ಬೆಳ್ಳಂಬೆಳಗ್ಗೆ ತಮಿಳುನಾಡಿನ 40 ಸ್ಥಳಗಳಲ್ಲಿ ಐಟಿ ದಾಳಿ: ಕಾಲಿವುಡ್ಗೆ ಬಿಗ್ ಶಾಕ್!
ಕಾಲಿವುಡ್ನ ಪ್ರಬಲ ಫೈನಾನ್ಶಿಯರ್, ನಿರ್ಮಾಪಕ ಅನ್ಬು ಚೇಳಿಯನ್ಗೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಚೇಳಿಯನ್ಗೆ ಸಂಬಂಧಿಸಿದ 40 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಫೈನಾನ್ಶಿಯರ್ ಅನ್ಬು ಚೇಳಿಯನ್ಗೆ ಸಂಬಂಧಿಸಿದ ಸ್ಥಳಗಳ ಮೇಲೆ ಮೂರನೇ ಬಾರಿಗೆ ಐಟಿ ದಾಳಿ ನಡೆದಿದೆ. ಈ ಹಿಂದೆ ನಟ ಇಳಯದಳಪತಿ ವಿಜಯ್ ಹಾಗೂ ಅನ್ಬು ಅವರ ಮನೆಗಳ ಮೇಲೆ ದಾಳಿ ನಡೆದಾಗ ಕೋಟ್ಯಾಂತರ ರೂಪಾಯಿ ಹಣ ಪತ್ತೆ ಆಗಿತ್ತು. ಇಂದು ಬೆಳಗ್ಗೆ ಚೇಳಿಯನ್ ಮನೆ ಹಾಗೂ ಚೆನ್ನೈ ಮತ್ತು ಮಧುರೆಯಲ್ಲಿರುವ ಗೋಪುರಂ ಸಿನಿಮಾ ಆಫೀಸ್ಗಳಿಗೆ ತಮಿಳುನಾಡಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಆಸ್ತಿಪಾಸ್ತಿಗಳ ಶೋಧ ನಡೆಸಿದ್ದಾರೆ.
ಐಟಿ ಮೂಲಗಳ ಪ್ರಕಾರ, ಕೆಲ ತಮಿಳು ಸಿನಿಮಾ ನಿರ್ಮಾಪಕರ ತೆರಿಗೆ ವಂಚನೆ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದು, ಶೀಘ್ರದಲ್ಲೇ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ. ಹಲವು ದಿನಗಳಿಂದ ಮಾಹಿತಿ ಕಲೆ ಹಾಕಿದ್ದ ಐಟಿ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ 7 ಗಂಟೆಗೆ ಫೈನಾನ್ಶಿಯರ್ ಅನ್ಬು ಚೇಳಿಯನ್ಗೆ ಶಾಕ್ ಕೊಟ್ಟಿದ್ದಾರೆ. ಪೊಲೀಸರ ಬಿಗಿ ಭದ್ರತೆ ಜೊತೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮತ್ತಷ್ಟು ಕಡೆಗಳಲ್ಲಿ ದಾಳಿ ನಡೆಸುವ ಸುಳಿವು ಸಿಗುತ್ತಿದೆ.

