ನನ್ನಂತೆ ಹಿಂದೆ ಯಾರು ಇರಲಿಲ್ಲ,ಮುಂದೆ ಯಾರು ಬರಲ್ಲ ; ತಮ್ಮ ಬೆನ್ನು ತಾವೇ ತಟ್ಟಿಕೊಂಡ ಇಳಯರಾಜ..!
ಚಲನಚಿತ್ರರಂಗದ ಮೇರು ಪರ್ವತ ಇಳಯರಾಜಾ ಅವರ ಹಾಡುಗಳನ್ನು ಕೇಳದವರು ಯಾರಿದಾರೆ. ತನ್ನ ಮಾಂತ್ರಿಕ ಸಂಗೀತ ಮತ್ತು ಹಾಡುಗಳ ಮೂಲಕ ತಲೆಮಾರುಗಳಾಚೆಯೂ ಮೋಡಿ ಮಾಡುತ್ತಾ ಬಂದವರು ಇವರು. ಸಂಗೀತವನ್ನು ಹೊರತು ಪಡಿಸಿ ಬೇರೆ ಏನನ್ನೂ ಧ್ಯಾನಿಸದ ಇಳಯರಾಜಾ ಇಲ್ಲಿಯವರೆಗೆ ಸುಮಾರು 7.000 ಹಾಡುಗಳಿಗೆ ರಾಗ ಸಂಯೋಜಿಸಿದ್ದಾರೆ. ಕೇವಲ ತಮಿಳು ಮಾತ್ರವಲ್ಲದೇ ಹಿಂದಿ, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ
ಕೂಡ ಸಂಗೀತ ಸುಧೆಯನ್ನು ಹರಿಸಿರುವ ಇಳಯರಾಜಾ ಅವರನ್ನು ಅನೇಕರು ಸಂಗೀತ ಸಂತ ಎಂದೇ ಕರೆಯುತ್ತಾರೆ. ಇಂಥಾ ಇಳಯರಾಜಾ ಇದೀಗ ನಾನೇ ಮೊದಲು.. ನಾನೇ ಕೊನೆ.. ಎಂದು ಮಾತನಾಡಿದ್ದಾರೆ. ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವುದರ ಮೂಲಕ ಹೊಸದೊಂದು ಚರ್ಚೆಗೆ ನಾಂದಿ ಹಾಡಿದ್ಧಾರೆ.

ಹೌದು, ಇಳಯರಾಜಾ ಸಂಗೀತ ನಿರ್ದೇಶನದ ಶಷ್ಟಿಪೂರ್ತಿ ಚಿತ್ರ ಇಂದು { ಮೇ 30 } ತೆರೆಗೆ ಬಂದಿದೆ. ಪವನ್ ಪ್ರಭಾ ನಿರ್ದೇಶನದ ಈ ಚಿತ್ರದಲ್ಲಿ ರಾಜೇಂದ್ರ ಪ್ರಸಾದ್, ರೂಪೇಶ್ ಚೌಧರಿ, ಆಕಾಂಕ್ಷಾ ಸಿಂಗ್, ನಮ್ಮ ಕನ್ನಡದ ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದ ಎಲ್ಲ ಹಾಡುಗಳು ಜನ ಮನ ಗೆದ್ದಿವೆ.
ಇದೇ ಸಮಯದಲ್ಲಿ ಸಂದರ್ಶನವನ್ನು ನೀಡಿರುವ ಇಳಯರಾಜಾ ತಮ್ಮನ್ನು ತಾವು ಹೊಗಳಿಕೊಂಡಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಇಳಯರಾಜಾ ನನ್ನ ಬಗ್ಗೆ ನಾನೇ ಮಾತನಾಡಬೇಕು ಯಾಕೆಂದರೆ ನನ್ನಂತೆ ಈ ಮೊದಲು ಯಾರು ಇರಲಿಲ್ಲ. ಮುಂದೆ ಕೂಡ ಯಾರು ಬರುವುದಿಲ್ಲ ಎಂದು ಹೇಳಿದ್ದಾರೆ. ಸಂಗೀತ ಲೋಕದಲ್ಲಿ ಅನೇಕ ದಿಗ್ಗಜರು ಇದ್ದಾರೆ, ಆದರೆ ನಾನು ತಲುಪಿದ ಹಂತವನ್ನು ಯಾರೂ ತಲುಪಲು ಸಾಧ್ಯ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಇಳಯರಾಜಾ ಅವರ ಈ ಮಾತುಗಳು ಇದೀಗ ಹಲವರನ್ನು ಕೆರಳಿಸಿವೆ. ಹೀಗಾಗಿಯೇ ಇದು ದುರಂಹಕಾರದ ಪರಮಾವಧಿ ಎನ್ನುವ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ವಾಸ್ತವದಲ್ಲಿ ಇಳಯರಾಜಾ ಉತ್ಪ್ರೇಕ್ಷೆಯಾಗಿ ಹೇಳಿದ್ದಲ್ಲ. ಬದಲಿಗೆ ತಮ್ಮ ಬದುಕಿನ ಪ್ರಯಾಣವನ್ನು ನೆನೆದು ಹೇಳಿರುವ ಮಾತುಗಳಿವು. ಹೌದು, ಅಸಲಿಗೆ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರಿಗೆ ಒಬ್ಬರಲ್ಲೊಬ್ಬರು ಗುರುಗಳು ಇದ್ದೇ ಇರುತ್ತಾರೆ. ಯಾರದ್ದಾದರೂ ಬಳಿ ಸಂಗೀತಾಭ್ಯಾಸ ಮಾಡಿಯೇ ಸಂಗೀತ ನಿರ್ದೇಶಕರಾಗಿರುತ್ತಾರೆ.
