"ಆತನಿಗಾಗಿ 100 ಕೋಟಿ ರೂ. ಸಾಲು ಮಾಡಿ, ಬಡ್ಡಿ ಕಟ್ದೆ"; ಮಗಳ ಪರ ಜಯಂ ರವಿ ಅತ್ತೆ ಬ್ಯಾಟಿಂಗ್
ಕಾಲಿವುಡ್ ಅಂಗಳದಲ್ಲಿ ನಟ ಜಯಂ ರವಿ ಹಾಗೂ ಪತ್ನಿ ಆರತಿ ಡಿವೋರ್ಸ್ ವಿವಾದ ದಿನದಿಂದ ದಿನಕ್ಕೆ ಭಾರೀ ಸದ್ದು ಮಾಡ್ತಿದೆ. ಇದೀಗ ಆರತಿ ತಾಯಿ ಅಂದರೆ ಜಯಂ ರವಿ ಅತ್ತೆ ಮೌನ ಮುರಿದಿದ್ದಾರೆ. ಆತನ ಆರೋಪಗಳೆಲ್ಲಾ ಸುಳ್ಳು, ಆತನಿಂದ ನಾನು ಮಾನಸಿಕವಾಗಿ ಸಾಕಷ್ಟು ನೋವುಂಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.
ನಟ ಜಯಂ ರವಿ ಅವರ ಅತ್ತೆ ಸುಜಾತ ವಿಜಯ್ ಕುಮಾರ್ ನಿರ್ಮಾಪಕಿಯಾಗಿ ತಮಿಳು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಅಳಿಯ ನಟಿಸಿದ ಸಿನಿಮಾಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಜಯಂ ರವಿ ಪತ್ನಿ ಆರತಿ ಅವರಿಂದ ಡಿವೋರ್ಸ್ ಘೋಷಿಸಿದ್ದರು. ಆದರೆ ಆಕೆ ಅದಕ್ಕೆ ಒಪ್ಪುತ್ತಿಲ್ಲ. ಇದೇ ವಿಚಾರದಲ್ಲಿ ಈಗ ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ನಟ ಜಯಂ ರವಿ ಪತ್ನಿಯಿಂದ ದೂರಾಗಿ ಗಾಯಕಿ ಕೇನಿಶಾ ಫ್ರಾನ್ಸಿಸ್ಗೆ ಹತ್ತಿರವಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಇಬ್ಬರೂ ಕೈಕೈ ಹಿಡಿದು ಗಂಡ-ಹೆಂಡತಿ ರೀತಿ ಭಾಗವಹಿಸಿದ್ದರು. ಅದರ ಬೆನ್ನಲ್ಲೇ ಆರತಿ ಗರಂ ಆಗಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪತ್ರ ಬರೆದು ರವಿ ಪ್ರತಿಕ್ರಿಯಿಸಿದ್ದರು. ಪತ್ನಿ ಹಾಗೂ ಆಕೆಯ ಕುಟುಂಬದ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು.
ಕೇನಿಶಾ ಜೊತೆಗಿನ ರಿಲೇಷನ್ಶಿಪ್ ಬಗ್ಗೆ ಕೂಡ ನಟ ಜಯಂ ರವಿ ಸ್ಪಷ್ಟನೆ ನೀಡಿದ್ದರು. ಇದೆಲ್ಲದರ ಬೆನ್ನಲ್ಲೇ ಅವರ ಅತ್ತೆ ಸುಜಾತ ಪೋಸ್ಟ್ ಮಾಡಿದ್ದಾರೆ. "ರವಿ ಹೇಳುವುದೆಲ್ಲಾ ಶುದ್ಧ ಸುಳ್ಳು. ಆತನ ಆರೋಪಗಳಲ್ಲಿ ಯಾವುದೇ ಸತ್ಯ ಇಲ್ಲ. ಅದಕ್ಕೆ ಈಗ ನಾನು ಮಾತನಾಡುವಂತಾಗಿದೆ. ರವಿ ಮೋಹನ್ ಪ್ರೋತ್ಸಾಹದಿಂದಲೇ ನಾನು ಚಿತ್ರರಂಗಕ್ಕೆ ಬರುವಂತಾಯಿತು. 2007ರಲ್ಲಿ ಒಂದು ಸಿನಿಮಾ ಮಾಡಿದ್ದೆ. ಅದು ಗೆದ್ದಿತ್ತು" ಎಂದು ಬರೆದುಕೊಂಡಿದ್ದಾರೆ.