ಎಲ್ಲೆಲ್ಲಿ ಐಟಿ ರೇಡ್?
ಅನ್ಬು ಚೇಳಿಯನ್ ಅವರ ಚೆನ್ನೈನ ನುಂಗಂಬಕಂ ಕಮ್ದರ್ ನಗರ್ ನಿವಾಸ ಹಾಗೂ ಟಿ. ನಗರದ ರಾಘವಯ್ಯ ರಸ್ತೆಯ ಆಫೀಸ್ ಮೇಲೆ ದಾಳಿ ನಡೆದಿದೆ. ಇನ್ನು ಚೆನ್ನೈ, ಮಧುರೆ, ಥೇಣಿ, ಕಾಂಚಿಪುರಂ, ತಿರುವಲ್ಲೂರ್ ಮಧುರೆ ಮೆಲ ಮಸಿ ಆಫೀಸ್, ಕಿರತುರೈ, ತೆಪ್ಪಾಕುಲಂ ಸೇರಿದಂತೆ ಹಲವೆಡೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಅನ್ಬು ಚೇಳಿಯನ್ ಯಾರು?
ಕಾಲಿವುಡ್ನ ದೊಡ್ಡ ಫೈನಾನ್ಶಿಯರ್ ಅನ್ಬು ಚೇಳಿಯನ್. ದೊಡ್ಡ ದೊಡ್ಡ ಸಿನಿಮಾಗಳಿಗೆ ಫೈನಾನ್ಸ್ ನೀಡುವ ಅನ್ಬು ತಮಿಳು ಸೂಪರ್ ಸ್ಟಾರ್ಗಳಿಗೆ ಪರಮಾಪ್ತರು. ಗೋಪುರಂ ಫಿಲ್ಮ್ಸ್ ಬ್ಯಾನರ್ನಲ್ಲಿ ಒಂದಷ್ಟು ಸಿನಿಮಾಗಳನ್ನು ನಿರ್ಮಿಸಿರುವ ಅನ್ಬು ಸಾಕಷ್ಟು ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. 'ವೆಳ್ಳೈಕಾರ ದುರೈ', 'ತಂಗ ಮಗನ್', 'ಮರುಧು', 'ಆಂಡವನ್ ಕಟ್ಟಲೈ' ನಿರ್ಮಾಣದ ಸಿನಿಮಾಗಳು.

2020ರಲ್ಲಿ ಅನ್ಬುಗೆ ಐಟಿ ಶಾಕ್
ಎರಡು ವರ್ಷಗಳ ಹಿಂದೆ ಪ್ರಬಲ ಫೈನಾನ್ಶಿಯರ್ ಅನ್ಬು ಚೇಳಿಯನ್ ಮನೆ ಸೇರಿದಂತೆ 38 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ, 65 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದರು. ಅನ್ಬು ಹಾಗೂ ನಟ ಇಳಯ ದಳಪತಿ ವಿಜಯ್ ನಡುವಿನ ಲೆಕ್ಕವಿಲ್ಲದ ಸಾಕಷ್ಟು ವಹಿವಾಟುಗಳನ್ನು ಬಹಿರಂಗಪಡಿಸಿದ್ದಾಗಿ ವರದಿಯಾಗಿತ್ತು.

'ಬಿಗಿಲ್' ವಿಜಯ್ಗೆ ಎದುರಾಗಿತ್ತು ಸಂಕಷ್ಟ
2019ರಲ್ಲಿ ಇಳಯ ದಳಪತಿ ವಿಜಯ್ ನಟನೆಯ 'ಬಿಗಿಲ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಾಕ್ಸಾಫೀಸ್ನಲ್ಲಿ ಕೋಟಿ ಕೋಟಿ ರೂ. ಕೊಳ್ಳೆ ಹೊಡೆದಿತ್ತು. ಸಿನಿಮಾ ನಿರ್ಮಾಣ ಮಾಡಿದ್ದ ಎಜಿಎಸ್ ಗ್ರೂಪ್ಗೆ ಸಂಬಂಧಿಸಿದ ಸುಮಾರು 20 ಕಡೆ ಐಟಿ ದಾಳಿ ನಡೆಸಿದ್ದು, ಚಿತ್ರದ ಆದಾಯ,ಲಾಭ, ವಿಜಯ್ ಪಡೆದ ಸಂಭಾವನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ವಿಚಾರಣೆ ನಡೆಸಲಾಗಿತ್ತು. ಈ ದಾಳಿಯಿಂದ ಖ್ಯಾತ ನಟರಿಗೂ ಢವ ಢವ ಶುರುವಾಗಿದೆ.


Click it and Unblock the Notifications











