Vinayakan: ಜೈಲರ್ ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ ವಿನಾಯಕನ್ ನಿಜವಾಗಿ ಪಡೆದ ಸಂಭಾವನೆ ಎಷ್ಟು?
ತಲೈವ ರಜನಿಕಾಂತ್ ನಟನೆಯ 'ಜೈಲರ್' ಬಿಡುಗಡೆಯಾದಾಗಿನಿಂದ, ಉತ್ತಮ ಪ್ರದರ್ಶನ ಕಂಡಿದೆ. ಸಿನಿಮಾ ಚಿತ್ರಮಂದಿರಗಳಲ್ಲಿ ಇರುವಾಗಲೇ ಒಟಿಟಿಗೆ ಕಾಲಿಟ್ಟಿದೆ. ಸಿನಿಮಾದಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಾತ್ರವರ್ಗದ ಸಂಭಾವನೆ ಬಗ್ಗೆ ಸಾಕಷ್ಟು ವದಂತಿಗಳಿವೆ. ಅದರಲ್ಲೂ ಖಳನಟನಾಗಿ ಮಿಂಚಿದ ವಿನಾಯಕನ್ ಪಡೆದದ್ದು ಎಷ್ಟು ಎಂಬುವ ಕುರಿತು ಹಲವು ವರದಿಗಳು 35 ಲಕ್ಷ ಎಂದು ಹೇಳಿವೆ. ಹಾಗಾದರೆ ಅವರು ಪಡೆದ ನಿಜವಾದ ಸಂಭಾವನೆ ಎಷ್ಟು ಎಂಬುದನ್ನು ಅವರೇ ತಿಳಿಸಿದ್ದಾರೆ ನೋಡಿ.
ಕೋಟಿ ಕೋಟಿ ಬಾಚಿಕೊಂಡಿರುವ ಜೈಲರ್ ಸಿನಿಮಾ ನಿರ್ಮಾಪಕರು ನಟರನ್ನು ,ತಂತ್ರಜ್ಞರನ್ನು ಮರೆತಿಲ್ಲ. ಸನ್ ಪಿಕ್ಚರ್ಸ್ನ ಕಲಾನಿಧಿ ಮಾರನ್ ಅವರು ಜೈಲರ್ ಸಕ್ಸಸ್ಗೆ ಕಾರಣರಾದ ಎಲ್ಲರಿಗೂ ಗಿಫ್ಟ್ ನೀಡಿ ಸಂಭ್ರಮಿಸಿದ್ದಾರೆ. ರಜನಿಕಾಂತ್, ನೆಲ್ಸನ್ ಕುಮಾರ್, ಅನಿರುದ್ಧ ರವಿಚಂದರ್ ಸೇರಿದಂತೆ ಚಿತ್ರದ ಭಾಗವಾಗಿದ್ದ ಎಲ್ಲರಿಗೂ ಉಡುಗೊರೆ ನೀಡಿದ್ದಾರೆ.

35 ಲಕ್ಷ ಸಂಭಾವನೆ ಪಡೆದರಾ ವಿನಾಯಕನ್?
ಹಲವು ಮಾಧ್ಯಮಗಳು ವಿನಾಯಕ್ 35 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂಬ ವರದಿಗಳನ್ನು ಪ್ರಕಟಿಸಿದ್ದವು. ಇದಕ್ಕೆ ಸಾರ್ಕ್ ಲೈವ್ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿರುವ ಅವರು, ಆ ಮೊತ್ತವನ್ನು ಮೂರು ಪಟ್ಟು ಹಣ ಸ್ವೀಕರಿಸಿರುವುದಾಗಿ ಬಹಿರಂಗಪಡಿಸಿದ್ದಾರೆ.
"ವದಂತಿಗಳು ಹೇಳುವಂತೆ 'ಜೈಲರ್' ಚಿತ್ರಕ್ಕಾಗಿ ನನಗೆ 35 ಲಕ್ಷ ಸಂಭಾವನೆ ನೀಡಿಲ್ಲ. ನಿರ್ಮಾಪಕರು ಇದನ್ನು ಕೇಳಿಸಿಕೊಂಡಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಈ ವದಂತಿಯ ಮೂರು ಪಟ್ಟು ಹಣವನ್ನು ಪಡೆದಿದ್ದೇನೆ. 35 ಲಕ್ಷ ವದಂತಿಯು ಕೆಲವು ಕಿಡಿಗೇಡಿಗಳು ಸೃಷ್ಟಿಸಿರುವುದು. ನಾನು ಅದಕ್ಕಿಂತ ಹೆಚ್ಚಿನದನ್ನು ಪಡೆದುಕೊಂಡಿದ್ದೇನೆ. ನಿರ್ಮಾಪಕರು ನಾನು ಕೇಳಿದ್ದನ್ನು ಸರಿಯಾಗಿ ಕೊಟ್ಟರು. ಸೆಟ್ಗಳಲ್ಲಿ ನನ್ನನ್ನು ರಾಜಮನೆತನದವರಂತೆ ನಡೆಸಿಕೊಳ್ಳಲಾಯಿತು. ಒಳ್ಳೆಯ ಉಪಚಾರ ಮತ್ತು ಸಂಭಾವನೆ ನೀಡಿದ್ದಾರೆ" ಎಂದು ನಟ ಹೇಳಿದ್ದಾರೆ.
ವಿನಾಯಕನ್ ಅವರು ತಮ್ಮ ವೃತ್ತಿಜೀವನದಲ್ಲಿ ಈ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾದ ಹಾಗೆ ಬೇರೆ ಸಿನಿಮಾದಲ್ಲಿ ಭಾಗಿಯಾಗಿಲ್ಲ ಎಂದ ಹೇಳಿದ್ದಾರೆ. ಜೈಲರ್ ಸಿನಿಮಾದ ವರ್ಮನ್ ಪಾತ್ರದಲ್ಲಿ ಸುಮಾರು ಒಂದು ವರ್ಷ ಉಳಿಯಬೇಕಾಗಿತ್ತು ಎಂದಿದ್ದಾರೆ. ಇದರಿಂದ ಹಲವು ಸಿನಿಮಾ ಬಿಟ್ಟಿರುವ ಬಗ್ಗೆಯೂ ಮಾತನಾಡಿದ್ದಾರೆ. "ಜೈಲರ್ನಲ್ಲಿ ಬ್ಯುಸಿ ಇದ್ದ ಕಾರಣ ಕ್ಯಾಪ್ಟನ್ ಮಿಲ್ಲರ್ ಪಾತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ" ಎಂದು ಮಾಹಿತಿ ನೀಡಿದ್ದಾರೆ.

ನಾನು ಸಮಾಜವಾದಿ: ವಿನಾಯಕನ್
ತಮ್ಮ ಜೀವನದ ಬಗ್ಗೆ ಮಾತನಾಡಿರುವ ವಿನಾಯಕನ್, "ನನಗೆ ರಾಜಕೀಯದಲ್ಲಿ ಆಸಕ್ತಿ ಇದೆ, ಆದರೆ ನನಗೆ ಸಂಘಟನಾ ರಾಜಕಾರಣದಲ್ಲಿ ನಂಬಿಕೆ ಇಲ್ಲ. ಎಡಪಂಥೀಯ ರಾಜಕೀಯ ಹೊಂದಿರುವ ನನ್ನ ಕುಟುಂಬದಂತೆ ನಾನು ಎಡಪಕ್ಷಕ್ಕೆ ಮತ ಹಾಕುತ್ತೇನೆ. ನನ್ನ ಹೆಚ್ಚಿನ ಸಂಬಂಧಿಕರು ಪಕ್ಷದ ಸದಸ್ಯತ್ವವನ್ನು ಹೊಂದಿದ್ದಾರೆ. ಆದರೆ ನಾನು ಸದಸ್ಯತ್ವ ಹೊಂದಿಲ್ಲ. ನಾನು ನಂಬಿಕೆಯುಳ್ಳವನು, ನಿರ್ದಿಷ್ಟವಾಗಿ ನಾನು ಸಮಾಜವಾದಿ" ಎಂದು ಹೇಳಿದ್ದಾರೆ.
ತಾನು ತುಂಬಾ ಜನರಿರುವ ಕಡೆ ಆಕ್ಟ್ ಮಾಡಲು ಹೆಚ್ಚು ಇಷ್ಟ ಪಡುವುದಿಲ್ಲ ಎಂದು ವಿನಾಯಕನ್ ವಿವರಿಸಿದರು. ಅದಕ್ಕಾಗಿಯೇ ಅವರು ಹೆಚ್ಚು ಏಕಾಂಗಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆ ಬಗ್ಗೆ ಮಾತನಾಡಿ, "ನಾನು ಏನು ಹೇಳಲು ಬಯಸುತ್ತೇನೋ ಅದನ್ನು ವ್ಯಕ್ತಪಡಿಸಲು ನಾನು ಸಾಮಾಜಿಕ ಮಾಧ್ಯಮವನ್ನು ಬಳಸುತ್ತೇನೆ. ಅದು ಉದ್ದೇಶಿತ ಪ್ರೇಕ್ಷಕರನ್ನು ತಲುಪಿದ ನಂತರ, ನಾನು ನನ್ನ ಪೋಸ್ಟ್ ಅನ್ನು ತೆಗೆದುಹಾಕುತ್ತೇನೆ. ಹಾಗಂತ ಆ ಪೋಸ್ಟ್ ಅನ್ನು ಹಿಂತೆಗೆದುಕೊಂಡೆ ಅಂತಲ್ಲ. ಅವುಗಳನ್ನು ಫಿಲ್ಟರ್ ಮಾಡುವ ಪ್ರಕ್ರಿಯೆ" ಎಂದು ಸ್ಪಷ್ಟತೆ ನೀಡಿದ್ದಾರೆ.


Click it and Unblock the Notifications











