Don't Miss!
- Automobiles Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೋಷಿತರ ನೈಜ ಕತೆ 'ಜೈ ಭೀಮ್' ಸಿನಿಮಾಕ್ಕೆ ಆಸ್ಕರ್ ಗೌರವ
ಸೂರ್ಯ ನಟಿಸಿ ನಿರ್ಮಾಣ ಮಾಡಿದ್ದ 'ಜೈ ಭೀಮ್' ತಮಿಳು ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿ ಜನಮನ್ನಣೆ ಗಳಿಸಿತ್ತು. ಜೊತೆಗೆ ಕೆಲವು ವಿವಾದಗಳಿಗೂ ಕಾರಣವಾಗಿತ್ತು. ಇದೀಗ ಈ ಸಿನಿಮಾಕ್ಕೆ ಆಸ್ಕರ್ ಗೌರವ ನೀಡಿದೆ.
ಆಸ್ಕರ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾದ ಮದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ 'ಜೈ ಭೀಮ್' ಸಿನಿಮಾಕ್ಕೆ ಸಂದಿದೆ.
'ಜೈ ಭೀಮ್' ಸಿನಿಮಾದ ಕೆಲವು ದೃಶ್ಯಗಳು ಆಸ್ಕರ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾಗುತ್ತಿದೆ. ಸಿನಿಮಾದ ಕೆಲವು ದೃಶ್ಯಗಳ ಜೊತೆಗೆ ಸಿನಿಮಾದಲ್ಲಿ ತೋರಿಸಲಾಗಿರುವ ಇರುಳರ್ ಜನಾಂಗದ ಕುರಿತು, ಸಿನಿಮಾದ ಕುರಿತು ನಿರ್ದೇಶಕ ಟಿ.ಜೆ.ಜ್ಞಾನವೇಲು ಮಾತನಾಡಿರುವ ವಿಡಿಯೋವನ್ನು ಸಹ ಪ್ರಕಟಿಸಲಾಗಿದೆ.
'ಜೈ ಭೀಮ್' ಸಿನಿಮಾವು 2022ರ ಗೋಲ್ಡನ್ ಗ್ಲೋಬ್ಗೆ 'ಅತ್ಯುತ್ತಮ ಇಂಗ್ಲೀಷೇತರ ಸಿನಿಮಾ' ವಿಭಾಗದಲ್ಲಿ ನಾಮಿನೇಟ್ ಆಗಿದೆ. ಸಿನಿಮಾ ಒಂದಾದರೂ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇದೆ.
ಆಸ್ಕರ್ ಸ್ಪರ್ಧೆಯಿಂದ ಹೊರಬಿದ್ದ 'ಕೂಳಂಗಳ್'
ಆಸ್ಕರ್ ಸ್ಪರ್ಧೆಗೆ ಈ ಬಾರಿ ತಮಿಳಿನ 'ಕೂಳಂಗಳ್' ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿತ್ತು. ಆದರೆ ಸಿನಿಮಾವು ಸ್ಪರ್ಧೆಯಿಂದ ಹೊರಬಿದ್ದಿದೆ. ಭಾರತದ ಸಾಕ್ಷ್ಯಚಿತ್ರ 'ರೈಟಿಂಗ್ ವಿತ್ ಫೈಯರ್' ಮುಂದಿನ ಹಂತಕ್ಕೆ ಆಯ್ಕೆ ಆಗಿದೆ. 'ರೈಟಿಂಗ್ ವಿತ್ ಫೈಯರ್'ಗೆ ಒಂದಾದರೂ ಆಸ್ಕರ್ ಧಕ್ಕುವ ಸಾಧ್ಯತೆ ಇದೆ.
ನೈಜ ಕತೆ ಆಧರಿಸಿದ ಸಿನಿಮಾ 'ಜೈ ಭೀಮ್'
ಇನ್ನು 'ಜೈ ಭೀಮ್' ಸಿನಿಮಾವು ನಿಜ ಕತೆಯನ್ನು ಆಧರಿಸಿದ ಸಿನಿಮಾ ಆಗಿದೆ. ದಲಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಸುಳ್ಳು ಕೇಸಿನಲ್ಲಿ ಕರೆದುಕೊಂಡು ಹೋಗಿ ಲಾಕಪ್ಡೆತ್ ಮಾಡಿ ಆತ ತಪ್ಪಿಸಿಕೊಂಡನೆಂದು ಸುಳ್ಳು ಹೇಳುತ್ತಾರೆ. ಆದರೆ ಆತನ ಗರ್ಭಿಣಿ ಪತ್ನಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾಳೆ. ಆಕೆಗೆ ನ್ಯಾಯವಾದಿ ಚಂದ್ರಶೇಖರನ್ ಸಹಾಯ ಮಾಡುತ್ತಾರೆ.
