ವಿಜಯ್ ಸೇತುಪತಿಗೆ ಒದ್ದವರಿಗೆ ನಗದು ಬಹುಮಾನ ಘೋಷಣೆ!
ನಟ ವಿಜಯ್ ಸೇತುಪತಿ ವಿರುದ್ಧ ಕೆಲವು ದಿನಗಳ ಹಿಂದಷ್ಟೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲ್ಲೆ ಯತ್ನ ನಡೆದಿದೆ. ಅದೊಂದು ಸಣ್ಣ ಘಟನೆ ಎಂದು ವಿಜಯ್ ಸೇತುಪತಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದೀಗ ಹಿಂದು ಪರ ರಾಜಕೀಯ ಪಕ್ಷಯೊಂದು ವಿಜಯ್ ಸೇತುಪತಿಯನ್ನು ಒದ್ದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.
ಹಿಂದು ಮಕ್ಕಳ್ ಕಚ್ಚಿ ಹೆಸರಿನ ಹಿಂದುಪರ ಸಂಘಟನೆಯ ಮುಖಂಡ ಅರ್ಜುನ್ ಸಂಪತ್ ಎಂಬುವರು ವಿಜಯ್ ಸೇತುಪತಿಯನ್ನು ಒದ್ದವರಿಗೆ ನಗದು ಬಹುಮಾನ ನೀಡುವುದಾಗಿ ಹೇಳಿದ್ದು, ಪ್ರತಿ ಒದೆತಕ್ಕೆ ಸಾವಿರ ರುಪಾಯಿ ಬಹುಮಾನ ಕೊಡುತ್ತೇನೆಂದಿದ್ದಾರೆ. 'ಹಿಂದು ಮಕ್ಕಳ್ ಕಚ್ಚಿ' ಟ್ವಿಟ್ಟರ್ ಪೇಜ್ನಲ್ಲಿಯೂ ಈ 'ಆಫರ್' ಪ್ರಕಟಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಸಂಘದ ಮುಖಂಡ ಅರ್ಜುನ್ ಸಂಪತ್, ''ಬೆಂಗಳೂರಿನಲ್ಲಿ ವಿಜಯ್ ಸೇತುಪತಿ ಮೇಲೆ ಹಲ್ಲೆ ನಡೆದಾಗ ಅವರೊಂದಿಗೆ ಇದ್ದ ವ್ಯಕ್ತಿಯನ್ನು ನಾನು ಮಾತನಾಡಿಸಿದೆ. ಅಂದು ವಿಮಾನದಲ್ಲಿ ಏನಾಯ್ತು ಎಂಬುದನ್ನು ಕೇಳಿ ತಿಳಿದುಕೊಂಡ ನಂತರವೇ ಈ ಆಫರ್ ಘೋಷಿಸಿದೆ'' ಎಂದಿದ್ದಾರೆ.

ಅರ್ಜುನ್ ಸಂಪತ್ ಹೇಳಿದ್ದು ಹೀಗೆ
''ವಿಜಯ್ ಸೇತುಪತಿಗೆ ರಾಷ್ಟ್ರಪ್ರಶಸ್ತಿ ಬಂದಿದ್ದಕ್ಕೆ ಅವರಿಗೆ ಶುಭಾಶಯ ಕೋರಲು ನಟ ಮಹಾ ಗಾಂಧಿ ಮುಂದಾಗಿದ್ದರು. ಆಗ ವಿಜಯ್ ಸೇತುಪತಿ ಇದೊಂದು ದೇಶವೇ ಅಲ್ಲ ಎಂದು ಹೇಳಿ ದೇಶಕ್ಕೆ ಅಪಮಾನ ಮಾಡುವಂಥಹಾ ಮಾತನ್ನಾಡಿದ್ದಾರೆ. ನಂತರ ಮಹಾ ಗಾಂಧಿ, ವಿಜಯ್ ಸೇತುಪತಿಯನ್ನು 'ಪಸುಂಪೋನ್ ಮುತುರಮಾಲಿಂಗಮ್ ತೇವರ್ ಪೂಜಾ' ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಆದರೆ ಅದಕ್ಕೂ ವ್ಯಂಗ್ಯವಾಗಿ ಉತ್ತರಿಸಿದ ವಿಜಯ್ ಸೇತುಪತಿ ಇರುವುದು ಒಬ್ಬನೇ ದೇವರು ಅದುವೇ ಜೀಸಸ್ ಎಂದಿದ್ದಾರೆ. ಇದರಿಂದ ಕೋಪಗೊಂಡ ಗಾಂಧಿ ಸೇತುಪತಿ ಮೇಲೆ ಜಗಳ ಮಾಡಿದ್ದಾನೆ'' ಎಂದಿದ್ದಾರೆ ಅರ್ಜುನ್ ಸಂಪತ್.

