಎಂದು ಅಂದುಕೊಂಡಿದ್ದಾರೆ. ಬಾಲಿವುಡ್ನವರು ಕೂಡ ಹೀಗೆ ಅಂದುಕೊಂಡಿದ್ದರು. ಆದರೆ ವಾಸ್ತವದಲ್ಲಿ ಇದು ತಪ್ಪು. ಯಾಕೆಂದರೆ, ಜ್ಯೋತಿಕಾ ಮುಂಬೈನವರು. ಇನ್ನೂ ಜ್ಯೋತಿಕಾ ಮೊದಲು ಬಣ್ಣ ಹಚ್ಚಿದ್ದು ಸೌತ್ ಚಿತ್ರಕ್ಕಲ್ಲ.
ಬದಲಿಗೆ ಹಿಂದಿ ಚಿತ್ರಕ್ಕೆ. ಆ ಚಿತ್ರದ ಹೆಸರು ಡೋಲಿ ಸಜಾ ರಖನಾ. ಮಲಯಾಳಂನ ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನದ ಚಿತ್ರದಲ್ಲಿ ಜ್ಯೋತಿಕಾ ಎದುರು ಅಕ್ಷಯ್ ಖನ್ನಾ ನಾಯಕನ ಪಾತ್ರವನ್ನ ನಿರ್ವಹಿಸಿದ್ದರು.

ಆದರೆ .. ಪ್ರಥಮ ಚುಂಬನಂ ದಂತ ಭಗ್ನಂ.. ಮೊದಲ ಚಿತ್ರದಲ್ಲಿಯೇ ಜ್ಯೋತಿಕಾ ಸೋಲನ್ನ ನೋಡಿದರು. ಇನ್ನೂ.. ಚಿತ್ರರಂಗದಲ್ಲಿ ನೆಲೆಯೂರಬೇಕು ಅಂದರೆ ಮೊದಲ ಸಿನಿಮಾ ಗೆಲ್ಲಲೇಬೇಕು ಅನ್ನುವ ಅಲಿಖಿತ ಕಾನೂನು ಇದೆ. ಮೊದಲ ಚಿತ್ರದ ಸಕ್ಸಸ್ ಮುಂದಿನ ಭವಿಷ್ಯವನ್ನ ನಿರ್ಧಾರ ಮಾಡುತ್ತೆ.
ಜ್ಯೋತಿಕಾ ವಿಚಾರದಲ್ಲಿ ಇದೇ ಆಗಿತ್ತು. ಮೊದಲ ಸಿನಿಮಾ ಸೋತ ಕಾರಣಕ್ಕೆ ಹಿಂದಿ ಚಿತ್ರರಂಗ ಜ್ಯೋತಿಕಾ ಅವರನ್ನ ಕಡೆಗಣಿಸಿತು. ಆದರೆ, ಅದೃಷ್ಟ.. ದಕ್ಷಿಣ ಭಾರತೀಯ ಚಿತ್ರರಂಗ ಇದೇ ಸಮಯದಲ್ಲಿ ಜ್ಯೋತಿಕಾ ಅವರನ್ನ ಕೈ ಬಿಸಿ ಕರೆಯಿತು. ಮುಂದಾಗಿದ್ದು ಇತಿಹಾಸ.

ಈ ಎಲ್ಲ ವಿಚಾರವನ್ನ ಜ್ಯೋತಿಕಾ ಖುದ್ದು ಹಂಚಿಕೊಂಡಿದ್ದಾರೆ. ತಮ್ಮ 27 ವರ್ಷದ ಸುಧೀರ್ಘ ಪ್ರಯಾಣವನ್ನೊಮ್ಮೆ ಹಿಂದೆ ತಿರುಗಿ ನೋಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಶ್ರೀಕಾಂತ್ ಚಿತ್ರ. ಹೌದು, ಅಸಲಿಗೆ ಉತ್ತರದಲ್ಲಿನ ಮೊದಲ ಅನುಭವದ ನಂತರ, ದಕ್ಷಿಣದಲ್ಲಿಯೇ ಬದುಕು ಕಟ್ಟಿಕೊಂಡ ಜ್ಯೋತಿಕಾ ಶೈತಾನ್ ಚಿತ್ರದ ಮೂಲಕ ಬಾಲಿವುಡ್ಗೆ ಮರಳಿದ್ದರು.
ಈ ಬಾರಿ ಅತ್ಯದ್ಭುತವಾದ ಗೆಲುವನ್ನೂ ಕಂಡರು. ಸದ್ಯಕ್ಕೆ ಜ್ಯೋತಿಕಾ ಶ್ರೀಕಾಂತ್ ಬೊಳ್ಳಾ ಅವರ ಜೀವನ ಚರಿತ್ರೆ ಶ್ರೀಕಾಂತ್ ದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಚಿತ್ರದ ಪ್ರಚಾರದ ಸಮಯದಲ್ಲಿ ಬಾಲಿವುಡ್ನಿಂದ ಇಷ್ಟು ವರ್ಷ ಅಂತರ ಕಾಪಾಡಿಕೊಂಡಿದ್ದೇಕೆ ಅನ್ನುವ ಸತ್ಯವನ್ನ ಜ್ಯೋತಿಕಾ ಹೇಳಿದ್ದಾರೆ. ಮೊದಲ ಚಿತ್ರದ ಸೋಲಿನ ನಂತರ ಹಿಂದಿ ಚಿತ್ರರಂಗದಿಂದ ನನಗೆ ಅವಕಾಶಗಳೇ ಬಂದಿರಲಿಲ್ಲ ಎಂದಿದ್ದಾರೆ.


Click it and Unblock the Notifications