ಆದರೆ ಇಳಯರಾಜಾಗೆ ಯಾರು ಗುರುಗಳಿಲ್ಲ. ತಮಿಳುನಾಡಿನ ಹಳ್ಳಿಯೊಂದರಲ್ಲಿ ಹುಟ್ಟಿ ಯಾರ ಬೆಂಬಲ ಇಲ್ಲದೇ ತಮ್ಮ ಪರಿಶ್ರಮದಿಂದ ಇಳಯರಾಜಾ ಈ ಹಂತದವರೆಗೆ ತಲುಪಿದ್ದಾರೆ. ಬೆಳೆದಿದ್ದಾರೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ಇಳಯರಾಜಾ ನಾನು ದೇವರನ್ನು ನಂಬುತ್ತೇನೆ, ಸಂಗೀತ ನನಗೆ ದೈವದತ್ತವಾಗಿ ಬಂದಿದ್ದು ಎಂದು ಹೇಳಿದ್ದಾರೆ.
ಇನ್ನು ಇದು ಎಐ ಕಾಲ. ತಂತ್ರಜ್ಞಾನ ಕೆಲಸವನ್ನು ಇನ್ನು ಸುಲಭವಾಗಿಸಿದೆ. ಮುಂಬರುವ ದಿನಗಳಲ್ಲಿ ಸ್ವಂತಿಕೆಯನ್ನೇ ಶಕ್ತಿಯನ್ನಾಗಿಸಿಕೊಳ್ಳುವರ ಸಂಖ್ಯೆ ಕಡಿಮೆಯಾಗಲಿದೆ. ಈ ಎಲ್ಲಾ ಕಾರಣಗಳಿಂದ ಇಳಯರಾಜಾ ತಮ್ಮ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದಾರೆ. ಸಾವಿರಾರು ಚಿತ್ರಗಳಿಗೆ ಕೆಲಸ ಮಾಡಿದವರು ಯಾರೂ ಇಲ್ಲ ಪ್ರಸ್ತುತ ಪೀಳಿಗೆಯಲ್ಲಿ ಅಥವಾ ಮುಂದಿನ ಪೀಳಿಗೆಯಲ್ಲಿ ಕೂಡ ವೈವಿಧ್ಯಮಯ ಸಂಗೀತ ನೀಡುವುದು ಅಸಾಧ್ಯದ ಮಾತು ಎಂಬರ್ಥದಲ್ಲಿ ಹೇಳಿದ್ದಾರೆ.
ಇಳಯರಾಜಾ ಅವರಾಡಿದ ಮಾತಿನ ಹಿಂದಿರುವ ಉದ್ದೇಶವನ್ನು ಅರ್ಥ ಮಾಡಿಕೊಳ್ಳದೇ ಸದ್ಯ ಅನೇಕರು ಇಳಯರಾಜಾ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇದ್ಯಾಕೋ ಅತಿಯಾಯ್ತು ಎನ್ನುವ ಮಾತುಗಳನ್ನಾಡುತ್ತಿದ್ಧಾರೆ.
ಇನ್ನುಳಿದಂತೆ ಸದ್ಯ ಇಳಯರಾಜ ಅಳೆದು ತೂಗಿ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ಧಾರೆ. ಆ ಪೈಕಿ ಪುಟ್ಟ ಗೌರಿ ಮದುವೆ ಖ್ಯಾತಿಯ ರಂಜನಿ ರಾಘವನ್ ನಿರ್ದೇಶನದ 'ಡೀ ಡೀ ಢಿಕ್ಕಿ' ಚಿತ್ರಕ್ಕೆ ಸಂಗೀತವನ್ನು ನೀಡುತ್ತಿರುವುದು ವಿಶೇಷ.


Click it and Unblock the Notifications