ಕ್ಷಮೆ ಕೇಳುವವರೆಗೂ ಒದೆತ
''ವಿಜಯ್ ಸೇತುಪತಿ, ಭಾರತ ದೇಶಕ್ಕೆ ಹಾಗೂ ಪಸುಂಪೋನ್ ಮುತುರಮಾಲಿಂಗಮ್ ಅವರನ್ನು ಅವಮಾನ ಮಾಡಿದ್ದಾನೆ, ಹಾಗಾಗಿ ಆತ ಕ್ಷಮೆ ಕೇಳುವವರೆಗೆ ಯಾರು ಅವನಿಗೆ ಒದೆಯುತ್ತಾರೊ ಅವರಿಗೆ ಒಂದು ಸಾವಿರ ಬಹುಮಾನ ಕೊಡುತ್ತೇನೆ'' ಎಂದಿದ್ದಾರೆ ಅರ್ಜುನ್ ಸಂಪತ್. ಪಸುಂಪೋನ್ ಮುತುರಮಾಲಿಂಗಮ್ ಸ್ವಾತಂತ್ರ್ಯ ಹೊರಾಟಗಾರ ಮತ್ತು ರಾಜಕಾರಣಿ ಆಗಿದ್ದವರು. ಅವರು 'ತೇವರ್' (ದೇವರು) ಸಮುದಾಯದವರಾಗಿದ್ದು ದಕ್ಷಿಣ ತಮಿಳುನಾಡು ಭಾಗದಲ್ಲಿ ಅವರಿಗೆ ಅಪಾರ ಗೌರವಾಧರಗಳಿವೆ.

ಅರ್ಜುನ್ ಸಂಪತ್ ಹೇಳುವುದಕ್ಕೂ ಪೊಲೀಸರು ಹೇಳುವುದಕ್ಕೂ ವ್ಯತ್ಯಾಸವಿದೆ
ಆದರೆ ಅರ್ಜುನ್ ಸಂಪತ್ ಹೇಳಿರುವುದಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಹೇಳುವ ಮಾಹಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ವಿಜಯ್ ಸೇತುಪತಿ ಹಾಗೂ ನಟ ಮಹಾ ಗಾಂಧಿ ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಜಾನ್ಸನ್ ಎಂಬ ಯುವಕ ನಟ ಮಹಾ ಗಾಂಧಿ ಜೊತೆಗೆ ಜಗಳ ಮಾಡಿಕೊಂಡ. ವಿಮಾನ ನಿಲ್ದಾಣದ ಹೊರಗೆ ಮಹಾ ಗಾಂಧಿಯ ವಿರುದ್ಧ ಆ ಯುವಕ ಹಲ್ಲೆಗೆ ಯತ್ನಿಸಿದ ಆ ವೇಳೆ ಮಹಾ ಗಾಂಧಿ ಜೊತೆಗೆ ವಿಜಯ್ ಸೇತುಪತಿ ಸಹ ಇದ್ದರು. ಪೊಲೀಸ್ ಠಾಣೆಯಲ್ಲಿ ಮಹಾ ಗಾಂಧಿಯಾಗಲಿ ಯುವಕ ಜಾನ್ಸನ್ ಆಗಲಿ ಲಿಖಿತ ದೂರು ಸಲ್ಲಿಸಲಿಲ್ಲ ಹಾಗಾಗಿ ಜಾನ್ಸನ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಸ್ಪಷ್ಟನೆ ನೀಡಿರುವ ವಿಜಯ್ ಸೇತುಪತಿ
ಘಟನೆ ಬಗ್ಗೆ ಕೆಲವು ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿರುವ ವಿಜಯ್ ಸೇತುಪತಿ, ''ಅದೊಂದು ಬಹಳ ಸಣ್ಣ ಘಟನೆ ಆದರೆ ಅಲ್ಲಿದ್ದ ಯಾರೊ ಒಬ್ಬರು ಮೊಬೈಲ್ನಲ್ಲಿ ಅದನ್ನು ಸೆರೆಹಿಡಿದಿದ್ದರಿಂದ ವಿಷಯ ದೊಡ್ಡದಾಯಿತು. ಮೊಬೈಲ್ ಇದ್ದವರೆಲ್ಲ ಕ್ಯಾಮೆರಾಮನ್ಗಳಾಗಿದ್ದಾರೆ ಹಾಗಾಗಿ ಇಂಥಹಾ ಸಣ್ಣ ಘಟನೆಗಳಿಗೂ ಪ್ರಾಮುಖ್ಯತೆ ಸಿಗುತ್ತಿದೆ. ಆ ಯುವಕ ಕುಡಿದಿದ್ದ. ವ್ಯಕ್ತಿಯೊಬ್ಬ ತನ್ನ ನಿಯಂತ್ರಣದಲ್ಲಿ ಇಲ್ಲದೇ ಇದ್ದಾಗ ಹಾಗೆ ವರ್ತಿಸುತ್ತಾನೆ. ಮಾಸ್ಕ್ ಹಾಕಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಯಾರು ಕುಡಿದಿದ್ದಾರೆ ಯಾರು ಕುಡಿದಿಲ್ಲ ಎಂಬುದು ಹೇಳುವುದು ಸಹ ಕಷ್ಟ. ಹಲ್ಲೆಗೆ ಮುಂದಾದ ವ್ಯಕ್ತಿ ನನ್ನ ಅಭಿಮಾನಿ ಅಲ್ಲ ಬದಲಿಗೆ, ವಿಮಾನದಲ್ಲಿ ಸಹ ಪ್ರಯಾಣಿಕ. ವಿಮಾನದಲ್ಲಿಯೇ ನಮ್ಮೊಂದಿಗೆ ಜಗಳ ಆರಂಭಿಸಿದ. ವಿಮಾನ ಇಳಿದ ಮೇಲೂ ಜಗಳ ಮುಂದುವರೆಸಿದ'' ಎಂದಿದ್ದಾರೆ.


Click it and Unblock the Notifications











