ಮತ್ತೆ ಕೆರಳಿದ ಇಳಯರಾಜ, ₹5 ಕೋಟಿಗೆ ಡಿಮ್ಯಾಂಡ್ ಮಾಡಿದ ಸಂಗೀತ ಸಂತ..!
ಚಿತ್ರರಂಗದಲ್ಲಿ ಕಳ್ಳರ ಸಂಖ್ಯೆ ಹೆಚ್ಚಿದೆ. ಅದು ಕಥೆ ಇರಲಿ ಅಥವಾ ಹಾಡು ಇರಲಿ ವಿಚಾರ ಬೆಳಕಿಗೆ ಬಂದಾಗ ಸ್ಫೂರ್ತಿಯ ಗೀತೆಯನ್ನು ಅನೇಕರು ಹಾಡುತ್ತಾರೆ. ಮತ್ತೂ ಕೆಲವರು ಮೊಂಡುತನದ ಪ್ರದರ್ಶನವನ್ನು ಮಾಡುತ್ತಾರೆ. ಹೀಗಾಗಿಯೇ ಹಾಡು ಅಥವಾ ಕಥೆಯ ಮೂಲ ಸೃಷ್ಟಿಕರ್ತರು ಆಗಾಗ ಕೆರಳಿ ಕೆಂಡವಾಗುತ್ತಾರೆ. ಕಾನೂನು ಸಮರವನ್ನು ಸಾರುತ್ತಾರೆ. ಇದಕ್ಕೆ ಭಾರತೀಯ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳಿವೆ.
ಹೌದು, ಇಳಯರಾಜಾ.. ಭಾರತೀಯ ಚಿತ್ರರಂಗದ ಸಂಗೀತ ಕ್ಷೇತ್ರ ದಂತಕಥೆ. ಇಲ್ಲಿಯವರೆಗೆ ಲೆಕ್ಕ ಇಲ್ಲದಷ್ಟು ಹಾಡುಗಳಿಗೆ ಟ್ಯೂನ್ ಹಾಕಿರುವ ಇಳಯರಾಜಾ ಆಗಾಗ ತಮ್ಮದೇ ಚಿತ್ರರಂಗದವರ ಮೇಲೆ ಕೆಂಡ ಕಾರುತ್ತಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಸದ್ಯ ಇಳಯರಾಜಾ ತಮ್ಮ ಚಿತ್ರರಂಗದ ಅಜಿತ್ ಕುಮಾರ್ ಮತ್ತು ತಂಡದ ವಿರುದ್ಧ ಕಿಡಿ ಕಾರಿದ್ದಾರೆ. ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಹೌದು, ಅಸಲಿಗೆ ಅಜಿತ್ ಕುಮಾರ್ ನಟನೆಯ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿದೆ. ಈ ಚಿತ್ರದಲ್ಲಿ ಹಳೆಯ ತಮಿಳು ಸಿನಿಮಾಗಳ ಹಾಡುಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. 'ಒತ್ತಾ ರುಪಾಯುಮ್ ಥಾರೆನ್..', 'ಇಲಮೈ ಇಧೊ ಇಧೋ..', 'ಎನ್ ಜೋಡಿ ಮಂಜಾ ಕುರುವಿ..' ಹಾಡುಗಳನ್ನು ಮರುಬಳಕೆ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ಹಾಡುಗಳನ್ನು ಸಂಗೀತ ಸಂಯೋಜಕರು ಇಳಯರಾಜಾ ಎಂಬುದು ವಿಶೇಷ. 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾಗೆ ಈ ಹಾಡುಗಳು ತುಂಬ ಪ್ಲಸ್ ಆಗಿವೆ. ಆದರೆ ಈ ಹಾಡುಗಳನ್ನು ಬಳಕೆ ಮಾಡಿಕೊಳ್ಳಲು ಚಿತ್ರತಂಡ ಇಳಯರಾಜಾ ಅವರ ಬಳಿ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ.