ವನ್ನಿಯರ್ ಸಮುದಾಯದ ಆಕ್ಷೇಪಣೆ
'ಜೈ ಭೀಮ್' ಸಿನಿಮಾ ವಿವಾದಕ್ಕೂ ಕಾರಣವಾಗಿದೆ. ಸಿನಿಮಾದಲ್ಲಿ ವನ್ನಿಯರ್ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ವನ್ನಿಯರ್ ಸಮುದಾಯವು ಆರೋಪಿಸಿದೆ. ಸಿನಿಮಾದಲ್ಲಿ ಲಾಕಪ್ಡೆತ್ಗೆ ಕಾರಣವಾಗುವ ಪೊಲೀಸ್ ಅಧಿಕಾರಿಯನ್ನು ವನ್ನಿಯರ್ ಸಮುದಾಯದವನೆಂಬಂತೆ ಬಿಂಬಿಸಲಾಗಿದೆ. ಆದರೆ ನಿಜವಾದ ಪ್ರಕರಣದಲ್ಲಿ ಪೊಲೀಸ್ನ ಜಾತಿ ಬೇರೆಯದ್ದಾಗಿತ್ತು ಎಂದು ವನ್ನಿಯರ್ ಸಂಘ ಆರೋಪಿಸಿದೆ. ಇದಕ್ಕೆ ಪ್ರತಿಯಾಗಿ ನಿರ್ದೇಶಕ ಟಿಜೆ ಜ್ಞಾನವೇಲು ಕ್ಷಮಾಪಣೆಯನ್ನೂ ಕೋರಿದ್ದಾರೆ.
ಪ್ರಕಾಶ್ ರೈ ನಟಿಸಿದ್ದ ದೃಶ್ಯಕ್ಕೂ ಆಕ್ಷೇಪ
ಜೊತೆಗೆ ಇದೇ ಸಿನಿಮಾದಲ್ಲಿ ಪ್ರಕಾಶ್ ರೈ ನಟಿಸಿರುವ ದೃಶ್ಯವೊಂದಕ್ಕೂ ತೀವ್ರ ಆಕ್ಷೇಪ ಎದುರಾಗಿತ್ತು. ಪೊಲೀಸ್ ಅಧಿಕಾರಿ ಹಾಗೂ ವಿಶೇಷ ತನಿಖಾಧಿಕಾರಿ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ರೈ ದೃಶ್ಯವೊಂದರಲ್ಲಿ ಒಬ್ಬ ಮಾರ್ವಾಡಿ ವ್ಯಕ್ತಿಯ ವಿಚಾರಣೆ ಮಾಡುತ್ತಿರುತ್ತಾರೆ. ಆ ವ್ಯಕ್ತಿ ಹಿಂದಿಯಲ್ಲಿ ಮಾತು ಆರಂಭಿಸುತ್ತಾನೆ, ಆಗ ಪ್ರಕಾಶ್ ರೈ ಆತನ ಕಪಾಳಕ್ಕೆ ಭಾರಿಸಿ, ತಮಿಳಿನಲ್ಲಿ ಮಾತನಾಡು ಎನ್ನುತ್ತಾರೆ. ಈ ದೃಶ್ಯವೂ ವಿವಾದಕ್ಕೆ ಕಾರಣವಾಗಿತ್ತು. ತನ್ನಿಷ್ಟ ಭಾಷೆ ಮಾತನಾಡಿದ್ದಕ್ಕೆ ಕಪಾಳಕ್ಕೆ ಹೊಡೆಯುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಎದ್ದಿದ್ದವು.
ಐಎಂಡಿಬಿಯಲ್ಲಿ ಟಾಪ್ ರೇಟಿಂಗ್
ಏನೇ ವಿವಾದಗಳು ಇದ್ದರೂ ಸಿನಿಮಾವನ್ನು ಜನ ದೊಡ್ಡ ಸಂಖ್ಯೆಯಲ್ಲಿ ಮೆಚ್ಚಿಕೊಂಡರು. ಅಷ್ಟೆ ಅಲ್ಲದೆ ಸಿನಿಮಾಕ್ಕೆ ಐಎಂಡಿಬಿ ರೇಟಿಂಗ್ ಪಟ್ಟಿಯಲ್ಲಿ ಹಾಲಿವುಡ್ ಸಿನಿಮಾಗಳಿಗಿಂತಲೂ ಉತ್ತಮ ಸ್ಥಾನ ದೊರಕಿತು. 'ಜೈ ಭೀಮ್' ಸಿನಿಮಾವು ಆಲ್ ಟೈಮ್ ಕ್ಲಾಸಿಕ್ ಸಿನಿಮಾಗಳಾದ 'ಶಾಶಂಕ್ ರಿಡಂಪ್ಷನ್', 'ಶಿಂಡರ್ಸ್ ಲಿಸ್ಟ್' ಸಿನಿಮಾಗಳನ್ನು ಸಹ ಹಿಂದಿಕ್ಕಿ ಮೇಲಕ್ಕೇರಿತ್ತು. ಸಿನಿಮಾವನ್ನು ನಟ ಸೂರ್ಯ ಹಾಗೂ ಜ್ಯೋತಿಕಾ ಜಂಟಿಯಾಗಿ ನಿರ್ಮಾಣ ಮಾಡಿದ್ದರು. ಸಿನಿಮಾದಲ್ಲಿ ನಟ ಸೂರ್ಯ ವಕೀಲನ ಪಾತ್ರದಲ್ಲಿ ನಟಿಸಿದ್ದರು.