ಸಂಕ್ರಾಂತಿ 2026; ಬಾಕ್ಸಾಫೀಸ್ ಅಖಾಡಕ್ಕೆ ಸೂಪರ್ ಸ್ಟಾರ್ಸ್
ಹಬ್ಬದ ರಜೆ ಸಮಯದಲ್ಲಿ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡುವ ರೂಢಿ ದಶಕಗಳಿಂದ ನಡೆದುಕೊಂಡು ಬರ್ತಿದೆ. ಜನ ಹಬ್ಬ ಮಾಡಿ ಸಂಭ್ರಮಿಸಿ ಬಳಿಕ ಸಿನಿಮಾ ನೋಡಲು ಬರ್ತಾರೆ. ಹಾಗಾಗಿ ಸಹಜವಾಗಿ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಬಹುದು ಎನ್ನುವ ಲೆಕ್ಕಾಚಾರ ಇರುತ್ತದೆ. ಅದೇ ಕಾರಣಕ್ಕೆ ಹಬ್ಬಗಳನ್ನು ಟಾರ್ಗೆಟ್ ಮಾಡಿ ಫಿಲ್ಮ್ ಮೇಕರ್ಸ್ ತಮ್ಮ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಮಾಡುತ್ತಿದ್ದಾರೆ.
ಎರಡು ದೊಡ್ಡ ಸಿನಿಮಾಗಳು ಒಂದೇ ವಾರ ತೆರೆಗೆ ಬಂದರೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುವ ಆತಂಕ ಇರುತ್ತದೆ. ಆದರೆ ಹಬ್ಬದ ಸಮಯದಲ್ಲಿ ರಜೆ ಇರುತ್ತದೆ ಎರಡೂ ಸಿನಿಮಾ ಚೆನ್ನಾಗಿದ್ದರೆ ಎರಡನ್ನೂ ಜನ ನೋಡುತ್ತಾರೆ. ಎರಡಲ್ಲ 3 ಸಿನಿಮಾಗಳು ಒಟ್ಟಿಗೆ ಬಂದರೂ ಪರವಾಗಿಲ್ಲ ಎನ್ನುವವರು ಇರ್ತಾರೆ. ಕ್ರಿಸ್ಮಸ್, ಸಂಕ್ರಾಂತಿ, ಸ್ವಾತಂತ್ರ್ಯ ದಿನಾಚರಣೆ, ದಸರಾ, ದೀಪಾವಳಿ ಸಮಯದಲ್ಲಿ ಹೀಗೆ ಚಿತ್ರಮಂದಿರಗಳಲ್ಲಿ ಸಿನಿಮಾ ಟ್ರಾಫಿಕ್ ನಿರ್ಮಾಣವಾಗುತ್ತದೆ.

ಮುಂದಿನ ವರ್ಷ ಸಂಕ್ರಾಂತಿಗೆ ತೆಲುಗು, ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರಲು ಸಜ್ಜಾಗುತ್ತಿವೆ. ಅದ್ಯಾಕೋ ಸುಗ್ಗಿ ಸಂಭ್ರಮದಲ್ಲಿ ಕನ್ನಡದ ದೊಡ್ಡ ಸಿನಿಮಾಗಳು ರಿಲೀಸ್ ಆಗಲ್ಲ. ಉತ್ತರ ಭಾರತದಲ್ಲಿ ಸಂಕ್ರಾಂತಿ ಸಂಭ್ರಮ ಕಮ್ಮಿ. ಹಾಗಾಗಿ ಬಾಲಿವುಡ್ ಮಂದಿ ಕೂಡ ಯಾವುದೇ ಸಿನಿಮಾ ತೆರೆಗೆ ತರುವ ಸಾಹಸ ಮಾಡಲ್ಲ. ಆದರೆ ಕಾಲಿವುಡ್, ಟಾಲಿವುಡ್ನಲ್ಲಿ ಸಂಕ್ರಾಂತಿ ಬಾಕ್ಸಾಫೀಸ್ ಫೈಟ್ ಜೋರಾಗಿರುತ್ತದೆ.