ಹೀಗಾಗಿಯೇ ಕೆರಳಿರುವ ಇಳಯರಾಜಾ ಸದ್ಯ ಗುಡ್ ಬ್ಯಾಡ್ ಅಗ್ಲಿ ಚಿತ್ರತಂಡಕ್ಕೆ ಶಾಕ್ ನೀಡಿದ್ದಾರೆ. ತಮ್ಮ ಅನುಮತಿ ಇಲ್ಲದೇ ಹಾಡುಗಳನ್ನು ಬಳಸಿಕೊಂಡಿರುವುದಕ್ಕೆ ಲೀಗಲ್ ನೋಟಿಸ್ ನೀಡಿದ್ದು, ಐದು ಕೋಟಿ ರೂಪಾಯಿ ಹಣವನ್ನು ಪರಿಹಾರ ರೂಪದಲ್ಲಿ ಕೇಳಿದ್ದಾರೆ. ಇನ್ನು ಚಿತ್ರದಲ್ಲಿ ಸಿನಿಮಾಟೋಗ್ರಾಫ್ ಆಕ್ಟ್ ನ ಸ್ಪಷ್ಟ ಉಲ್ಲಂಘನೆಯಾಗಿದ್ದು ನಮ್ಮ ಕಕ್ಷಿದಾರರ ಅನುಮತಿ ಪಡೆಯದೆ ಹಾಡನ್ನು ಬಳಸಿಕೊಳ್ಳಲಾಗಿದೆ ಎಂದು ಲೀಗಲ್ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಚಿತ್ರದಲ್ಲಿ ಬಳಸಿಕೊಂಡಿರುವ ತಮ್ಮ 3 ಹಾಡುಗಳನ್ನು ಈ ಕೂಡಲೇ ತೆಗೆದು ಹಾಕಬೇಕೆಂದು ಆಗ್ರಹಿಸಿರುವ ಇಳಯರಾಜಾ 7 ದಿನಗಳಲ್ಲಿ ಕ್ಷಮೆಯನ್ನು ಕೋರಬೇಕೆಂದು ಆಗ್ರಹಿಸಿದ್ದಾರೆ. ಮತ್ತೊಂದು ಕಡೆ ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಇಳಯರಾಜಾ ವಿರುದ್ದ ತಮ್ಮ ಅಸಮಾಧಾನ ಹೊರ ಹಾಕಿದ್ದು ನಾವು ಆಡಿಯೋ ಕಂಪನಿಯವರ ಬಳಿ ಅನುಮತಿಯನ್ನು ಪಡೆದು ಹಾಡುಗಳನ್ನು ಬಳಸಿಕೊಂಡಿರುವುದಾಗಿ ಹೇಳಿದೆ.
ಅಂದ್ಹಾಗೇ ಈ ಹಿಂದೆ ಮಂಜುಮೇಲ್ ಬಾಯ್ಸ್ ಚಿತ್ರದ ವಿರುದ್ಧ ಕೂಡ ಇಳಯರಾಜಾ ಆರೋಪವನ್ನು ಮಾಡಿದ್ದರು. ಹಾಡು ಕದ್ದಿದ್ದಕ್ಕೆ 'ಗುಣ' ಚಿತ್ರದ 'ಕಣ್ಮಣಿ ಅನ್ಬೋದು ಕಾದಲನ್' ಎನ್ನುವ ಹಾಡನ್ನು ತಮ್ಮ ಅನುಮತಿ ಇಲ್ಲದೇ ಬಳಸಿಕೊಂಡಿದ್ದಕ್ಕೆ ಚಕಾರ ಎತ್ತಿದ್ದರು. ಪರಿಹಾರಕ್ಕಾಗಿ ಒತ್ತಾಯಿಸಿ ಕಾನೂನು ನೋಟಿಸ್ ನೀಡಿದ್ದರು. ಕಾನೂನು ಹೋರಾಟದಲ್ಲಿ ಗೆದ್ದಿದ್ದರು. ಇದೀಗ ಗುಡ್ ಬ್ಯಾಡ್ ಅಗ್ಲಿ ತಂಡದ ವಿರುದ್ಧ ಕಾನೂನು ಸಮರವನ್ನು ಇಳಯರಾಜಾ ಸಾರಿದ್ದಾರೆ.
ಇನ್ನುಳಿದಂತೆ ಸದ್ಯ ಅಜಿತ್ ಅಭಿನಯದ ಗುಡ್ ಬ್ಯಾಡ್ ಅಗ್ಲಿ ಈ ವಿವಾದಗಳ ಹೊರತಾಗಿ ಬಾಕ್ಸಾಫೀಸ್ನಲ್ಲಿ ಹಣವನ್ನು ದೋಚುತ್ತಿದೆ. ಭಾರತದಲ್ಲಿ ಚಿತ್ರದ ಗಳಿಕೆ ಕೇವಲ ಒಂದು ವಾರದಲ್ಲಿ ನೂರು ಕೋಟಿಯ ಗಡಿಯನ್ನು ದಾಟಿದೆ ಎಂದು ಸ್ಯಾಕ್ನಿಲ್ ವೆಬ್ ಸೈಟ್ ವರದಿ ಮಾಡಿದೆ. ಇನ್ನು ಅಜಿತ್ ಅಭಿಮಾನಿಗಳು ಕೂಡ ಚಿತ್ರವನ್ನು ನೋಡಿ ಖುಷಿಯಾಗಿದ್ದು ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ ಎಂದು ತಮಿಳು ಮಾಧ್ಯಮಗಳು ವರದಿಯನ್ನು ಮಾಡಿವೆ.
ಸದ್ಯ ಇಳಯರಾಜಾ ಗುಡ್ ಬ್ಯಾಡ್ ಅಗ್ಲಿ ಚಿತ್ರತಂಡದ ವಿರುದ್ಧ ಕಾನೂನು ಸಮರ ಸಾರಿದ್ದು ಈ ವಿವಾದ ಯಾವಾಗ ಅಂತ್ಯವಾಗುತ್ತೆ, ಇಬ್ಬರ ನಡುವೆ ಈ ಹೋರಾಟದಲ್ಲಿ ಗೆಲ್ಲುವರು ಯಾರು ಎನ್ನುವುದನ್ನು ಕಾದು ನೋಡಬೇಕಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಕ್ಷಮೆ ಕೇಳುತ್ತಾ ಎನ್ನುವುದನ್ನು ಕೂಡ ಕಾದು ನೋಡಬೇಕಿದೆ.


Click it and Unblock the Notifications











