Jailer: 'ನರಸಿಂಹ'ನನ್ನು ಭೇಟಿ ಮಾಡಿ ಜೈಲರ್ ಸಕ್ಸಸ್ ಆಚರಿಸಿದ ಚಿತ್ರತಂಡ; ಶಿವಣ್ಣನಿಗೆ ಸಿಕ್ತು ದೊಡ್ಡ ಉಡುಗೊರೆ
ಮೊನ್ನೆಯಷ್ಟೇ ( ಆಗಸ್ಟ್ 10 ) ಗುರುವಾರ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಜೈಲರ್ ಬಿಡುಗಡೆಗೊಂಡಿದ್ದು, ಭರ್ಜರಿ ಪ್ರತಿಕ್ರಿಯೆಯನ್ನು ಪಡೆದುಕೊಂಡು ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ. ಕಳೆದ ಅಣ್ಣಾತ್ತೆ ಸಿನಿಮಾದ ಮೂಲಕ ಹೀನಾಯವಾಗಿ ಸೋಲನ್ನು ಕಂಡಿದ್ದ ರಜನಿಕಾಂತ್ ಬೀಸ್ಟ್ ಚಿತ್ರದ ಮೂಲಕ ನೆಲ ಕಚ್ಚಿದ್ದ ನಿರ್ದೇಶಕ ನೆಲ್ಸನ್ ಜತೆ ಕೈ ಜೋಡಿಸಿದ್ದು, ಜೈಲರ್ ಅವತಾರ ತಾಳಿ ಅಭಿಮಾನಿಗಳು ಹಾಗೂ ಸಿನಿ ರಸಿಕರ ಮುಂದೆ ಬಂದಿದ್ದಾರೆ.
ರಜನಿಕಾಂತ್ ಹಾಗೂ ನೆಲ್ಸನ್ ಕಾಂಬಿನೇಶನ್ನ ಮೊದಲ ಚಿತ್ರಕ್ಕೆ ಸಿನಿ ರಸಿಕರು ಮನ ಸೋತಿದ್ದು, ಜೈಲರ್ ಮೊದಲ ದಿನವೇ ಬ್ಲಾಕ್ಬಸ್ಟರ್ ಎನಿಸಿಕೊಳ್ಳಲಾರಂಭಿಸಿದೆ. ಇನ್ನು ಜೈಲರ್ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ವೀಟ್ಗಳು ಹಾಗೂ ಪೋಸ್ಟ್ಗಳು ಹರಿದು ಬರುತ್ತಿದ್ದು, ಇದೇ ಮೊದಲ ಬಾರಿಗೆ ರಜನಿಕಾಂತ್ ನಟನೆಯ ಚಿತ್ರವೊಂದರಲ್ಲಿ ರಜನಿಗಿಂತಲೂ ಬೇರೊಬ್ಬ ಕಲಾವಿದನನ್ನು ತಮಿಳು ಸಿನಿ ರಸಿಕರು ಹೆಚ್ಚಾಗಿ ಹೊಗಳಿ ಬರೆದುಕೊಳ್ಳುತ್ತಿರುವುದನ್ನು ನಾವು ಕಾಣಬಹುದಾಗಿದೆ. ಹೌದು, ಜೈಲರ್ ಚಿತ್ರದಲ್ಲಿ ಕನ್ನಡದ ಸೂಪರ್ ಸ್ಟಾರ್ ಶಿವರಾಜ್ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಮಂಡ್ಯ ಮೂಲದ ಗ್ಯಾಂಗ್ಸ್ಟರ್ ನರಸಿಂಹ ಎಂಬ ಪಾತ್ರವನ್ನು ನಿರ್ವಹಿಸಿರುವ ಶಿವಣ್ಣ ಕಾಣಿಸಿಕೊಳ್ಳುವ ಮೂರ್ನಾಲ್ಕು ದೃಶ್ಯಗಳ ಮೂಲಕವೇ ತಮಿಳು ಸಿನಿ ರಸಿಕರು ತಮ್ಮ ನಟನೆ ಕಂಡು ಹುಚ್ಚೆದ್ದು ಕೂಗುವ ಹಾಗೆ ಮಾಡಿದ್ದಾರೆ. ಹೌದು, ಶಿವಣ್ಣನ ನಟನೆ ಕಂಡ ತಮಿಳು ಸಿನಿ ರಸಿಕರು ಅಕ್ಷರಷಃ ಮನ ಸೋತಿದ್ದಾರೆ. ಕಾಣಿಸಿಕೊಳ್ಳುವುದು ಕೆಲ ದೃಶ್ಯಗಳಲ್ಲಿಯೇ ಆದರೂ ಶಿವರಾಜ್ಕುಮಾರ್ ನಟನೆ ಮಾತ್ರ ಚಿಂದಿ ಎಂದು ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿ ರಸಿಕರು ಕೊಂಡಾಡುತ್ತಿದ್ದಾರೆ.
ರಜನಿಕಾಂತ್ ಸಿನಿಮಾದಲ್ಲಿ ನಟಿಸಿ ರಜನಿಗಿಂತಲೂ ಹೆಚ್ಚಿನ ಪ್ರಶಂಸೆಯನ್ನು ಮತ್ತೊಬ್ಬ ಕಲಾವಿದ ಗಿಟ್ಟಿಸಿಕೊಳ್ಳುತ್ತಿರುವುದು, ಅದರೂ ಸಹ ಕೇವಲ ಅತಿಥಿ ಪಾತ್ರದ ಮೂಲಕ ಪಡೆದುಕೊಳ್ಳುತ್ತಿರುವುದು ಇದೇ ಮೊದಲು ಎಂದೇ ಹೇಳಬಹುದು. ಇಷ್ಟರ ಮಟ್ಟಕ್ಕೆ ಶಿವರಾಜ್ಕುಮಾರ್ ಅಬ್ಬರಿಸುತ್ತಿದ್ದು, ತಮಿಳು ಸಿನಿ ರಸಿಕರು ಇನ್ನು ಮುಂದಿನ ಶಿವರಾಜ್ಕುಮಾರ್ ನಟನೆಯ ಸಿನಿಮಾಗಳನ್ನು ತಮಿಳಿಗೂ ಸಹ ಡಬ್ ಮಾಡಿ ಬಿಡುಗಡೆ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಅಲ್ಲದೇ ಶಿವಣ್ಣ ನಟನೆಯ ಕನ್ನಡ ಸಿನಿಮಾಗಳನ್ನು ಓಟಿಟಿಯಲ್ಲಿ ನೋಡಿ ಹಾಡಿ ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ.
ಹೀಗೆ ದೊಡ್ಡ ಮಟ್ಟದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿರುವ ಶಿವರಾಜ್ಕುಮಾರ್ ಅವರನ್ನು ಜೈಲರ್ ಚಿತ್ರದ ಕರ್ನಾಟಕ ವಿತರಕರಾದ ವೆಂಕಟೇಶ್ ಹಾಗೂ ಜಯಣ್ಣ ಭೇಟಿ ಮಾಡಿ ಸನ್ಮಾನ ಮಾಡಿ, ವೆಂಕಟೇಶ್ವರ ಮೂರ್ತಿಯನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಫೋಟೊಗಳನ್ನು ಎವಿ ಮೀಡಿಯಾದ ಮಾಲೀಕ ವೆಂಕಟೇಶ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಶಿವಣ್ಣನನ್ನು ಭೇಟಿಯಾಗಿ ಜೈಲರ್ ಚಿತ್ರದ ಯಶಸ್ಸಿಗೆ ಅಭಿನಂದಿಸಿದ್ದು ಒಳ್ಳೆಯ ಸಂದರ್ಭವಾಗಿದೆ. ಚಿತ್ರದಲ್ಲಿ ಶಿವರಾಜ್ಕುಮಾರ್ ಅವರು ನರಸಿಂಹನಾಗಿ ಅಬ್ಬರಿಸಿ ಚಿತ್ರಮಂದಿರಗಳ ಪರದೆ ಹೊತ್ತಿ ಉರಿಯುವಂತಹ ಪ್ರದರ್ಶನ ನೀಡಿದ್ದಾರೆ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