ಈ ವರ್ಷ ಕೂಡ 'ಗೇಮ್ ಚೇಂಜರ್', 'ಸಂಕ್ರಾಂತಿಗೆ ವಸ್ತುನ್ನಾಂ', 'ಡಾಕು ಮಹಾರಾಜ್', 'ಮದಗಜ ರಾಜ', 'ಕಾದಲಿಕ್ಕ ನೇರಮಿಲ್ಲೈ' ಸೇರಿದಂತೆ ತೆಲುಗು ತಮಿಳಿನ ಹಲವು ಸಿನಿಮಾಗಳು ಸುಗ್ಗಿ ಸಂಭ್ರಮದಲ್ಲಿ ಬಾಕ್ಸಾಫೀಸ್ ರೇಸ್ನಲ್ಲಿ ಇದ್ದವು. ಇದರಲ್ಲಿ ರಾಮ್ಚರಣ್ ನಟನೆಯ 'ಗೇಮ್ ಚೇಂಜರ್' ಹಾಗೂ ಡಾಕು ಮಹಾರಾಜ್ ಸಿನಿಮಾಗಳು ನಿರಾಸೆ ಮೂಡಿಸಿದ್ದರು. ಕೊನೆ ಕ್ಷಣದಲ್ಲಿ ಅಜಿತ್ ನಟನೆಯ 2 ಸಿನಿಮಾಗಳ ರಿಲೀಸ್ ಡೇಟ್ ಬದಲಿಸಾಗಿತ್ತು. ತೆಲುಗಿನಲ್ಲಿ 'ಸಂಕ್ರಾಂತಿಗೆ ವಸ್ತುನ್ನಾಂ' ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು.
ಈ ವರ್ಷ ಸಂಕ್ರಾಂತಿ ಹೋಗಿ ಇನ್ನು 2 ತಿಂಗಳು ಕಳೆದಿದೆ. ಆದರೆ ಅಷ್ಟರಲ್ಲೇ ಮುಂದಿನ ವರ್ಷ ಸಂಕ್ರಾಂತಿ ಬಾಕ್ಸಾಫೀಸ್ ಕಾದಾಟದ ಬಗ್ಗೆ ಚರ್ಚೆ ನಡೀತಿದೆ. ಅದಕ್ಕೆ ಕಾರಣವೂ ಇದೆ. 'ಜನ ನಾಯಕನ್' ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳು ಸುಗ್ಗಿ ಹಬ್ಬದ ವೀಕೆಂಡ್ ಅನ್ನು ಟಾರ್ಗೆಟ್ ಮಾಡುತ್ತಿವೆ. ಈ ಪಟ್ಟಿಯಲ್ಲಿ ಸ್ಟಾರ್ ನಟರ ಸಿನಿಮಾಗಳೇ ಇರುವುದು ವಿಶೇಷ.

ಜನನಾಯಕನ್
ದಳಪತಿ ವಿಜಯ್ ನಟನೆಯ 'ಜನ ನಾಯಕನ್' ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ಈಗಾಗಲೇ ರಾಜಕೀಯರಂಗದತ್ತ ವಿಜಯ್ ಮುಖ ಮಾಡಿದ್ದಾರೆ. ಹಾಗಾಗಿ ಇದೇ ಅವರ ಕೊನೆ ಸಿನಿಮಾ ಎನ್ನುವ ಚರ್ಚೆ ನಡೀತಿದೆ. ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡಲಿದೆ. ಅಂದಾಜು 300 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಹೆಚ್. ವಿನೋದ್ ನಿರ್ದೇಶನದ 'ಜನ ನಾಯಕನ್' ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ. ಪ್ರಿಯಾಮಣಿ, ಶ್ರುತಿಹಾಸನ್, ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ವಿಜಯ್ ಈ ಚಿತ್ರವನ್ನು ತಮ್ಮ ರಾಜಕೀಯರಂಗ ಪ್ರವೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನವರಿ 9ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ನೀಲ್-ತಾರಕ್ ಸಿನಿಮಾ
ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಜ್ಯೂ. ಎನ್ಟಿಆರ್ ನಟಿಸುತ್ತಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾ ಕೂಡ ಮುಂದಿನ ವರ್ಷ ಸಂಕ್ರಾಂತಿಗೆ ಬರುತ್ತದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. 'ಸಲಾರ್' ಬಳಿಕ ನೀಲ್ ಈ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ 'ಡ್ರ್ಯಾಗನ್' ಎಂದು ಟೈಟಲ್ ಫಿಕ್ಸ್ ಮಾಡಲು ಚಿತ್ರತಂಡ ಚಿಂತಿಸುತ್ತಿದೆ.
