"ನಾನು ಈ ಸ್ಥಾನದಲ್ಲಿ ಗೂಟ ಹೊಡ್ಕೊಂಡು ಇರ್ತೀನಿ ಅನ್ನಲ್ಲ.. ದೇವ್ರು ಸಾಕು ಬಾ ಅಂತ ಕರ್ಕೊಂಡ್ ಬಿಡ್ತಾನೆ"
ಡಾ. ರಾಜ್ಕುಮಾರ್ ಹಿರಿಮಗ ಶಿವರಾಜ್ಕುಮಾರ್ ಸಿಕ್ಕಾಪಟ್ಟೆ ಸಿಂಪಲ್. ಅಷ್ಟೇ ಹಂಬಲ್. ಶಿವಣ್ಣ ಕನ್ನಡಿ ತರ ನಾವು ಹೇಗೆ ಇರ್ತಿವೋ ಅವ್ರು ಹಾಗೇ ಇರ್ತಾರೆ ಎಂದು ಅಭಿಮಾನಿಗಳು ಹೇಳುತ್ತಿರುತ್ತಾರೆ. ಹ್ಯಾಟ್ರಿಕ್ ಹೀರೊ ಯಾವಾಗಲೂ ಸಿಕ್ಕಾಪಟ್ಟೆ ಜಾಲಿಯಾಗಿ ಇರ್ತಾರೆ. ಸ್ಟಾರ್ ನಟ ಎನ್ನುವ ಹಮ್ಮು ಬಿಮ್ಮು ಎಂದು ತೋರಿದವರಲ್ಲ. ಅದಕ್ಕೆ ಅಭಿಮಾನಿಗಳಿಗೆ ಶಿವಣ್ಣ ಅಂದ್ರೆ ಅಚ್ಚುಮೆಚ್ಚು.
ಇತ್ತೀಚೆಗೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನೋಡಲು ಶಿವಣ್ಣ ಚಿತ್ರಮಂದಿರಕ್ಕೆ ಬಂದಿದ್ದರು. ಈ ವೇಳೆ ಜನರ ಗುಂಪಿನಲ್ಲಿದ್ದ ಯುವತಿಯೊಬ್ಬಳು ಶಿವಣ್ಣನ ಜೊತೆ ಫೋಟೊ ಕೇಳಿದ್ದಳು. ಮಾತನಾಡುತ್ತ ಮುಂದೆ ಹೋಗುತ್ತಿದ್ದ ಶಿವಣ್ಣ ಕೂಡಲೇ ಆಕೆಯ ಗೊಣಗಾಟ ಕೇಳಿ ಆಕೆಯಂತೆಯೇ ತಮಾಷೆಯಾಗಿ ಮಾತನಾಡಿ ಚಮಕ್ ಕೊಟ್ಟಿದ್ದರು. ಬಳಿಕ ಆಕೆ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು.

ಸದ್ಯ ಶಿವರಾಜ್ಕುಮಾರ್ ತಮಿಳಿನ 'ಜೈಲರ್' ಚಿತ್ರದಲ್ಲಿ ನಟಿಸಿದ್ಧಾರೆ. ರಜನಿಕಾಂತ್ ಜೊತೆ ಕೆಲವೊತ್ತು ತೆರೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಫ್ಯಾಮಿಲಿ ಸಮೇತ ಶಿವಣ್ಣ ಚೆನ್ನೈನಲ್ಲಿ ನಡೆದು 'ಜೈಲರ್' ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಚೆನ್ನೈನಲ್ಲೇ ಹುಟ್ಟಿ ಬೆಳೆದ ನಾಗರಾಜು ಶಿವ ಪುಟ್ಟಸ್ವಾಮಿ ಅಲಿಯಾಸ್ ಶಿವರಾಜ್ಕುಮಾರ್ ಬಹಳ ಚೆನ್ನಾಗಿ ತಮಿಳು ಮಾತನಾಡುತ್ತಾರೆ. ತಮಿಳಿನ ಬಿಹೈಂಡ್ವುಡ್ಸ್ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಶಿವಣ್ಣ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.