"ರವಿ ಹೀರೊ ಆಗಿ ನಟಿಸಿದ ಮೂರು ಸಿನಿಮಾಗಳಿಗೆ ಹಣ ಹೂಡಿದ್ದೆ. ಅದಕ್ಕಾಗಿ ಫೈನಾನ್ಷಿಯರ್ ಬಳಿ 100 ಕೋಟಿ ರೂ.ಗೂ ಅಧಿಕ ಸಾಲ ಮಾಡಿದ್ದೆ. ಅದರಲ್ಲಿ 25% ಸಂಭಾವನೆ ರೂಪದಲ್ಲಿ ಹಣವನ್ನು ಆತನಿಗೆ ಕೊಟ್ಟಿದ್ದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿಯಿದೆ. ರವಿಯನ್ನು ನಾನು ಯಾವತ್ತೂ ಅಳಿಯನ ರೀತಿ ನೋಡಲಿಲ್ಲ. ಸ್ವಂತ ಮಗನ ರೀತಿ ಭಾವಿಸಿದ್ದೆ. ಆತನಿಗೆ ಯಾವುದೇ ಕಷ್ಟ ಬರಬಾರದು, ನೋವು ಅನುಭವಿಸಬಾರದು ಎಂದುಕೊಳ್ಳುತ್ತಿದ್ದೆ" ಎಂದು ಸುಜಾತ ವಿಜಯ್ ಕುಮಾರ್ ಪೋಸ್ಟ್ ಮಾಡಿದ್ದಾರೆ.
"ಸಾಲ ಸೋಲ ಮಾಡಿ ನೆಮ್ಮದಿ ಇಲ್ಲದ ಜೀವನ ಸಾಗಿಸಿದೆ. ನಾನೊಬ್ಬಳೇ ಬಡ್ಡಿ ಕಟ್ಟುತ್ತಿದ್ದೆ. ನಷ್ಟ ಭರಿಸಲು ನನಗೆ ಮತ್ತೊಂದು ಸಿನಿಮಾ ಮಾಡಿಕೊಡುವುದಾಗಿ 'ಸೈರನ್' ಚಿತ್ರದ ಸಮಯದಲ್ಲಿ ಮಾತು ಕೊಟ್ಟಿದ್ದ. ಆದರೆ ಯಾವುದೇ ಚಿತ್ರಕ್ಕೆ ಸಹಿ ಮಾಡಲಿಲ್ಲ. ಸಾಲ ತೀರಿಸಲು ಸಹಾಯ ಮಾಡುತ್ತೀನಿ ಎಂದು ಹೇಳಲಿಲ್ಲ. ನನ್ನನ್ನು ಅಮ್ಮ ಎಂದು ಕರೆಯುತ್ತಿದ್ದ. ತಾಯಿಯಾಗಿ ನಾನು ಕೋರಿಕೊಳ್ಳುವುದು ಒಂದೇ ಗಂಡ, ಹೆಂಡತಿ ಮಕ್ಕಳು ಸೇರಿ ಅವರು ಒಟ್ಟಾಗಿ ಇರಲಿ. ಯಾವುದೇ ತಾಯಿ ತನ್ನ ಮಗಳ ಮೇಲಿನ ಆರೋಪಗಳನ್ನು ಕೇಳುತ್ತಾ ಸುಮ್ಮನೆ ಕೂರಲು ಸಾಧ್ಯವಿಲ್ಲ. ಮಾಧ್ಯಮದವರು ಕೂಡ ನಾನೇ ಎಲ್ಲದಕ್ಕೂ ಕಾರಣ ಎನ್ನುವಂತೆ ಬಿಂಬಿಸಬೇಡಿ" ಎಂದು ಸುಜಾತ ಮನವಿ ಮಾಡಿದ್ದಾರೆ.
2009ರಲ್ಲಿ ಜಯಂ ರವಿ ಹಾಗೂ ಆರತಿ ಮದುವೆ ನಡೆದಿತ್ತು. ದಂಪತಿಗೆ ಇಬ್ಬರೂ ಗಂಡು ಮಕ್ಕಳು ಕೂಡ ಇದ್ದಾರೆ. ಪತ್ನಿಯಿಂದ ನಾನು ಸಾಕಷ್ಟು ಮಾನಸಿಕ ಕಿರುಕುಳ ಅನುಭವಿಸಿದೆ. ನನಗೆ ನೆಮ್ಮದಿ ಬೇಕು, ಅದಕ್ಕೆ ದೂರಾಗುತ್ತಿದ್ದೇನೆ. ನನಗೆ ನನ್ನ ಮಕ್ಕಳು ಬೇಕು ಎಂದು ರವಿ ಪಟ್ಟು ಹಿಡಿದಿದ್ದಾರೆ. ಡಿವೋರ್ಸ್ ನನಗೆ ಇಷ್ಟವಿಲ್ಲ ಎಂದು ಆರತಿ ಹೇಳುತ್ತಿದ್ದಾರೆ.


Click it and Unblock the Notifications