ಬಹಳ ಹಿಂದೆ ಘೋಷಣೆ ಆಗಿದ್ದ ಸಿನಿಮಾ ಕಾರಣಾಂತರಗಳಿಂದ ಸೆಟ್ಟೇರುವುದು ತಡವಾಯಿತು. 'RRR' ಬಳಿಕ ತಾರಕ್ 'ದೇವರ' ಸಿನಿಮಾ ಒಪ್ಪಿಕೊಂಡಿದ್ದರು. ನಂತರ ಬಾಲಿವುಡ್ ಅಂಗಳಕ್ಕೆ ಜಿಗಿದರು. ಹೃತಿಕ್ ರೋಷನ್ ಜೊತೆ 'ವಾರ್-2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಗಿಸಿ ಪ್ರಶಾಂತ್ ನೀಲ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಎನ್ಟಿಆರ್ ಆರ್ಟ್ಸ್ ಹಾಗೂ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಲಿದೆ.
ಸೆಟ್ಟೇರಿದ ದಿನವೇ 2026ರ ಜನವರಿ 9ಕ್ಕೆ ಸಂಕ್ರಾಂತಿ ಸಂಭ್ರಮದಲ್ಲಿ 'ಡ್ರ್ಯಾಗನ್' ಸಿನಿಮಾ ರಿಲೀಸ್ ಎಂದು ಚಿತ್ರತಂಡ ಹೇಳಿದೆ. ಆದರೆ ಚಿತ್ರೀಕರಣ ತಡವಾಗಿ ಆರಂಭವಾಗಿದೆ. ಹಾಗಾಗಿ ಮುಂದಿನ ಸಂಕ್ರಾಂತಿಗೆ ಸಿನಿಮಾ ಬರೋದು ಅನುಮಾನ ಎನ್ನುವಂತಾಗಿದೆ. ಪ್ರಶಾಂತ್ ನೀಲ್ ತಮ್ಮ ಸಿನಿಮಾಗಳನ್ನು ತೆರೆಗೆ ತರಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಹಾಗಾಗಿ ಮತ್ತೊಮ್ಮೆ ಸಿನಿಮಾ ರಿಲೀಸ್ ಡೇಟ್ ಬದಲಾದರೂ ಅಚ್ಚರಿಪಡಬೇಕಿಲ್ಲ.
ಮೆಗಾ 157
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಅನಿಲ್ ರಾವಿಪುಡಿ ನಿರ್ದೇಶನದ ತೆಲುಗು ಸಿನಿಮಾಗಳು ಸದ್ದು ಮಾಡ್ತಿವೆ. ಈ ವರ್ಷ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಬ್ಲಾಕ್ಬಸ್ಟರ್ ಲಿಸ್ಟ್ ಸೇರಿದೆ. 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ವಿಕ್ಟರಿ ವೆಂಕಟೇಶ್ ಹೀರೊ ಆಗಿ ನಟಿಸಿ ಗೆದ್ದರು. ಇದೀಗ ಚಿರಂಜೀವಿ ನಟನೆಯ ಚಿತ್ರವನ್ನು ಅನಿಲ್ ರಾವಿಪುಡಿ ಆರಂಭಿಸಿದ್ದಾರೆ.