ಸ್ಟಾರ್ ನಟರಿಗೆ ಎಲ್ಲರೊಟ್ಟಿಗೆ ಬೆರೆಯಲು ಆಗುವುದಿಲ್ಲ. ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ನೀವು ಸಾಮಾನ್ಯರಂತೆ ಇರಲು ಸಾಧ್ಯವಿಲ್ಲ ಅಲ್ವಾ? ಎನ್ನುವ ಪ್ರಶ್ನೆಗೆ ಶಿವಣ್ಣ ಉತ್ತರಿಸಿದ್ದಾರೆ. "ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಬಹಳ ಕೂಲ್ ಆಗಿ ಇರ್ತೀನಿ. ನಾನು ಆರಾಮಾಗಿ ಇರಬೇಕು. ನನಗೆ ಹೊರಗೆ ತಿನ್ನೋಕೆ ಇಷ್ಟಪಡ್ತೀನಿ. ರಸ್ತೆ ಬದಿಯಲ್ಲೇ ನಿಂತೇ ಇಡ್ಲಿ ತಿನ್ನೋಕೆ ಇಷ್ಟ. ಪ್ಲಾಟ್ಫಾರ್ಮ್ನಲ್ಲಿ ಕೂತು ಟೀ ಕುಡಿಯಲು ಇಷ್ಟ. ನಾನು ನನ್ನನ್ನು ಬದಲಿಸಿಕೊಳ್ಳೋಕೆ ಸಾಧ್ಯವಿಲ್ಲ. ನಾನು ಇರುವುದೇ ಹಾಗೆ"
"ಅಭಿಮಾನಿಗಳು ಪ್ರೀತಿ ತೋರಿಸುತ್ತಾರೆ ಅಂದ್ರೆ ಯಾರಿಗ್ ಇಷ್ಟ ಇರಲ್ಲ ಹೇಳಿ. ಅದು ಬಹಳ ಇಷ್ಟ. ಎಲ್ಲರನ್ನು ಎಲ್ಲರೂ ಕೇಳಲ್ಲ ಅಲ್ಲವೇ. ಯಾರಾದರ ಬಂದು ನನ್ನನ್ನು ಫೋಟೊ ಕೇಳಿದರೆ ಖುಷಿಯಾಗುತ್ತದೆ. ಅರೇ ನನ್ನನ್ನು ನೋಡಿ ಯಾರೋ ಬಂದು ಫೋಟೊ ತೆಗೆದುಕೊಳ್ಳುತ್ತಾರೆ. ಅಂತಹ ಒಂದು ರೀತಿಯ ಪೊಗರು, ಗತ್ತು ಇರುತ್ತದೆ. ಅದೆಲ್ಲ ಇದ್ದರೆ ಅಲ್ಲವೇ ಒಬ್ಬ ಮನುಷ್ಯ. ಅದೆಲ್ಲಾ ಬೇಡ ಅಂತ ನಾನು ನಟಿಸಲ್ಲ. ಅದನ್ನೆಲ್ಲಾ ಬಹಳ ಇಷ್ಟಪಡುತ್ತೀನಿ."
"ನಾನು ಹೆಚ್ಚು ಬಾಡಿಗಾರ್ಡ್ಗಳನ್ನು ಜೊತೆಗೆ ಇಟ್ಟುಕೊಳ್ಳಲ್ಲ. ಆದರೆ ಇರ್ತಾರೆ ಏನು ಮಾಡೋಕ್ಕಾಗಲ್ಲ ಬೇಕು. ಅವರಿಗೂ ಹೇಳ್ತೀನಿ ದಯವಿಟ್ಟು ನನ್ನ ಹಿಂದೆ ಸುತ್ತಬೇಡಿ. ಸ್ವಲ್ಪ ದೂರ ಇರಿ ಎನ್ನುತ್ತೇನೆ. ಯಾಕಂದರೆ ನನಗೆ ಇಷ್ಟ ಆಗಲ್ಲ. ನಾವು ಇವತ್ತು ಏನೇ ಆಗಿದ್ದರೂ ಅದು ಆ ಜನರಿಂದ. ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನಾನಾಗಿಯೇ ಬಂದೆ ಅನ್ನೋಕೆ ಸಾಧ್ಯವಿಲ್ಲ. ಏನೇ ಆದರೂ ಆ ಜನ ಓಕೆ ಅಂದಮೇಲೆ ಎಲ್ಲವೂ ಸಿಗುವುದು"

"ಜನ ಹೇಳುವವರೆಗೂ ಹಿಟ್, ಫ್ಲಾಪ್ ನಾವು ಹೇಳೊಕೆ ಸಾಧ್ಯವಿಲ್ಲ. ಕೊಂಚ ನೋವಾಗುತ್ತದೆ. ಆದರೂ ಪರವಾಗಿಲ್ಲ. ಹಾಗಂತ ನಾನು ಬೈಯುವುದಿಲ್ಲ ಅಂತ ಅಲ್ಲ. ಕೋಪ ಬಂದರೆ ಬೈಯ್ತೀನಿ. ನಾನು ಇರುವುದೇ ಹಾಗೆ. ನಾನು ಅವರನ್ನು ಆ ರೀತಿ ಒಪ್ಪಿಕೊಂಡಿದ್ದೀನಿ. ಅವರು ಅದೇ ರೀತಿ ಒಪ್ಪಿಕೊಳ್ಳಬೇಕು. ಸ್ನೇಹಿತರನ್ನು ಸ್ನೇಹಿತರಂತೆ ಸ್ವೀಕರಿಸಬೇಕು. ಇಲ್ಲದಿದ್ದರೆ ಸ್ನೇಹ ಮಾಡಬೇಡ."
"ನಾನು ಒಬ್ಬನೇ ಅಂತ ಅಲ್ಲ. ನನ್ನ ರೀತಿ ಸಾಕಷ್ಟು ಜನ ಇದ್ದಾರೆ. ನಾನು ಅವಕಾಶವಾದಿ ಅಲ್ಲ. ಎಲ್ಲರಿಗೂ ಅವಕಾಶ ಕೊಡಬೇಕು. ನಾನೇ ಈ ಜಾಗದಲ್ಲಿ ಇರ್ತೀನಿ ಅಂದರೆ ಹೇಗೆ? ಆಗ ದೇವರು ಹೇಳ್ತಾನೆ? ಸಾಕು ಬಾರಪ್ಪ ನಿಜಗೆ ಆ ಜಾಗ. ಮೇಲೆ ಬಾ ಎಂದು ಕರೆದುಕೊಂಡುಬಿಡುತ್ತಾನೆ. ಯಾರೋ ಇದ್ದಾರೆ ನಿನ್ನ ಜಾಗಕ್ಕೆ ಎನ್ನುತ್ತಾನೆ" ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications











