Jana Nayagan Release Date: ಬಗೆ ಹರಿದ ಸಮಸ್ಯೆ? 'ಜನ ನಾಯಗನ್' ಹೊಸ ರಿಲೀಸ್ ಡೇಟ್ ಫಿಕ್ಸ್
ತಮಿಳಿನ 'ಜನ ನಾಯಗನ್' ಸಿನಿಮಾ ಬಿಡುಗಡೆ ಪದೇ ಪದೆ ಮುಂದಕ್ಕೆ ಹೋಗ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆಯಿಂದ ಕೊನೆ ಕ್ಷಣದಲ್ಲಿ ಗೊಂದಲ ಉಂಟಾಗಿತ್ತು. ಬಳಿಕ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಹಾಗಾಗಿ ಸಿನಿಮಾ ತೆರೆಗೆ ಬರಲಿಲ್ಲ. ಅಂತೂ ಇಂತೂ ಸಮಸ್ಯೆ ಬಗೆಹರಿದು ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವ ಚರ್ಚೆ ಶುರುವಾಗಿದೆ.
ದಳಪತಿ ವಿಜಯ್ ತಮಿಳುನಾಡು ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಟಿವಿಕೆ ಪಕ್ಷ ಸ್ಥಾಪಿಸಿ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಪೊಲಿಟಿಕಲ್ ಎಂಟ್ರಿಗೆ 'ಜನ ನಾಯಗನ್' ಚಿತ್ರವನ್ನು ವೇದಿಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಬಿಡುಗಡೆಗೆ ಸಂಕಷ್ಟ ಎದುರಾಗಿದೆ ಎನ್ನುವ ಚರ್ಚೆ ಕೂಡ ನಡೀತಿದೆ. ಇದೆಲ್ಲದರ ನಡುವೆ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಸಿನಿಮಾ ಬಿಡುಗಡೆ ಮಾಡಬೇಕಿದೆ. ಚುನಾವಣೆ ನೀತಿ ಸಂಹಿತೆ ಜಾರಿ ಆಗುವ ಮುನ್ನ ಸಿನಿಮಾ ತೆರೆಗೆ ಬರಬೇಕಿದೆ. ಇಲ್ಲದಿದ್ದರೆ ಮತ್ತೆ 3 ತಿಂಗಳ ಕಾಯಬೇಕಾಗಬಹುದು.

'ಜನ ನಾಯಗನ್' ಚಿತ್ರದ ಸೆನ್ಸಾರ್ ಪ್ರಮಾಣ ಪತ್ರವನ್ನು ಸಿಬಿಎಫ್ಸಿ ನಿರಾಕರಿಸಿದೆ. ವಿಜಯ್ ತಮ್ಮ ರಾಜಕೀಯ ಪ್ರವೇಶಕ್ಕೆ ಚಿತ್ರವನ್ನು ಬಳಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಒಂದಷ್ಟು ದೃಶ್ಯ, ಸಂಭಾಷಣೆಯನ್ನು ಸೇರಿಸಲಾಗಿದೆ. ತಮ್ಮ ಪಕ್ಷ ಸಿದ್ದಾಂತ, ಆದರ್ಶಗಳನ್ನು ಪ್ರಚಾರ ಮಾಡುವ ಪ್ರಯತ್ನ ಮಾಡಿದ್ದಾರೆ, ಎದುರಾಳಿ ಪಕ್ಷಗಳನ್ನು ಟೀಕಿಸುವ ಕೆಲಸ ಮಾಡಿದ್ದಾರೆ. ಇದೇ ಕಾರಣಕ್ಕೆ ಸಿಬಿಎಫ್ಸಿ ಚಿತ್ರಕ್ಕೆ ಸರ್ಟಿಫಿಕೇಟ್ ಕೊಡಲು ನಿರಾಕರಿಸುತ್ತಿದೆ. ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರಿದೆ.
ಸದ್ಯ ಆಕ್ಷೇಪ ವ್ಯಕ್ತವಾಗಿರು ಸಂಭಾಷಣೆ ಹಾಗೂ ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ಒಪ್ಪಿಕೊಳ್ಳುವ ಮನಸ್ಸು ಮಾಡಿದೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಸೆನ್ಸಾರ್ ಸಮಸ್ಯೆ ಬಗೆಹರಿದು ಸಿನಿಮಾ ಬಿಡುಗಡೆಗೆ ಅನುಮತಿ ಸಿಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಫೆಬ್ರವರಿ 20ರಂದು ಸಿನಿಮಾ ತೆರೆಗೆ ಬರಬಹುದು ಎನ್ನುವ ಚರ್ಚೆ ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ 'ಜನ ನಾಯಗನ್'. ಬಾಲಕೃಷ್ಣ ಮಾಡಿದ್ದ ಪಾತ್ರವನ್ನು ವಿಜಯ್ ನಿಭಾಯಸಿದ್ದಾರೆ. ಪೂಜಾ ಹೆಗ್ಡೆ ನಾಯಕಿಯಾಗಿ ಮಿಂಚಿದ್ದು ಮಮಿತಾ ಬೈಜು ಮಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತೆಲುಗಿನಲ್ಲಿ ಶ್ರೀಲೀಲಾ ಈ ಪಾತ್ರ ಮಾಡಿದ್ದರು. ಅನಿರುದ್ಧ್ ರವಿಚಂದರ್ ಸಂಗೀತದಲ್ಲಿ ಹಾಡುಗಳು ಹಿಟ್ ಆಗಿದೆ.
350 ಕೋಟಿ ರೂ. ಬಜೆಟ್ನಲ್ಲಿ 'ಜನ ನಾಯಗನ್' ಚಿತ್ರ ನಿರ್ಮಾಣವಾಗಿದೆ. 200 ಕೋಟಿ ರೂ.ಗೂ ಹೆಚ್ಚು ಸಂಭಾವನೆ ವಿಜಯ್ ಪಡೆದಿದ್ದಾರೆ. ಇದು ವಿಜಯ್ ಕೊನೆಯ ಸಿನಿಮಾ ಎನ್ನಲಾಗ್ತಿದೆ. ಮತ್ತೆ ಸಿನಿಮಾಗಳಲ್ಲಿ ದಳಪತಿ ನಟಿಸೋ ಬಗ್ಗೆ ಖಚಿತ ಮಾಹಿತಿ ಇಲ್ಲ. ಹಾಗಾಗಿ ಅಭಿಮಾನಿಗಳು ಚಿತ್ರಕ್ಕಾಗಿ ಕಾತರದಿಂದ ಕಾಯುವಂತಾಗಿದೆ.
'ಭಗವಂತ್ ಕೇಸರಿ' ರೆಗ್ಯುಲರ್ ಕಮರ್ಷಿಯಲ್ ಸಿನಿಮಾ. ಆದರೆ ವಿಜಯ್ ಇದೇ ಕಥೆಯನ್ನು ತಮ್ಮ ಕೊನೆಯ ಚಿತ್ರಕ್ಕೆ ಯಾಕೆ ಆಯ್ಕೆ ಮಾಡಿಕೊಂಡರು ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ವಿನೋದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಟ್ರೈಲರ್, ಸಾಂಗ್ಸ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ.
'ಜನ ನಾಯಗನ್' ಸಿನಿಮಾ ರಿಲೀಸ್ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ ಎನ್ನುವುದು ವಿಜಯ್ ಬೇರಸಕ್ಕೂ ಕಾರಣವಾಗಿದೆ. ಈ ಚಿತ್ರದಿಂದ ನಿರ್ಮಾಪಕರಿಗೆ ಸಮಸ್ಯೆ ಆಗಬಾರದು ಎಂದು ಬೇಸರ ವ್ಯಕ್ತಪಡಿಸಿದ್ದರು. 'ಟಾಕ್ಸಿಕ್' ಹಾಗೂ 'ಕೆಡಿ' ರೀತಿಯ ದೊಡ್ಡ ದೊಡ್ಡ ಸಿನಿಮಾಗಳನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡ್ತಿದೆ. 'ಜನ ನಾಯಗನ್' ಸಿನಿಮಾ ಬೇಗ ರಿಲೀಸ್ ಆಗಬೇಕಿದೆ. ಇಲ್ಲದಿದ್ದರೆ ಆ ಎರಡು ಚಿತ್ರಗಳ ಮೇಲೆ ಪರಿಣಾಮ ಬೀರಲಿದೆ.


Click it and Unblock the Notifications