ಯುಗಾದಿ ಹಬ್ಬದ ಸಂಭ್ರಮದಲ್ಲಿ ಮೆಗಾ157 ಅಂದರೆ ಚಿರು ನಟನೆಯ 157ನೇ ಸಿನಿಮಾ ಸೆಟ್ಟೇರಿದೆ. ಅನಿಲ್ ರಾವಿಪುರಿ ಕಾಮಿಡಿ ಎಂಟರ್ಟೈನರ್ ಸಿನಿಮಾಗಳನ್ನು ಕಟ್ಟಿಕೊಡುವಲ್ಲಿ ಸಿದ್ಧಹಸ್ತರು. ಚಿರಂಜೀವಿ ಕಾಮೆಡಿ ಟೈಮಿಂಗ್ ಬಗ್ಗೆ ಅಭಿಮಾನಿಗಳು ಮೆಚ್ಚಿಕೊಂಡಾಡುತ್ತಾರೆ. ಹಾಗಾಗಿ ಇವರಿಬ್ಬರ ಕಾಂಬಿನೇಷನ್ ಬಹಳ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಬರೀ ಮಾಸ್ ಸಿನಿಮಾಗಳಲ್ಲಿ ನಟಿಸಿ ಮೆಗಾಸ್ಟಾರ್ ಸೋಲುತ್ತಿದ್ದಾರೆ. ಹಾಗಾಗಿ ಅನಿಲ್ ರಾವಿಪುಡಿ ಜೊತೆ ಕೈ ಜೋಡಿಸಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಸಿನಿಮಾ ಮುಹೂರ್ತ ಸಮಾರಂಭಕ್ಕೆ ಘಟಾನುಘಟಿಗಳು ಆಗಮಿಸಿ ಶುಭ ಕೋರಿದ್ದರು. ವಿಜಯೇಂದ್ರ ಪ್ರಸಾದ್, ಕೆ. ರಾಘವೇಂದ್ರ ರಾವ್, ಅಲ್ಲು ಅರವಿಂದ್ ಕಾರ್ಯಕ್ರಮಕ್ಕೆ ಬಂದಿದ್ದರು. ತಮ್ಮ ಹಳೇ ತಂಡವನ್ನೇ ಕಟ್ಟಿಕೊಂಡು ಅನಿಲ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಮುಂದಿನ ಸಂಕ್ರಾಂತಿಗೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.
ಪರಾಶಕ್ತಿ
ಶಿವಕಾರ್ತಿಕೇಯನ್ ನಟನೆಯ 'ಪರಾಶಕ್ತಿ' ತಮಿಳು ಸಿನಿಮಾ ಕೂಡ ನಿರೀಕ್ಷೆ ಹುಟ್ಟುಹಾಕಿದೆ. ಸುಧಾ ಕೊಂಗರ ಆಕ್ಷನ್ ಕಟ್ ಹೇಳುತ್ತಿದ್ದು ಶ್ರೀಲೀಲಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಕೂಡ ಮುಂದಿನ ವರ್ಷ ಸಂಕ್ರಾಂತಿಗೆ ತೆರೆಗೆ ತರುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ. 200 ಕೋಟಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.
ಸಿದ್ದು ಜೊನ್ನಲಗಡ್ಡ ಹಾಗೂ ನಿವಿನ್ ಪೊಲಿಶೆಟ್ಟಿ ಜೋಡಿಯ ತೆಲುಗು ಸಿನಿಮಾ ಕೂಡ ಸಂಕ್ರಾಂತಿಗೆ ತೆರೆಗೆ ಬರುವ ಸಾಧ್ಯತೆಯಿದೆ. ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾ ಕೂಡ 2026ರ ಸಂಕ್ರಾಂತಿಗೆ ಬರಬಹುದು ಎನ್ನಲಾಗಿತ್ತು. ಆದರೆ ಆ ಸಿನಿಮಾ ಇಷ್ಟು ಪ್ರಾರಂಭವಾಗಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಇನ್ನು 8 ತಿಂಗಳಲ್ಲಿ ತೆರೆಗೆ ಬರುವುದು ಅಸಾಧ್ಯ ಎನ್ನಲಾಗ್ತಿದೆ.
ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ 'ಫೌಜಿ' ಸಿನಿಮಾ ಮುಂದಿನ ಸಂಕ್ರಾಂತಿಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ಒಟ್ಟಾರೆ ಮುಂದಿನ ವರ್ಷ ಸುಗ್ಗಿ ಸಂಭ್ರಮದಲ್ಲಿ ಬಾಕ್ಸಾಫೀಸ್ ಕ್ಲ್ಯಾಶ್ ಜೋರಾಗಿ ಇರುತ್ತದೆ.


Click it and Unblock the Notifications











